
ಸ್ಟಾಫ್ ನರ್ಸ್ ಗಳಿಗೆ ವೇತನದ ಜತೆಗೆ ವಿಶೇಷ ಕೋವಿಡ್ ಭತ್ಯೆ
ಬೆಂಗಳೂರು: ಸ್ಟಾಫ್ ನರ್ಸ್ ಗಳ ಕಾರ್ಯವನ್ನು ಸದಾ ಉತ್ತೇಜಿಸುವ ನಿಟ್ಟಿನಲ್ಲಿ ಮಾಸಿಕ ವೇತನದ ಜೊತೆಗೆ, ಹೆಚ್ಚುವರಿಯಾಗಿ ಎಂಟು ಸಾವಿರವನ್ನು ವಿಶೇಷ ಕೋವಿಡ್ ಭತ್ಯೆಯಾಗಿ ನೀಡಲಾಗುವುದು ಎಂದಿರುವ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು ವೈಯಕ್ತಿಕ ಕಷ್ಟ ನಷ್ಟಗಳನ್ನು ಬದಿಗೊತ್ತಿ, ಕುಟುಂಬದವರಿಂದ ಅಂತರ ಕಾಯ್ದುಕೊಂಡು ಕಾರ್ಯ ನಿರ್ವಹಿಸುತ್ತಿರುವ ಶುಶ್ರೂಷಕರ ಕರ್ತವ್ಯ ಪ್ರಜ್ಞೆ ಅನುಕರಣೀಯ ಎಂದು ಶ್ಲಾಘಿಸಿದ್ದಾರೆ.
ಕೋವಿಡ್ ಕರ್ತವ್ಯ ನಿರ್ವಹಿಸುತ್ತಿರುವ ವಿವಿಧ ಜಿಲ್ಲೆಗಳ ಸ್ಟಾಫ್ ನರ್ಸ್ ಗಳೊಂದಿಗೆ ವಿಡಿಯೋ ಸಂವಾದ ನಡೆಸಿ ಮಾತನಾಡಿ, ಕೋವಿಡ್ 19ರ ಈ ಸಂಕಷ್ಟದ ಪರಿಸ್ಥಿತಿಯಲ್ಲಿ ಅಪಾಯವನ್ನು ಲೆಕ್ಕಿಸದೆ, ಸೋಂಕಿತರ ಶುಶ್ರೂಷೆಯಲ್ಲಿ ನಿರತರಾಗಿರುವ ಎಲ್ಲ ಸ್ಟಾಫ್ ನರ್ಸ್ ಗಳನ್ನು ಮುಕ್ತ ಕಂಠದಿಂದ ಹೊಗಳಿದರು. ಪ್ರಸ್ತುತ ರಾಜ್ಯದಲ್ಲಿ ಒಟ್ಟು 21,574 ಸ್ಟಾಫ್ ನರ್ಸ್ ಗಳು ಕಾರ್ಯನಿರ್ವಹಿಸುತ್ತಿದ್ದಾರೆ, ಕೋವಿಡ್ 19 ನಿಂದ ಮೃತಪಟ್ಟ ಸ್ಟಾಫ್ ನರ್ಸ್ ಗಳಿಗೆ “ಪ್ರಧಾನ ಮಂತ್ರಿ ಗರೀಬ್ ಕಲ್ಯಾಣ್ ವಿಮಾ ಯೋಜನೆ” ಯ ಅಡಿಯಲ್ಲಿ ರೂ 50 ಲಕ್ಷ ರೂ.ಗಳನ್ನು ನೀಡುವ ಸೌಲಭ್ಯವಿದ್ದು, ಈ ವರೆಗೆ ಇಂತಹ ಆರು ಪ್ರಕರಣಗಳಿಗೆ ಅರ್ಜಿಯನ್ನು ಸ್ವೀಕರಿಸಲಾಗಿದೆ. ಇದರಲ್ಲಿ, ಮೂರು ಪ್ರಕರಣಗಳಿಗೆ ವಿಮಾ ಮೊತ್ತವನ್ನು ನೀಡಲಾಗಿದ್ದು, ಉಳಿದ ಮೂರು ಪ್ರಕರಣಗಳಿಗೆ ಶೀಘ್ರದಲ್ಲಿಯೇ ವಿಮಾ ಮೊತ್ತವನ್ನು ಬಿಡುಗಡೆ ಮಾಡಲಾಗುವುದು.
ಕೋವಿಡ್ 19 ನಿಯಂತ್ರಣದಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿರುವ ಸ್ಟಾಫ್ ನರ್ಸ್ ಗಳ ಸುರಕ್ಷತೆಗಾಗಿ ಅಗತ್ಯ ತರಬೇತಿ, ಸ್ವಯಂ ರಕ್ಷಣಾ ಸಾಧನಗಳಾದ ಪಿ ಪಿ ಈ ಕಿಟ್, ಗ್ಲೌಸ್ ಗಳು, ಮಾಸ್ಕ್, ಫೇಸ್ ಶೀಲ್ಡ್, ಹ್ಯಾಂಡ್ ಸ್ಯಾನಿಟೈಸರ್ ಗಳನ್ನು ಅಗತ್ಯ ಪ್ರಮಾಣದಲ್ಲಿ ಒದಗಿಸಲಾಗಿದೆ ಎಂದು ತಿಳಿಸಿದರು.
ಇದೇ ವೇಳೆ ಬೀದರ್ ವೈದ್ಯಕೀಯ ಕಾಲೇಜು ಆಸ್ಪತ್ರೆಯ ಸಂತೋಷ್, ಮಂಗಳೂರಿನ ವೆನ್ಲಾಕ್ ಆಸ್ಪತ್ರೆಯ ವಹೀದಾ, ದಾವಣಗೆರೆ ಚಿಗಟೇರಿ ಆಸ್ಪತ್ರೆಯ ಎಂ.ಡಿ. ಶಾರದಾ, ಬದಾಮಿ ತಾಲ್ಲೂಕು ಆಸ್ಪತ್ರೆಯ ರೇಣುಕಾ ಗೂಗಿಹಾಳ, ಕೋಲಾರ ಎಸ್.ಎನ್.ಆರ್. ಜಿಲ್ಲಾ ಆಸ್ಪತ್ರೆಯ ಶಶಿಕಲಾ, ರಾಯಚೂರು ವೈದ್ಯಕೀಯ ಕಾಲೇಜಿನ ರಾಚೋಟಿ ವಾರದ, ಚಾಮರಾಜನಗರ ಜಿಲ್ಲಾ ಆಸ್ಪತ್ರೆಯ ಪ್ರದೀಪ್ ಕುಮಾರ್, ವಿಜಯಪುರ ಜಿಲ್ಲಾ ಆಸ್ಪತ್ರೆಯ ಪುಷ್ಪರಾಜ್, ಹರಿಹರ ಸಾರ್ವಜನಿಕ ಆಸ್ಪತ್ರೆಯ ಶ್ವೇತಾ ಆರ್., ಚಿಕ್ಕಮಗಳೂರು ಜಿಲ್ಲಾ ಆಸ್ಪತ್ರೆಯ ಸಂಧ್ಯಾರಾಣಿ ಅವರೊಂದಿಗೆ ಸಂವಾದ ನಡೆಸಿದರು.
ಈ ಸಂದರ್ಭದಲ್ಲಿ ಸ್ಟಾಫ್ ನರ್ಸ್ ಗಳ ಕರ್ತವ್ಯ ನಿರ್ವಹಣೆ, ಆರೋಗ್ಯದ ಸ್ಥಿತಿಗತಿ ಮತ್ತಿತರ ವಿಷಯಗಳ ಕುರಿತು ಮುಖ್ಯಮಂತ್ರಿಗಳು ಚರ್ಚಿಸಿದರು. ವೈದ್ಯಕೀಯ ಶಿಕ್ಷಣ ಇಲಾಖೆ ವ್ಯಾಪ್ತಿಯ ಸಿಬ್ಬಂದಿಗೂ ರಿಸ್ಕ್ ಅಲೊವೆನ್ಸ್ ಒದಗಿಸುವಂತೆ ಬೀದರ್ನ ಸಂತೋಷ್ ಅವರು ಮಾಡಿದ ಮನವಿಗೆ ಉತ್ತರಿಸಿದ ಮುಖ್ಯಮಂತ್ರಿಗಳು ಈಗಾಗಲೇ ಈ ಕುರಿತು ಆದೇಶ ಹೊರಡಿಸಲಾಗಿದೆ ಎಂದು ತಿಳಿಸಿದರು.
ಮಂಗಳೂರಿನ ವೆನ್ಲಾಕ್ ಆಸ್ಪತ್ರೆಯ ವಹೀದಾ ಅವರು ಎರಡನೇ ಅಲೆಯ ಸಂದರ್ಭದಲ್ಲಿ ಯುವಕರು, ಮಧ್ಯವಯಸ್ಕರು ಹೆಚ್ಚಿನ ಸಂಖ್ಯೆಯಲ್ಲಿ ಬಲಿಯಾಗುತ್ತಿದ್ದಾರೆ. ಮೊದಲ ಅಲೆಯ ಸಂದರ್ಭದಲ್ಲಿ ಇತರ ಆರೋಗ್ಯ ಸಮಸ್ಯೆಗಳಿರುವ ಹಿರಿಯ ನಾಗರಿಕರ ಮರಣ ಪ್ರಮಾಣ ಹೆಚ್ಚಾಗಿತ್ತು ಎಂದು ತಮ್ಮ ಅನುಭವವನ್ನು ಹಂಚಿಕೊಂಡರು. ಜೊತೆಗೆ ಕೋವಿಡ್ ಕರ್ತವ್ಯ ನಿರ್ವಹಿಸುತ್ತಿರುವ ನಮ್ಮ ಮನೆಯವರಿಗೆ ಸೋಂಕು ತಗಲುವ ಅಪಾಯ ಹೆಚ್ಚಿರುವುದರಿಂದ ಕುಟುಂಬದವರಿಗೂ ವ್ಯಾಕ್ಸಿನ್ ಒದಗಿಸುವಂತೆ ಮನವಿ ಮಾಡಿದರು.