Home Mangalorean News Kannada News ಪುತ್ತೂರು ಜೋಡಿ ಕೊಲೆ – ಆರೋಪಿಯ ಬಂಧನ

ಪುತ್ತೂರು ಜೋಡಿ ಕೊಲೆ – ಆರೋಪಿಯ ಬಂಧನ

Spread the love

ಪುತ್ತೂರು ಜೋಡಿ ಕೊಲೆ – ಆರೋಪಿಯ ಬಂಧನ

ಪುತ್ತೂರು : ಪುತ್ತೂರು ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯ ಪುತ್ತೂರು ಕುರಿಯ ಎಂಬಲ್ಲಿ ನಡೆದ ಜೋಡಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರಕರಣದ ಆರೋಪಿಯನ್ನು ಕೃತ್ಯ ನಡೆದ 24 ಗಂಟೆಯಲ್ಲಿ ಬಂಧಿಸುವಲ್ಲಿ ದಕ್ಷಿಣ ಕನ್ನಡ ಜಿಲ್ಲಾ ಪೊಲೀಸರು ಯಶಸ್ವಿಯಾಗಿರುತ್ತಾರೆ.

ಬಂಧಿತನನ್ನು ಪುತ್ತೂರು ಕುರಿಯ ಗ್ರಾಮದ ಕಟ್ಟತ್ತಾರು ನಿವಾಸಿ ಕರೀಂ ಖಾನ್ ( 29 ವರ್ಷ) ಎಂದು ಗುರುತಿಸಲಾಗಿದೆ.

ನವೆಂಬರ್ 18 ರಂದು ರಾತ್ರಿ ಸುಮಾರು 11.00 ಗಂಟೆಗೆ ಆರೋಪಿ ಪುತ್ತೂರು ಕುರಿಯ ಗ್ರಾಮದ ಕಟ್ಟತ್ತಾರು ನಿವಾಸಿ ಕರೀಂ ಖಾನ್ ( 29 ವರ್ಷ) ಎಂಬಾತನು ಕಳ್ಳತನದ ಉದ್ದೇಶದಿಂದ ಕೃತ್ಯ ನಡೆದ ಮನೆಯ ಗೋಡೆ ಮತ್ತು ಹಂಚಿನ ನಡುವೆ ನುಸುಳಿ ಒಳ ಪ್ರವೇಶಿಸಿದ್ದು ಕಳ್ಳತನ ನಡೆಸುವ ವೇಳೆ ಮನೆಯ ಸದಸ್ಯರು ಎಚ್ಚರಗೊಂಡಿರುತ್ತಾರೆ. ಆರೋಪಿಯು ಮನೆಯ ಸದಸ್ಯರಿಗೆ ಪರಿಚಿತನಾಗಿದ್ದು ತಾನು ಸಿಕ್ಕಿಹಾಕಿಕೊಳ್ಳುತ್ತೇನೆ ಎಂಬ ಭಯದಿಂದ ಹಾಗೂ ಈ ಹಿಂದೆ ಮೃತ ಶೇಕ್ ಕೊಗ್ಗು ಸಾಹೇಬ್ ರವರೊಂದಿಗೆ ಹಣಕಾಸಿನ ವ್ಯವಹಾರಕ್ಕೆ ಸಂಬಂಧಿಸಿ ನಡೆದ ಮನಸ್ತಾಪದ ದ್ವೇಷದಿಂದ ಅಡುಗೆ ಕೋಣೆಯಲ್ಲಿದ್ದ ಕೊಕ್ಕೆ ಕತ್ತಿಯಿಂದ ಮನೆಯಲ್ಲಿದ್ದ ಶೇಕ್ ಕೊಗ್ಗು ಸಾಹೇಬ್ ( 70 ವರ್ಷ), ಶಾಮಿಯಾ ಭಾನು (16 ವರ್ಷ) ಎಂಬವರುಗಳ ಹತ್ಯೆ ನಡೆಸಿದ್ದು, ಖತೀಜಾಬಿ (65 ವರ್ಷ) ಎಂಬವರಿಗೆ ಗಂಭೀರ ಹಲ್ಲೆ ನಡೆಸಿರುವುದಾಗಿದೆ. ಆ ಬಳಿಕ ಮನೆಯಲ್ಲಿದ್ದ ಸುಮಾರು 30 ಗ್ರಾಂ ತೂಕದ ಚಿನ್ನಾಭರಣ ಹಾಗೂ 6,000 ನಗದನ್ನು ಕಳ್ಳತನ ನಡೆಸಿ ಮನೆಯ ಹಿಂಬಾಗಿಲಿನ ಮೂಲಕ ತೆರಳಿರುತ್ತಾನೆ.

ಈ ಬಗ್ಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡ ಪುತ್ತೂರು ಗ್ರಾಮಾಂತರ ಪೊಲೀಸರು ಠಾಣಾ ವ್ಯಾಪ್ತಿಯ ಕುರಿಯ ಗ್ರಾಮದ ಬೀಟ್ ಸಿಬ್ಬಂದಿ ಭೀಮ್ ಶೇನ್ ರವರು ನೀಡಿದ ಸುಳಿವಿನ ಅಧಾರದಲ್ಲಿ ಸದರಿ ಆರೋಪಿಯನ್ನು ನವೆಂಬರ್ 19 ಸಂಜೆ ಬಂಧಿಸಿದ್ದು ತನಿಖೆ ಪ್ರಗತಿಯಲ್ಲಿರುತ್ತದೆ. ಆರೋಪಿಯ ಕೈಗೆ ಕೃತ್ಯ ನಡೆಸುವ ವೇಳೆ ಉಂಟಾದ ಘರ್ಷಣೆಯಲ್ಲಿ ಗಾಯವಾಗಿದ್ದು, ಈ ಬಗ್ಗೆ ಚಿಕಿತ್ಸೆ ನೀಡಲಾಗಿರುತ್ತದೆ.


Spread the love

Exit mobile version