
ಹಿಂದೂ ರಾಷ್ಟ್ರದಲ್ಲಿ ನಮಾಜ್ಗೆ ಲೌಡ್ಸ್ಪೀಕರ್ ಕೂಡ ಸಿಗಲ್ಲ! – ಬಿಜೆಪಿ ಉಚ್ಚಾಟಿತ ಶಾಸಕ ಟಿ.ರಾಜ
ಮುಂಬೈ: “ಹಿಂದೂಗಳ ವಿರುದ್ಧ ಯಾರೇ ಮಾತನಾಡಿದರೂ, ಅವರನ್ನು ಸುಮ್ಮನೆ ಬಿಡುವುದಿಲ್ಲ. ನಮ್ಮ ಹಿಂದೂರಾಷ್ಟ್ರದಲ್ಲಿ ನೀವು ನಿತ್ಯ ಐದು ಬಾರಿ ನಮಾಜ್ ಮಾಡುವುದಕ್ಕೂ ಕೂಡ ಲೌಡ್ ಸ್ಪೀಕರ್ ಸಿಗುವುದಿಲ್ಲ ‘ ಎಂದು ಮುಸ್ಲಿಂ ಸಮುದಾಯಕ್ಕೆ ಬೆದರಿಕೆ ಹಾಕಿರುವ ಆರೋಪದ ಮೇರೆಗೆ ಬಿಜೆಪಿ ಉಚ್ಚಾಟಿತ ಶಾಸಕ ಟಿ.ರಾಜ ವಿರುದ್ಧ ಕೇಸು ದಾಖಲಿಸಲಾಗಿದೆ.
ತೆಲಂಗಾಣ ಮೂಲದ ಉಚ್ಚಾಟಿತ ಶಾಸಕ ಇತ್ತೀಚೆಗೆ ಮಹಾರಾಷ್ಟ್ರದ ಅಹ್ಮದ್ನಗರದಲ್ಲಿ ನಡೆದ ಸಾರ್ವಜನಿಕ ಸಭೆಯಲ್ಲಿ “ಹಿಂದೂಗಳನ್ನು ವಿರೋಧಿಸುವವರಿಗೆ, ಗೋವುಗಳನ್ನು ಕೊಲ್ಲುವವರನ್ನು ಮಟ್ಟಹಾಕಲು ಶಿವಾಜಿ ಸೇನೆ ಸಿದ್ಧವಿದೆ. ಭಾರತವನ್ನು 2026ರ ವೇಳೆಗೆ ಅಖಂಡ ಹಿಂದೂರಾಷ್ಟ್ರವೆಂದು ಘೋಷಿಸಲಾಗುವುದು.
ಅಹ್ಮದ್ನಗರವನ್ನು ಅಹಲ್ಯಾಬಾಯಿ ನಗರ, ಹೈದರಾಬಾದ್ ಅನ್ನು ಭಾಗ್ಯನಗರವೆಂದು ಮರುನಾಮಕರಣ ಮಾಡಲಾಗುವುದು’ ಎಂದು ಹೇಳಿಕೆ ನೀಡಿದ್ದಾರೆ.
ರಾಜಾ ಹೇಳಿಕೆಗೆ ತೀವ್ರ ಆಕ್ಷೇಪ ವ್ಯಕ್ತ ಪಡಿಸಿ, ದೂರು ಸಲ್ಲಿಕೆಯಾಗಿದ್ದು, ದೂರಿನ ಆಧಾರದ ಮೇಲೆ ಸೆಕ್ಷನ್ 295 ಧಾರ್ಮಿಕ ಭಾವನೆಗಳಿಗೆ ಧಕ್ಕೆ, 504 ಉದ್ದೇಶಪೂರಿತ ದ್ವೇಷ ಭಾಷಣ, 506 ಕ್ರಿಮಿನಲ್ ಬೆದರಿಕೆ ಅನ್ವಯ ಕೇಸು ದಾಖಲಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.