ಗೋಸಂರಕ್ಷಣೆಗಾಗಿ 50ಕ್ಕೂ ಅಧಿಕ ಸಂತರಿಂದ ರಕ್ತಾಕ್ಷರ
ಉಡುಪಿ: ದೇಶದಲ್ಲಿ ಗೋವಿನ ರಕ್ತ ಹರಿಯುವುದನ್ನು ತಡೆಯುವ ಸಲುವಾಗಿ ನಾಡಿನ 50ಕ್ಕೂ ಹೆಚ್ಚು ಸಂತರು ಈಗಾಗಲೇ ರಕ್ತಾಕ್ಷರದಲ್ಲಿ ಗೋಸಂರಕ್ಷಣೆಯ ಹಸ್ತಾಕ್ಷರ ಬರೆದು ಪ್ರಧಾನಿ ಹಾಗೂ ಮುಖ್ಯಮಂತ್ರಿಗಳಿಗೆ ಸಲ್ಲಿಸಲು ಮುಂದಾಗಿದ್ದಾರೆ ಎಂದು ಶ್ರೀರಾಮಚಂದ್ರಾಪುರಮಠದ ಶ್ರೀಶ್ರೀಶ್ರೀರಾಘವೇಶ್ವರಭಾರತೀಸ್ವಾಮೀಜಿ ಪ್ರಕಟಿಸಿದರು.
![](https://i0.wp.com/assets.mangalorean.com/2018/01/Gou-Udp-1.jpg?resize=768%2C420&ssl=1)
ಶ್ರೀಕೃಷ್ಣಮಠದ ಪರವಿದ್ಯಾಮಂಟಪದಲ್ಲಿ ಹಮ್ಮಿಕೊಂಡಿದ್ದ ಅಭಯ ಗೋಯಾತ್ರೆ ಸಂದೇಶಸಭೆಯಲ್ಲಿ ಅವರು ಆಶೀರ್ವಚನ ನೀಡಿದರು.
ತಾಯಿ- ಮಗು ಸೇರಿದಂತೆ ನೂರಾರು ಮಂದಿ ಗೋಭಕ್ತರು, ನಮ್ಮನ್ನಾಳುವವರನ್ನು ಬಡಿದೆಬ್ಬಿಸುವ ಸಲುವಾಗಿ ರಕ್ತಾಕ್ಷರ ನೀಡಲು ಮುಂದಾಗಿದ್ದಾರೆ. ಸ್ವರಕ್ತಲಿಖಿತ ಅಭಯಾಕ್ಷರ ಹಕ್ಕೊತ್ತಾಯ ಪತ್ರಗಳು ಬೃಹತ್ ಸುನಾಮಿಯಾಗಿ ಹರಿದು, ಗೋವಿನ ಸಂಕಷ್ಟವನ್ನು ಕೊಚ್ಚಿಕೊಂಡು ಹೋಗಲಿದೆ ಎಂದು ಭಾವುಕರಾಗಿ ನುಡಿದರು.
ಆಳುವವರ್ಗವನ್ನು ಬಡಿದೆಬ್ಬಿಸುವಲ್ಲಿ, ಅವರ ಮನ ಪರಿವರ್ತಿಸುವಲ್ಲಿ ಇಂಥ ರಕ್ತಾಕ್ಷರ ಅಭಿಯಾನ ಮಹತ್ವದ ಪಾತ್ರ ವಹಿಸಲಿದೆ ಎಂದು ಬಣ್ಣಿಸಿದರು.
ಗೋಕುಲ ಅಳಿದು ಹೋಗುವ ಭಯ, ಪ್ರತಿ ಗೋವಿನ ಮೃತ್ಯುಭಯವನ್ನು ನಿವಾರಿಸುವುದೇ ಅಭಯಾಕ್ಷರದ ಉದ್ದೇಶ. ಪೊಡವಿಗೊಡೆಯನ ನೆಲ ಸಂಸ್ಕøತಿಯನ್ನು ಪೋಷಿಸಿಕೊಂಡು ಬಂದ ನಾಡು. ಈ ಹಿನ್ನೆಲೆಯಲ್ಲಿ ಜಿಲ್ಲೆಯ ಪ್ರತಿಯೊಬ್ಬರಿಂದಲೂ ಅಭಯಾಕ್ಷರ ಸಂಗ್ರಹಿಸುವ ಕಾರ್ಯ ನಡೆಯಬೇಕು ಎಂದು ಹೇಳಿದರು.
ಗೋವಿಗೆ ಶ್ರೀಕೃಷ್ಣನೇ ಅಭಯ. ಗೋವಿಗೆ ಪ್ರಾಣಾಪಾಯವಿದೆ. ಹಟ್ಟಿಯಿಂದಲೇ ಗೋವುಗಳನ್ನು ಕದ್ದೊಯ್ಯಲಾಗುತ್ತಿದೆ. ಅದನ್ನು ಸಂರಕ್ಷಿಸುವುದು ನಮ್ಮೆಲ್ಲರ ಕರ್ತವ್ಯ ಎಂದು ಶ್ರೀರಾಮಚಂದ್ರಾಪುರಮಠದ
ಭೂಪಟದಿಂದಲೇ ಗೋವಂಶ ನಾಶದ ಮೃತ್ಯುಭಯ ಕಾಡುತ್ತಿದೆ. ಡಯನೋಸಾರಸ್ ಭೂಮಿಯಿಂದ ಮರೆಯಾದಂತೆ ಗೋವಂಶ ಮುಂದೊಂದು ದಿನ ನಾಶವಾಗುವ ಅಪಾಯವಿದೆ. ಗೋವು ಇಲ್ಲದಿದ್ದರೆ ಪ್ರಪಂಚ ಸುಸ್ಥಿರವಾಗಿರಲು ಸಾಧ್ಯವೇ ಇಲ್ಲ ಎಂದು ವಿಶ್ಲೇಷಿಸಿದರು.
ಗೋವು ಹಾಗೂ ಕೃಷ್ಣನಿಂದ ಲೋಕಕ್ಕೆ ಶೋಭೆ. ಕೃಷ್ಣನ ಸನ್ನಿಧಿಯಲ್ಲಿ ಗೋರಕ್ಷಣೆಗಾಗಿ ನಡೆಯುತ್ತಿರುವ ಅಪೂರ್ವ ಸಮಾರಂಭ ಹೆಚ್ಚು ಅರ್ಥಪೂರ್ಣ ಎಂದರು.
ಇದಕ್ಕೂ ಮುನ್ನ ಜೋಡುಕಟ್ಟೆಯಿಂದ ಶ್ರೀಕೃಷ್ಣಮಠದವರೆಗೆ ಭವ್ಯ ಶೋಭಾಯಾತ್ರೆ ನಡೆಯಿತು. ಗಣಪತಿ ಜೋಯಿಸ್ ಸಂಗಡಿಗರು ವೇದಘೋಷ ನಡೆಸಿಕೊಟ್ಟರು. ಉಡುಪಿ ಜಿಲ್ಲಾ ಗೋ ಪರಿವಾರದ ಅಧ್ಯಕ್ಷ ಬೈಕಾಡಿ ಸುಪ್ರಸಾದ ಶೆಟ್ಟಿ ಸ್ವಾಗತಿಸಿ, ಪ್ರಾಸ್ತಾವಿಕವಾಗಿ ಮಾತನಾಡಿದರು. ಜಿಲ್ಲೆಯಲ್ಲಿ ಸಂಗ್ರಹವಾದ ಒಂದು ಲಕ್ಷ ಅಭಯಾಕ್ಷರಗಳನ್ನು ಗೋಮಾತೆಗೆ ಸಮರ್ಪಿಸಲಾಯಿತು. ದೊಡ್ಡ ಸಂಖ್ಯೆಯಲ್ಲಿ ರಕ್ತದಲ್ಲಿ ಹಕ್ಕೊತ್ತಾಯ ಪತ್ರ ಮಂಡಿಸಿ ಸರ್ಕಾರದ ಗಮನ ಸೆಳೆಯಲು ಜಿಲ್ಲಾ ಗೋ ಪರಿವಾರ ನಿರ್ಧರಿಸಿದೆ ಎಂದು ಪ್ರಕಟಿಸಿದರು. ಗೋಹತ್ಯೆ ನಿಷೇಧವಾಗುವವರೆಗೂ ಹೋರಾಟ ನಿರಂತರ ಎಂದರು.
ನಾರಾಯಣ ಮಣಿಯಾಣಿ, ಶ್ರೀಮಠದ ಜಿಲ್ಲಾ ಸಂಪರ್ಕಾಧಿಕಾರಿ ಗುಣವಂತೇಶ್ವರ ಭಟ್, ಎಸ್.ಜಿ.ಕಾರ್ಣಿಕ್,
ಭಾರತೀಯ ಗೋ ಪರಿವಾರ- ಕರ್ನಾಟಕದ ಪದಾಧಿಕಾರಿಗಳಾದ ಮಹೇಶ್ ಚಟ್ನಳ್ಳಿ, ಡಾ.ರವಿ, ಮಧು ಗೋಮತಿ, ಶಿಶಿರ್ ಹೆಗಡೆ, ಅರವಿಂದ ಬಂಗಲಗಲ್ಲು, ವಿನಾಯಕ ತಲವಟ್ಟ, ಉದಯಶಂಕರ ಭಟ್ ಮತ್ತಿತರರು ಉಪಸ್ಥಿತರಿದ್ದರು.