ಗಾಂಧಿಜಿಯವರ ಸತ್ಯ ಮತ್ತು ಅಹಿಂಸಾ ಮಾರ್ಗಗಳು ಇಂದಿಗೂ ಪ್ರಸ್ತುತ – ಡಾ. ಜಯರಾಮ ಶೆಟ್ಟಿಗಾರ್
ಉಡುಪಿ: ಮಹಾತ್ಮ ಗಾಂಧಿಜಿಯವರ ಸತ್ಯ ಮತ್ತು ಅಹಿಂಸಾ ಮಾರ್ಗಗಳು ಇಂದಿನ ಕಾಲಕ್ಕೂ ಪ್ರಸ್ತುತವಾಗಿದೆ ಎಂದು ಮಿಲಾಗ್ರಿಸ್ ಕಾಲೇಜಿನ ನಿವೃತ್ತ ಪ್ರಾಧ್ಯಾಪಕರಾದ ಡಾ. ಜಯರಾಮ ಶೆಟ್ಟಿಗಾರ್ ಹೇಳಿದರು.
ಅವರು ಮಂಗಳವಾರ ಕಲ್ಯಾಣಪುರ ಮಿಲಾಗ್ರಿಸ್ ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನೆ ಘಟಕ ಗಾಂಧಿ ಜಯಂತಿ ಪ್ರಯುಕ್ತ ಆಯೋಜಿಸಿದ್ದ ಶಾಂತಿಯ ಮಂತ್ರದೊಂದಿಗೆ ಜಗತ್ತಿಗೆ ಗಾಂಧಿಜಿಯವರ ನೇತೃತ್ವ ಕುರಿತಾದ ವಿಶೇಷ ಉಪನ್ಯಾಸ ಕಾರ್ಯಾಗಾರದಲ್ಲಿ ದಿಕ್ಸೂಚಿ ಭಾಷಣದಲ್ಲಿ ಮಾತನಾಡಿದರು
ಗಾಂಧಿ ಪ್ರಬಲ ಬ್ರಿಟಿಷ್ ಸಾಮ್ರಾಜ್ಯವನ್ನು ಸೋಲಿಸಿದ್ದು ಕತ್ತಿಗಳು ಅಥವಾ ಬಂದೂಕುಗಳಿಂದಲ್ಲ, ಸಂಪೂರ್ಣವಾಗಿ ಸತ್ಯ ಮತ್ತು ಅಹಿಂಸಾ ಶಸ್ತ್ರಾಸ್ತ್ರಗಳ ಮೂಲಕ ಜಗತ್ತಿಗೆ ತೋರಿಸಿಕೊಟ್ಟರು. ಯುದ್ದ ಜಗತ್ತಿಗೆ ಅನಿವಾರ್ಯವಲ್ಲ ಎನ್ನುವುದನ್ನು ತಮ್ಮ ಶಾಂತಿ ಹಾಗೂ ಅಹಿಂಸಾ ತತ್ವದ ಮೂಲಕ ಸಾಧಿಸಿ ತೋರಿಸಿದರು. ಯುದ್ದದ ಸಂದಿಗ್ಧತೆಯಲ್ಲಿರುವ ಜಗತ್ತಿಗೆ ಗಾಂಧಿಜಿಯವರು ತೋರಿದ ಶಾಂತಿ ಮಂತ್ರ ಇಂದು ಅನಿವಾರ್ಯವಾಗಿದೆ. ಅವರ ಜೀವನ, ತತ್ವ-ಸಿದ್ಧಾಂತಗಳು ಭಾರತ ಮಾತ್ರವಲ್ಲದೇ ವಿಶ್ವದಾದ್ಯಂತ ಇರುವ ಹಲವು ಸಾಮಾಜಿಕ ಹಾಗೂ ರಾಜಕೀಯ ಕಾರ್ಯಕರ್ತರಿಗೆ ಸ್ಫೂರ್ತಿಯಾಗಿದೆ. ಅವರ ಆದರ್ಶಗಳನ್ನು ಪ್ರತಿಯೊಬ್ಬರು ನಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಬೇಕಾಗಿದೆ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕಾಲೇಜಿನ ಉಪ ಪ್ರಾಂಶುಪಾಲರಾದ ಸೋಫಿಯಾ ಡಯಾಸ್ ವಹಿಸಿದ್ದರು.
ಕಾರ್ಯಕ್ರಮದಲ್ಲಿ ಕಾಲೇಜಿನ ಎನ್ ಎಸ್ ಎಸ್ ಅಧಿಕಾರಿಗಳಾದ ಗಣೇಶ್ ನಾಯಕ್, ಶುಭಲತಾ, ಐಕ್ಯೂಎಸಿ ಅಧಿಕಾರಿ ಶಾಲೆಟ್ ಮಥಾಯಸ್ ಉಪಸ್ಥಿತರಿದ್ದರು.
ತ್ರೀಶಾ ಸ್ವಾಗತಿಸಿ, ರಕ್ಷಾ ವಂದಿಸಿದರು. ಅತೀಕ್ ಪೂಜಾರಿ ಕಾರ್ಯಕ್ರಮ ನಿರೂಪಿಸಿದರು.