Home Mangalorean News Kannada News ಕದಳಿ ಮಹಾಲಿಂಗೇಶ್ವರ ದೇವಾಲಯದ ಸ್ಥಳದಲ್ಲಿ ಕದಳಿ ಶಾಸನ ಪತ್ತೆ

ಕದಳಿ ಮಹಾಲಿಂಗೇಶ್ವರ ದೇವಾಲಯದ ಸ್ಥಳದಲ್ಲಿ ಕದಳಿ ಶಾಸನ ಪತ್ತೆ

Spread the love

ಕದಳಿ ಮಹಾಲಿಂಗೇಶ್ವರ ದೇವಾಲಯದ ಸ್ಥಳದಲ್ಲಿ ಕದಳಿ ಶಾಸನ ಪತ್ತೆ

ಉಡುಪಿ : ಕುಂದಾಪುರ ತಾಲೂಕಿನ ಇಡೂರು-ಕುಂಜಾÐಡಿ ಗ್ರಾಮ ಪಂಚಾಯತಿ ವ್ಯಾಪ್ತಿಯ ಕದಳಿ ಮಹಾಲಿಂಗೇಶ್ವರ ದೇವಾಲಯದ ಸಮೀಪ ಬರದಕಲ್ಲು ಬೋಳೆ ಎಂಬ ಸ್ಥಳದಲ್ಲಿ ಸುಮಾರು 85 ಸೆ.ಮೀ. ಅಗಲ ಮತ್ತು 135 ಸೆ.ಮೀ ಎತ್ತರದ ಅಪ್ರಕಟಿತ ಶಾಸನವೊಂದು ಪತ್ತೆಯಾಗಿದೆ ಎಂದು ಪ್ರೊ.ಟಿ.ಮುರುಗೇಶಿಯವರು ತಿಳಿಸಿರುತ್ತಾರೆ.

ವಿಜಯನಗರ ಕಾಲದ ಶಾಸನ:
ವಿಜಯನಗರ ಸಾಮ್ರಾಜ್ಯವನ್ನು ಸ್ಥಾಪನೆ ಮಾಡಿದ ಸಂಗಮ ರಾಜಮನೆತನದ ಬುಕ್ಕರಾಯನ ಆಳ್ವಿಕೆಯ ಕಾಲದ ಶಾಸನವಿದು. ಈ ಶಾಸನದಲ್ಲಿ ಬುಕ್ಕರಾಯನನ್ನು ಶ್ರೀ ಮನುಮಹಾ ಮಂಡಳೇಶ್ವರ ಅರಿರಾಯ ವಿಭಾಡ, ಭಾಷೆಗೆ ತಪ್ಪುವ ರಾಯರ ಗಂಡ ಶ್ರೀ ವೀರ ಬುಕ್ಕಂಣ ವಡೆಯರೆಂದು ವರ್ಣಿಸಲಾಗಿದೆ. ಆತನ ಆಳ್ವಿಕೆಯ ಕಾಲದಲ್ಲಿ ಗೋಪರಸ ಒಡೆಯನು ಬಾರಕೂರಿನ ರಾಜ್ಯಪಾಲನಾಗಿ ಆಳ್ವಿಕೆಯನ್ನು ನಡೆಸುತ್ತಿದ್ದನೆಂದು ಶಾಸನದಲ್ಲಿ ಹೇಳಲಾಗಿದೆ.

ಶಾಸನದ ಕಾಲ:
ಶಕವರುಷ 1290 ನೆಯ ಕೀಲಕ ಸಂವತ್ಸರ ಎಂದು ಕಾಲವನ್ನು ಉಲ್ಲೇಖಿಸಿರುವುದರಿಂದ, ಶಾಸನದ ಕಾಲ ಕ್ರಿ.ಶ. 1368 ಕ್ಕೆ ಸರಿ ಹೊಂದುತ್ತದೆ. ಗೋಪರಸ ಒಡೆಯ ಕ್ರಿ.ಶ. 1366 ರಿಂದ 1373 ರವರೆಗೆ ಬಾರಕೂರಿನ ರಾಜ್ಯಪಾಲನಾಗಿ ಆಳ್ವಿಕೆ ನಡೆಸಿದ ಬಗ್ಗೆ ಇತರೆ ಶಾಸನಾಧಾರಗಳು ಲಭ್ಯವಿರುವುದರಿಂದ, ಕದಳಿಯ ಶಾಸನದ ಕಾಲ ಬಹುತೇಕ ಖಚಿತವೆಂದು ಭಾವಿಸಬಹುದಾಗಿದೆ.

ಕೊಲ್ಲೂರ ಕೋಟೆ ಕಾಳಗವನ್ನು ವಿವರಿಸುವ ಶಾಸನ:
ಕಬ್ಬುನಾಡ ಏಳು, ಹಂನೆರೆಡು ಯೆಕ್ಕಲ ಬಳಿಯವರು, ನಾಡ ನಾಲ್ವರು ಮತ್ತು ಸೇನಭೋವ ತಿಪ್ಪ ಕೊಲ್ಲೂರ ಕೋಟೆಗೆ ಮುತ್ತಿಗೆ ಹಾಕಿದ್ದನ್ನು ಈ ಶಾಸನದಲ್ಲಿ ಪ್ರಸ್ಥಾಪಿಸಲಾಗಿದೆ. ಈ ಕಾಳಗದಲ್ಲಿ ಕಾಡದಿ ಮುತ್ತ ಎಂಬುವನು ವೀರಮರಣವನ್ನು ಹೊಂದಿದ ವಿಷಯವನ್ನು ಮತ್ತು ಆತನಿಗೆ ನೀಡಿದ ಮಾನ್ಯವನು ಶಾಸನದಲ್ಲಿ ವಿವರಿಸಲಾಗಿದೆ. ಆತನಿಗೆ ನೀಡಿದ ಮಾನ್ಯವನು ಬಾರಕೂರ ಸಭೆಯ ಮಾನ್ಯವೆಂದು ಶಾಸನದಲ್ಲಿ ಹೇಳಲಾಗಿದೆ. ಆದರೆ, ಬಾರಕೂರ ಸಭೆಯ ಮಾನ್ಯವೆಂದರೆ ಏನು ಎನ್ನುವುದು ಸ್ಪಷ್ಟವಿಲ್ಲ.

ಕದಳಿ ಹೆಸರಿನ ಸ್ವಾರಸ್ಯ:
ಶಾಸನ ಇರುವ ಕದಳಿಯನ್ನು ಶಾಸನದಲ್ಲಿ ಕಡುವಳಿ ಎಂದು ಕರೆಯಲಾಗಿದೆ. ಕದಳಿಯ ಮಹಾಲಿಂಗೇಶ್ವರನನ್ನು ಕಡುವಳಿ ಮಹಾದೇವ ನೆಂದು ಕರೆಯಲಾಗಿದೆ. ಅಂದರೆ, ಕದಳಿಯ ಮೂಲರೂಪ ಕಡುವಳಿಯಾಗಿದ್ದು ಜನರ ಆಡುಮಾತಿನಲ್ಲಿ ಕಡುವಳಿ>ಕದಳಿಯಾಗಿ ಬದಲಾಗಿರುವುದನ್ನು ಶಾಸನ ಸ್ಪಷ್ಟಪಡಿಸುತ್ತದೆ.


Spread the love

Exit mobile version