Home Mangalorean News Kannada News ಅಗೋಸ್ತ್ 1ರಂದು ಅತ್ತೂರು ಮೈನರ್ ಬಾಸಿಲಿಕ ಘೋಷಣೆ ಸಿದ್ದತೆ ಪೂರ್ಣ

ಅಗೋಸ್ತ್ 1ರಂದು ಅತ್ತೂರು ಮೈನರ್ ಬಾಸಿಲಿಕ ಘೋಷಣೆ ಸಿದ್ದತೆ ಪೂರ್ಣ

Spread the love

ಅಗೋಸ್ತ್ 1ರಂದು ಅತ್ತೂರು ಮೈನರ್ ಬಾಸಿಲಿಕ ಘೋಷಣೆ ಸಿದ್ದತೆ ಪೂರ್ಣ

ಕಾರ್ಕಳ: ಅತ್ತೂರು – ಕಾರ್ಕಳ ಸಂತ ಲಾರೇನ್ಸರ ಪುಣ್ಯಕ್ಷೇತ್ರವನ್ನು ಮಹಾದೇವಾಲಯ ಎಂದು ಸಾರುವ ಸಾಂಭ್ರಮಿಕ ಘೋಷಣೆ ಹಾಗೂ ಸಮರ್ಪಣಾ ಸಮಾರಂಭ ಅಗೋಸ್ತ್ 1 ರಂದು ಪುಣ್ಯಕ್ಷೇತ್ರದ ವಠಾರದಲ್ಲಿ ನಡೆಯಲಿದ್ದು ಕಾರ್ಯಕ್ರಮದ ಕೊನೆಯ ಹಂತದ ತಯಾರಿಗಳು ನಡೆದಿವೆ ಎಂದು ಪುಣ್ಯಕ್ಷೇತ್ರದ ರೆಕ್ಟರ್ ವಂ ಜೋರ್ಜ್ ಡಿ’ಸೋಜ ಹೇಳಿದರು.

image004auttur-minor-basilica-press-note-20160728

ಅವರು ಪುಣ್ಯಕ್ಷೇತ್ರದಲ್ಲಿ ಆಯೋಜಿಸಿದ ಸುದ್ದಿಗೋಷ್ಟಿಯನ್ನು ಉದ್ದೇಶಿಸಿ ಮಾತನಾಡಿ ಕಾರ್ಯಕ್ರಮಕ್ಕೆ 3 ಮಂದಿ ಕಾರ್ಡಿನಲ್ಸ್, 30-40 ಧರ್ಮಾಧ್ಯಕ್ಷರು, 300 ಕ್ಕಿಂತ ಅಧಿಕ ಗುರುವರ್ಯರು, ಕನ್ಯಾಸ್ತ್ರೀಯರು, 12 ಸಾವಿರಕ್ಕೂ ಅಧಿಕ ಭಕ್ತಾದಿಗಳು ಬರುವ ಸಾಧ್ಯತೆ ಇದ್ದು ಕಾರ್ಯಕ್ರಮಕ್ಕೆ ಎಲ್ಲಾ ಸಿದ್ದತೆಗಳನ್ನು ಮಾಡಲಾಗಿದೆ.

ಬಂದ ಎಲ್ಲಾ ಭಕ್ತಾದಿಗಳಿಗೂ ಪೂಜಾವಿಧಿಯಲ್ಲಿ ಭಕ್ತಿಪೂರ್ವಕವಾಗಿ ಪೂಜೆ ಮಾಡಲು 12000 ಆಸನಗಳ ವ್ಯವಸ್ಥೆಯನ್ನು ಸಭಾಂಗಣದಲ್ಲಿ ಮಾಡಲಾಗಿದ್ದು, ಬಂದ ಎಲ್ಲಾ ಭಕ್ತಾದಿಗಳಿಗೂ ತಂಪು ಪಾನೀಯದ ವ್ಯವಸ್ಥೆ, ಹಾಗೂ ಸಭಾ ಕಾರ್ಯಕ್ರಮದ ಬಳಿಕ ಅನ್ನಸಂತರ್ಪಣೆ ಅಥವಾ ಪ್ರಸಾದ ಭೋಜನದ ವ್ಯವಸ್ಥೆ ಮಾಡಲಾಗಿದೆ. ಭಕ್ತಾದಿಗಳಿಗೆ ದೇವಾಲಯದ ವಠಾರದಲ್ಲಿ 20-25 ಕೌಂಟರ್‍ಗಳನ್ನು ಹಾಕಿ ಭೋಜನವನ್ನು ನೀಡುವ ವ್ಯವಸ್ಥೆಯನ್ನು ಮಾಡಲಾಗಿದೆ.

ದೇವಾಲಯದ ಒಳಗೆ ಹಾಗೂ ಸರ್ವಾಂಗಣದಲ್ಲಿ ಬೃಹತ್ ಗಾತ್ರದ ಎಲ್‍ಇಡಿ ಟಿವಿ ವ್ಯವಸ್ಥೆಯನ್ನು ಮಾಡಲಾಗಿದ್ದು, ದೇವಾಲಯದ ಸಭಾಂಗಣದಲ್ಲಿ ಹಾಗೂ ದೇವಾಲಯದ ಒಳಗಡೆ 450 ಸ್ವಯಂ ಸೇವಕರು ಸೇವೆಯನ್ನು ನೀಡುವರು. ಬರುವ ಎಲ್ಲಾ ಭಕ್ತರಿಗೆ ಹಾಗೂ ಗಣ್ಯರಿಗೆ ಸೂಕ್ತ ಮಾರ್ಗದರ್ಶನ ನೀಡಲು ದೇವಾಲಯದ ವಠಾರದ ದ್ವಾರದ ಬಳಿಯೇ ಸ್ವಾಗತ ಹಾಗೂ ವಿಚಾರಣೆ ಕೇಂದ್ರವನ್ನು ತೆರೆಯಲಾಗುವುದು. ತುರ್ತು ಚಿಕಿತ್ಸೆಗೆ ಅಂಬುಲೆನ್ಸ್ ಸೇವೆಯನ್ನು ದೇವಾಲಯದ ವಠಾರದ ದ್ವಾರದ ಬಳಿಯೇ ಕಲ್ಪಿಸಲಾಗಿದೆ. ಕಾನೂನು ಹಾಗೂ ಶಿಸ್ತು ಪಾಲನೆಯ ಜವಾಬ್ದಾರಿ ಹಾಗೂ ಉಸ್ತುವಾರಿಯನ್ನು ಈ ಕ್ಷೇತ್ರದ ಸಮಗ್ರ ಮಾಹಿತಿ ಇರುವ ಕಾರ್ಕಳ ಎಎಸ್ಪಿ ಸುಮನ ಅವರ ನೇತೃತ್ವದಲ್ಲಿ ವ್ಯವಸ್ಥೆ ಮಾಡಲಾಗಿದೆ.

ವಾಹನ ನಿಲುಗಡೆಗಾಗಿ ಶಾಲೆಯ ಎರಡು ವಿಸ್ತಾರವಾದ ಮೈದಾನಗಳನ್ನು ಬಳಸಲಾಗುವುದು, ಸಂತ ಲಾರೆನ್ಸ್ ಹಿರಿಯ ಪ್ರಾಥಮಿಕ ಶಾಲೆಯ ಹೊಸ ಮೈದಾನದಲ್ಲಿ ಕೇವಲ ಗುರುವರ್ಯರ, ಗಣ್ಯರ ಹಾಗೂ ಮಾಧ್ಯಮ ಪ್ರತಿನಿಧಿಗಳ ವಾಹನಗಳನ್ನು ಮಾತ್ರ ನಿಲುಗಡೆಗೆ ಅವಕಾಶ ಕಲ್ಪಿಸಲಾಗಿದೆ. ಸಂತ ಲಾರೆನ್ಸರ ಹೈಸ್ಕೂಲ್ ಮೈದಾನದಲ್ಲಿ ಎಲ್ಲಾ ಭಕ್ತಾದಿಗಳ ವಾಹನಗಳ ನಿಲುಗಡೆಗೆ ಅವಕಾಶವನ್ನು ಕಲ್ಪಿಸಲಾಗಿದೆ. ಯಾವುದೇ ವಾಹನಗಳನ್ನು ದೇವಾಲಯದ ವಠಾರದ ಒಳಗೆ ಪ್ರವೇಶಿಸಲು ಅವಕಾಶ ಇರುವುದಿಲ್ಲ. ಪಾರ್ಕಿಂಗ್ ಸ್ಥಳದಲ್ಲಿ 40 ಹೋಮ್ ಗಾರ್ಡ್ ಹಾಗೂ 40 ಸ್ವಯಂ ಸೇವಕರು ಸೇವೆಯನ್ನು ನೀಡುವರು. ವಾಹನ ನಿಲುಗಡೆ ಸ್ಥಳದಲ್ಲಿರುವ ಭಕ್ತಾದಿಗಳಿಗೂ ಧ್ವನಿವರ್ಧಕದ ಮೂಲಕ ಎಲ್ಲಾ ರೀತಿಯಲ್ಲಿ ಮಾರ್ಗದರ್ಶನ ಹಾಗೂ ಸೂಚನೆಗಳನ್ನು ನೀಡುವ ವ್ಯವಸ್ಥೆಯನ್ನು ಮಾಡಲಾಗಿದೆ. ಶಾರೀರಿಕ ಅಗತ್ಯತೆ ಪೋರೈಸಲು ಸಾಕಷ್ಟು ಶೌಚಾಲಯಗಳನ್ನು ಒದಗಿಸಲು ಪ್ರಯತ್ನಿಸಲಾಗಿದೆ. ಹೊಸದಾಗಿ ನಿರ್ಮಿಸಿದ ಶೌಚಾಲಯಗಳ ಬಳಿ ಇರುವ ಗುಡ್ಡ ಜರಿದ ಪರಿಣಾಮ ಅಲ್ಲಿನ ಶೌಚಾಲಯಗಳನ್ನು ಮುಚ್ಚಲಾಗಿದ್ದು, ಪುಣ್ಯಕ್ಷೇತ್ರದ ಸ್ಟಾಲ್ ಬಳಿ ಇರುವ ಶೌಚಾಲಯಗಳು, ದೇವಾಲಯದ ಬಲ ಬದಿಯಲ್ಲಿರುವ ಸೌಹಾರ್ದ ಭವನದ ಕೆಳ ಹಾಗೂ ಮೇಲಿನ ಅಂತಸ್ತಿನ ಎಲ್ಲಾ ಶೌಚಾಲಯಗಳನ್ನು ಅಂದು ಸಾರ್ವಜನಿಕರ ಶಾರೀರಿಕ ಅಗತ್ಯತೆಗಳಿಗೆ ತೆರೆದಿಡಲಾಗುವುದು ಎಂದರು.
ಸುದ್ದಿಗೋಷ್ಟಿಯಲ್ಲಿ ಚರ್ಚಿನ ಸಹಾಯಕ ಧರ್ಮಗುರು ವಂ ವಿಜಯ್ ಡಿ’ಸೋಜಾ, ಪಾಲನ ಸಮಿತಿಯ ಉಪಾಧ್ಯಕ್ಷ ರಿಚ್ಚಾರ್ಡ್ ಪಿಂಟೊ, ಕಾರ್ಯದರ್ಶಿ ಸಂತೋಷ್ ಡಿ’ಸಿಲ್ವಾ, ಜೋನ್ ಡಿ’ಸಿಲ್ವಾ ಇತರರು ಉಪಸ್ಥಿತರಿದ್ದರು.


Spread the love

Exit mobile version