ದಕ್ಷಿಣ ಕನ್ನಡದಲ್ಲಿ ಈಶ ಗ್ರಾಮೋತ್ಸವ 2026ರ ಸಂಭ್ರಮ: ಕಳೆಗಟ್ಟಿದ ಗ್ರಾಮೀಣ ಕ್ರೀಡೋತ್ಸವ
ದಕ್ಷಿಣ ಕನ್ನಡದಲ್ಲಿ ನಡೆದ ಈಶ ಗ್ರಾಮೋತ್ಸವ 2026ರ ಕ್ಲಸ್ಟರ್ ಪಂದ್ಯಾವಳಿಯಲ್ಲಿ ಗ್ರಾಮೀಣ ಕರ್ನಾಟಕದ ಉತ್ಸಾಹಭರಿತ ಕ್ರೀಡಾ ಉತ್ಸವವು ದೀಪಿಕಾ ಹೈಸ್ಕೂಲ್ ಮೈದಾನ, ಬಂಟ್ವಾಳದಲ್ಲಿ ಅನಾವರಣಗೊಂಡಿತು. ಈಶ ಔಟ್ರೀಚ್ ಆಯೋಜಿಸುವ ‘ಈಶ ಗ್ರಾಮೋತ್ಸವ’ವು ಭಾರತದ ಅತಿ ದೊಡ್ಡ ಗ್ರಾಮೀಣ ಕ್ರೀಡಾ ಹಬ್ಬವಾಗಿದ್ದು, ಕ್ರೀಡೆಯ ಮೂಲಕ ಗ್ರಾಮೀಣ ಸಮಾಜವನ್ನು ಒಂದೆಡೆ ತರುವ ಹಾಗೂ ಬೇರುಮಟ್ಟದ ಆಟಗಾರರಲ್ಲಿ ತಂಡದ ಮನೋಭಾವ, ಆತ್ಮವಿಶ್ವಾಸ ಮತ್ತು ಸಮುದಾಯ ಪ್ರಜ್ಞೆಯನ್ನು ಬೆಳೆಸುವ ಉದ್ದೇಶವನ್ನು ಹೊಂದಿದೆ. ಈ ಕೂಟದಲ್ಲಿ ದಕ್ಷಿಣ ಕನ್ನಡದ ವಿವಿಧ ಹಳ್ಳಿಗಳಿಂದ ಒಟ್ಟು 350 ಪುರುಷ ವಾಲಿಬಾಲ್ ಆಟಗಾರರು ಮತ್ತು ಮಹಿಳೆಯರ ಥ್ರೋಬಾಲ್ ಆಟಗಾರ್ತಿಯರು ಅತ್ಯಂತ ಉತ್ಸಾಹ ಮತ್ತು ಕ್ರೀಡಾಸ್ಫೂರ್ತಿಯಿಂದ ಸ್ಪರ್ಧಿಸಿದವು.
ಭಾಗವಹಿಸಿದ ತಂಡಗಳನ್ನು ಪ್ರೋತ್ಸಾಹಿಸಲು ಸ್ಥಳೀಯ ಗ್ರಾಮಸ್ಥರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ, ಹಬ್ಬದ ವಾತಾವರಣವನ್ನು ನಿರ್ಮಿಸುವ ಮೂಲಕ ಹೆಮ್ಮೆಯಿಂದ ಪಾಲ್ಗೊಂಡರು.
ಸರಣಿ ರೋಚಕ ಪಂದ್ಯಗಳ ನಂತರ, ಪುರುಷರ ವಾಲಿಬಾಲ್ ವಿಭಾಗದಲ್ಲಿ 1ನೇ ಸ್ಥಾನವನ್ನು ಮಹಾಲಿಂಗೇಶ್ವರ ಬೋಳಿಯ ತಂಡ ಪಡೆದು ಜಯಭೇರಿಗಳಾಗಿದ್ದು, 2ನೇ ಸ್ಥಾನವನ್ನು ಕೊಳ್ನಾಡು ಗೆಳೆಯರು ತಂಡ, 3ನೇ ಸ್ಥಾನವನ್ನು ಶ್ರೀದೇವಿ ಸ್ನೇಹಿತರು ತಂಡ ಮತ್ತು 4ನೇ ಸ್ಥಾನವನ್ನು ನಮ್ಮ ಬೊಳ್ಳಾಯಿ ತಂಡ ಪಡೆದುಕೊಂಡಿವೆ.
ಮಹಿಳೆಯರ ಥ್ರೋಬಾಲ್ ವಿಭಾಗದಲ್ಲಿ 1ನೇ ಸ್ಥಾನವನ್ನು ಶಾಸ್ತಾರ ಪಡುಮಲೆ ತಂಡ ಪ್ರಶಸ್ತಿಯನ್ನು ತನ್ನದಾಗಿಸಿಕೊಂಡಿದ್ದು, 2ನೇ ಸ್ಥಾನವನ್ನು ಶ್ರೀಕೃಷ್ಣ ಯೂತ್ ಕ್ಲಬ್ (ಪಟ್ಟೆ) ತಂಡ; 3ನೇ ಸ್ಥಾನವನ್ನು ಬಿ ಎಂ ಫ್ರೆಂಡ್ಸ್, ಬಂದಾರು ತಂಡ; 4ನೇ ಸ್ಥಾನವನ್ನು ರಾಜರಾಜೇಶ್ವರಿ ಪಡುಮಲೆ ತಂಡ ಪಡೆದುಕೊಂಡಿವೆ. ವಿಜೇತ ತಂಡಗಳು ಪಂದ್ಯಾವಳಿಯ ಮುಂದಿನ ಹಂತಕ್ಕೆ ಅರ್ಹತೆ ಪಡೆದಿದ್ದು, ಇನ್ನು ವಿಭಾಗೀಯ ಹಂತದ ಪಂದ್ಯಗಳಲ್ಲಿ ಸ್ಪರ್ಧಿಸಲಿವೆ.
ಫಾದರ್ ವಿಕ್ಟರ್ ಡಿಸೋಜಾ , ಶ್ರೀಮತಿ ಇಶಾ ಶರ್ಮಾ (ಕರ್ನಾಟಕದ ಮೊದಲ ಚೆಸ್ ಗ್ರ್ಯಾಂಡ್ಮಾಸ್ಟರ್), ಕುಮಾರಿ ಸುಪ್ರಿಯಾ (ರಾಷ್ಟ್ರಮಟ್ಟದ ಥ್ರೋಬಾಲ್ ಆಟಗಾರ್ತಿ) ,ಶಂಕರ್ ಶೆಟ್ಟಿ (ಕಾರ್ಯದರ್ಶಿ, ವಾಲಿಬಾಲ್ ಅಸೋಸಿಯೇಷನ್), ಮಂಜುನಾಥ್ (ಸಹಾಯಕ ಪ್ರಾಧ್ಯಾಪಕರು, ಆಳ್ವಾಸ್ ಬಿ.ಪಿ.ಇಡಿ ಕಾಲೇಜು, ಮೂಡುಬಿದಿರೆ), ಉಮೇಶ್ (ದೀಪಿಕಾ ಪ್ರೌಢಶಾಲೆಯ ದೈಹಿಕ ಶಿಕ್ಷಣ ಶಿಕ್ಷಕರು) ಮುಖ್ಯ ಅತಿಥಿಗಳಾಗಿದ್ದು, ಈ ಸಂದರ್ಭದಲ್ಲಿ ಸಾಮಾಜಿಕ ಮಾಧ್ಯಮ ಪ್ರಭಾವಿಗಳಾದ ಅಕ್ಷಿತ್ ಮತ್ತು ನಿಖಿಲ್ ಶೆಟ್ಟಿ ಉಪಸ್ಥಿತರಿದ್ದರು.
ಈಶ ಪ್ರತಿನಿ ಪ್ರೀತೇಶ್ ಕುಲಾಲ್ ಮಾತನಾಡಿ: “ಈಶ ಗ್ರಾಮೋತ್ಸವವು ಕ್ರೀಡೆಯ ಮೂಲಕ ಜನರನ್ನು ಒಂದೆಡೆ ತಂದು, ಹಳ್ಳಿಗಳ ಸಾಮಾಜಿಕ ಬಾಂಧವ್ಯವನ್ನು ಗಟ್ಟಿಗೊಳಿಸುವುದನ್ನು ಮುಂದುವರಿಸಿದೆ. ಗ್ರಾಮೀಣ ಕರ್ನಾಟಕದಿಂದ ಸಿಕ್ಕಿರುವ ಈ ಅಭೂತಪೂರ್ವ ಸ್ಪಂದನೆಯು ನಮ್ಮ ಹಳ್ಳಿಗಳಲ್ಲಿರುವ ಉತ್ಸಾಹ ಮತ್ತು ಪ್ರತಿಭೆಯನ್ನು ಬಿಂಬಿಸುತ್ತದೆ. ಭಾಗವಹಿಸಿದ ಎಲ್ಲಾ ತಂಡಗಳಿಗೆ ನಮ್ಮ ಅಭಿನಂದನೆಗಳು ಹಾಗೂ ವಿಜೇತ ತಂಡಗಳಿಗೆ ಮುಂಬರುವ ವಿಭಾಗೀಯ ಹಂತದ ಪಂದ್ಯಗಳಿಗೆ ಶುಭ ಹಾರೈಸುತ್ತೇವೆ,” ಎಂದರು.
ವ್ಯಕ್ತಿ ಹಾಗೂ ಸಮುದಾಯವನ್ನು ರೂಪಿಸುವಲ್ಲಿ ಕ್ರೀಡೆಯ ಆಳವಾದ ಪಾತ್ರದ ಕುರಿತು ಮಾತನಾಡುತ್ತಾ ಸದ್ಗುರುಗಳು, “ಜೀವಿಸಲು ಅತ್ಯಂತ ಜವಾಬ್ದಾರಿಯುತ ಮಾರ್ಗವೆಂದರೆ ಜೀವನದೊಂದಿಗೆ ಸದಾ ಉಲ್ಲಾಸದಿಂದ ಇರುವುದು.” ಎನ್ನುತ್ತಾರೆ. ಈ ದೃಷ್ಟಿಕೋನವನ್ನು ಪ್ರತಿಬಿಂಬಿಸುವ ಈಶ ಗ್ರಾಮೋತ್ಸವವು, ಕೇವಲ ಸ್ಪರ್ಧೆಗೆಷ್ಟೇ ಸೀಮಿತವಾಗದೆ ಆಟಗಾರರಲ್ಲಿ ಆತ್ಮವಿಶ್ವಾಸ, ಒಗ್ಗಟ್ಟು, ಸಹಬಾಳ್ವೆ ಮತ್ತು ಸಮುದಾಯ ಭಾವನೆಯನ್ನು ಬೆಳೆಸುವ ಜೊತೆಗೆ, ಆರೋಗ್ಯಕರ ಹಾಗೂ ಸುಂದರವಾದ ಗ್ರಾಮೀಣ ಜೀವನಕ್ಕೆ ಪ್ರೋತ್ಸಾಹ ನೀಡುತ್ತದೆ.
ಈ ವರ್ಷ ಈಶ ಗ್ರಾಮೋತ್ಸವದ 18ನೇ ಆವೃತ್ತಿಯಾಗಿದ್ದು, ಪಂದ್ಯಾವಳಿಯು 10 ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶವಾದ ಪುದುಚೇರಿಗೆ ವಿಸ್ತರಿಸಿದೆ. ದೇಶಾದ್ಯಂತ 40,000ಕ್ಕೂ ಹೆಚ್ಚು ಹಳ್ಳಿಗಳಿಂದ 80,000ಕ್ಕೂ ಹೆಚ್ಚು ಗ್ರಾಮೀಣ ಆಟಗಾರರಿಗೆ ಒಂದೆಡೆ ವೇದಿಕೆಯನ್ನು ಕಲ್ಪಿಸುತ್ತಿದೆ.
ಕ್ರೀಡೆಯ ಮೂಲಕ ಗ್ರಾಮೀಣ ಅಭಿವೃದ್ಧಿಗೆ ನೀಡಿದ ಕೊಡುಗೆಗಾಗಿ ಈಶ ಗ್ರಾಮೋತ್ಸವವು ರಾಷ್ಟ್ರೀಯ ಮನ್ನಣೆಯನ್ನು ಪಡೆದುಕೊಂಡಿದೆ. ಭಾರತ ಸರ್ಕಾರದ ಯುವ ವ್ಯವಹಾರಗಳು ಮತ್ತು ಕ್ರೀಡಾ ಸಚಿವಾಲಯವು ಇದನ್ನು ರಾಷ್ಟ್ರೀಯ ಕ್ರೀಡಾ ಪ್ರೋತ್ಸಾಹಕ ಸಂಸ್ಥೆ (NSPO) ಎಂದು ಗುರುತಿಸಿದೆ. ಬೇರುಮಟ್ಟದಲ್ಲಿ ಕ್ರೀಡೆಯನ್ನು ಅಭಿವೃದ್ಧಿಪಡಿಸುವಲ್ಲಿ ನೀಡಿದ ಅತ್ಯುತ್ತಮ ಕೊಡುಗೆಗಾಗಿ 2018ರಲ್ಲಿ ಈ ಉಪಕ್ರಮಕ್ಕೆ ಭಾರತದ ಕ್ರೀಡಾ ಕ್ಷೇತ್ರದ ಅತ್ಯುನ್ನತ ಗೌರವವಾದ ‘ರಾಷ್ಟ್ರೀಯ ಖೇಲ್ ಪ್ರೋತ್ಸಾಹನ ಪುರಸ್ಕಾರ’ ನೀಡಿ ಗೌರವಿಸಲಾಗಿದೆ.
ವಿಶೇಷವಾಗಿ ಬೇರುಮಟ್ಟದ ಗ್ರಾಮೀಣ ಆಟಗಾರರಿಗಾಗಿಯೇ ವಿನ್ಯಾಸಗೊಳಿಸಲಾದ ಈ ಪಂದ್ಯಾವಳಿಯು ಪುರುಷರ ವಾಲಿಬಾಲ್ ಮತ್ತು ಮಹಿಳೆಯರ ಥ್ರೋಬಾಲ್ ಪಂದ್ಯಗಳನ್ನು ಒಳಗೊಂಡಿದೆ. ಇದು ಗ್ರಾಮೀಣ ಆಟಗಾರರಿಗೆ ತಮ್ಮ ಪ್ರತಿಭೆಯನ್ನು ಪ್ರದರ್ಶಿಸಲು ವೇದಿಕೆ ಕಲ್ಪಿಸುವುದಲ್ಲದೆ, ದೈಹಿಕ ಸಾಮರ್ಥ್ಯ, ತಂಡದ ಮನೋಭಾವ, ನಾಯಕತ್ವ ಮತ್ತು ಬಲವಾದ ಸಮುದಾಯ ಬಾಂಧವ್ಯವನ್ನು ಬೆಳೆಸುತ್ತದೆ.
ಕರ್ನಾಟಕದ ಕ್ಲಸ್ಟರ್ ಪಂದ್ಯಗಳು 18 ಜಿಲ್ಲೆಗಳಲ್ಲಿ ಮುಂದುವರಿಯಲಿದ್ದು, ಅರ್ಹತೆ ಪಡೆದ ತಂಡಗಳು ಆಗಸ್ಟ್ನಲ್ಲಿ ನಡೆಯುವ ವಿಭಾಗೀಯ ಹಂತದ ಪಂದ್ಯಗಳಿಗೆ ತಲುಪಲಿವೆ. ಅಂತಿಮ ಪಂದ್ಯಗಳು 2026ರ ಸೆಪ್ಟೆಂಬರ್ 4ರಿಂದ 6ರವರೆಗೆ ಕೊಯಂಬತ್ತೂರಿನ ಈಶ ಯೋಗ ಕೇಂದ್ರದಲ್ಲಿ ಸದ್ಗುರುಗಳ ಸಾನ್ನಿಧ್ಯದಲ್ಲಿ ನಡೆಯಲಿದ್ದು, ದೇಶದ ಅತ್ಯುತ್ತಮ ಗ್ರಾಮೀಣ ತಂಡಗಳು ₹1 ಕೋಟಿಗೂ ಹೆಚ್ಚಿನ ಬಹುಮಾನದ ಮೊತ್ತಕ್ಕಾಗಿ ಸ್ಪರ್ಧಿಸಲಿವೆ.
