Home Mangalorean News Kannada News ಡಿ. 16- 17 ರಂದು ಮಂಗಳೂರು ಯುನಿವರ್ಸಿಟಿ ಕಾಲೇಜಿನಲ್ಲಿ   ಲಗೋರಿ ಕ್ರೀಡಾಕೂಟದ ಕರ್ನಾಟಕ ತಂಡದ ಆಯ್ಕೆ

ಡಿ. 16- 17 ರಂದು ಮಂಗಳೂರು ಯುನಿವರ್ಸಿಟಿ ಕಾಲೇಜಿನಲ್ಲಿ   ಲಗೋರಿ ಕ್ರೀಡಾಕೂಟದ ಕರ್ನಾಟಕ ತಂಡದ ಆಯ್ಕೆ

Spread the love

ಡಿ. 16- 17 ರಂದು ಮಂಗಳೂರು ಯುನಿವರ್ಸಿಟಿ ಕಾಲೇಜಿನಲ್ಲಿ   ಲಗೋರಿ ಕ್ರೀಡಾಕೂಟದ ಕರ್ನಾಟಕ ತಂಡದ ಆಯ್ಕೆ

ಮಂಗಳೂರು: ಮಂಗಳೂರಿನಲ್ಲಿ ಅಮೇಚುರ್ ಲಗೋರಿ ಫೆಡರೇಷನ್ ಆಫ್ ಇಂಡಿಯಾ ಹಾಗು ಕರ್ನಾಟಕ ಲಗೋರಿ ಅಸೋಸಿಯೇಷನ್ ಸಹಯೋಗದೊಂದಿಗೆ ರಾಷ್ಟ್ರ ಮಟ್ಟದ ಲಗೋರಿ ಪಂದ್ಯಾಟ 2018 ಜನವರಿ 6 ಹಾಗು 7 ರಂದು ಮಂಗಳೂರಿನ ಮಂಗಳ ಕ್ರೀಡಾಂಗಣದ ಕರಾವಳಿ ಉತ್ಸವ ಮೈದಾನದಲ್ಲಿ ನಡೆಯಲಿದ್ದು,  ಇದರಲ್ಲಿ ದೇಶದ ಸುಮಾರು ಇಪ್ಪತ್ತು ರಾಜ್ಯಗಳ ತಂಡವು ಪಾಲ್ಗೊಳ್ಳಲಿದೆ .  ಲಗೋರಿ ಕ್ರೀಡಾಕೂಟದಲ್ಲಿ ಕರ್ನಾಟಕವನ್ನು ಪ್ರತಿನಿಧಿಸುವ ತಂಡದ ಆಯ್ಕೆ ಪ್ರಕ್ರಿಯೆಯು ಡಿಸೆಂಬರ್ 16-17 ರಂದು ಯುನಿವರ್ಸಿಟಿ ಕಾಲೇಜು ಮಂಗಳೂರು ಹಾಗು ಪಾತ್ವೇಯ ಜಂಟಿ ಆಶ್ರಯದಲ್ಲಿ ಯುನಿವರ್ಸಿಟಿ ಕಾಲೇಜು ಮೈದಾನದಲ್ಲಿ ನಡೆಯಲಿದೆ ಎಂದು ಪಾಥ್ ವೇ ಇದರ ಮ್ಹಾಲಕರಾದ ದೀಪಕ್ ಗಂಗೂಲಿ ತಿಳಿಸಿದರು .

ಈ ಕುರಿತು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು  ಬಾಲ್ಯದ ನೆನಪುಗಳು ಮತ್ತೊಮ್ಮೆ ಹಸಿರಾಗುತ್ತಿದೆ.ಕರ್ನಾಟಕದ ಕರಾವಳಿಯ ಮಣ್ಣಿನಲ್ಲಿ ಗ್ರಾಮೀಣ ಸೊಗಡಿನ ಲಗೋರಿ ಕ್ರೀಡೆ ನಿಮ್ಮೆಲ್ಲರ ನೆನಪುಗಳಿಗೆ ನೀರೆರೆಯಲು ಅಣಿಯಾಗುತ್ತಿದೆ. ಬಾಲ್ಯಕಾಲದಲಿ ಆಟದ ಮೈದಾನದಲಿ ಆಡಿದ ಆಟಗಳಲ್ಲಿ ಮನಸ್ಸಿನಂಗಳದಿಂದ ಎಂದೂ ಅಳಿಯದೆ ಇರುವಂತಹ ಕೆಲವೊಂದು ಗ್ರಾಮೀಣ ಸೊಗಡಿನಾಟಗಳಲ್ಲಿ ಲಗೋರಿಯು ಒಂದು ಆದರೆ ಇತ್ತೀಚಿನ ಆಧುನಿಕ ಕ್ರೀಡೆಗಳ ಭರಾಟೆಯಲ್ಲಿ ಲಗೋರಿಯಂತಹ ಹಲವಾರು ಗ್ರಾಮೀಣ ಸೊಗಡಿನ ಕ್ರೀಡೆಗಳು ಅಳಿವಿನಂಚಿನಲ್ಲಿವೆ.

ಇಂತಹ ಅಳಿವಿನಂಚಿನ ಕ್ರೀಡೆಗಳಲ್ಲಿ ಲಗೋರಿಯು ಒಂದು. ನಮ್ಮ ನಾಡಿನಲ್ಲಿ ಹಲವಾರು ವರ್ಷಗಳಿಂದ ಮಕ್ಕಳಿಂದ ಹಿಡಿದು ಹಿರಿಯರ ತನಕ ಸಾಯಂಕಾಲ ಎಲ್ಲರೂ ಜೊತೆಗೂಡಿ ಆಡುತ್ತಿದ್ದ ಆಟಲಗೋರಿ. ಈಗ ಲಗೋರಿ ಆಡುವವರು ಅತಿ ಕಡಿಮೆ, ಗ್ರಾಮ್ಯ ಪ್ರದೇಶಗಳಲ್ಲಿ ಮಾತ್ರ ಸಿಗುವವರು.

ಈ ಆಟವನ್ನು ಇಬ್ಬರಿಗಿಂತ ಹೆಚ್ಚಾಗಿ ಎಷ್ಟು ಜನರು ಕೂಡ ಆಡಬಹುದು. ಅವರನ್ನು ಎರಡು ತಂಡಗಳಲ್ಲಿ ವಿಭಜಿಸಿವವರು. ಮೊದಲನೆಯ ತಂಡದವರು 7ರಿಂದ 9ಕಲ್ಲುಗಳನ್ನು ಒಂದರಮೇಲೊಂದು ಜೋಡಿಸುವರು. ಹಾಗೆ ಜೋಡಿಸಿದ ಕಲ್ಲುಗಳಿಗೆ ಸ್ವಲ್ಪದೂರದಿಂದ ಮತ್ತೊಂದು ತಂಡದವರು ಒಂದು ಚೆಂಡನ್ನು ಎಸೆಯುವರು. ಆ ಚೆಂಡು ತಾಗಿ ಕಲ್ಲುಗಳು ಚದುರಿದಾಗ, ಮೊದಲನೆಯ ತಂಡದವರು ಅದನ್ನು ಮತ್ತೆ ಯಥಾಸ್ಥಿತಿಗೆ ತರಲು ಪ್ರಯತ್ನಿಸುವರು. ಅದನ್ನು ತಡೆಯುವುದೇ ಎದುರಾಳಿ ತಂಡದ ಗುರಿ.

ಮೊದಲನೆಯ ತಂಡದವರು ಆ ಕಲ್ಲುಗಳನ್ನು ಜೋಡಿಸುವ ಪ್ರಯತ್ನದಲ್ಲಿರುವಾಗ ಎದುರಾಳಿ ತಂಡದವರು ಆ ಚೆಂಡನ್ನು ಯಾರೊಬ್ಬರಿಗೆ ತಾಗುವಂತೆ ಎಸೆದರೆ, ತಾಗಿದಾತ ಆಟದಿಂದ ಹೊರಗೆಹೋಗುತ್ತಾನೆ. ಹೀಗೆ ಎದುರಾಳಿಯ ಪ್ರತಿಯೊಬ್ಬರನ್ನು ಆಟದಿಂದ ಹೊರ ಕಳುಹಿಸುವುದೇ ಆಟದ ಗುರಿ. ಈ ಸಮಯದಲ್ಲಿ ಎದುರಾಳಿ ತಂಡವೇನಾದರು ಕಲ್ಲುಗಳನ್ನು ಜೋಡಿಸುವುದರಲ್ಲಿಯಶಸ್ವಿಯಾದಲ್ಲಿ ಆ ತಂಡವೇ ಈ ಆಟದಲ್ಲಿ ವಿಜಯಿಗಳು. ಇಂತಹ ಸುಂದರ ಗ್ರಾಮೀಣ ಕೀಡೆಯನ್ನು  ಮುಖ್ಯವಾಹಿನಿಗೆ ತರುವ ಕಾರ್ಯವೂ ಕರಾವಳಿಯಲ್ಲಿ ಪಾತ್ವೇ ಎಂಬ ಸಂಸ್ಥೆಯಿಂದನಡೆಯುತ್ತಿದೆ.

ಬಾಲ್ಯದಲ್ಲಿ ಪ್ಲಾಸ್ಟಿಕ್ ಬಾಲ್ ಅಥವಾ ಪೇಪರ್ ಬಾಲ್ ಹಾಗು ಹೆಂಚಿನ ಬಿಲ್ಲೆಗಳನ್ನು ಉಪಯೋಗಿಸಿ ಆಡುತ್ತಿದಂತಹ ಲಗೋರಿ ಕ್ರೀಡೆಗೆ ಆಧುನಿಕ ಸ್ಪರ್ಶವನ್ನು ನೀಡಿ ಕಳೆದ ಬಾರಿ ಜುಲೈತಿಂಗಳಿನಲ್ಲಿ ಜಿಲ್ಲಾ ಮಟ್ಟದ “ಮೊದಲ ಲಗೋರಿ ತುಳುನಾಡು ಕಪ್”ನ್ನು ಅದ್ದೂರಿಯಾಗಿ ಆಯೋಜಿಸಿ ಸೈ ಎನಿಸಿಕೊಂಡಿದೆ. ಇದರಲ್ಲಿ ಕರಾವಳಿಯ ಸುಮಾರು 20 ತಂಡಗಳು ಭಾಗವಹಿಸಿದ್ದವು. ಹಾಗೂ ಇದರ ಆಯೋಜನೆಯಿಂದ ಪ್ರಭಾವಗೊಂಡ ” ಅಮೇಚುರ್ ಲಗೋರಿ ಫೆಡರೇಷನ್ ಆಫ್ ಇಂಡಿಯಾ ” ಏಳನೇ ರಾಷ್ಟ್ರೀಯ ಲಗೋರಿ ಚಾಂಪಿಯನ್ ಶಿಪ್ ನ್ನು ಪಾತ್ವೇ ತಂಡದೊಂದಿಗೆಜೊತೆಯಾಗಿ ಮಂಗಳೂರಿನಲ್ಲಿ ಆಯೋಜಿಸಲು ಒಪ್ಪಿಕೊಂಡಿತು.

ರಾಷ್ಟ್ರೀಯ ಲಗೋರಿ ಚಾಂಪಿಯನ್ ಶಿಪನ್ನು ಆಯೋಜಿಸುವ ಜವಾಬ್ದಾರಿ ಈಗ ಪಾತ್ವೇ ತಂಡದ ಮೇಲಿದೆ. ಹಾಗು ಇದರಲ್ಲಿ ದೇಶದ  20 ರಿಂದ 25 ತಂಡಗಳು ಭಾಗವಹಿಸಲಿದೆ.ಈ ಕ್ರೀಡಾಕೂಟಯಶಸ್ವಿಯಾಗಬೇಕಾದರೆ ಜನರ ಸಹಕಾರ ಬೇಕು.  ಲಗೋರಿಯ ಜೊತೆಜೊತೆಗೆ ಸಮಾಜದಲ್ಲಿ ತುಳಿತಕ್ಕೊಳಗಾಗುತ್ತಿರುವ ಮಂಗಳಮುಖಿಯರ ಕೀಳರಿಮೆಯನ್ನು ಕೂಡ ದೂರ ಮಾಡುವ ನಿಟ್ಟಿನಲ್ಲಿ ಮೊದಲ ಹೆಜ್ಜೆಯಾಗಿ ವಿಶೇಷವಾದಕಾರ್ಯವನ್ನು ಈ ಪಾತ್ವೇ ತಂಡವು ಮಾಡುತ್ತಿದೆ. ಪಾತ್ ವೇ ಲಗೋರಿಯ ರಾಯಭಾರಿಯಾಗಿ ಯಾವುದೆ ಮಾಡೆಲ್ಸ್ಗಳನ್ನು ಆಯ್ಕೆ ಮಾಡದೆ ಪರಿವರ್ತನ ಎಂಬ ಸಂಸ್ಥೆಯ ಸಂಜನಾ ಎಂಬ ಲಿಂಗತ್ವಅಲ್ಪ ಸಂಖ್ಯಾತೆಯನ್ನು ಆಯ್ಕೆ ಮಾಡಿ ಸಮಾಜಕ್ಕೆ ಮಾದರಿಯಾಗಿ ಎಲ್ಲರು ಹುಬ್ಬೇರಿಸಿ ಶ್ಲಾಘಿಸುವಂತಹ ಕಾರ್ಯವನ್ನು ಮಾಡುತ್ತಿದೆ.

ಇಂತಹ ಅದ್ವಿತೀಯ ಹೆಜ್ಜೆ ಇಡುತ್ತಿರುವ ಪಾತ್ವೇ ಸಂಸ್ಥೆಗೆ ಸಮುದಾಯ ಜೀವಿಗಳ ಹಾಗೂ ಕ್ರೀಡಾ ಪ್ರೇಮಿಗಳಿಂದ ಸಹಕಾರ ಬೇಕಾಗಿದೆ. ಆರ್ಥಿಕವಾಗಿ ಪ್ರಬಲವಾಗಿರದ ಫೆಡರೇಶನ್ ಹಾಗುಪಾತ್ವೇ ತಂಡವೂ ವಿಭಿನ್ನವಾದ ಒಂದು ಹೆಜ್ಜೆಯನ್ನು ಇಡುತ್ತಿದೆ. ಇದಕ್ಕೆ ಎಲ್ಲರೂ ಪ್ರೋತ್ಸಾಹ ನೀಡಬೇಕಾಗಿ ಕೋರಿದೆ. ಈ ಲಗೋರಿ ಕ್ರೀಡಾಕೂಟವು ಜನವರಿ 6 ಹಾಗು 7 ರಂದು ಮಂಗಳೂರಿನ ಮಂಗಳ ಕ್ರೀಡಾಂಗಣದ ಕರಾವಳಿ ಉತ್ಸವ ಮೈದಾನದಲ್ಲಿ ನಡೆಯಲಿದೆ ಇದು ಅನೇಕ ಟಿವಿ ಮಾಧ್ಯಮಗಳಲ್ಲಿಪ್ರಸಾರವಾಗಲಿದೆ.

ಇಂತಹ ಸುಂದರ ಕ್ರೀಡೆಯನ್ನು ಉಳಿಸುವ ನಿಟ್ಟಿನಲ್ಲಿ ಹಾಗೂ ಮುಖ್ಯವಾಹಿನಿಗೆ ತರುವ ಉದ್ದೇಶದಿಂದ ಆಯೋಜಿಸಲಾಗಿರುವ ಕ್ರೀಡೆಯನ್ನು ಆಯೋಜಿಸಲು ಲಕ್ಷಾಂತರ ರೂಪಾಯಿಗಳ ಖರ್ಚು ಇದ್ದು ಅದನ್ನು ವೈಯುಕ್ತಿವಾಗಿ ವ್ಯಯಿಸುವ ಶಕ್ತಿ ಫೆಡರೇಶನ್ ಹಾಗು ಪಾತ್ವೇ ತಂಡಕ್ಕೆ ಇಲ್ಲ ಮತ್ತು ಅದು ಅಸಾಧ್ಯ ಕೂಡ. ಇಂತಹ ಸನ್ನೀವೇಶದಲ್ಲಿ ಈ ಅತ್ಯಬ್ದುತ ಕಾರ್ಯಕ್ರಮಕ್ಕೆ ಪ್ರಾಯೋಜಕತ್ವ ನೀಡುವುದರೊಂದಿಗೆ ರಾಷ್ಟ್ರೀಯ ಮಟ್ಟದ ಲಗೋರಿ ಆಟದಲ್ಲಿ ತಾವೂ ಕೂಡ ಪಾಲುದಾರರಾಗಬಹುದು.

ಸಹಕಾರ ನೀಡುವ ಮಹಾನೀಯರು ಹಾಗು ಪ್ರಾಯೋಜಕತ್ವಪಡೆಯುವ ಆಸಕ್ತರು ಸಂಪರ್ಕಿಸಿ  +91-7411765666

ಸುದ್ದಿಗೋಷ್ಟಿಯಲ್ಲಿ ನಿತೇಷ್ ಕುಲಾಲ್, ಕ್ರೀಡಾ ಕಾರ್ಯದರ್ಶಿ, ದಯಾಕರ್, ನಿರ್ದೇಶಕರು, ದೈಹಿಕ ಶಿಕ್ಷಣ, ಯೂನಿವರ್ಸಿಟಿ ಕಾಲೇಜ್, ಮಂಗಳೂರು,  ಸಂಜನಾ, ಲಗೋರಿ ರಾಯಭಾರಿ, ಕಾರ್ಯದರ್ಶಿ ಪರಿವರ್ತಾನ ಚಾರಿಟೇಬಲ್ ಟ್ರಸ್ಟ್, ಮಂಗಳೂರು, ವಾಯ್ಲಟ್ ಪಿರೇರಾ, ಸಂಸ್ಥಾಪಕಿ, ಪರಿವರ್ತಾನ ಚಾರಿಟೇಬಲ್ ಟ್ರಸ್ಟ್, ಮಂಗಳೂರು ಉಪಸ್ಥಿತರಿದ್ದರು.

 


Spread the love

Exit mobile version