
ಹಸ್ತ ಗುರುತಿನ ಹೇರ್ಕಟ್ ಮಾಡಿಸಿ ಸಂಭ್ರಮ
ಮೈಸೂರು: ಕಾಂಗ್ರೆಸ್ ಪಕ್ಷ ಸ್ಪಷ್ಟ ಬಹುಮತದೊಂದಿಗೆ ಗೆಲುವು, ಅದರಲ್ಲೂ ವರುಣಾ ಕ್ಷೇತ್ರದಲ್ಲಿ ಸಿದ್ಧರಾಮಯ್ಯ ಗೆಲುವು ದಾಖಲಿಸಿರುವ ಹಿನ್ನೆಲೆ ಅವರ ಅಭಿಮಾನಿಗಳು ಸೇರಿದಂತೆ ಪಕ್ಷದ ಕಾರ್ಯಕರ್ತರು ಪಟಾಕಿ ಸಿಡಿಸಿ ಸಂಭ್ರಮಿಸಿದ್ದಾರೆ. ಅಷ್ಟೆ ಅಲ್ಲದೇ ಅವರ ಅಭಿಮಾನಿಯೊಬ್ಬರು ಸಿದ್ದರಾಮಯ್ಯ ಅವರ ಹೆಸರು ಹಾಗೂ ಹಸ್ತ ಗುರುತಿನ ಹೇರ್ಕಟ್ ಮಾಡಿಸಿಕೊಂಡು ಗಮನಸೆಳೆದಿದ್ದಾರೆ.
ವರುಣ ಕ್ಷೇತ್ರದ ರಾಯನಹುಂಡಿ ಗ್ರಾಮದ ಚಂದ್ರು ಎನ್ನುವವರು ವರುಣಾ ಕ್ಷೇತ್ರದಲ್ಲಿ ಸಿದ್ದರಾಮಯ್ಯ ಅವರು ಗೆಲುವು ಸಾಧಿಸಿದ ಹಿನ್ನೆಲೆಯಲ್ಲಿ ಸಿದ್ದರಾಮಯ್ಯ ಹಾಗೂ ಕಾಂಗ್ರೆಸ್ ಚಿಹ್ನೆಯ ಕಟ್ಟಿಂಗ್ ಮಾಡಿಸಿಕೊಂಡಿದ್ದಾರೆ. ರಾಮಕೃಷ್ಣನಗರದಲ್ಲಿರುವ ಸಿದ್ದರಾಮಯ್ಯ ಅವರ ನಿವಾಸಕ್ಕೆ ಆಗಮಿಸಿದ ಅಭಿಮಾನಿ ಚಂದ್ರು, ತಮ್ಮ ಹೇರ್ಸ್ಟೈಲ್ ಅನ್ನು ಸಿದ್ದರಾಮಯ್ಯರಿಗೆ ತೋರಿಸಲು ಬಂದಿದ್ದರು.
ಆದರೆ, ಸಾಕಷ್ಟು ಜನ ಮತ್ತು ಕಾರ್ಯಕರ್ತರು ಸಿದ್ದರಾಮಯ್ಯರನ್ನು ಭೇಟಿ ಮಾಡಲು ಮನೆ ಮುಂದೆ ಜಮಾಯಿಸಿದ್ದಾರೆ. ಈ ಹಿನ್ನೆಲೆ ಈ ಅಭಿಮಾನಿಗೆ ಸಿದ್ದರಾಮಯ್ಯ ಅವರನ್ನು ಭೇಟಿ ಆಗುವ ಅವಕಾಶ ದೊರೆಯಲಿಲ್ಲ. ಚಂದ್ರು ಅವರ ಹೇರ್ಟ್ ವಿಡಿಯೋ ವಾಟ್ಸ್ ಅಪ್ ಸ್ಟೇಟಸ್ಗಳಲ್ಲಿ ಹರಿದಾಡಿದೆ.