ಪುತ್ತೂರು: ಅನುಮತಿ ರಹಿತ ಪ್ರತಿಭಟನೆ: SDPI ಮುಖಂಡರ ಸಹಿತ 30 ಜನರ ವಿರುದ್ಧ ಪ್ರಕರಣ ದಾಖಲು
ಪುತ್ತೂರು ನಗರಸಭಾ ಸದಸ್ಯ ಬಿಜೆಪಿ ಮುಖಂಡನ ಪುತ್ರನ ಅತ್ಯಾಚಾರ ಪ್ರಕರಣವನ್ನು ಖಂಡಿಸಿ ಹಾಗೂ ಸಂತ್ರಸ್ತೆಗೆ ನ್ಯಾಯ ದೊರಕಿಸುವಂತೆ ಆಗ್ರಹಿಸಿ ಪ್ರತಿಭಟನೆ
ಪುತ್ತೂರು: ನಗರದ ಕಿಲ್ಲೆ ಮೈದಾನದ ಬಳಿ ಸಂಬಂಧಪಟ್ಟ ಇಲಾಖೆಯಿಂದ ಯಾವುದೇ ಪೂರ್ವಾನುಮತಿ ಪಡೆಯದೆ, ಅಕ್ರಮವಾಗಿ ಗುಂಪು ಸೇರಿ ಧ್ವನಿವರ್ಧಕ ಬಳಸಿ ಪ್ರತಿಭಟನೆ ನಡೆಸಿದ ಆರೋಪದ ಮೇಲೆ ಎಸ್ಡಿಪಿಐ (SDPI) ಪುತ್ತೂರು ವಿಧಾನಸಭಾ ಕ್ಷೇತ್ರದ ಅಧ್ಯಕ್ಷರು ಹಾಗೂ ಇತರರ ವಿರುದ್ಧ ಪುತ್ತೂರು ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ದಿನಾಂಕ 02.07.2025 ರಂದು ಸಂಜೆ, ಪುತ್ತೂರು ಕಸಬಾ ಗ್ರಾಮದ ಕಿಲ್ಲೆ ಮೈದಾನದ ಬಳಿ, ಎಸ್ಡಿಪಿಐ ಪುತ್ತೂರು ವಿಧಾನಸಭಾ ಕ್ಷೇತ್ರದ ಅಧ್ಯಕ್ಷರಾದ ಅಶ್ರಫ್ ಬಾವು ಅವರ ನೇತೃತ್ವದಲ್ಲಿ ಸುಮಾರು 30 ಜನರು ಜಮಾಯಿಸಿದ್ದರು. ಈ ಗುಂಪು ಯಾವುದೇ ಅಧಿಕೃತ ಅನುಮತಿ ಇಲ್ಲದೆ, ಧ್ವನಿವರ್ಧಕವನ್ನು ಬಳಸಿ ಪ್ರತಿಭಟನೆ ನಡೆಸುತ್ತಿರುವುದು ಕಂಡುಬಂದಿದೆ.
ಕಾನೂನುಬಾಹಿರವಾಗಿ ಗುಂಪು ಸೇರಿ ಪ್ರತಿಭಟನೆ ನಡೆಸಿದ ಆರೋಪದ ಮೇಲೆ, ಪುತ್ತೂರು ನಗರ ಪೊಲೀಸ್ ಠಾಣೆಯಲ್ಲಿ ಆರೋಪಿತರ ವಿರುದ್ಧ ಮೊಕದ್ದಮೆ ಸಂಖ್ಯೆ (ಅ.ಕ್ರ) 53/2025 ರಂತೆ ಪ್ರಕರಣ ದಾಖಲಿಸಿಕೊಳ್ಳಲಾಗಿದೆ. ಭಾರತೀಯ ನ್ಯಾಯ ಸಂಹಿತೆಯ (ಬಿ.ಎನ್.ಎಸ್) ಕಲಂ 189(ಸಿ) (ಸಾರ್ವಜನಿಕ ಶಾಂತಿಗೆ ಭಂಗ ತರುವ ಉದ್ದೇಶದಿಂದ ಅಕ್ರಮವಾಗಿ ಸೇರುವುದು) ಮತ್ತು ಕರ್ನಾಟಕ ಪೊಲೀಸ್ ಕಾಯ್ದೆ 1963ರ ಕಲಂ 109ರ ಅಡಿಯಲ್ಲಿ ಈ ಪ್ರಕರಣವನ್ನು ದಾಖಲಿಸಲಾಗಿದೆ.