ಬಂಟ್ವಾಳ ತಾಲ್ಲೂಕು ಪಂಚಾಯತ್ ಲೆಟರ್ಹೆಡ್ ದುರುಪಯೋಗ: ಮಾಜಿ ಸದಸ್ಯ ಪ್ರಭಾಕರ್ ಪ್ರಭು ವಿರುದ್ಧ ಪ್ರಕರಣ
ಬಂಟ್ವಾಳ: ತಾಲೂಕು ಪಂಚಾಯತ್ನ ಅಧಿಕೃತ ಲೆಟರ್ಹೆಡ್ ಅನ್ನು ಅನಧಿಕೃತವಾಗಿ ಬಳಸಿದ ಆರೋಪದ ಹಿನ್ನೆಲೆಯಲ್ಲಿ ಮಾಜಿ ಸದಸ್ಯ ಪ್ರಭಾಕರ್ ಪ್ರಭು ವಿರುದ್ಧ ಬಂಟ್ವಾಳ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ತಾಲೂಕು ಪಂಚಾಯತ್ ಬಂಟ್ವಾಳದ ಕಾರ್ಯನಿರ್ವಾಹಣಾಧಿಕಾರಿ ಸಚಿನ್ ಕುಮಾರ್ (45) ಅವರು ನೀಡಿದ ದೂರಿನ ಪ್ರಕಾರ, ಬಂಟ್ವಾಳ ತಾಲೂಕು ಪಂಚಾಯತ್ ಎಂಬ ಶೀರ್ಷಿಕೆಯೊಂದಿಗೆ ಅಧಿಕೃತ ರೀತಿಯಲ್ಲಿ ತೋರಿಸುವ ಪತ್ರವನ್ನು ಮಾಜಿ ಸದಸ್ಯ ಪ್ರಭಾಕರ್ ಪ್ರಭು ಅವರು ಅಂಕಿತಗೊಳಿಸಿ, ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಣಾಧಿಕಾರಿಗಳ ವಾಟ್ಸಾಪ್ಗೆ ಕಳುಹಿಸಿದ್ದಾರೆ ಎಂಬುದು ಪತ್ತೆಯಾಗಿದೆ.
ದೂರುದಾರರು ಹೇಳುವಂತೆ, ಆರೋಪಿತರು ಅಧಿಕಾರವಿಲ್ಲದವರಾಗಿದ್ದರೂ, ತಾಲ್ಲೂಕು ಪಂಚಾಯತ್ ಅಧಿಕೃತ ಲೆಟರ್ಹೆಡ್ನ್ನು ಅನಧಿಕೃತವಾಗಿ ಬಳಸಿ, ಸುಳ್ಳು ಮಾಹಿತಿಯೊಂದಿಗೆ ಗ್ರಾಮ ಪಂಚಾಯತ್ ಸಿಬ್ಬಂದಿಗಳ ಮೇಲೆ ಒತ್ತಡ ಹೇರುವ ಪ್ರಯತ್ನ ಮಾಡಿದ್ದಾರೆ. ಈ ಮೂಲಕ ಸಾರ್ವಜನಿಕರನ್ನು ದಾರಿ ತಪ್ಪಿಸುವುದು ಹಾಗೂ ಸರ್ಕಾರಿ ಇಲಾಖೆಗಳ ನಡುವೆ ಗೊಂದಲ ಉಂಟುಮಾಡುವ ಉದ್ದೇಶದಿಂದ ಕಾನೂನುಬಾಹಿರವಾಗಿ ಅಧಿಕೃತ ದಾಖಲೆ ರೂಪ ತಾಳುವ ಪತ್ರ ರಚಿಸಿದ್ದಾರೆ ಎಂಬ ಆರೋಪವಿದೆ.
ಈ ಹಿನ್ನೆಲೆಯಲ್ಲಿ ಬಂಟ್ವಾಳ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಅಪರಾಧ ಸಂಖ್ಯೆ 147/2025 ಅಡಿ ಭಾರತೀಯ ದಂಡ ಸಂಹಿತೆಯ (BNS) ಕಲಂ 319(2) ಮತ್ತು 336(2) ಅನ್ವಯ ಪ್ರಕರಣ ದಾಖಲಿಸಿ ತನಿಖೆ ಆರಂಭಿಸಲಾಗಿದೆ.
ತನಿಖೆ ಬಂಟ್ವಾಳ ಗ್ರಾಮಾಂತರ ಠಾಣೆಯ ಪೊಲೀಸರು ಮುಂದುವರೆಸುತ್ತಿದ್ದಾರೆ.