ನಿರ್ಭೀತಿಯ ಮತದಾನಕ್ಕೆ ಎಸ್.ಐ.ಆರ್. ಪ್ರಕ್ರಿಯೆ: ಜಿಲ್ಲಾಧಿಕಾರಿ ಹೆಚ್.ವಿ ದರ್ಶನ್
ಮಂಗಳೂರು: ನಾಗರೀಕರು ಚುನಾವಣೆಯಲ್ಲಿ ನಿರ್ಭೀತಿಯಿಂದ ಮತ ಚಲಾಯಿಸಲು ಅನುವಾಗುವಂತೆ ಮತದಾರರ ಪಟ್ಟಿಯನ್ನು ಶುದ್ಧೀಕರಿಸಲು ವಿಶೇಷ ಸಮಗ್ರ ಪರಿಷ್ಕರಣೆ ಪ್ರಕ್ರಿಯೆ ನಡೆಸಲಾಗುತ್ತಿದೆ ಎಂದು ಜಿಲ್ಲಾಧಿಕಾರಿ ಹೆಚ್.ವಿ ದರ್ಶನ್ ಹೇಳಿದ್ದಾರೆ.
ಅವರು ಬುಧವಾರ ಜಿಲ್ಲಾ ಸ್ವೀಪ್ ಸಮಿತಿ ವತಿಯಿಂದ ಜಿಲ್ಲಾ ಪಂಚಾಯತ್ ನೇತ್ರಾವತಿ ಸಭಾಂಗಣದಲ್ಲಿ ಮತದಾರರ ಪಟ್ಟಿ ವಿಶೇಷ ಸಮಗ್ರ ಪರಿಷ್ಕರಣೆಯ(ಎಸ್.ಐ.ಆರ್) ಕುರಿತು ವಿಶೇಷ ಜಾಗೃತಿ ಅಭಿಯಾನ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಸಂವಿಧಾನದತ್ತ ಅಧಿಕಾರವಾಗಿರುವ ಮತದಾನವು ಪ್ರಜೆಗೆ ದೊರೆತಿರುವ ಅತ್ಯುನ್ನತ ಅಧಿಕಾರವಾಗಿದೆ. ತನ್ನ ಆಯ್ಕೆಯ ಸರಕಾರವನ್ನು ಚುನಾಯಿಸಲು ಮತದಾರರು ಈ ಹಕ್ಕನ್ನು ಯಾವುದೇ ಭಯವಿಲ್ಲದೇ ಚಲಾಯಿಸಬೇಕಾಗಿದೆ. ವಿಶೇಷ ಸಮಗ್ರ ಪರಿಷ್ಕರಣೆಯು ಈ ಹಕ್ಕನ್ನು ಎತ್ತಿ ಹಿಡಿಯುವುದರ ಭಾಗವಾಗಿದೆ ಎಂದು ಅವರು ಹೇಳಿದರು.
ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ವಿಶೇಷ ಸಮಗ್ರ ಪರಿಷ್ಕರಣೆಯು ಚುರುಕಾಗಿ ನಡೆಯುತ್ತಿದ್ದು, ಈಗಾಗಲೇ ಬಹುತೇಕ ಮತದಾರರಿಗೆ ಎನ್ಯುಮರೇಶನ್ ಫಾರಮನ್ನು ವಿತರಿಸಲಾಗಿದೆ. ಮತದಾರರು ಫಾರಮನ್ನು ಭರ್ತಿ ಮಾಡಿ
ಬಿ.ಎಲ್.ಓ.ಗಳಿಗೆ ನೀಡಿದ ನಂತರ ಇದನ್ನು ಡಿಜಿಟೈಸ್ ಪ್ರಕ್ರಿಯೆ ನಡೆಸಿ, ಆಗಸ್ಟ್ 5ರಂದು ಕರಡು ಮತದಾರರ ಪಟ್ಟಿ ಪ್ರಕಟಿಸಲಾಗುತ್ತದೆ ಎಂದು ಜಿಲ್ಲಾಧಿಕಾರಿಗಳು ತಿಳಿಸಿದರು.
ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಣಾಧಿಕಾರಿ ನರ್ವಾಡೆ ವಿನಾಯಕ್ ಕಾರ್ಭಾರಿ ಮಾತನಾಡಿ, ಸಾರ್ವಜನಿಕರು ತಮ್ಮ ಮಾಹಿತಿಗಳನ್ನು ಭರ್ತಿ ಮಾಡಿ ಎನ್ಯುಮರೇಶನ್ ಫಾರಂಗಳನ್ನು ಸಂಬಂಧಿಸಿದ ಬಿ.ಎಲ್.ಓ.ಗಳಿಗೆ ನೀಡಬೇಕು. ಇದು ಕಾಲಮಿತಿಯ ಪ್ರಕ್ರಿಯೆ ಆಗಿದ್ದು, ಜುಲೈ 29 ಕೊನೆಯ ದಿನವಾಗಿದೆ ಎಂದರು.
ಕಾರ್ಯಕ್ರಮದಲ್ಲಿ ಪ್ರೊಬೇಶನರಿ ಐಎಎಸ್ ಅಧಿಕಾರಿ ಅರ್ಚಿತ್ ದೋಂಬೆ ಉಪಸ್ಥಿತರಿದ್ದರು. ಮಹಿಳಾ ಪಾಲಿಟೆಕ್ನಿಕ್ ಉಪನ್ಯಾಸಕ ಡಾ. ಸತೀಶ್ ಕೆ.ಎಂ. ಅವರು ಸಂಪನ್ಮೂಲ ವ್ಯಕ್ತಿಯಾಗಿದ್ದರು.
ಸಮಗ್ರ ಶಿಕ್ಷಣ ಉಪಯೋಜನಾ ಸಮನ್ವಯಾಧಿಕಾರಿ ಸುಮಂಗಳಾ ನಾಯಕ್ ಸ್ವಾಗತಿಸಿದರು. ಗಾಯತ್ರಿ ನಿರೂಪಿಸಿದರು.
