ಬಜಪೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಜಾನುವಾರು ಕಳ್ಳತನ: ಇಬ್ಬರು ಬಂಧನ, ₹8.42 ಲಕ್ಷ ಮೌಲ್ಯದ ಸೊತ್ತು ವಶ
ಮಂಗಳೂರು: ಬಜಪೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಜಾನುವಾರುಗಳನ್ನು ಕಳ್ಳತನ ಮಾಡಿ ಅಕ್ರಮವಾಗಿ ಸಾಗಾಟ ಮಾಡುತ್ತಿದ್ದ ಪ್ರಕರಣವನ್ನು ಪೊಲೀಸರು ಪತ್ತೆಹಚ್ಚಿ, ಒಟ್ಟು ₹8 ಲಕ್ಷ 42 ಸಾವಿರ ಮೌಲ್ಯದ ಸೊತ್ತುಗಳನ್ನು ವಶಪಡಿಸಿಕೊಂಡಿದ್ದಾರೆ.
ದಿನಾಂಕ 18-03-2026 ರಂದು ಬೆಳಿಗ್ಗೆ 4:45 ಗಂಟೆ ಸುಮಾರಿಗೆ ಮಂಗಳೂರು ತಾಲೂಕು ಬಡಗ ಎಡಪದವು ಗ್ರಾಮದ ಸಸ್ತಾವು ಪ್ರದೇಶದಲ್ಲಿ ಬಾತ್ಮಿದಾರರಿಂದ ಬಂದ ಖಚಿತ ಮಾಹಿತಿಯ ಮೇರೆಗೆ, ಫಾರ್ಚೂನರ್ ಕಾರು (ನಂ. DL 10 CE 6227) ಯಲ್ಲಿ ದನಗಳ ಕಾಲುಗಳನ್ನು ಕಟ್ಟಿ ಹಿಂಸಾತ್ಮಕವಾಗಿ ತುಂಬಿಕೊಂಡು ಮಾರಾಟಕ್ಕಾಗಿ ಸಾಗಾಟ ಮಾಡಲಾಗುತ್ತಿದೆ ಎಂಬುದಾಗಿ ತಿಳಿದುಬಂದಿತು.
ಈ ಮಾಹಿತಿ ಆಧರಿಸಿ ಎ.ಸಿ.ಪಿ ಶ್ರೀಕಾಂತ್ ಹಾಗೂ ಪಿ.ಐ ಬಾಲಕೃಷ್ಣ ಅವರ ಮಾರ್ಗದರ್ಶನದಲ್ಲಿ ಬಜಪೆ ಠಾಣೆಯ ಪಿ.ಎಸ್.ಐ ಶ್ರೀಮತಿ ಲತಾ ಮತ್ತು ಸಿಬ್ಬಂದಿಗಳಾದ ರಾಜೇಶ್, ಚಿದಾನಂದ, ಪ್ರಕಾಶ್ ಅವರು ದಾಳಿ ನಡೆಸಿದರು. ದಾಳಿ ವೇಳೆ 4 ದನಗಳನ್ನು ತುಂಬಿಕೊಂಡಿದ್ದ ಫಾರ್ಚೂನರ್ ಕಾರು, ಒಂದು ತಲವಾರ್ ಹಾಗೂ ಒಂದು ಕಬ್ಬಿಣದ ರಾಡ್ ಅನ್ನು ವಶಪಡಿಸಿಕೊಳ್ಳಲಾಗಿದೆ.
ದಾಳಿಯ ವೇಳೆ ಆರೋಪಿಗಳು ಕಾರು ಹಾಗೂ ಸೊತ್ತುಗಳನ್ನು ಬಿಟ್ಟು ಪರಾರಿಯಾಗಿದ್ದು, ಪ್ರಕರಣ ಸಂಬಂಧ ಒಟ್ಟು ₹8.42 ಲಕ್ಷ ಮೌಲ್ಯದ ವಸ್ತುಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.
ಈ ಕುರಿತು ಬಜಪೆ ಪೊಲೀಸ್ ಠಾಣೆಯಲ್ಲಿ ಮೊ.ನಂ 63/2026 ಅಡಿಯಲ್ಲಿ ಪ್ರಕರಣ ದಾಖಲಾಗಿದ್ದು, ಭಾರತೀಯ ನ್ಯಾಯ ಸಂಹಿತೆ (BNS) ಕಲಂ 303(2), ಕರ್ನಾಟಕ ಜಾನುವಾರು ಹತ್ಯೆ ಪ್ರತಿಬಂಧಕ ಕಾಯ್ದೆ ಕಲಂ 4, 5, 12, ಪ್ರಾಣಿ ಹಿಂಸೆ ತಡೆ ಕಾಯ್ದೆ 1960ರ ಕಲಂ 11(A), 11(D), ಮೋಟಾರು ವಾಹನ ಕಾಯ್ದೆ 1988ರ ಕಲಂ 192(A) ಹಾಗೂ ಆಯುಧ ಕಾಯ್ದೆ 1959ರ ಕಲಂ 4, 25(1B) ಅಡಿಯಲ್ಲಿ ತನಿಖೆ ಮುಂದುವರಿದಿದೆ.
ಮುಂದುವರಿದ ತನಿಖೆಯಲ್ಲಿ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿತರಾದ ನಿಸಾರ್ ಅಲಿಯಾಸ್ ನಿಸಾರುದ್ದೀನ್ (28) ಹಾಗೂ ಮೊಹಮ್ಮದ್ ಜಮಾಲುದ್ದೀನ್ ಜಮಾಲ್ (24) ಅವರನ್ನು ದಿನಾಂಕ 19-03-2026 ರಂದು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ.
ಇನ್ನೂ ತಲೆಮರೆಸಿಕೊಂಡಿರುವ ಆರೋಪಿತರ ಪತ್ತೆಗೆ ವಿಶೇಷ ತಂಡವನ್ನು ರಚಿಸಲಾಗಿದ್ದು, ಶೋಧ ಕಾರ್ಯ ಮುಂದುವರಿದಿದೆ.
