ದ್ವೇಷ ಭಾಷಣ ಪ್ರಕರಣ: ಎಸ್ಡಿಪಿಐ ನಾಯಕ ರಿಯಾಝ್ ಕಡಂಬು ಬಂಧನ
ಉಡುಪಿ: ದ್ವೇಷ ಭಾಷಣ ಪ್ರಕರಣದಲ್ಲಿ ಎಸ್ಡಿಪಿಐ ರಾಜ್ಯ ಕಾರ್ಯದರ್ಶಿ ರಿಯಾಜ್ ಕಡಂಬು ಅವರಿಗೆ ಉಡುಪಿ ನ್ಯಾಯಾಲಯವು 14 ದಿನಗಳ ನ್ಯಾಯಾಂಗ ಬಂಧನ ವಿಧಿಸಿದೆ.
ರಿಯಾಜ್ ಕಡಂಬು ವಿರುದ್ಧ ಉಡುಪಿ ನಗರ ಪೊಲೀಸ್ ಠಾಣೆಯಲ್ಲಿ ದ್ವೇಷಭರಿತ ಭಾಷಣ ಮಾಡಿದ ಆರೋಪದ ಮೇರೆಗೆ ಪ್ರಕರಣ ದಾಖಲಾಗಿತ್ತು. ಇತ್ತೀಚೆಗೆ ಬ್ರಹ್ಮಾವರ ತಾಲೂಕಿನ ಕುಂಜಾಲು ಪ್ರದೇಶದಲ್ಲಿ ಪತ್ತೆಯಾದ ದನದ ತಲೆ ಪ್ರಕರಣ ಕುರಿತು ಮಾತನಾಡುವ ವೇಳೆ, ರಿಯಾಜ್ ಕಡಂಬು ಅವರು “ಇದು ಸಂಘ ಪರಿವಾರದ ವ್ಯವಸ್ಥಿತ ಕೃತ್ಯ” ಎಂದು ಹೇಳಿಕೆ ನೀಡಿದ್ದರು.
ಈ ಹೇಳಿಕೆ ಸಾರ್ವಜನಿಕವಾಗಿ ಅಸಮಾಧಾನ ಉಂಟುಮಾಡಿದ್ದು, ಅದರ ಹಿನ್ನೆಲೆಯಲ್ಲಿ ಪೊಲೀಸರ ತನಿಖೆ ಆರಂಭಗೊಂಡಿತ್ತು. ವಿಚಾರಣೆ ವೇಳೆ ಅವರು ಬೇಲ್ನ ನಿಯಮಗಳಿಗೆ ವಿರುದ್ಧವಾಗಿ ನಡೆದುಕೊಂಡಿರುವುದು ಪತ್ತೆಯಾದ ಹಿನ್ನೆಲೆಯಲ್ಲಿ ನ್ಯಾಯಾಲಯವು ಅವರಿಗೆ ಬಂಧನ ವಿಧಿಸಿದೆ.
ಈ ಬಗ್ಗೆ ಉಡುಪಿ ಜಿಲ್ಲೆಯ ಪೊಲೀಸ್ ವರಿಷ್ಠಾಧಿಕಾರಿ ಹರಿರಾಮ್ ಶಂಕರ್, ಐಪಿಎಸ್, ಮಾಹಿತಿ ನೀಡಿದ್ದು, ಕಾನೂನಿನ ಪ್ರಕಾರ ಕ್ರಮ ಕೈಗೊಳ್ಳಲಾಗಿದೆ ಎಂದು ತಿಳಿಸಿದ್ದಾರೆ.