ಪ್ರಾಕೃತಿಕ ವಿಕೋಪಗಳಿಂದಾಗುವ ಸಾವು ನೋವು ತಡೆಯಲು ಪ್ರಮುಖ ಆದ್ಯತೆ- ದರ್ಶನ್ ಎಚ್ ವಿ
ಮಂಗಳೂರು : ಸದ್ಯ ಮಳೆಗಾಲ ಆಗಿರುವುದರಿಂದ ಜಿಲ್ಲೆಯಲ್ಲಿ ಪ್ರಾಕೃತಿಕವಾಗಿ ಸಂಭವಿಸುವ ವಿಕೋಪಗಳನ್ನು ಯಾವುದೇ ಸಾವು ನೋವು, ಆಸ್ತಿ ಪಾಸ್ತಿಗಳಿಗೆ ನಷ್ಟ ಆಗದಂತೆ ಎದುರಿಸಲು ಬೇಕಾದ ಎಲ್ಲಾ ರೀತಿಯ ಅಗತ್ಯ ಕ್ರಮಗಳ ಬಗ್ಗೆ ಪ್ರಮುಖ ಆದ್ಯತೆ ನೀಡಲಾಗುವುದು ಎಂದು ದ.ಕ. ಜಿಲ್ಲೆಯ ನೂತನ ಜಿಲ್ಲಾಧಿಕಾರಿ ದರ್ಶನ್ ಎಚ್.ವಿ. ಹೇಳಿದ್ದಾರೆ.
ನೂತನ ಜಿಲ್ಲಾಧಿಕಾರಿಯಾಗಿ ಅಧಿಕಾರ ಸ್ವೀಕರಿಸಿರುವ ದರ್ಶನ್ ಅವರನ್ನು ಅವರ ಕಚೇರಿಯಲ್ಲಿ ಭೇಟಿಯಾದ ಪತ್ರಕರ್ತರ ಪ್ರಶ್ನೆಗೆ ಈ ಪ್ರತಿಕ್ರಿಯೆ ನೀಡಿದರು.
ಈಗಾಗಲೇ ಜಿಲ್ಲೆಯಲ್ಲಿ ಪ್ರಾಕೃತಿಕ ವಿಕೋಪದಿಂದ ಉಂಟಾಗಿರುವ ಹಾನಿಗಳ ಬಗ್ಗೆ ಮಾಹಿತಿ ಪಡೆದು ಕೊಂಡಿದ್ದೇನೆ. ಹಿಂದಿನ ಪ್ರವಾಹದ ಸಂದರ್ಭ ಆಗಿದ್ದಂತಹ ರಸ್ತೆ ಸಂಪರ್ಕ ಕಡಿತ, ಹಾನಿಗಳ ಬಗ್ಗೆ ಅಧಿಕಾರಿಗಳಿಂದ ಮಾಹಿತಿ ಪಡೆದುಕೊಂಡಿದ್ದೇನೆ. ಗುಡ್ಡಕಾಡು ಪ್ರದೇಶಗಳ ಜನವಸತಿಗಳಲ್ಲಿ ಸಂಭಾವ್ಯ ಅನಾಹುತಗಳ ಬಗ್ಗೆ ಮಾಹಿತಿ ಪಡೆದು ತುರ್ತು ರಕ್ಷಣಾ ಕ್ರಮಗಳಿಗೆ ಕ್ರಮ ವಹಿಸಲಾಗುವುದು. ದ.ಕ. ಜಿಲ್ಲಾ ಪಂಚಾಯತ್ ಸಿಇಒ ಡಾ. ಆನಂದ್ ಅವರ ನೇತೃತ್ವದಲ್ಲಿ ಈಗಾಗಲೇ ಗ್ರಾಮ ಪಂಚಾಯತ್ ಮಟ್ಟದಲ್ಲಿ ಪಿಡಿಒಗಳನ್ನು ಮೇಲುಸ್ತುವಾರಿಯಾಗಿಸಿ ಪ್ರಾಕೃತಿಕ ವಿಕೋಪಗಳ ಬಗ್ಗೆ ನಿಗಾ ವಹಿಸಲಾಗು ತ್ತಿದೆ. ಅದರ ಬಗ್ಗೆಯೂ ಮಾಹಿತಿ ಪಡೆದುಕೊಂಡಿದ್ದೇನೆ. ಮುಂದಿನ ನಾಲೈದು ದಿನಗಳ ಕಾಲ ಅಷ್ಟಾಗಿ ಮಳೆ ಇರದು ಎಂಬ ಮಾಹಿತಿ ಹವಾಮಾನ ಇಲಾಖೆಯಿಂದ ದೊರಕಿದೆ. ನಂತರ ಬರುವ ಮಳೆಯ ಸಂದರ್ಭ ನಷ್ಟ ಆಗದಂತೆ ಎಲ್ಲ ಇಲಾಖೆಗಳ ಸಮನ್ವಯತೆಯೊಂದಿಗೆ ಯಾವ ರೀತಿಯಲ್ಲಿ ಸಮಸ್ಯೆ ಬಗೆಹರಿಸಬಹುದು ಎಂಬ ಬಗ್ಗೆ ಗಮನ ಹರಿಸಲಾಗುವುದು ಎಂದವರು ಹೇಳಿದರು.
ದ.ಕ. ಜಿಲ್ಲೆಗೆ ಇದೇ ಮೊದಲ ಬಾರಿಗೆ ಅಧಿಕಾರಿಯಾಗಿ ಬಂದಿದ್ದೇನೆ. ಆರಂಭದಲ್ಲಿಯೇ ದ.ಕ. ಜಿಲ್ಲೆಯ ಜನತೆಯ ಪ್ರೀತಿ, ವಿಶ್ವಾಸ ದೊರಕಿದೆ. ದ.ಕ. ಜಿಲ್ಲೆ ಉತ್ತಮ ಆಡಳಿತ ಹೊಂದಿರುವ ಜಿಲ್ಲೆ. ಇಲ್ಲಿನ ಜನರ ಬಗ್ಗೆಯೂ ಇತರ ಜಿಲ್ಲೆಗಳಲ್ಲಿ ಬಹಳಷ್ಟು ಹೆಗ್ಗಳಿಕೆ ಇದೆ. ಚಿಕ್ಕಮಗಳೂರುನಲ್ಲಿ ಇದ್ದ ಸಂದರ್ಭ ಇಲ್ಲಿಯ ಬಗ್ಗೆ ಕೇಳಿ ತಿಳಿದುಕೊಂಡಿದ್ದು ಬಿಟ್ಟರೆ ಹೆಚ್ಚಿನ ಒಡನಾಟ ದ.ಕ. ಜಿಲ್ಲೆಯ ಬಗ್ಗೆ ನನಗೆ ಇಲ್ಲ. ಮುಂದಿನ ಮೂರ್ನಾಲ್ಕು ದಿನಗಳಲ್ಲಿ ಜಿಲ್ಲೆಯ ಬಗ್ಗೆ ಅರಿತುಕೊಂಡು ಏನು ಅಗತ್ಯವಿದೆ ಹಾಗೂ ಏನು ಅವಕಾಶಗಳಿವೆ ಎಂಬುದನ್ನು ತಿಳಿದು ಅಧಿಕಾರಿಗಳ ಮೂಲಕ ಪ್ರಮುಖ ಇಲಾಖೆಗಳ ಪರಿಶೀಲನಾ ಸಭೆ ನಡೆಸಲಿದ್ದೇನೆ. ಮುಲೈ ಮುಗಿಲನ್ ಅವರಿಗೆ ದೊರೆತ ಬೆಂಬಲವನ್ನು ಸಾರ್ವಜನಿಕರಿಂದ ನಾನೂ ಬಯಸುವುದಾಗಿ ನೂತನ ಜಿಲ್ಲಾಧಿಕಾರಿ ತಿಳಿಸಿದರು.
ಕೋಮು ಸೂಕ್ಷ್ಮವಾಗಿ ಗುರುತಿಸಿಕೊಡಿರುವ ದ.ಕ. ಜಿಲ್ಲೆಯಲ್ಲಿ ಕಾರ್ಯ ನಿರ್ವಹಣೆಯ ದೂರದೃಷ್ಟಿ ಹೇಗಿರುತ್ತದೆ ಎಂಬ ಪ್ರಶ್ನೆಗೆ ಪ್ರತಿಯಿಕ್ರಿಯಿಸಿದ ಅವರು, ಈಗಷ್ಟೇ ಬಂದಿದ್ದೇನೆ. ಈ ಸಮಯದಲ್ಲಿ ಆ ಬಗ್ಗೆ ನಾನು ಏನೂ ಹೇಳಲಾಗದು. ಆದರೂ ಈಗಾಗಲೇ ಜಿಲ್ಲೆಯಲ್ಲಿ ಪೊಲೀಸ್ ಕಮಿಷನರ್, ಎಸ್ಪಿಯವರು ಈಗಾಗಲೇ ಜಿಲ್ಲೆಯಲ್ಲಿ ಅಗತ್ಯ ಕ್ರಮ ವಹಿಸಿದ್ದಾರೆ. ಕೆಲ ಸಮಯದ ಹಿಂದೆ ಜಿಲ್ಲೆಯಲ್ಲಿ ಇದ್ದ ಪರಿಸ್ಥಿತಿ ಈಗಿಲ್ಲ. ಇದೇ ರೀತಿಯ ಶಾಂತಿಯ ವಾತಾವರಣವನ್ನು ನಾವು ಕಾಪಾಡಿಕೊಂಡು ಬಂದಲ್ಲಿ ನಮ್ಮಜಿಲ್ಲೆಯ ಅಭಿವೃದ್ಧಿಗೆ ಪೂರಕವಾಗಲಿದೆ. ಈ ರೀತಿಯ ಶಾಂತಿಯುತ ಪರಿಸ್ಥಿತಿಯನ್ನು ಮುಂದುವರಿಸಲು ಸಾರ್ವಜನಿಕರು ಸಹಕರಿಸಬೇಕು ಎಂಬುದು ನನ್ನ ಬೇಡಿಕೆಯಾಗಿದೆ.
ನೂತನ ಜಿಲ್ಲಾಧಿಕಾರಿ ದರ್ಶನ್ ಎಚ್.ವಿಯವರು ಕರ್ನಾಟಕದ ಚಿತ್ರದುರ್ಗ ಜಿಲ್ಲೆಯವರು. 2016ನೇ ಸಾಲಿನ ಐಎಎಸ್ ಅಧಿಕಾರಿ. ರಾಯಚೂರಿನಲ್ಲಿ ಐಎಎಸ್ ಪ್ರೊಬೆಷನರಿಯಾಗಿ ಕಾರ್ಯ ಆರಂಭಿಸಿ, ಸಾಗರದಲ್ಲಿ ಉಪ ವಿಭಾಗಾಧಿಕಾರಿ ಎಸಿ)ಯಾಗಿ, ಕೋಲಾರ ಜಿ.ಪಂ. ಸಿಇಒ ಆಗಿ, ಬಳಿಕ ಸುಮಾರು ಎರಡೂವರೆ ವರ್ಷಗಳ ಕಾಲ ಬೆಳಗಾವಿ ಜಿ.ಪಂ. ಸಿಇಒ ಆಗಿ, ತುಮಕೂರು ನಗರಸಭೆ ಆಯುಕ್ತ ಬೆಂಗಳೂರಿನಲ್ಲಿ ಐಟಿಬಿಟಿ ನಿರ್ದೇಶಕನಾಗಿ, ವಾಣಿಜ್ಯ ತೆರಿಗೆ ಇಲಾಖೆಯ ಆಯುಕ್ತರು ಮತ್ತು ಹೆಚ್ಚುವರಿ ಜಿಲ್ಲಾ ಅಧಿಕಾರಿಯಾಗಿ ಸೇವಾನುಭವ ಹೊಂದಿದ್ದಾರೆ.