ದುರ್ಘಟನೆಗಳ ವಿಚಾರದಲ್ಲಿ ಕೀಳು ರಾಜಕೀಯ ಸಲ್ಲದು : ರಮೇಶ್ ಕಾಂಚನ್
ಉಡುಪಿ: ದುರಂತ ಯಾವತ್ತೂ ಕೂಡ ಹೇಳಿಕೊಂಡು ಬರುವುದಿಲ್ಲ. ಬೆಂಗಳೂರಿನ ಚಿನ್ನ ಸ್ವಾಮಿ ಕ್ರೀಡಾಂಗಣದಲ್ಲಿ ಆರ್ ಸಿಬಿ ವಿಜಯೋತ್ಸವ ಸಮಯದಲ್ಲಿ ಸಂಭವಿಸಿದ ಕಾಲ್ತುಳಿತದಲ್ಲಿ 11 ಜನರು ಮೃತಪಟ್ಟಿರುವುದು ದುರದೃಷ್ಟಕರ ಸಂಗತಿಯಾಗಿದೆ. ಪ್ರತಿನಿತ್ಯ ಹೆಣಗಳ ಮೇಲೆಯೇ ರಾಜಕೀಯ ಮಾಡಿಕೊಂಡು ಬಂದಿರುವ ಉಡುಪಿ ಶಾಸಕ ಯಶ್ ಪಾಲ ಸುವರ್ಣ ಸೇರಿದಂತೆ ಬಿಜೆಪಿಯ ನಾಯಕರುಗಳ ಮನಸ್ಥಿತಿಗೆ ಬೇರೆ ಏನೂ ಹೇಳಲು ವಿಷಯವೇ ಇಲ್ಲ ಎಂದು ಉಡುಪಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ರಮೇಶ್ ಕಾಂಚನ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಬೆಂಗಳೂರಿನಲ್ಲಿ ನಡೆದ ಕಾಲ್ತುಳಿತದಲ್ಲಿ ಸುಮಾರು 10 ಜನರು ಸಾವನ್ನಪ್ಪಿರುವುದು ಹಾಗೂ ಸುಮಾರು 30 ಕ್ಕೂ ಹೆಚ್ಚು ಜನ ಗಂಭೀರವಾಗಿ ಗಾಯಗೊಂಡಿರುವುದು ನಿಜಕ್ಕೂ ದುರಂತದ ವಿಷಯ. ವಿರೋಧ ಪಕ್ಷಗಳು ಇದೊಂದು ಸರಕಾರಿ ಪ್ರಾಯೋಜಿತ ಕೊಲೆ ಎಂದು ಹೇಳುತ್ತಿರುವುದು ನಿಜಕ್ಕೂ ಬೇಸರದ ವಿಚಾರ. ಈ ಹಿಂದೆ ಅಧಿಕಾರದಲ್ಲಿದ್ದ ಬಿಜೆಪಿ ಸರಕಾರದಲ್ಲಿ ಕೋವಿಡ್ ಭಯದಿಂದ ನೂರಾರು ಮಂದಿ ಆಸ್ಪತ್ರೆಗಳಲ್ಲಿ ಆಕ್ಸಿಜನ್ ವ್ಯವಸ್ಥೆ ಇಲ್ಲದೆ ರಸ್ತೆಯಲ್ಲಿ ಪ್ರಾಣ ಬಿಟ್ಟಿರುವುದು, ಚಾಮರಾಜ ನಗರ ಜಿಲ್ಲೆಯಲ್ಲಿ ಆಕ್ಷಿಜನ್ ದುರಂತದಿಂದ 24 ಜನ ಬಿಜೆಪಿ ಅವಧಿಯಲ್ಲಿ ಸಾವಿಗೀಡಾಗಿದ್ದು ರಾಜ್ಯದ ಜನತೆ ಮಾಧ್ಯಮಗಳಲ್ಲಿ ಕಂಡಿದ್ದೇವೆ. ಹಾಗಿದ್ದರೆ ಅದನ್ನು ಕಾಂಗ್ರೆಸ್ ಕೂಡ ಸರಕಾರಿ ಪ್ರಾಯೋಜಿತ ಕೊಲೆ ಎಂದು ಕರೆಯಬೇಕೆ?
ಆರ್ ಸಿಬಿ ವಿಜಯೋತ್ಸವ ಮೆರವಣಿಗೆಯನ್ನು ರದ್ದುಗೊಳಿಸಿದ್ದಕ್ಕೆ ರಾಜ್ಯ ಬಿಜೆಪಿಯ ಸಾಮಾಜಿಕ ಜಾಲತಾಣದಲ್ಲಿ ರಾಜ್ಯದ ಗೃಹ ಸಚಿವರನ್ನು ಕೆಟ್ಟದಾಗಿ ಬಿಂಬಿಸಿ ಬಳಿಕ ಘಟನೆ ನಡೆದ ಬಳಿಕ ಪೋಸ್ಟ್ ಅಳಿಸಿ ಹಾಕಿರುವುದು ನಿಮ್ಮ ಇಬ್ಬಗೆ ನೀತಿಯನ್ನು ತೋರಿಸಿದೆ. ಹಾಗಿದ್ದೂ ಕೂಡ ವಿಧಾನಸೌಧದ ಬಳಿ ಅಷ್ಟೊಂದು ಜನ ಸೇರಿದ್ದರೂ ಕೂಡ ಯಾವುದೇ ಸಮಸ್ಯೆಯಾಗದಂತೆ ಕಾರ್ಯಕ್ರಮ ನಡೆಸಿದ್ದು ಚಿನ್ನ ಸ್ವಾಮಿ ಕ್ರೀಡಾಂಗಣದಲ್ಲಿ ರಾಜ್ಯ ಕ್ರಿಕೆಟ್ ಅಸೋಸಿಯೇಶನ್ ಆಯೋಜನೆ ಮಾಡಿದ್ದು ಕೆಲವೊಂದು ಕಾರಣಗಳಿಂದ ಈ ಘಟನೆ ನಡೆದಿದ್ದು ಸರಕಾರ ಕೂಡ ಇದನ್ನು ಸಮರ್ಥಿಸಿಕೊಂಡಿಲ್ಲ ಬದಲಾಗಿ ಮ್ಯಾಜಿಸ್ಟ್ರೇಟ್ ತನಿಖೆಗೆ ಆದೇಶ ನೀಡಿದೆ. ಬಿಜೆಪಿಗೆ ನಿಜವಾಗಿ ಜನರ ಕಾಳಜಿ ಇಲ್ಲ ಬದಲಾಗಿ ರಾಜಕೀಯ ಮಾಡುವುದು ಮಾತ್ರ ಅವರ ಚಾಳಿ ಎನ್ನುವುದು ಜಗತ್ತಿಗೆ ತಿಳಿದಿದೆ.
ಉಡುಪಿ ಜಿಲ್ಲೆಯ ಶಾಸಕರು ಹೇಳಿಕೊಳ್ಳುವ ಒಂದು ಯೋಜನೆಯನ್ನು ಜಿಲ್ಲೆಗೆ ತರಲು ಶಕ್ತವಾಗದೇ ಹೋದರೂ ಕೂಡ ಹೆಣಗಳ ಮೇಲೆ ರಾಜಕೀಯ ಮಾಡುವುದನ್ನು ಮಾತ್ರ ಚೆನ್ನಾಗಿ ತಿಳಿದುಕೊಂಡಿದ್ದಾರೆ. ಇನ್ನಾದರೂ ಇರುವ ಮೂರು ವರ್ಷಗಳಲ್ಲಿ ಉಡುಪಿ ಕ್ಷೇತ್ರದ ಅಭಿವೃದ್ಧಿಯಲ್ಲಿ ತಮ್ಮನ್ನು ಸಕ್ರಿಯವಾಗಿ ತೊಡಗಿಸಿಕೊಳ್ಳುವ ಮೂಲಕ ಜನರ ವಿಶ್ವಾಸ ಗಳಿಸಿ ಎಂದು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.