ಫಾಲೋಅಪ್| ತ್ಯಾಜ್ಯ ಹೊರಬಿಟ್ಟ ವಾಣಿಜ್ಯ ಸಂಕೀರ್ಣಕ್ಕೆ ಇಓ ಭೇಟಿ: ಕ್ರಮಕ್ಕೆ ಮೀನಾಮೇಷ?
- ಅಧಿಕಾರಿಗಳ ಮೃದುಧೋರಣೆಯ ವಿರುದ್ದ ಸ್ಥಳೀಯರಿಂದ ಇಂದು ಹೆಮ್ಮಾಡಿ ಪಂಚಾಯಿತಿ ಮುಂಭಾಗ ಪ್ರತಿಭಟನೆಗೆ ಕರೆ.
ಕುಂದಾಪುರ: ಕಳೆದ ಕೆಲ ದಿನಗಳಿಂದ ತ್ಯಾಜ್ಯ ನೀರು ಹೊರಬಿಡುವ ಮೂಲಕ ಸುದ್ದಿಯಲ್ಲಿರುವ ಹೆಮ್ಮಾಡಿಯ ಖಾಸಗಿ ಬಹುಮಹಡಿ ವಾಣಿಜ್ಯ ಸಂಕೀರ್ಣಕ್ಕೆ ಗುರುವಾರ ಬೆಳಿಗ್ಗೆ ಕುಂದಾಪುರ ತಾಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
“ಹೆಮ್ಮಾಡಿ ಜನಕೆ ನಿದ್ದೆಗೆಡಿಸುತ್ತಿರುವ ಬಹುಮಹಡಿ ಕಟ್ಟಡ” ಶೀರ್ಷಿಕೆಯಡಿಯಲ್ಲಿ ವರದಿಗೆ ಸ್ಪಂದಿಸಿರುವ ತಾಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿ ಡಾ. ರವಿಕುಮಾರ್ ಹುಕ್ಕೇರಿ, ಖಾಸಗಿ ಬಹುಮಹಡಿ ಕಟ್ಟಡಕ್ಕೆ ಆಗಮಿಸಿ ತ್ಯಾಜ್ಯ ಶುದ್ದೀಕರಣ ಘಟಕ ಪರಿಶೀಲಿಸಿದ ಬಳಿಕ ಸ್ಥಳೀಯರ ಅಹವಾಲು ಆಲಿಸಿದರು.
ಅಧಿಕಾರಿಗಳಲ್ಲಿ ಸಮಸ್ಯೆ ಹೇಳಿಕೊಂಡ ಸ್ಥಳೀಯರು, ಕಟ್ಟಡದಿಂದ ಹೊರಬರುವ ತ್ಯಾಜ್ಯ ನೀರಿನಿಂದಾಗಿ ಪರಿಸರದಲ್ಲಿ ವಾಸಿಸಲು ಸಾಧ್ಯವಾಗುತ್ತಿಲ್ಲ. ಇದರಿಂದ ನಮ್ಮ ಮನೆಗಳ ಬಾವಿ ನೀರು ಕಲುಷಿತಗೊಳ್ಳುತ್ತಿವೆ. ಮೂರ್ನಾಲ್ಕು ವರ್ಷಗಳಿಂದ ಮಳೆಗಾಲದಲ್ಲಿ ಇದೇ ರೀತಿಯ ಸಮಸ್ಯೆ ಎದುರಿಸುತ್ತಿದ್ದೇವೆ. ಗ್ರಾ.ಪಂ ಗೆ ಈ ಬಗ್ಗೆ ದೂರು ನೀಡಿದರೂ ಯಾವುದೇ ಪ್ರಯೋಜನವಾಗಿಲ್ಲ. ಸ್ವಚ್ಛತೆಗಾಗಿ ಕಟ್ಟಡ ಮಾಲೀಕರ ಬಳಿ ವಾಹನ ಕೊಡುಗೆಯಾಗಿ ಪಡೆದುಕೊಂಡಿರುವ ಪಂಚಾಯಿತಿ ಈಗ ಅವರ ಋಣ ಸಂದಾಯ ಮಾಡುತ್ತಿದೆಯೇ ಎನ್ನುವ ಅನುಮಾನಗಳು ಹುಟ್ಟುತ್ತಿವೆ. ಪಂಚಾಯಿತಿಯಿಂದ ನಮಗೆ ನ್ಯಾಯ ಸಿಗುವ ಭರವಸೆ ಇಲ್ಲ. ಈ ಭಾಗದ ವಾರ್ಡ್ ಸದಸ್ಯರು ನಮ್ಮ ಸಮಸ್ಯೆಗಳಿಗೆ ಸ್ಪಂದಿಸುತ್ತಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಸ್ಥಳೀಯ ನಿವಾಸಿಗಳ ಸಮಸ್ಯೆಯನ್ನು ಆಲಿಸಿದ ಬಳಿಕ ಮಾತನಾಡಿದ, ಇಓ ರವಿಕುಮಾರ್, ಮೇಲ್ನೋಟಕ್ಕೆ ತ್ಯಾಜ್ಯ ಶುದ್ದೀಕರಣ ಘಟಕ ಕಾರ್ಯಚರಿಸಿದಂತೆ ಕಾಣುತ್ತಿಲ್ಲ. ಈ ಪರಿಸರದಲ್ಲಿ ನಿಂತುಕೊಳ್ಳಲು ಅಸಾಧ್ಯವಾದ ಪರಿಸ್ಥಿತಿ ಇದೆ. ನಿಯಮಗಳನ್ನು ಮೀರಿ ಕಟ್ಟಡ ನಿರ್ಮಾಣಕ್ಕೆ ಪರವಾಗಿನಿಗೆ ಕೊಟ್ಟಿರುವ ಆರೋಪ ಕೇಳಿಬಂದಿದ್ದು, ಈ ಬಗ್ಗೆ ಪರಿಶೀಲನೆ ನಡೆಸಿ ಶೀಘ್ರವೇ ಈ ಸಮಸ್ಯೆ ಬಗೆಹರಿಸಲಾಗುವುದು ಎಂದರು. ಈ ವೇಳೆ ಸ್ಥಳೀಯರು ಹಾಗೂ ಅಧಿಕಾರಿಗಳ ನಡುವೆ ವಾಗ್ವಾದ ನಡೆಯಿತು. ಕೂಡಲೇ ಕಟ್ಟಡ ಮಾಲೀಕರನ್ನು ಕರೆಸಿ ಶೀಘ್ರವೇ ಕ್ರಮಜರುಗಿಸಿ ಎಂದ ಸ್ಥಳೀಯರ ಮಾತಿಗೆ ಸ್ಪಂದಿಸಿದೆ ಅಧಿಕಾರಿಗಳು ಮರಳಿದರು.
ಈ ವೇಳೆ ಪಂಚಾಯಿತಿ ಅಧ್ಯಕ್ಷೆ ಶಕೀಲಾ, ಕಾರ್ಯದರ್ಶಿ ಜಯಮ್ಮ, ಸದಸ್ಯ ಯು. ಸತ್ಯನಾರಾಯಣ್ ರಾವ್, ಸಿಬ್ಬಂದಿಗಳಾದ ಮಿಥುನ್, ಪ್ರಭಾಕರ್ ಹಾಜರಿದ್ದರು.
ಕ್ರಮಕ್ಕೆ ಮೀನಾಮೇಷ ಏಕೆ?
ಅಧಿಕಾರಿಗಳ ಸ್ಥಳ ಪರಿಶೀಲನೆ ವೇಳೆ ತ್ಯಾಜ್ಯ ನೀರು ಹೊರಬಿಟ್ಟ ಬಗ್ಗೆ ಸೂಕ್ತ ಸಾಕ್ಷ್ಯಗಳಿದ್ದರೂ ಕಟ್ಟಡ ಮಾಲೀಕರನ್ನು ಕರೆಸಿ ಅವರೊಂದಿಗೆ ಮಾತನಾಡದೆ ತರಾತುರಿಯಲ್ಲಿ ಅಧಿಕಾರಿಗಳು ಮರಳಿದ ಬಗ್ಗೆ ಸಾಕಷ್ಟು ಅನುಮಾನಗಳು ಹುಟ್ಟುತ್ತಿದ್ದು, ಕೇವಲ ರಾತ್ರಿ ಮಾತ್ರವಲ್ಲದೇ ಹಾಡಹಗಲೇ ಸರ್ಕಾರಿ ನಿಯಮಗಳನ್ನು ಗಾಳಿಗೆ ತೂರಿ ತ್ಯಾಜ್ಯ ನೀರು ಹೊರಬಿಟ್ಟ ವಿಡಿಯೋ ದಾಖಲೆಗಳಿದ್ದರೂ ಕ್ರಮಕ್ಕೆ ಮೀನಾಮೇಷ ಎಣಿಸುತ್ತಿರುವ ಅಧಿಕಾರಿಗಳ ವರ್ತನೆ ಖಂಡನೀಯ ಎಂದು ಸ್ಥಳೀಯ ನಿವಾಸಿಗಳು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಇದನ್ನೂ ಓದಿ: ಹೆಮ್ಮಾಡಿ ಜನತೆಯ ನಿದ್ದೆಗೆಡಿಸುತ್ತಿರುವ ಬಹುಮಹಡಿ ಕಟ್ಟಡ!
ಇಂದು ಪಂಚಾಯಿತಿ ಎದುರು ಪ್ರತಿಭಟನೆ:
ಗುರುವಾರ ಸ್ಥಳ ಪರೀಶೀಲನೆ ನಡೆಸಿದ ಅಧಿಕಾರಿಗಳು ಕಟ್ಟಡ ಮಾಲೀಕರನ್ನು ಕರೆಸಿ ಅವರ ಬಳಿ ಚರ್ಚಿಸದೇ ತರಾತುರಿಯಲ್ಲಿ ವಾಪಾಸಾದ ಬಗ್ಗೆ ವಿರೋಧ ವ್ಯಕ್ತಪಡಿಸಿದ ಸ್ಥಳೀಯರು, ಕಟ್ಟಡ ಮಾಲೀಕರ ಬಗ್ಗೆ ಅಧಿಕಾರಿಗಳು ತಾಳುತ್ತಿರುವ ಮೃದುಧೋರಣೆಯನ್ನು ಖಂಡಿಸಿ ಶುಕ್ರವಾರ ಬೆಳಿಗ್ಗೆ ಹೆಮ್ಮಾಡಿ ಗ್ರಾಮಪಂಚಾಯಿತಿ ಕಟ್ಟಡದ ಮುಂಭಾಗ ಪ್ರತಿಭಟನೆ ನಡೆಸಲು ಸಜ್ಜಾಗಿದ್ದಾರೆ.
ಜಿಲ್ಲಾಡಳಿತ ಮಧ್ಯ ಪ್ರವೇಶದ ಅಗತ್ಯವಿದೆ – – ಶಶಿಧರ ಹೆಮ್ಮಾಡಿ
ಇಂತಹ ಬಹುಮಹಡಿ ಕಟ್ಟಡಕ್ಕೆ ಮುಖ್ಯವಾಗಿ ಬೇಕಾಗಿರುವುದೇ ತ್ಯಾಜ್ಯ ನೀರಿನ ವಿಲೇವಾರಿ ವ್ಯವಸ್ಥೆ. ಹೆಮ್ಮಾಡಿಯಲ್ಲಿ ಈ ಕಟ್ಟಡಕ್ಕೆ ಬೇಕಾದ ತ್ಯಾಜ್ಯ ನೀರಿನ ವಿಲೇವಾರಿಯನ್ನು ಪಂಚಾಯತ್ ಮಾಡಿಕೊಡುವುದು ಇಂದಿನ ಸ್ಥಿತಿಗತಿಯಲ್ಲಿ ಅಸಾಧ್ಯ. ಈ ಕಟ್ಟಡದಿಂದ ಗಬ್ಬುನಾತದ ನೀರು ಹರಿದು ಜನರ ಆರೋಗ್ಯ ಕೆಟ್ಟರೆ ಯಾರು ಹೊಣೆ? ಲಕ್ಷಗಟ್ಟಲೆ ಕೊಟ್ಟು ಫ್ಲ್ಯಾಟ್ ಖರೀದಿ ಮಾಡಿದ ಜನರರಿಗೂ ಇದು ದೊಡ್ಡ ಹೊಡೆತ. ಇದೆಲ್ಲವೂ ಆಗಿದ್ದು ಲಂಚಾವತಾರದಲ್ಲಿ. ಈ ಬಗ್ಗೆ ಪ್ರಕಟಿಸಿದ ವರದಿ ಆಡಳಿತ ಕಣ್ಣು ತೆರೆಸಿದೆ. ಜಿಲ್ಲಾಡಳಿತ ನೇರವಾಗಿ ಮಧ್ಯಪ್ರವೇಶಿಸಬೇಕಾದ ಅಗತ್ಯವಿದೆ ಎಂದು ಸ್ಥಳೀಯ ನಿವಾಸಿ ಪತ್ರಕರ್ತರಾದ ಶಶಿಧರ ಹೆಮ್ಮಾಡಿ ಆಗ್ರಹಿಸಿದ್ದಾರೆ
ಮೂರ್ನಾಲ್ಕು ವರ್ಷಗಳ ಮನವಿಗೆ ಸ್ಪಂದನೆ ಶೂನ್ಯ – ಸಂತೋಷ ಹೆಮ್ಮಾಡಿ
ಕಳೆದ ಮೂರ್ನಾಲ್ಕು ವರ್ಷಗಳಿಂದ ಇದೇ ಪರಿಸ್ಥಿತಿಯನ್ನು ಎದುರಿಸುತ್ತಿದ್ದೇವೆ. ಪಂಚಾಯಿತಿ ಎದುರು ಪ್ರತಿಭಟನೆ ನಡೆಸಿ ಮನವಿ ಕೊಟ್ಟರೂ ಇದುವರೆಗೂ ನಮಗೆ ಸ್ಪಂದನೆ ಸಿಕ್ಕಿಲ್ಲ. ಉಳ್ಳವರಿಗೊಂದು, ಬಡವರಿಗೊಂದು ಕಾನೂನು ಎಂಬಂತಾಗಿದೆ. ಮತ್ತೆ ತ್ಯಾಜ್ಯ ನೀರು ಬಿಟ್ಟರೆ ಆ ನೀರನ್ನು ಸಂಗ್ರಹಿಸಿ ಪಂಚಾಯಿತಿಗೆ ಕೊಂಡೊಯ್ಯುತ್ತೇವೆ. ಆಮೇಲಾದರೂ ನಮ್ಮ ಸಂಕಷ್ಟ ಏನು ಎನ್ನುವುದು ಅವರ ಅರಿವಿಗೆ ಬರಬಹುದು ಎನ್ನುತ್ತಾರೆ ಸ್ಥಳೀಯ ನಿವಾಸಿ ಸಂತೋಷ ಹೆಮ್ಮಾಡಿ