‘ಜನತೆಯ ನಡಿಗೆ ಉತ್ತಮ ಬದುಕಿನ ಕಡೆಗೆʼ: ದ.ಕ.ಜಿಲ್ಲೆಯ ಜ್ವಲಂತ ಸಮಸ್ಯೆಗಳ ಪರಿಹಾರಕ್ಕೆ ಆಗ್ರಹಿಸಿ ಸಿಪಿಎಂ ರ್ಯಾಲಿ
ಮಂಗಳೂರು: ಶಿಕ್ಷಣ, ಆರೋಗ್ಯ, ಉದ್ಯೋಗ, ವಸತಿ ಸಹಿತ ದ.ಕ. ಜಿಲ್ಲೆಯ ಜ್ವಲಂತ ಸಮಸ್ಯೆಗಳನ್ನು ಪರಿಹರಿಸಬೇಕು, ಅಭಿವೃದ್ದಿಯ ಫಲ ಜನಸಾಮಾನ್ಯರಿಗೂ ತಲುಪುವಂತೆ ಯೋಜನೆಗಳನ್ನು ರೂಪಿಸಬೇಕು ಇತ್ಯಾದಿ ಬೇಡಿಕೆಗಳನ್ನು ಮುಂದಿಟ್ಟು ಸಿಪಿಎಂ ದ.ಕ. ಜಿಲ್ಲಾ ಸಮಿತಿಯ ವತಿಯಿಂದ ಱಜನ ಸಮಾನ್ಯರ ನಡಿಗೆ ಉತ್ತಮ ಬದುಕಿನ ಕಡೆಗೆ ಘೋಷಣೆಯಡಿ ನಗರದ ಅಂಬೇಡ್ಕರ್ ವೃತ್ತದಿಂದ ಮಿನಿ ವಿಧಾನ ಸೌಧದವರಗೆ ರ್ಯಾಲಿ ಮತ್ತು ಬಹಿರಂಗ ಸಭೆ ಸೋಮವಾರ ನಡೆಯಿತು.
ಬಹಿರಂಗ ಸಭೆಯನ್ನು ಉದ್ಘಾಟಿಸಿ ಮಾತನಾಡಿದ ಸಿಪಿಎಂ ಜಿಲ್ಲಾ ಕಾರ್ಯದರ್ಶಿ ಮುನೀರ್ ಕಾಟಿಪಳ್ಳ ದ.ಕ. ಜಿಲ್ಲೆಯಲ್ಲಿ ಅಭಿವೃದ್ದಿಯಲ್ಲಿ ಜನ ಸಾಮಾನ್ಯರು, ಕಾರ್ಮಿಕರು, ದಲಿತರು, ಆದಿವಾಸಿಗಳನ್ನು ಹೊರಗಿಡಲಾಗಿದೆ. ಖಾಸಗಿ ಮೆಡಿಕಲ್ ಕಾಲೇಜುಗಳು, ಕಾರ್ಪೊರೇಟ್ ಆಸ್ಪತ್ರೆಗಳು, ಖಾಸಗಿ ಶಿಕ್ಷಣ ಸಂಸ್ಥೆಗಳು, ರಿಯಲ್ ಎಸ್ಟೇಟ್ ಲಾಬಿಗಳು ಜಿಲ್ಲೆಯ ರಾಜಕಾರಣದ ಮೇಲೆ ಪೂರ್ತಿ ಹಿಡಿತ ಸಾಧಿಸಿವೆ. ಜಿಲ್ಲೆಯ ಜನಪ್ರತಿನಿಧಿಗಳು ಲಾಬಿಗಳ ತಾಳಕ್ಕೆ ತಕ್ಕಂತೆ ಕುಣಿಯುತ್ತಿದ್ದಾರೆ ಎಂದು ಆರೋಪಿಸಿದರು.
ಆರೋಗ್ಯ, ಶಿಕ್ಷಣ ಕ್ಷೇತ್ರದಲ್ಲಿ ಪೂರ್ಣ ಪ್ರಮಾಣದ ಖಾಸಗೀಕರಣದಿಂದ ಜನ ಸಾಮಾನ್ಯರು ಆರೋಗ್ಯ, ಶಿಕ್ಷಣ ಸೇವೆಯಿಂದ ವಂಚಿತರಾಗುವ ಸ್ಥಿತಿ ಉಂಟಾಗಿದೆ. ಸರಕಾರಿ ಕ್ಯಾನ್ಸರ್, ಹೃದಯದ ಆಸ್ಪತ್ರೆಗಳಾದ ಕಿದ್ವಾಯಿ, ಜಯದೇವ ಆಸ್ಪತ್ರೆಯ ಘಟಕಗಳು ಮಂಗಳೂರಿಗೆ ಮರೀಚಿಕೆಯಾಗಿದೆ. ವೆನ್ಲಾಕ್ ಸಹಿತ ಸರಕಾರಿ ಆಸ್ಪತ್ರೆಗಳು ಖಾಸಗಿ ಮೆಡಿಕಲ್ ಕಾಲೇಜುಗಳ ಪಾಲಾಗುತ್ತಿವೆ ಎಂದು ವಿಷಾದಿಸಿದರು.
ಉದ್ಯೋಗ ವಂಚಿತ ವಿದ್ಯಾವಂತ ಯುವಜನತೆ ಬೇರೆ ದಾರಿಕಾಣದೆ ಪ್ರತಿ ಮನೆಯಿಂದಲೂ ಬೆಂಗಳೂರು, ಮುಂಬೈ, ಗಲ್ಫ್ ರಾಷ್ಟ್ರಗಳತ್ತ ವಲಸೆ ಹೋಗುತ್ತಲೇ ಅಲ್ಲಿ ಅತಂತ್ರ ಬದುಕು ಕಾಣುತ್ತಿದ್ದಾರೆ. ಅಂತಹವರ ಕುರಿತು ಜಿಲ್ಲೆಯ ರಾಜಕಾರಣಿಗಳು ಸೊಲ್ಲೆತ್ತುತ್ತಿಲ್ಲ. ಇಂತಹ ಗಂಭೀರ ಸಮಸ್ಯೆಗಳನ್ನು ಬಗೆಹರಿಸುವ ಕುರಿತು ಚಿಂತಿಸಬೇಕಾದ ಶಾಸಕರು ಕಂಬಳ, ಹುಲಿ ಕುಣಿತ, ದೋಸೆ ಹಬ್ಬ, ಆಹಾರ ಮೇಳ ಎಂದು ಆಡಂಬರದ ಉತ್ಸವಗಳಲ್ಲಿ ಕಾಲಹರಣ ಮಾಡುತ್ತಿದ್ದಾರೆ. ಪರಾಜಿತ ಅಭ್ಯರ್ಥಿಗಳು ಶಾಸಕರ ವೈಫಲ್ಯಗಳ ವಿರುದ್ಧ ಜನತೆಗೆ ಧ್ವನಿಯಾಗುವ ಬದಲಿಗೆ ಕಂಬಳ, ಹುಲಿಕುಣಿತಗಳನ್ನು ಆಯೋಜಿಸುವುದರಲ್ಲಿ ಬಿಜೆಪಿಯೊಂದಿಗೆ ಸ್ಪರ್ಧೆಗೆ ಬಿದ್ದಿದ್ದಾರೆ ಎಂದು ಆರೋಪಿಸಿದರು.
ಸಿಪಿಎಂ ದ.ಕ. ಜಿಲ್ಲಾ ಕಾರ್ಯದರ್ಶಿ ಮಂಡಳಿ ಸದಸ್ಯ ಸುನಿಲ್ ಕುಮಾರ್ ಬಜಾಲ್ ಮಾತನಾಡಿ ಜಿಲ್ಲೆಯಲ್ಲಿ ವಸತಿ ರಹಿತರಿಗೆ ಮನೆ ನಿವೇಶನ ನೀಡದೆ ಎರಡು ದಶಕ ದಾಟಿದೆ. ನಗರ ಪಾಲಿಕೆಯಲ್ಲಿ ಮನೆ ರಹಿತ ಬಡವರಿಗೆ ಹಕ್ಕು ಪತ್ರ ನೀಡಿ ಎಂಟು ವರ್ಷಗಳಾದರೂ ವಸತಿ ಯೋಜನೆಗೆ ಅಡಿಗಲ್ಲು ಹಾಕುವ ಕಾರ್ಯವೂ ನಡೆದಿಲ್ಲ, ಮಂಗಳೂರು ಎನ್ನುವುದು ರಿಯಲ್ ಎಸ್ಟೇಟ್, ಟಿಡಿಆರ್ ದಂಧೆಕೋರರ ಪಾಲಿಗೆ ಸ್ವರ್ಗವಾಗಿ ಮಾರ್ಪಟ್ಟಿದೆ. ಕರಾವಳಿ ಜಿಲ್ಲೆಯ ಆರ್ಥಿಕತೆಗೆ ದೊಡ್ಡ ಕೊಡುಗೆ ನೀಡುತ್ತಿರುವ ಮಂಗಳೂರಿನ ಮೀನುಗಾರಿಕಾ ಧಕ್ಕೆ ಗಬ್ಬೆದ್ದು ನಾರುತ್ತಿದೆ. ಇಲ್ಲಿ ಮೀನುಗಾರರು, ವ್ಯಾಪಾರಿಗಳು, ಕಾರ್ಮಿಕರನ್ನು ಆಳುವ ಸರಕಾರಗಳು ನಿಕೃಷ್ಟವಾಗಿ ಕಾಣುತ್ತಿದೆ. ಮೀನುಗಾರ ಸಮಸ್ಯೆಗಳನ್ನು ಇಲ್ಲಿ ಕೇಳುವವರೆ ಇಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಕಾರ್ಯದರ್ಶಿ ಮಂಡಳಿ ಸದಸ್ಯ ಡಾ. ಕೃಷ್ಣಪ್ಪಕೊಂಚಾಡಿ ಮಾತನಾಡಿ ಜಿಲ್ಲೆಯ ಜನಸಂಖ್ಯೆಯಲ್ಲಿ ಹದಿನಾರು ಪ್ರತಿಶತ ಇರುವ ಆದಿವಾಸಿಗಳು, ಅರಣ್ಯವಾಸಿಗಳು, ದಲಿತರು, ಅಲೆಮಾರಿ ಸಮುದಾಯಗಳನ್ನು ಜಿಲ್ಲಾಡಳಿತ, ಜನಪ್ರತಿನಿಧಿಗಳು ಪೂರ್ತಿ ಕಡೆಗಣಿಸಿದೆ. ಯಾವುದೇ ಅಭಿವೃದ್ದಿ ಕಾರ್ಯಗಳು, ಯೋಜನೆಗಳಲ್ಲಿ ಈ ಸಮುದಾಯಗಳನ್ನು ಒಳಗೊಳಿಸುವುದಿಲ್ಲ ಎಂದು ಹೇಳಿದರು.
ಸಿಪಿಎಂ ಜಿಲ್ಲಾ ಮುಖಂಡರಾದ ಬಿ.ಎಂ.ಭಟ್, ವಸಂತ ಆಚಾರಿ, ಜಯಂತಿ ಶೆಟ್ಟಿ, ಸುಕುಮಾರ್, ಸದಾಶಿವ ದಾಸ್ ಮಾತನಾಡಿದರು. ರಾಜ್ಯ ಕಾರ್ಯದರ್ಶಿ ಮಂಡಳಿ ಸದಸ್ಯ ಕೆ. ಯಾದವ ಶೆಟ್ಟಿ ಬಹಿರಂಗ ಸಭೆಯ ಅಧ್ಯಕ್ಷತೆ ವಹಿಸಿದ್ದರು. ನಗರ ಕಾರ್ಯದರ್ಶಿ ಯೋಗೀಶ್ ಜಪ್ಪಿನಮೊಗರು ಕಾರ್ಯಕ್ರಮ ನಿರೂಪಿಸಿದರು.
