ಅಬ್ದುಲ್ ರಹ್ಮಾನ್ ಕೊಲೆ ಪ್ರಕರಣ: ಮತ್ತೊಬ್ಬ ಆರೋಪಿ ಸೆರೆ
ಮಂಗಳೂರು: ಬಂಟ್ವಾಳ ತಾಲೂಕಿನ ಕುರಿಯಾಳ ಗ್ರಾಮದ ಈರಾಕೋಡಿ ಕಲ್ಪನೆಯ ಕಾಗುಡ್ಡೆ ಎಂಬಲ್ಲಿ ಮೇ 27ರಂದು ಬಡಗ ಬೆಳ್ಳೂರು ಗ್ರಾಮದ ಅಬ್ದುಲ್ ರಹ್ಮಾನ್ ಅವರನ್ನು ಕೊಲೆಗೈದ ಪ್ರಕರಣಕ್ಕೆ ಸಂಬಂಧಿಸಿದಂತೆ ಬಂಟ್ವಾಳ ಗ್ರಾಮಾಂತರ ಠಾಣೆಯ ಪೊಲೀಸರು ಮತ್ತೆ ಒಬ್ಬನನ್ನು ಬಂಧಿಸಿದ್ದಾರೆ.
ಚಿಕ್ಕಮಗಳೂರು ಜಿಲ್ಲೆಯ ಶೃಂಗೇರಿ ತಾಲೂಕಿನ ಬೆಟ್ಟಗೆರೆ ಗ್ರಾಮದ ನಿವಾಸಿ ಸಂಜಯ್ (29) ಬಂಧಿತ ಆರೋಪಿ ಎಂದು ಗುರುತಿಸಲಾಗಿದೆ. ಇದರೊಂದಿಗೆ ಬಂಧಿತರ ಸಂಖ್ಯೆ 8ಕ್ಕೇರಿದೆ.
ಈಗಾಗಲೆ ಕುರಿಯಾಳ ಗ್ರಾಮದ ದೀಪಕ್ (21), ಅಮ್ಮುಂಜೆ ಗ್ರಾಮದ ಪೃಥ್ವಿರಾಜ್ (21) ಮತ್ತು ಚಿಂತನ್ (19), ತೆಂಕಬೆಳ್ಳೂರು ಗ್ರಾಮದ ಸುಮಿತ್ ಆಚಾರ್ಯ (27), ಬಡಗಬೆಳ್ಳೂರು ಗ್ರಾಮದ ರವಿರಾಜ್ (23), ತೆಂಕಬೆಳ್ಳೂರು ಗ್ರಾಮದ ಅಭಿನ್ ರೈ (32) ಮತ್ತು ಬಡಗಬೆಳ್ಳೂರು ಗ್ರಾಮದ ತೇಜಾಕ್ಷ (24) ಎಂಬವರನ್ನು ಪೊಲೀಸರು ಬಂಧಿಸಿದ್ದು, ತನಿಖೆ ಮುಂದುವರಿದಿದೆ.