ಕೊಲ್ಲೂರು ಮೂಕಾಂಬಿಕಾ ದೇವಿಗೆ 1 ಕೆಜಿ ತೂಕದ ರತ್ನ ಖಚಿತ ಚಿನ್ನದ ಮುಖವಾಡ ಅರ್ಪಿಸಿದ ವೈದ್ಯ!
ಕುಂದಾಪುರ: ಕೊಲ್ಲೂರು ಶ್ರೀ ಮೂಕಾಂಬಿಕಾ ದೇವಿಯ ಭಕ್ತರಾಗಿರುವ ತುಮಕೂರು ಜಿಲ್ಲೆಯ ಶಿರಾ ತಾಲ್ಲೂಕಿನ ಕುವೆಂಪು ನಗರದ ರಾಘವಾಂಬಿಕ ಆಯುರ್ವೇದ ಚಿಕಿತ್ಸಾಲಯದ ಡಾ.ಲಕ್ಷ್ಮೀನಾರಾಯಣ ಆರ್ ಅವರು ಬುಧವಾರ ಶ್ರೀ ಮೂಕಾಂಬಿಕಾ ದೇವಿಗೆ 1 ಕೆ ಜಿ ಒಟ್ಟು ತೂಕದ ರತ್ನಖಚಿತ ಚಿನ್ನದ ಮುಖವಾಡ ಅರ್ಪಿಸಿದ್ದಾರೆ.
ಶ್ರೀದೇವಿಗೆ ರತ್ನಖಚಿತ ಚಿನ್ನದ ಮುಖವಾಡ ಅರ್ಪಿಸಲು ಸಂಕಲ್ಪ ಮಾಡಿದ್ದ ಅವರು, ದೇಗುಲದ ವ್ಯವಸ್ಥಾಪನಾ ಸಮಿತಿಯಿಂದ ಅನುಮತಿ ಪಡೆದುಕೊಂಡು ಅತ್ಯಾಕರ್ಷಕ ಮುಖವಾಡ ಸಿದ್ಧಪಡಿಸಿದ್ದಾರೆ. ಮುಖವಾಡಕ್ಕೆ 693.750 ತೂಕದ 22 ಕ್ಯಾರೆಟ್ ಚಿನ್ನ ಬಳಸಲಾಗಿದ್ದು, ವಜ್ರ, ಪಚ್ಚೆ, ನೀಲ, ಮಾಣಿಕ್ಯ ಹಾಗೂ ದಕ್ಷಿಣ ಭಾರತದ ಸಮುದ್ರ ಹವಳಗಳನ್ನು ಅಳವಡಿಸಲಾಗಿದೆ. ಬೆಂಗಳೂರಿನ ಕರ್ನಾಟಕ ರಾಜ್ಯ ಜ್ಯುವೆಲ್ಲರ್ಸ್ ಅಸೋಸಿಯೇಷನ್ ಅವರು ಇದನ್ನು ಪರೀಕ್ಷಿಸಿ ಪ್ರಮಾಣ ಪತ್ರ ನೀಡಿದ್ದಾರೆ.
ಬುಧವಾರ ಕುಟುಂಬ ಸಹಿತರಾಗಿ ಕೊಲ್ಲೂರು ಶ್ರೀ ಮೂಕಾಂಬಿಕಾ ದೇವಿಗೆ ವಿಶೇಷ ಪೂಜೆ ಸಲ್ಲಿಸಿದ ಡಾ.ಲಕ್ಷ್ಮೀನಾರಾಯಣ ಆರ್ ಅವರು ಮುಖವಾಡದ ಸಮರ್ಪಣೆ ಮಾಡಿದ್ದಾರೆ. ದೇಗುಲದ ವತಿಯಿಂದ ಡಾ.ಲಕ್ಷ್ಮೀನಾರಾಯಣ ಆರ್ ದಂಪತಿಗಳನ್ನು ಗೌರವಿಸಲಾಯಿತು.
ಜಗತ್ತಿನಾದ್ಯಂತ ಇರುವ ಶ್ರೀ ದೇವಿಯ ಭಕ್ತರು ಭಕ್ತಿಯಿಂದ ನೀಡುವ ಪ್ರತಿಯೊಂದು ಕಾಣಿಕೆಗಳನ್ನು ಅತ್ಯಂತ ಗೌರವ ಭಾವನೆಯಿಂದ ಸ್ವೀಕರಿಸುತ್ತೇವೆ. ಡಾ.ಲಕ್ಷ್ಮೀನಾರಾಣ ಅವರು ಈ ಹಿಂದೆಯೇ ಮುಖವಾಡ ಸಮರ್ಪಣೆ ಸಂಕಲ್ಪ ಮಾಡಿದ್ದರೂ, ನಮ್ಮ ಸೇವಾವಧಿಯಲ್ಲಿ ಕಾಲ ಕೂಡಿ ಬಂದಿರುವುದು ಸಂತೋಷ ತಂದಿದೆ ಎಂದು ವ್ಯವಸ್ಥಾಪನಾ ಸಮಿತಿ ಅಧ್ಯಕ್ಷರಾದ ಕೆ ಬಾಬು ಶೆಟ್ಟಿ ತಗ್ಗರ್ಸೆ ಹೇಳಿದರು.
ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಕೆ.ಬಾಬು ತಗ್ಗರ್ಸೆ, ಸದಸ್ಯರಾದ ರಘುರಾಮ ದೇವಾಡಿಗ ಆಲೂರು, ಮಹಾಲಿಂಗ ನಾಯ್ಕ, ಕೆ.ಸುಧಾ, ಕಾರ್ಯನಿರ್ವಹಣಾಧಿಕಾರಿ ಪ್ರಶಾಂತ್ ಶೆಟ್ಟಿ ಇದ್ದರು.
ಅರ್ಚಕರಾದ ನಾರ್ಸಿ ಸುಬ್ರಹ್ಮಣ್ಯ ಅಡಿಗ, ನರಸಿಂಹ ಭಟ್, ಕಾಳಿದಾಸ್ ಭಟ್ ಹಾಗೂ ಸುರೇಶ್ ಭಟ್ ಧಾರ್ಮಿಕ ಪೂಜಾ ವಿಧಿಯನ್ನು ನಿರ್ವಹಿಸಿದರು.