Home Mangalorean News Kannada News ಜೂನ್ 1 ರಂದು ಅಮಾಸೆಬೈಲಿನಲ್ಲಿ ಸೋಲಾರ್‌ ದೀಪ ಮತ್ತು ವಿವಿಧ ಕಾಮಗಾರಿಗಳ ಲೋಕಾರ್ಪಣೆ

ಜೂನ್ 1 ರಂದು ಅಮಾಸೆಬೈಲಿನಲ್ಲಿ ಸೋಲಾರ್‌ ದೀಪ ಮತ್ತು ವಿವಿಧ ಕಾಮಗಾರಿಗಳ ಲೋಕಾರ್ಪಣೆ

Spread the love

ಉಡುಪಿ: ಅಮಾಸೆಬೈಲು ಗ್ರಾಪಂ, ಅಮಾಸೆಬೈಲು ಚಾರಿಟೇಬಲ್‌ ಟ್ರಸ್ಟ್‌, ಕರ್ಣಾಟಕ ಬ್ಯಾಂಕ್‌ ಮಂಗಳೂರು, ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಧರ್ಮಸ್ಥಳ, ಕರ್ನಾಟಕ ನವೀಕರಿಸಬಹುದಾದ ಇಂಧನ ಅಭಿವೃದ್ದಿ ಇಲಾಖೆ ಹಾಗೂ ಜಿಲ್ಲಾಡಳಿತಗಳ ಸಂಯುಕ್ತ ಆಶ್ರಯದಲ್ಲಿ ಅಮಾಸೆಬೈಲು ಗ್ರಾಮದಲ್ಲಿ ಅನುಷ್ಠಾನಗೊಳ್ಳಲಿರುವ ಸೋಲಾರ್‌ ದೀಪ ಮತ್ತು ವಿವಿಧ ಕಾಮಗಾರಿಗಳ ಲೋಕಾರ್ಪಣೆ ಜೂ.1ರಂದು ನಡೆಯಲಿದೆ ಎಂದು ಅಮಾಸೆಬೈಲು ಚಾರಿಟೇಬಲ್‌ ಟ್ರಸ್ಟ್‌ನ ಅಧ್ಯಕ್ಷ ಎ.ಜಿ.ಕೊಡ್ಗಿ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

agkodgi-pressmeet-20160530-001

ಕೇಂದ್ರದ ನವ ಮತ್ತು ನವೀಕರಿಸಬಹುದಾದ ಇಂಧನ ಮಂತ್ರಾಲಯ (ಎಂಎನ್‌ಆರ್‌ಇ)ದಿಂದ ಶೇ.30, ರಾಜ್ಯದ ಕರ್ನಾಟಕನವೀಕರಿಸಬಹುದಾದ ಇಂಧನ ಅಭಿವೃದ್ಧಿ ನಿಯಮಿತ (ಕೆಆರ್‌ಇಡಿಎಲ್‌)ದಿಂದ ಶೇ.20, ನಕ್ಸಲ್‌ ಪೀಡಿತ ಪ್ರದೇಶಾಭಿವೃದ್ಧಿ ನಿಧಿಯಿಂದ 25 ಲಕ್ಷ ಹಾಗೂ ಫ‌ಲಾನುಭವಿಗಳ ವಂತಿಗೆಯೊಂದಿಗೆ ಈ ಯೋಜನೆಯನ್ನು ಅಮಾಸೆಬೈಲು ಚಾರಿಟೇಬಲ್‌ ಟ್ರಸ್ಟ್‌ ಅನುಷ್ಠಾನಗೊಳಿಸಲಿದೆ ಎಂದರು. ಅಮಾಸೆಬೈಲು ಗ್ರಾಪಂ ವ್ಯಾಪ್ತಿಯ ಮೂರು ಗ್ರಾಮಗಳ 1,497 ಮನೆಗಳಿಗೆ ಸೋಲಾರ್‌ ದೀಪಗಳನ್ನು ಅಳವಡಿಸುವ ಗುರಿ ಇದೆ. ಪ್ರತಿ ಮನೆಗೆ 2 ದೀಪಗಳಿಗೆ 9,900ರೂ., 4 ದೀಪಗಳಿಗೆ 16,000ರೂ. ಹಾಗೂ ದಾರಿದೀಪಗಳಿಗೆ 23,500 ದರವನ್ನು ನಿಗದಿ ಪಡಿಸಿದ್ದು, ಐದು ವರ್ಷಗಳ ಕಾಲ ಅವುಗಳ ನಿರ್ವಹಣೆಯನ್ನು ಮಾಡಲು ಒಪ್ಪಿಕೊಂಡಿದೆ ಎಂದರು.

ಜೂ.1ರಂದು ಬೆಳಗ್ಗೆ 10ಗಂಟೆಗೆ ನಿವೃತ್ತ ಲೋಕಾಯುಕ್ತ ನ್ಯಾಯಮೂರ್ತಿ ಸಂತೋಷ್‌ ಹೆಗ್ಡೆ ಕಾರ್ಯಕ್ರಮ ಹಾಗೂ ಸೋಲಾರ್‌ ದೀಪವನ್ನು ಉದ್ಘಾಟಿಸುವರು. ಜಿಲ್ಲಾ ಉಸ್ತುವಾರಿ ಸಚಿವ ವಿನಯ ಕುಮಾರ್‌ ಸೊರಕೆ ಕೃಷಿ ಮಾರುಕಟ್ಟೆಯನ್ನು, ಮೀನುಗಾರಿಕಾ ಸಚಿವ ಅಭಯಚಂದ್ರ ಜೈನ್‌ ಮೀನು ಮಾರುಕಟ್ಟೆ ಪ್ರಾಂಗಣ, ಡಾ.ಮೋಹನ ಆಳ್ವ ಪ್ರೌಢಶಾಲಾ ವಿದ್ಯಾರ್ಥಿಗಳಿಗೆ ನೋಟ್‌ಪುಸ್ತಕ ಹಾಗೂ ಪ್ರೋತ್ಸಾಹಧನ, ಕರ್ಣಾಟಕ ಬ್ಯಾಂಕ್‌ ಎಂಡಿ ಜಯರಾಮ ಭಟ್‌ ಪ್ರೌಢಶಾಲೆಯ ಶೌಚಾಲಯ, ಜಿಪಂ ಅಧ್ಯಕ್ಷ ದಿನಕರ ಕುಡಿಯುವ ನೀರು ಘಟಕವನ್ನು ಉದ್ಘಾಟಿಸುವರು. ಧರ್ಮಸ್ಥಳ ಯೋಜನೆಯ ಕಾರ್ಯನಿರ್ವಾಹಕ ನಿರ್ದೇಶಕ ಎಲ್‌.ಎಚ್‌.ಮಂಜುನಾಥ ಅಧ್ಯಕ್ಷತೆ ವಹಿಸುವರು ಎಂದರು.

ಸುದ್ದಿಗೋಷ್ಠಿಯಲ್ಲಿ ಜಗದೀಶ್‌ ಪೈ, ಮನೋಹರ ಪ್ರಸಾದ್‌ ಶೆಟ್ಟಿ, ಕರ್ಣಾಟಕ ಬ್ಯಾಂಕ್‌ನ ವಿಘ್ನೇಶ್ವರ ಉಡುಪ, ಅಮಾಸೆಬೈಲು ಗ್ರಾಪಂ ಅಧ್ಯಕ್ಷೆ ಜಯಲಕ್ಷ್ಮೀ ಶೆಟ್ಟಿ ಉಪಸ್ಥಿತರಿದ್ದರು.


Spread the love

Exit mobile version