ಗಂಗೊಳ್ಳಿಯಲ್ಲಿ ಕಥೊಲಿಕ್ ಸಭಾ ವತಿಯಿಂದ ಕುಂದಾಪುರ ವಲಯ ಮಟ್ಟದ ‘ಕ್ರಿಸ್ಮಸ್ ಭಾಂಧವ್ಯ’
ಕುಂದಾಪುರ: ಕಥೊಲಿಕ್ ಸಭಾ ಉಡುಪಿ ಪ್ರದೇಶ್ (ರಿ) ಕುಂದಾಪುರ ವಲಯ ಹಾಗೂ ಕಥೊಲಿಕ್ ಸಭಾ ಉಡುಪಿ ಪ್ರದೇಶ್ ( ರಿ) ಇವರ ಜಂಟಿ ಆಶ್ರಯದಲ್ಲಿ ಶೆವೊಟ್ ಪ್ರತಿಷ್ಟಾನ್ (ರಿ) ಕುಂದಾಪುರ ಇವರ ಸಹಯೋಗ ದೊಂದಿಗೆ ದಿನಾಂಕ 14/12/2025 ರಂದು ಗಂಗೊಳ್ಳಿಯ ಕೊಸೆಸಾಂವ್ ಮಾತೆ ಚರ್ಚಿನ ಸಂತ ಜೋಸೆಫ್ ವಾಜ್ ಸಭಾಭವನದಲ್ಲಿ ಕುಂದಾಪುರ ವಲಯ ಮಟ್ಟದ ” ಕ್ರಿಸ್ಮಸ್ ಭಾಂಧವ್ಯ” ಕಾರ್ಯಕ್ರಮವು ನಡೆಯಿತು.

ಕಥೊಲಿಕ್ ಸಭಾ ಉಡುಪಿ ಪ್ರದೇಶ್ (ರಿ) ಕುಂದಾಪುರ ವಲಯ ಸಮಿತಿಯ ಅಧ್ಯಕ್ಷರಾದ ಶ್ರೀ ರೆಮಿ ಫೆರ್ನಾಂಡಿಸ್ ರವರ ಅಧ್ಯಕ್ಷತೆ ಯಲ್ಲಿ ನಡೆದ ಕಾರ್ಯಕ್ರಮವನ್ನು ಗಂಗೊಳ್ಳಿ ಕೊಸೆಸಾಂವ್ ಮಾತೆ ಚರ್ಚಿನ ಧರ್ಮ ಗುರುಗಳಾದ ವಂದನೀಯ ತೋಮಸ್ ರೋಶನ್ ಡಿಸೋಜ ರವರು ಕ್ರಿಸ್ಮಸ್ ಹಬ್ಬದ ದ್ಯೋತಕವಾಗಿರುವ ನಕ್ಷತ್ರವನ್ನು ಅನಾವರಣ ಗೊಳಿಸುವ ಮೂಲಕ ಉದ್ಘಾಟಿಸಿ ” ಭರವಸೆ ಎನ್ನುವುದು ಯಾರನ್ನೂ ನಿರಾಶೆಯಾಗಲು ಬಿಡದು, ಕತ್ತಲೆಯಿಂದ ನಾವು ಬೆಳಕಿನೆಡೆಗೆ ಹೋಗುವ , ನಮ್ಮೆಲ್ಲರ ಜೀವನದಲ್ಲಿ ಬೆಳಕನ್ನು ಹಾಗೂ ಶಾಂತಿಯನ್ನು ನೀಡುವ ಹಬ್ಬವೆ ಕ್ರಿಸ್ಮಸ್, ಒಂದೇ ಕುಟಂಬದ ಸದಸ್ಯರಂತೆ ಸೌಹಾರ್ದತೆಯೊಂದಿಗೆ ಬಾಳಿ ಬದುಕುವ ಜೀವನ ನಮ್ಮೆಲ್ಲರಿಗೂ ದೇವರು ಕರುಣಿಸಲಿ ” ಎಂದು ಕಾರ್ಯಕುಮಕ್ಕೆ ಶುಭ ಹಾರೈಸಿದರು.
ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿದ ಗಂಗೊಳ್ಳಿ ಸ್ಟೆಲ್ಲಾ ಮಾರಿಸ್ ಪ್ರೌಢ ಶಾಲೆಯ ಅಧ್ಯಾಪಕರಾದ ಶ್ರೀ ಗಣೇಶ ಹೆಬ್ಬಾರ್ ರವರು” ಕ್ರಿಸ್ಮಸ್ ಬಾಂಧವ್ಯ” ಆಚರಣೆ ಎಂದರೆ ನಮ್ಮ ಬಂಧುಗಳೊಂದಿಗೆ ಆಚರಿಸುವ ಹಬ್ಬ, ನಮಗೆ ಯಾರು ಒಳಿತನ್ನು ಮಾಡುತ್ತಾರೊ ಯಾರು ಒಳಿತನ್ನು ಬಯಸುತ್ತಾರೊ ಅವರೆ ನಮ್ಮ ಬಂಧುಗಳು. ಜಗತ್ತಿನ ಎಲ್ಲ ಧರ್ಮಗಳು ಸಾಮರಸ್ಯ, ಸಹಬಾಳ್ವೆ ಮತ್ತು ಶಾಂತಿಯನ್ನೆ ಪ್ರತಿಪಾದಿಸುತ್ತವೆ. ನಾವು ನಮ್ಮ ಧರ್ಮವನ್ನು ಅರಿತು, ಇತರ ಧರ್ಮಗಳನ್ನು ಗೌರವಿಸಿದಾಗ ಅತೀ ಶ್ರೇಷ್ಟವಾದ ಮಾನವ ಧರ್ಮ ನಮ್ಮಲ್ಲಿ ಅನಾವರಣ ಗೊಳ್ಳುತ್ತದೆ. ಇಂತಹ ಸೌಹಾರ್ದತೆಯ ಸಂಭ್ರಮ, ಸಡಗರಗಳು ಹೆಚ್ಚಾಗಿ ಪ್ರೀತಿ ಮತ್ತು ಸಾಮರಸ್ಯದ ಬದುಕು ನಮ್ಮದಾಗಲಿ” ಎಂದರು.
ಗಂಗೊಳ್ಳಿ ಗ್ರಾಮ ಪಂಚಾಯತ್ ನ ಅಧ್ಯಕ್ಷರಾದ ಶ್ರೀಮತಿ ಜಯಂತಿ ಖಾರ್ವಿ ಯವರು ಮುಖ್ಯ ಅತಿಥಿಯಾಗಿ ಭಾಗವಹಿಸಿ” ನಾವೆಲ್ಲರೂ ಒಂದೇ ಎನ್ನುವ ಭಾವನೆಯಿಂದ ಸಹಬಾಳ್ವೆಯ ಜೀವನ ನಡೆಸುವ” ಎಂದು ಹೇಳಿ ಕ್ರಿಸ್ಮಸ್ ಹಬ್ಬದ ಶುಭಾಶಯಗಳನ್ನು ಕೋರಿದರು.
ಈ ಸಂದರ್ಭದಲ್ಲಿ ಮುಳುಗು ತಜ್ಞರಾಗಿ ಹಲವಾರು ಜನರಿಗೆ ಸಹಾಯ ಮಾಡಿದಂತಹ ಶ್ರೀ ದಿನೇಶ್ ಖಾರ್ವಿ, ಗಂಗೊಳ್ಳಿ, ಚಲನಚಿತ್ರ ಹಾಗೂ ಕಲಾ ಕ್ಷೇತ್ರದಲ್ಲಿ ವಿಶಿಷ್ಟ ಸಾಧನೆ ಮಾಡಿದ ಶ್ರೀ ಯಾಕೂಬ್ ಖಾದರ್, ಗುಲ್ವಾಡಿ, ಕಟ್ಟಡ ನಿರ್ಮಾಣ ಕಾರ್ಮಿಕರ ಕಲ್ಯಾಣಕ್ಕಾಗಿ ಶ್ರಮಿಸುತ್ತಿರುವ ಶ್ರೀ ರೊನಾಲ್ಡ್ ರಾಜೇಶ್ ಕ್ವಾಡ್ರಸ್, ಬೈಂದೂರು ಹಾಗೂ ಕುಂದಾಪುರ ತಾಲೂಕು ಸಾರ್ವಜನಿಕ ಆಸ್ಪತ್ರೆಯ ಸಲಹಾ ಸಮಿತಿ ಸದಸ್ಯರಾದ ಶ್ರೀ ಪ್ರಭು ಕೆನಡಿ ಪಿರೇರಾ ಇವರನ್ನು ಸನ್ಮಾನಿಸಲಾಯಿತು.
ಶ್ರೀ ವಿಲ್ಸನ್ ಡಾಯಸ್, ಶ್ರೀ ವಿಲ್ಸನ್ ಡಿ ಅಲ್ಮೇಡಾ ಹಾಗೂ ಶ್ರೀ ಓವಿನ್ ರೆಬೆಲ್ಲೊ ಸನ್ಮಾನಿತರನ್ನು ಸಭೆಗೆ ಪರಿಚಯಿಸಿದರು.
ಕಥೊಲಿಕ್ ಸಭಾ ಗಂಗೊಳ್ಳಿ ಘಟಕದ ಪರವಾಗಿ ಪ್ರತಿಭಾ ಪುರಸ್ಕಾರ ಹಾಗೂ ಭಾಷಣ ಸ್ಪರ್ಧೆಯ ವಿಜೇತರಿಗೆ ಬಹುಮಾನಗಳನ್ನು ವಿತರಿಸಲಾಯಿತು. ಶ್ರೀಮತಿ ರೆನಿಟಾ ಬಾರ್ನೆಸ್ ಈ ಕಾರ್ಯಕ್ರಮವನ್ನು ಸಂಯೋಜಿಸಿದರು.
ಸನ್ಮಾನಿತರ ಪರವಾಗಿ ಮಾತನಾಡಿದ ಯಾಕೂಬ್ ಖಾದರ್ ಗುಲ್ವಾಡಿ ಯವರು” ಸಮಾಜದಲ್ಲಿ ಸೌಹಾರ್ದತೆಗಾಗಿ ಶ್ರಮಿಸುವ ನನಗೆ, ಇಂದು ಈ ಕ್ರಿಸ್ಮಸ್ ಭಾಂಧವ್ಯ ಕಾರ್ಯಕ್ರಮದಲ್ಲಿ ಸನ್ಮಾನಿಸಿ ಗೌರವಿಸಿರುವುದು , ನಾನು ಪಡೆದು ಕೊಂಡಿರುವ ಸನ್ಮಾನ ಹಾಗೂ ಪ್ರಶಸ್ತಿಗಳಲ್ಲಿ ಶ್ರೇಷ್ಟ ಎಂದು ಭಾವಿಸುತ್ತೇನೆ. ಶಾಂತಿ ಸಹಬಾಳ್ವೆಯ ಜೀವನ ನಮ್ಮದಾದಾಗ ನಾವು ಅತ್ಯುತ್ತಮ ಮನುಷ್ಯರಾಗಲು ಸಾಧ್ಯ” ಎಂದು ತಮ್ಮ ಅನಿಸಿಕೆಗಳನ್ನು ಹಂಚಿಕೊಂಡರು.
ಶೆವೊಟ್ ಪ್ರತಿಷ್ಟಾನ (ರಿ) ಕುಂದಾಪುರ ಇದರ ವತಿಯಿಂದ ಅಧ್ಯಕರಾದ ಶ್ರೀ ಎಲ್ರೋಯ್ ಕಿರನ್ ಕ್ರಾಸ್ಟೊರವರ ನೇತೃತ್ವದಲ್ಲಿ, ಕುಂದಾಪುರ ವಲಯದಲ್ಲಿಯ ಬೈಂದೂರು ಹಾಗೂ ಕುಂದಾಪುರ ಚರ್ಚಿನ ಎರಡು ಕುಟುಂಬಗಳಿಗೆ ಔಷಧಿಗೆ ಹಾಗೂ ಮನೆ ಕಟ್ಟಲು ಸಹಾಯಧನದ ಚೆಕ್ ಗಳನ್ನು ವಿತರಿಸಲಾಯಿತು.
ಗೌರವ ಅತಿಥಿಗಳಾಗಿ ಭಾಗವಹಿಸಿದ ಕುಂದಾಪುರ ವಲಯದ ಪ್ರಧಾನ ಧರ್ಮಗುರುಗಳು ಹಾಗೂ ಕಥೊಲಿಕ್ ಸಭೆಯ ಆಧ್ಯಾತ್ಮಿಕ ನಿದೇರ್ಶಕರಾದ ಅತಿ. ವಂದನೀಯ ಪೌಲ್ ರೇಗೊ ರವರು ” ಸಾಮರಸ್ಯದ ಹಾಗೂ ಶಾಂತಿಯ ಹಬ್ಬವಾಗಿರುವ ಕ್ರಿಸ್ಮಸ್ ಹಬ್ಬದ ಸಂದೇಶಗಳನ್ನು ಈ ಕಾರ್ಯಕ್ರಮದ ಅತಿಥಿಗಳು ಬಹಳ ಚೆನ್ನಾಗಿ ನಿರೂಪಿಸಿದ್ದಾರೆ. ಪ್ರಪಂಚದಲ್ಲಿ ಅತೀ ಶ್ರೇಷ್ಟವಾಗಿರುವ ಮಾನವ ಧರ್ಮವನ್ನು ನಮ್ಮಲ್ಲಿ ಒಗ್ಗೂಡಿಕೊಂಡು ನಿಜವಾದ ಕ್ರಿಸ್ಮಸ್ ಆಚರಿಸೋಣ ” ಎಂದು ಸರ್ವರಿಗೂ ಕ್ರಿಸ್ಮಸ್ ಹಬ್ಬದ ಶುಭಾಶಯಗಳನ್ನು ಕೋರಿದರು.
ಅಧ್ಯಕ್ಷತೆ ವಹಿಸಿದ್ದ ರೇಮಿ ಫೆರ್ನಾಂಡಿಸ್ ರವರು ಕಥೊಲಿಕ್ ಸಭಾದ ಸೇವಾ ಕಾರ್ಯಗಳನ್ನು ಹಂಚಿಕೊಂಡು, ಕ್ರಿಸ್ಮಸ್ ಭಾಂಧವ್ಯ ಕಾರ್ಯಕ್ರಮವನ್ನು ಸೊಗಸಾಗಿ ಆಯೋಜಿಸಿದ ಗಂಗೊಳ್ಳಿ ಘಟಕಕ್ಕೆ ಅಧಿನಂದನೆಗಳನ್ನು ಸಲ್ಲಿಸಿದರು.
ವೇದಿಕೆಯಲ್ಲಿ ಮುಖ್ಯ ಅತಿಥಿಗಳಾದ ,ಗಂಗೊಳ್ಳಿಯ ಸೋಶಿಯಲ್ ವೆಲ್ಫೇರ್ ಫೆಡರೇಶನ್(ರಿ) ನ ಅಧ್ಯಕ್ಷರಾದ ಶ್ರೀ ಅಬ್ದುಲ್ ರಶೀದ್, ಗಂಗೊಳ್ಳಿ, ಕಥೊಲಿಕ್ ಸಭಾ ಕುಂದಾಪುರ ವಲಯದ ನಿಕಟಪೂರ್ವ ಅಧ್ಯಕ್ಷರಾದ ಶ್ರೀ ವಿಲ್ಸನ್ ಡಿ ಅಲ್ಮೇಡಾ, ಗಂಗೊಳ್ಳಿ ಘಟಕದ ಕಾರ್ಯದರ್ಶಿ ಶ್ರೀ ಸೈಮನ್ ಡಿಸೋಜ, ಕಾರ್ಯಕ್ರಮದ ಸಂಚಾಲಕರಾದ ಶ್ರೀ ವಿಲ್ಸನ್ ಡಾಯಸ್ ಹಾಗೂ ಶ್ರೀಮತಿ ಜೆನ್ನಿ ಬುತ್ತೆಲ್ಲೊ ಉಪಸ್ಥಿತರಿದ್ದರು.
ಕಥೊಲಿಕ್ ಸಭಾ ಉಡುಪಿ ಪ್ರದೇಶ್(ರಿ) ಗಂಗೊಳ್ಳಿ ಘಟಕದ ಅಧ್ಯಕ್ಷರಾದ ಶ್ರೀ ಎಡ್ವರ್ಡ್ ಫೆರ್ನಾಂಡಿಸ್ ಸ್ವಾಗತಿಸಿದರೆ, ಕುಂದಾಪುರ ವಲಯದ ಕಾರ್ಯದರ್ಶಿಗಳಾದ ಶ್ರೀಮತಿ ಮರಿಯಾ ಡಿಸಿಲ್ವ ವಂದಿಸಿದರು, ಶ್ರೀಮತಿ ಆಶಾ ಡಿಕೊಸ್ಟಾ , ಗಂಗೊಳ್ಳಿ ಕಾರ್ಯಕ್ರಮವನ್ನು ನಿರೂಪಿಸಿದರು, ಶ್ರೀ ರೋಶನ್ ಲೋಬೊ, ಶ್ರೀ ಓವಿನ್ ರೆಬೆಲ್ಲೊ, ಶ್ರೀ ಫೆಲಿಕ್ಸ್ ರೆಬೆರೊ, ಶ್ರೀ ಗೋಡ್ವಿನ್ ಡಾಯಸ್, ಶ್ರೀ ಆಲೋಶಿಯಸ್ ಫೆರ್ನಾಂಡಿಸ್, ಶ್ರೀ ರಿಚ್ವರ್ಡ್ ಕಾರ್ಡಿನ್ , ಕು. ಅಮಿಷಾ ಫೆರ್ನಾಂಡಿಸ್ ಹಾಗೂ ಶ್ರೀಮತಿ ರೆನಿಟಾ ಬಾರ್ನೆಸ್ ಕಾರ್ಯಕ್ರಮದ ಯಶಸ್ಸಿಗೆ ಶ್ರಮಿಸಿದರು.
ಸಭಾ ಕಾರ್ಯಕ್ರಮದ ಮೊದಲು ಶ್ರೀ ಲೋಯ್ಡ್ ರೆಬೆರೊ ರವರ ನೇತೃತ್ವದಲ್ಲಿ ಗಂಗೊಳ್ಳಿ ಕೊಸೆಸಾಂವ್ ಮಾತೆ ಚರ್ಚಿನ ಗಾಯನ ಮಂಡಳಿಯ ಸದಸ್ಯರು ಕ್ರಿಸ್ಮಸ್ ಗೀತೆಗಳನ್ನು ಹಾಡಿದರು. ಬೈಂದೂರು ಪವಿತ್ರ ಶಿಲುಬೆ ಚರ್ಚಿನ ಸದಸ್ಯರು ಸ್ವಾಗತ ನೃತ್ಯ ಪ್ರದರ್ಶನ ನೀಡಿದರು.
ಸಭಾ ಕಾರ್ಯಕ್ರಮದ ನಂತರ ಕುಂದಾಪುರ ರೋಜರಿ ಮಾತೆ ಚರ್ಚಿನ ಕಥೊಲಿಕ್ ಸಭಾ ಸದಸ್ಯರಿಂದ ಕಿರುನಾಟಕ, ತ್ರಾಸಿ ಕ್ರಿಸ್ತ ರಾಜ ಚರ್ಚಿನ ಸದಸ್ಯರಿಂದ ಕ್ರಿಸ್ಮಸ್ ಗೀತೆಗಳು, ಬೈಂದೂರು ಪವಿತ್ರ ಶಿಲುಬೆ ಚರ್ಚಿನ ಸದಸ್ಯರಿಂದ ನೃತ್ಯ, ಗಂಗೊಳ್ಳಿ ಕೊಸೆಸಾಂವ್ ಮಾತೆ ಚರ್ಚಿನ ಕಥೊಲಿಕ್ ಸಭಾ ಸದಸ್ಯರಿಂದ ” ಚುಕ್ಕಿ ಬೆಳಗಿತು” ಎನ್ನುವ ಕಿರುನಾಟಕ ಹಾಗೂ ಶ್ರೀ ಜೈಸನ್ ಫರ್ನಾಂಡಿಸ್ ರವರ ನೇತೃತ್ವದಲ್ಲಿ ಗಂಗೊಳ್ಳಿಯ ಪುಟಾಣಿ ಮಕ್ಕಳೊಂದಿಗೆ ” ಸಾಂತಾಕ್ಲೊಸ್” ನೃತ್ಯ ಪ್ರದರ್ಶನ ನೀಡಿ, ಸಭಿಕರನ್ನು ರಂಜಿಸಿದರು.