ಉಳ್ಳಾಲ: ಕೆಲಸಕ್ಕೆ ಹೋಗಿದ್ದ ಮಹಿಳೆ ನಾಪತ್ತೆ – ಪ್ರಕರಣ ದಾಖಲು
ಮಂಗಳೂರು: ಕೂಲಿ ಕೆಲಸಕ್ಕೆ ತೆರಳಿದ್ದ ಮಹಿಳೆಯೊಬ್ಬರು ನಾಪತ್ತೆಯಾಗಿರುವ ಘಟನೆ ಉಳ್ಳಾಲ ತಾಲೂಕು ಬೋಳಿಯಾರ್ ಪ್ರದೇಶದಲ್ಲಿ ವರದಿಯಾಗಿದೆ. ಈ ಕುರಿತು ಕೊಣಾಜೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
ಬಾಗಲಕೋಟೆ ಜಿಲ್ಲೆಯ ಬಾದಾಮಿ ತಾಲೂಕಿನ ಮಲಾಪುರ ಮೂಲದ ಹಾಗೂ ಪ್ರಸ್ತುತ ಉಳ್ಳಾಲ ತಾಲೂಕಿನ ಮಾಗಂಧಡಿ ಬೋಳಿಯಾರ್ನಲ್ಲಿ ವಾಸವಾಗಿರುವ ಹನುಮಂತಪ್ಪ ಭಜಂತ್ರಿ (45) ಅವರು ನೀಡಿದ ದೂರಿನ ಪ್ರಕಾರ, ಅವರ ಪತ್ನಿ ಶೋಭಾ ಹನುಮಂತಪ್ಪ ಭಜಂತ್ರಿ (33) ಕೂಲಿ ಕೆಲಸ ಮಾಡಿಕೊಂಡಿದ್ದು, ಮಾರ್ಚ್ 7, 2026 ರಂದು ಬೆಳಿಗ್ಗೆ ಸುಮಾರು 9 ಗಂಟೆಗೆ ಮಕ್ಕಳನ್ನು ಬೋಳಿಯಾರ್ ಶಾಲೆಗೆ ಬಿಡಲು ತೆರಳಿದ್ದರು. ಆದರೆ ಅಲ್ಲಿಂದ ಮನೆಗೆ ಮರಳಿ ಬಾರದ ಹಿನ್ನೆಲೆಯಲ್ಲಿ ಕುಟುಂಬದವರು ಹುಡುಕಾಟ ನಡೆಸಿದರೂ ಯಾವುದೇ ಮಾಹಿತಿ ಲಭ್ಯವಾಗಿಲ್ಲ. ನಂತರ ಪರಿಚಯದವರಲ್ಲಿ ವಿಚಾರಿಸಿದರೂ ಮಾಹಿತಿ ಸಿಗದ ಕಾರಣ ಅವರು ಕೊಣಾಜೆ ಪೊಲೀಸ್ ಠಾಣೆಗೆ ದೂರು ನೀಡಿದರು.
ಈ ಸಂಬಂಧ ಕೊಣಾಜೆ ಪೊಲೀಸ್ ಠಾಣೆಯಲ್ಲಿ ಮೊ.ನಂ. 22/2026ರಡಿ ಹೆಂಗಸು ಕಾಣೆಯಾದ ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರಿಸಲಾಗಿದೆ.
ಕಾಣೆಯಾದ ಮಹಿಳೆಯ ವಿವರ:
ಹೆಸರು: ಶೋಭಾ ಹನುಮಂತಪ್ಪ ಭಜಂತ್ರಿ
ವಯಸ್ಸು: 33 ವರ್ಷ
ಗಂಡ: ಹನುಮಂತಪ್ಪ ಭಜಂತ್ರಿ
ಎತ್ತರ: ಸುಮಾರು 5.5 ಅಡಿ
ಚಹರೆ: ಸಾಧಾರಣ ಶರೀರ, ದುಂಡು ಮುಖ, ಎಣ್ಣೆಗಪ್ಪು ಮೈಬಣ್ಣ, ಮೆಳ್ಳ ಕಣ್ಣು
ಧರಿಸಿದ್ದ ಬಟ್ಟೆ: ಸೀರೆ
ತಿಳಿದಿರುವ ಭಾಷೆಗಳು: ಕನ್ನಡ, ಹಿಂದಿ
ಕಾಣೆಯಾದ ಶೋಭಾ ಹನುಮಂತಪ್ಪ ಭಜಂತ್ರಿ ಅವರು ಪತ್ತೆಯಾದಲ್ಲಿ ಮಂಗಳೂರು ನಗರ ಪೊಲೀಸ್ ಆಯುಕ್ತರ ಕಚೇರಿ ನಿಯಂತ್ರಣ ಕೊಠಡಿ (ದೂರವಾಣಿ: 0824-2220800) ಅಥವಾ ಕೊಣಾಜೆ ಪೊಲೀಸ್ ಠಾಣೆ (ದೂರವಾಣಿ: 0824-2220536 / 9480802351) ಗೆ ಮಾಹಿತಿ ನೀಡುವಂತೆ ಪೊಲೀಸರು ಸಾರ್ವಜನಿಕರಲ್ಲಿ ಮನವಿ ಮಾಡಿದ್ದಾರೆ.
