Home Mangalorean News Kannada News ಕುಂದಾಪುರ : ದಿನಸಿ ಅಂಗಡಿಗೆ ಬೆಂಕಿ ಲಕ್ಷಾಂತರ ನಷ್ಟ

ಕುಂದಾಪುರ : ದಿನಸಿ ಅಂಗಡಿಗೆ ಬೆಂಕಿ ಲಕ್ಷಾಂತರ ನಷ್ಟ

Spread the love

ಕುಂದಾಪುರ: ನಗರದ ಸಂತೆ ಮಾರುಕಟ್ಟೆ ಪ್ರಾಂಗಣದಲ್ಲಿರುವ ಗಂಗೊಳ್ಳಿ ನಿವಾಸಿ ವೆಂಕಟೇಶ್ ಶೆಣೈಯವರಿಗೆ ಸೇರಿದ ವೆಂಕಟೇಶ ಕಪಾ ಟ್ರೇಡಿಂಗ್ ಕಂಪೆನಿ ಹೆಸರಿನ ಹೋಲ್‌ಸೆಲ್ ದಿನಸಿ ಅಂಗಡಿ ಮಂಗಳವಾರ ಬೆಂಕಿ ಆಕಸ್ಮಿಕದಿಂದ ಸಂಪೂರ್ಣ ಸುಟ್ಟುಹೋಗಿದ್ದು ಲಕ್ಷಾಂತರ ರೂಪಾಯಿ ನಷ್ಟ ಸಂಭವಿಸಿದೆ. ಬೆಂಕಿ ಅವಘಡಕ್ಕೆ ಸ್ಪಷ್ಟ ಕಾರಣ ತಿಳಿದುಬಂದಿಲ್ಲ.

ಕೆಲವು ಸಮಯದ ಹಿಂದೆ ಗಂಗೊಳ್ಳಿಯಲ್ಲಿರುವ ಇವರ ಅಂಗಡಿ ಬೆಂಕಿ ಅನಾಹುತಕ್ಕೀಡಾಗಿದ್ದರಿಂದ ಅಪಾರ ನಷ್ಟ ಉಂಟಾಗಿತ್ತು. ಬಳಿಕ ಗಂಗೊಳ್ಳಿಯಲ್ಲಿ ಉದ್ರಿಕ್ತ ವಾತಾವರಣಕ್ಕೆ ಕಾರಣವಾಗಿತ್ತು. ಇದರಿಂದ ಚೇತರಿಸಿಕೊಳ್ಳುತ್ತಿರುವ ಸಮಯದಲ್ಲಿಯೇ ಮಗದೊಮ್ಮೆ ದುರಂತಕ್ಕೆಡೆಯಾಗಿರುವುದರಿಂದ ಅಂಗಡಿ ಮಾಲೀಕರು ತತ್ತರಿಸಿಹೋಗಿದ್ದಾರೆ.

ಮಂಗಳವಾರ ಬೆಳಗ್ಗಿನ 5ಗಂಟೆ ಸುಮಾರಿಗೆ ಪ್ರಾಂಗಣದ ಭದ್ರತಾ ಸಿಬ್ಬಂದಿ ದತ್ತಾತ್ರೇಯ ವೀಕ್ಷಣೆ ಮಾಡುತ್ತಿರುವ ವೇಳೆ ವೆಂಕಟೇಶ ಕೃಪಾ ಅಂಗಡಿಯ ಮೇಲ್ಭಾಗದಿಂದ ಬೆಂಕಿ ಆವರಿಸಿದ್ದನ್ನು ಗುರುತಿಸಿದ್ದರು. ತಕ್ಷಣ ಎಪಿಎಂಸಿ ಯಾರ್ಡ್‌ನ ಕಾರ್ಯದರ್ಶಿ ರಾಮಚಂದ್ರ ನಾಯ್ಕ್ ಅವರಿಗೆ ಮಾಹಿತಿ ನೀಡಿದ್ದಾರೆ. ಪರಿಸರದವರು, ಅಗ್ನಿಶಾಮಕ ಠಾಣಾ ಸಿಬ್ಬಂದಿಗಳು ಸ್ಥಳಕ್ಕಾಗಮಿಸಿ ಸತತ 2ಗಂಟೆಯ ಕಾರ್ಯಾಚರಣೆಯ ಬಳಿಕ ಬೆಂಕಿ ತಹಬಂದಿಗೆ ತರುವಲ್ಲಿ ಯಶಸ್ವಿಯಾದರು. ಬೆಂಕಿ ಆಕಸ್ಮಿಕದಿಂದ ತೆಂಗಿನ ಎಣ್ಣೆ ಡಬ್ಬಗಳು, ಸೋಪು, ಪೀಠೋಪಕರಣ, ಕಂಪ್ಯೂಟರ್ ಸ್ಕೇಲ್, ಗೋಡೆ, ಕಿಟಕಿ, ರೋಲಿಂಗ್ ಶೆಟರ್, ಕಟ್ಟಡದ ಮೇಲ್ಚಾವಣಿ, ಸಿಮೆಂಟ್ ಸೀಟ್‌ಗಳು ಸುಟ್ಟು ಕರಕಲಾಗಿದ್ದು ಅಂದಾಜು ರೂ.20ಲಕ್ಷಕ್ಕೂ ಮಿಕ್ಕಿ ನಷ್ಟ ಸಂಭವಿಸಿದೆ.

ಘಟನಾ ಸ್ಥಳಕ್ಕೆ ಎಸ್ಪಿ ಅಣ್ಣಾಮಲೈ ಭೇಟಿ ನೀಡಿ ಹಾನಿ ಪರಿಶೀಲಿಸಿದ್ದು, ಅಂಗಡಿ ಮಾಲೀಕರಿಗೆ ಧೈರ್ಯ ತುಂಬಿ ಘಟನೆಯ ಬಗ್ಗೆ ಪೂರ್ಣಪ್ರಮಾಣದ ತನಿಖೆ ನಡೆಸಿ ನ್ಯಾಯ ಒದಗಿಸುವುದಾಗಿ ಭರವಸೆ ನೀಡಿದ್ದಾರೆ. ಡಿವೈಎಸ್ಪಿ ಮಂಜುನಾಥ ಶೆಟ್ಟಿ, ಸರ್ಕಲ್ ಇನ್ಸ್‌ಪೆಕ್ಟರ್ ದಿವಾಕರ್, ಠಾಣಾಧಿಕಾರಿ ನಾಸೀರ್ ಹುಸೇನ್ ಇದ್ದರು.


Spread the love

Exit mobile version