Home Mangalorean News Kannada News ದುಬೈಯಲಿ ಕವಿತಾ ಕೃಷ್ಣಮೂರ್ತಿ ಅಭಿನಂದಿಸಿದ ಮಂಗಳೂರಿನ ಸಂಗೀತಗುರು

ದುಬೈಯಲಿ ಕವಿತಾ ಕೃಷ್ಣಮೂರ್ತಿ ಅಭಿನಂದಿಸಿದ ಮಂಗಳೂರಿನ ಸಂಗೀತಗುರು

Spread the love

ದುಬೈಯಲಿ ಕವಿತಾ ಕೃಷ್ಣಮೂರ್ತಿ ಅಭಿನಂದಿಸಿದ ಮಂಗಳೂರಿನ ಸಂಗೀತಗುರು

 

ದುಬೈಯ ಎಸ್ ಕೆ ಎಸ್ ಇವೆಂಟ್ಸ್ ಇವರು ಆಯೋಜಿಸುವ ಆರರಿಂದ ಹದಿನೇಳು ವಯಸ್ಸಿನ ಸಂಯುಕ್ತ ಅರಬ್ ಸಂಸ್ಥಾನದ (ಯು.ಎ ಇ ) ನಿವಾಸಿ ಮಕ್ಕಳು ಹಿಂದಿ ಭಾಷೆಯ ಚಲನಚಿತ್ರ ಹಾಡುಗಳನ್ನು ಹಾಡುವ ರಾಷ್ಟ್ರೀಯ ಮಟ್ಟದ ಸ್ಪರ್ಧೆ “ವಾಯ್ಸ್ ಆಫ್ ಯು ಎ ಇ – ಕಿಡ್ಸ್ ಕೆಟಗರಿ “.

ಯು.ಎ ಇ ಯ ಏಳು ಪ್ರಾಂತ್ಯದ ನಿವಾಸಿ ಭಾರತೀಯ ಮಕ್ಕಳ ಜೊತೆಗೆ ಹಿಂದಿ ಭಾಷೆಯನ್ನು ಅರಿಯದ ವಿದೇಶದ ಮಕ್ಕಳು ಕೂಡ ಈ ಪ್ರತಿಷ್ಠಿತ ಸ್ಪರ್ಧೆಯಲ್ಲಿ ಭಾಗವಹಿಸುತ್ತಾರೆ. ಮೂರು ಹಂತದಲ್ಲಿ ನಡೆಯುವ ಈ ಸ್ಪರ್ಧೆಯ ಅಂತಿಮ ಸುತ್ತಿನಲ್ಲಿ ಭಾರತದ ಹೆಸರಾಂತ ಗಾಯಕರು ತೀರ್ಪುಗಾರರಾಗಿರುತ್ತಾರೆ.

“ವಾಯ್ಸ್ ಆಫ್ ಯು ಎ ಇ – ಕಿಡ್ಸ್ ಕೆಟಗರಿ- 2017” ಸ್ಪರ್ಧೆಯ ಅಂತಿಮ ಸುತ್ತು ದುಬೈ ಮಹಾನಗರದ 1600 ಆಸನದ ಸುಪ್ರಸಿದ್ಧ ‘ಶೇಖ್ ರಶೀದ್’ ಆಡಿಟೋರಿಯಂನಲ್ಲಿ ಶುಕ್ರವಾರ ,ದಿನಾಂಕ 01 ಡಿಸೆಂಬರ್ 2017ರಂದು ಜರುಗಿತು.

ಸುಮಾರು 200 ಅಧಿಕ ಸ್ಪರ್ಧಾಳುಗಳು ಪಾಲ್ಗೊಂಡ ಈ ಸ್ಪರ್ಧೆಯ ಅಂತಿಮ ಸುತ್ತಿಗೆ ಆಯ್ಕೆಯಾದ 20 ಸ್ಪರ್ದಾಳುಗಳಿಗೆ ಆಡಿಟೋರಿಯಂನ ಸಭಾ ಕಾರ್ಯಕ್ರಮಕ್ಕೆ ಆಗಮಿಸಿದ್ದ ಸಭಿಕರ ಮುಂದೆ ತಲಾ ಮೂರುವರೆ ನಿಮಿಷ ಹಾಡುವ ಅವಕಾಶ ಲಭಿಸಿತು.

ಸ್ಪರ್ಧೆಯ ಅಂತಿಮ ಸುತ್ತಿಗೆ ಆಯ್ಕೆಯಾದ 20 ಸ್ಪರ್ಧಾಳುಗಳಲ್ಲಿ ಹಿಂದಿ ಭಾಷೆಯನ್ನು ಅರಿಯದ ಹಿಂದಿ ಚಲನಚಿತ್ರ ಗಾಯನ ಪ್ರೇಮಿ ತಜಕಿಸ್ಥಾನ್ ದೇಶದ ಕನ್ಯೆ ಕೂಡ ಒಬ್ಬಳು.

ಸ್ಪರ್ಧೆಯ ಅಂತಿಮ ಸುತ್ತಿಗೆ ಆಯ್ಕೆಯಾದ ಏಕೈಕ ಕನ್ನಡ ಕುವರನೊಬ್ಬ ಹತ್ತು ವರ್ಷದ ಪೋರ. ಕಾರ್ಯಕ್ರಮದ ಕ್ರಮಾಂಕದಲ್ಲಿ ಹನ್ನೊಂದನೆ ಸ್ಪರ್ದಾಳುವಾಗಿ ತನಗೆ ಲಭಿಸಿದ ಅತ್ಯಲ್ಪ ಕಾಲಾವಧಿಯಲ್ಲಿ ಯಮನ್ ರಾಗದ ಮಿಶ್ರ ಛಾಪು ತಾಳದ ‘ಆಜ್ ಇಬಾದತ್’ ಹಿಂದಿ ಹಾಡನ್ನು ಸಭಿಕರ ಮತ್ತು ತೀರ್ಪುಗಾರದ ಮುಂದೆ ಸುಶ್ರಾವ್ಯವಾಗಿ ಹಾಡುತ್ತಾನೆ.

“ವಾಯ್ಸ್ ಆಫ್ ಯು ಎ ಇ – ಕಿಡ್ಸ್ ಕೆಟಗರಿ- 2017 ” ಸ್ಪರ್ಧೆಯ ಅಂತಿಮ ಸುತ್ತಿನ ತೀರ್ಪುಗಾರರಾಗಿ ಬಂದಿದ್ದ ಪ್ರಸಿದ್ಧ ಹಿಂದಿ ಗಾಯಕಿ ದಕ್ಷಿಣ ಭಾರತದ ಗಾನ ಕೋಗಿಲೆ ಕವಿತಾ ಕೃಷ್ಣಮೂರ್ತಿಯವರು ಕನ್ನಡ ಕುವರ ‘ಅಮೋಘವರ್ಷ’ನ ಹಿಂದಿ ಹಾಡು ‘ಆಜ್ ಇಬಾದತ್’ ಆಲಿಸಿದ ನಂತರ ತಮ್ಮ ಅಭಿಪ್ರಾಯವನ್ನು ತಕ್ಷಣ ನೆರೆದ ಸಭಿಕರಿಗೆ ವ್ಯಕ್ತಪಡಿಸಿದರು

ಸ್ಪರ್ದಾಳು ಅಮೋಘನ ವಯಸ್ಸನ್ನು ಅವನಿಂದಲೇ ಕೇಳಿ ತಿಳಿದ ಕವಿತಾ ಕೃಷ್ಣಮೂರ್ತಿಯವರ ಮುಂದಿನ ಪ್ರಶ್ನೆ ನಿನಗೆ ಸಂಗೀತ ಕಲಿಸಿದ ಗುರುಗಳು ಯಾರು? ‘ನನ್ನ ಚಿಕ್ಕಮ್ಮ ಶ್ರೀಮತಿ ದಿವ್ಯಶಂಕರಿ ನನ್ನ ಸಂಗೀತ ಗುರು ‘ಎಂದು ಅಮೋಘವರ್ಷ ಹೇಳಿದಾಗ

‘ನೀನು ಅದ್ಭುತ ಗಾಯಕ ,ಇದು ತುಂಬಾ ಕಠಿಣ ಹಾಡು, ಈ 10 ರ ಎಳವೆಯಲ್ಲಿ ಇದರ ತಾರ ಸ್ಥಾಯಿ ಹಾಗೂ ಮಂದಾರ ಸ್ಥಾಯಿಗಳಲ್ಲಿನ ನಿನ್ನ ಸ್ವರ ಸಂಚಾರ ತುಂಬಾ ಸುಂದರವಾಗಿತ್ತು. ನೀನು ಕ್ರಮಭದ್ಧವಾಗಿ ರಾಗಬದ್ಧವಾಗಿ ಶ್ರುತಿಯಲ್ಲಿ ಬಿಲ್ಲಿನಿಂದ ಹೊರಟ ಬಾಣದಂತೆ ಅದ್ಭುತವಾಗಿ ಹಾಡಿರುವೆ. ಇಷ್ಟು ಸಣ್ಣ ವಯಸ್ಸಿನಲ್ಲಿ ನಿನ್ನನ್ನು ಪಳಗಿಸಿರುವ ನಿನ್ನ ಸಂಗೀತ ಗುರುಗಳಿಗೆ ನನ್ನ ಅಭಿನಂದನೆಗಳು ‘ಎಂದು ಕವಿತಾ ಕೃಷ್ಣಮೂರ್ತಿಯವರು ತಿಳಿಸಿದರು

ಅತ್ಯಂತ ಸಣ್ಣತಪ್ಪುಗಳನ್ನು ಕೂಲಂಕಷವಾಗಿ ಕಂಡುಹಿಡಿದು ತಿದ್ದಿ ವಿಮರ್ಶಿಸಿ ತಿಳಿಹೇಳುವ ಬೆರಳೆಣಿಕೆಯ ತೀರ್ಪುಗಾರರಲ್ಲಿ ಒಬ್ಬರಾದ ಪ್ರಸಿದ್ಧ ಹಿಂದಿ ಗಾಯಕಿ ದಕ್ಷಿಣ ಭಾರತದ ಗಾನ ಕೋಗಿಲೆ ಕವಿತಾ ಕೃಷ್ಣಮೂರ್ತಿಯವರ ಕುತೂಹಲ ಮೂಡಿಸಿದ ಶ್ರೀಮತಿ ದಿವ್ಯಶಂಕರಿ ಅವರ ಕಿರು ಪರಿಚಯ.

ತನ್ನ ಏಳನೇ ವಯಸ್ಸಿನಲ್ಲಿ ಕರ್ನಾಟಕ ಶಾಸ್ತ್ರೀಯ ಸಂಗೀತ ಅಭ್ಯಾಸ ಪ್ರಾರಂಭಿಸಿದ ದಿವ್ಯಶಂಕರಿ ಬಡೆಕ್ಕಿಲ ಚಂದ್ರಶೇಖರ ಭಟ್ ಮತ್ತು ಪದ್ಮಾವತಿ ದಂಪತಿಗಳ ಸುಪುತ್ರಿ. ಆಕಾಶವಾಣಿ ಮಂಗಳೂರು ವಿಭಾಗದಲ್ಲಿ ಯುವವಾಣಿ ಕಲಾವಿದೆಯಾಗಿದ್ದ ಇವರು ಬೆಂಗಳೂರು, ಉಡುಪಿ, ಕಟೀಲು , ಮಂಗಳೂರು ಸೇರಿದಂತೆ ಹಲವಾರು ಪಟ್ಟಣದಲ್ಲಿ ಸಂಗೀತ ಕಾರ್ಯಕ್ರಮಗಳನ್ನು ನೀಡಿದ್ದಾರೆ.

ಮಂಗಳೂರಿನ ಭರತನಾಟ್ಯ ನೃತ್ಯ ಕಾರ್ಯಕ್ರಮಗಳಲ್ಲಿ ಹಾಡುವ ದಿವ್ಯಶಂಕರಿ ಶಾಸ್ತ್ರೀಯ ಸಂಗೀತದಲ್ಲಿ ಹದಿನೆಂಟು ವರುಷಗಳ ಅನುಭವ ಹೊಂದಿರುವ ನುರಿತ ಶಾಸ್ತ್ರೀಯ ಸಂಗೀತ ಕಲಾವಿದೆ

ಎಮ್ ಬಿ. ಎ ಪಧವೀಧರರಾಗಿರುವ ದಿವ್ಯಶಂಕರಿ ತನ್ನ ಕಾಲೇಜ್ ದಿನಗಳಲ್ಲಿ ಶಾಸ್ತ್ರೀಯ ಸಂಗೀತ ಸ್ಪರ್ಧೆಗಳಲ್ಲಿ ಮಂಗಳೂರು ವಿಶ್ವವಿದ್ಯಾನಿಲಯದ ಪ್ರತಿನಿಧಿಯಾಗಿದ್ದವರು.

ಪ್ರಸ್ತುತ ಮಂಗಳೂರಿನಲ್ಲಿ ಸಂಗೀತ ತರಬೇತಿಯನ್ನು ನೀಡುತ್ತಿರುವ ದಿವ್ಯಶಂಕರಿ ವಿಜಯಾ ಬ್ಯಾಂಕ್ ನ ಪ್ರಬಂಧಕ ಕೊಡಂಗೆ ಶ್ಯಾಮಸ್ವರೂಪ್ ಅವರ ಪತ್ನಿ ಮತ್ತು ಪ್ರಸಿದ್ಧ ಸಂಗೀತ ಗುರುಗಳಾದ ವಿದ್ವಾನ್ ಕಾಂಚನ ಈಶ್ವರ ಭಟ್ ಇವರ ಶಿಷ್ಯೆ

ಒಂದು ಕೈಕೂಸಿನ ಸಹಿತ ತನ್ನೆರಡು ಪುಟ್ಟಮಕ್ಕಳನ್ನು ನೋಡಿಕೊಳ್ಳುತ್ತಾ ಕರ್ನಾಟಕದ ಕರಾವಳಿ ಮಂಗಳೂರಿನಿಂದ ‘ಸ್ಕೈಪ್’ ಮೂಲಕ ಸಂಯುಕ್ತ ಅರಬ್ ಸಂಸ್ಥಾನದ ( ಯು.ಎ ಇ ) ನಿವಾಸಿ ಅಮೋಘವರ್ಷನಿಗೆ ಕರ್ನಾಟಕ ಶಾಸ್ತ್ರೀಯ ಸಂಗೀತ ಕಲಿಸುತ್ತಿರುವ ಶ್ರೀಮತಿ ದಿವ್ಯಶಂಕರಿ ಅಮೋಘವರ್ಷನ ಚಿಕ್ಕಮ್ಮ.

ಬರಹ: ಪದ್ಯಾಣ ರಾಮಚಂದ್ರ


Spread the love

Exit mobile version