ಪುತ್ತೂರು: ರಸ್ತೆ ಬದಿಯ ಚರಂಡಿ ದುರಸ್ತಿಗೊಳಿಸಿದ ಶಾಸಕ ಅಶೋಕ್ ಕುಮಾರ್ ರೈ
ಪುತ್ತೂರು: ಚರಂಡಿ ಸಮಸ್ಯೆಯಿಂದಾಗಿ ಮಳೆ ನೀರು ಸಮರ್ಪಕವಾಗಿ ಹರಿಯದೆ ರಸ್ತೆಗೆ ಬಂದು ವಾಹನ ಸವಾರರು ಹಾಗೂ ಪಾದಚಾರಿಗಳಿಗೆ ತೊಂದರೆಯಾಗುತ್ತಿರುವುದನ್ನು ಗಮನಿಸಿದ ಪುತ್ತೂರು ಶಾಸಕ ಅಶೋಕ್ ಕುಮಾರ್ ರೈ ಅವರು ತಾವೇ ಪಂಚೆ ಎತ್ತಿಕಟ್ಟಿ ಹಾರೆ ಹಿಡಿದು ಚರಂಡಿ ದುರಸ್ತಿಗೊಳಿಸಿದ ಘಟನೆ ರವಿವಾರ ಪುತ್ತೂರು-ಉಪ್ಪಿನಂಗಡಿ ರಸ್ತೆಯಲ್ಲಿ ನಡೆಯಿತು.
ಶಾಸಕರು ಚರಂಡಿ ದುರಸ್ತಿಗೊಳಿಸುತ್ತಿರುವುದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಸಾಕಷ್ಟು ಪ್ರಸಂಶೆ ವ್ಯಕ್ತವಾಗಿದೆ.
ಪುತ್ತೂರು-ಉಪ್ಪಿನಂಗಡಿ ರಸ್ತೆಯಲ್ಲಿನ ಕೋಡಿಂಬಾಡಿ ಎಂಬಲ್ಲಿನ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಬಳಿಯಲ್ಲಿ ರಸ್ತೆ ಬದಿಯ ಚರಂಡಿಯಲ್ಲಿ ಹೂಳು ತುಂಬಿದ್ದ ಕಾರಣ ಮಳೆ ನೀರೆಲ್ಲಾ ರಸ್ತೆಯಲ್ಲಿ ಹರಿಯುತ್ತಿತ್ತು. ಇದರಿಂದಾಗಿ ಈ ಭಾಗದಲ್ಲಿ ಸಂಚರಿಸುವ ವಾಹನಗಳಿಗೆ ಹಾಗೂ ಪಾದಚಾರಿಗಳಿಗೆ ಕೆಸರು ನೀರಿನ ಅಭಿಷೇಕ ನಡೆಯುತ್ತಿತ್ತು. ಈ ರಸ್ತೆಯಲ್ಲಿ ಸಾಗುತ್ತಿದ್ದ ಶಾಸಕ ಅಶೋಕ್ ಕುಮಾರ್ ರೈ ಅವರು ಇದನ್ನು ಗಮನಿಸಿ ತಕ್ಷಣವೇ ಕಾರಿನಿಂದ ಇಳಿದು ಪಕ್ಕದ ಮನೆಯೊಂದರಿಂದ ಹಾರೆಯನ್ನು ತರಿಸಿ ರಸ್ತೆ ಬದಿಯಲ್ಲಿನ ಚರಂಡಿಯಲ್ಲಿ ತುಂಬಿದ್ದ ಹೂಳನ್ನು ತೆರವುಗೊಳಿಸಿ, ಸುಗಮ ನೀರು ಹರಿಯುವಂತೆ ಮಾಡಿದರು.