ಉಡುಪಿ ಜಿಲ್ಲಾ ಅಮೆಚೂರ್ ಸೈಕ್ಲಿಂಗ್ ಅಸೋಸಿಯೇಷನ್ ಮೂವರು ಸದಸ್ಯರು ರಾಷ್ಟ್ರ ಮಟ್ಟಕ್ಕೆ ಆಯ್ಕೆ
ಬೆಳಗಾವಿ: ನೂತನವಾಗಿ ರಚಿತವಾದ ಉಡುಪಿ ಜಿಲ್ಲಾ ಅಮೆಚೂರ್ ಸೈಕ್ಲಿಂಗ್ ಅಸೋಸಿಯೇಷನ್ ತನ್ನ ಪಾದಾರ್ಪಣಾ ಪ್ರಯತ್ನದಲ್ಲಿಯೇ, ಬೆಳಗಾವಿಯಲ್ಲಿ ನಡೆದ 16ನೇ ಕರ್ನಾಟಕ ರಾಜ್ಯ ಮಟ್ಟದ ರೋಡ್ ಸೈಕ್ಲಿಂಗ್ ಸ್ಪರ್ಧೆಯಲ್ಲಿ ಒಂದು ಚಿನ್ನ, ಒಂದು ಕಂಚಿನ ಪದಕ ಪಡೆಯುವುದರೊಂದಿಗೆ , ಮೂವರು ಸೈಕ್ಲಿಸ್ಟ್ ಗಳು ರಾಷ್ಟ್ರೀಯ ಮಟ್ಟದ ರೋಡ್ ಸೈಕ್ಲಿಂಗ್ ಸ್ಪರ್ಧೆಗೆ ಆಯ್ಕೆ ಯಾಗಿದ್ದಾರೆ.
ಮಹಿಳೆಯರ ಮುಕ್ತ ಸ್ಪರ್ಧೆಯಲ್ಲಿ ಕುಮಾರಿ ಗ್ಲಿಯೋನಾ ಡಿಸೋಜಾ ಚಿನ್ನದ ಪದಕವನ್ನೂ, ಪುರುಷರ 23 ವರ್ಷದ ಸ್ಪರ್ಧೆಯಲ್ಲಿ ಶ್ರೀ ಹಾರ್ದಿಕ ರೈ ತೃತೀಯ ಸ್ಥಾನ ದೊಂದಿಗೆ ಕಂಚಿನ ಪದಕವನ್ನು ಪಡೆಯುವುದರೊಂದಿಗೆ ನವೆಂಬರ್ ತಿಂಗಳಲ್ಲಿ ಒರಿಸ್ಸಾ ದಲ್ಲಿ ನಡೆಯಲಿರುವ ರಾಷ್ಟ್ರೀಯ ಮಟ್ಟದ ರೋಡ್ ಸೈಕ್ಲಿಂಗ್ ಸ್ಪರ್ಧೆಗೆ ಆಯ್ಕೆ ಯಾಗಿದ್ದಾರೆ
ಅಂತೆಯೇ ಪುರುಷರ 23 ವರ್ಷದ ವಯೋಮಿತಿ ವರ್ಗದಲ್ಲಿ ಶ್ರೀ ನೀಲ್ ಡಿಸೋಜಾ ರವರು ತಮ್ಮ ಅಸಾಧಾರಣ ಸಾಧನೆಯೊಂದಿಗೆ ರಾಷ್ಟ್ರೀಯ ಮಟ್ಟದ ರೋಡ್ ಸೈಕ್ಲಿಂಗ್ ಸ್ಪರ್ಧೆಗೆ ಆಯ್ಕೆ ಹೊಂದಿರುತ್ತಾರೆ.
ತಂಡದ ಇತರ ಸೈಕ್ಲಿಸ್ಟ್ ಗಳಾದ ಶ್ರೀ ಶ್ರೀನಿಧಿ ಉರಾಳ, ಶ್ರೀ ದೀಪಕ್ ಕುಮಾರ್, ಶ್ರೀಮತಿ ಶುಭಾ, ಶ್ರೀ ದರ್ಶಿಲ್, ಶ್ರೀ ಜೋಶುವಾ ಫೆರ್ನಾಂಡಿಸ್ ತಮ್ಮ ತೀವ್ರ ಪೈಪೋಟಿಯ ಗಮನಾರ್ಹ ಸಾಧನೆಯೊಂದಿಗೆ ಎಲ್ಲರ ಗಮನವನ್ನು ಸೆಳೆದರು.
ಶ್ರೀ ಹಾರ್ದಿಕ ರೈ ರವರು ಇದೇ ತಿಂಗಳಲ್ಲಿ ಅರುಣಾಚಲ ಪ್ರದೇಶದ ತವಾಂಗ್ ನಲ್ಲಿ ನಡೆಯಲಿರುವ ರಾಷ್ಟ್ರೀಯ MTB ಸೈಕ್ಲಿಂಗ್ ಸ್ಪರ್ಧೆಗೂ ಕರ್ನಾಟಕ ರಾಜ್ಯವನ್ನು ಪ್ರತಿನಿಧಿಸಲು ಆಯ್ಕೆಯಾಗಿರುವರು.
ತಂಡದೊಂದಿಗೆ ಅಧ್ಯಕ್ಷ ಹಾಗೂ ತರಬೇತುದಾರರಾದ ಡಾ. ಗುರುರಾಜ್ ಕೆ ರವರು, ತಂಡದ ವ್ಯವಸ್ಥಾಪಕ ಹಾಗೂ ಉಪಾಧ್ಯಕ್ಷರಾದ ಡಾ. ಸೈಯದ್ ಮುಸ್ತಫಾ ಹಸನಿ, ಕೋಶಾಧಿಕಾರಿ ಹಾಗೂ ಕ್ರೀಡಾ ಸಂಯೋಜಕರಾದ ದೀಪಕ್ ಕುಮಾರ್ ರವರು ತಂಡದೊಂದಿಗಿದ್ದು, ಪ್ರಶಸ್ತಿ ಸ್ವೀಕರಿಸಿದರು.
ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ವಿಧಾನ ಪರಿಷತ್ ಸದಸ್ಯರಾದ ಶ್ರೀ ವಿವೇಕ ರಾವ್ ಪಾಟೀಲ್, ರಾಜ್ಯ ಸೈಕ್ಲಿಂಗ್ ಅಸೋಸಿಯೇಷನ್ ಅಧ್ಯಕ್ಷ ಶ್ರೀ ಜಿ.ವಿ. ಪಾಟೀಲ್ , ರಾಜ್ಯ ಕಾರ್ಯದರ್ಶಿ ಶ್ರೀ ಶ್ರೀ ಶೈಲ ಎಮ್ ಕುರನಿ, ನಿರ್ದೇಶಕರಾದ ಶ್ರೀ ರಾಜು ಬಿರಾದಾರ, ಸಂಚಾಲಕರಾದ ಶ್ರೀ ರಮೇಶ್ ಪುಜಾರಿಯವರು ಉಪಸ್ಥಿತರಿದ್ದರು.