ಬಿಜೆಪಿ ನಾಯಕರೇ ಮುಗ್ಧ ಜನರ ದಾರಿ ತಪ್ಪಿಸುವ ಕೆಲಸ ನಿಲ್ಲಿಸಿ – ವೆರೋನಿಕಾ ಕರ್ನೆಲಿಯೋ
ಬಿಜೆಪಿ ಪಕ್ಷದ ವತಿಯಿಂದ ನಾಳೆ 23 ಸೋಮವಾರದಂದು ಎಲ್ಲಾ ಗ್ರಾಮಗಳಲ್ಲಿ ನಡೆಯುವ ಪ್ರತಿಭಟನೆ ಬಗ್ಗೆ ಪ್ರತಿಕ್ರಿಯಿಸಿ ಇದು ಮುಗ್ಧ ಜನರನ್ನು ದಾರಿ ತಪ್ಪಿಸುವ ಕೆಲಸ ಬಿಜೆಪಿ ನಾಯಕರು ಮಾಡುತ್ತಿದ್ದಾರೆ ಎಂದು ಕೆಪಿಸಿಸಿ ವಕ್ತಾರರದ ವೆರೋನಿಕಾ ಕರ್ನೆಲಿಯೋ ರವರು ತಿಳಿಸಿದ್ದಾರೆ.
ಪ್ರತಿಭಟನೆಗೆ ಆಯ್ಕೆ ಮಾಡಿದ ವಿಚಾರಗಳಲ್ಲಿ 9/ 11 ಸಮಸ್ಯೆ ಹಿಂದಿನ ಬಿಜೆಪಿ ಸರಕಾರದ ಅವಧಿಯಿಂದಲೇ ಇದೆ. ಬಿಜೆಪಿ ಸರಕಾರ ಇದ್ದಾಗ ಯಾಕೆ ಇದಕ್ಕೆ ಪರಿಹಾರ ಕೊಡಲಿಲ್ಲ? ಕಾರ್ಕಳದ ಶಾಸಕರು, ಅಂದಿನ ಸಚಿವರು ಅಧಿಕಾರದಲ್ಲಿದ್ದಾಗ ಒಂದು ತಿಂಗಳ ಒಳಗೆ ಪರಿಹಾರ ನೀಡುತ್ತೇನೆಂದು ತಿಳಿಸಿದ್ದರು. ಆದರೆ ಅವರ ಸರಕಾರ ಕೊನೆಗೊಳ್ಳುವವರೆಗೂ ಯಾಕೆ ಪರಿಹಾರ ನೀಡಿಲ್ಲ?
ಅಕ್ರಮ ಸಕ್ರಮ ಅರ್ಜಿ ತಿರಸ್ಕಾರ ಮಾಡುವ ಅಧಿಕಾರವನ್ನು ಜಿಲ್ಲಾಧಿಕಾರಿಗಳಿಗೆ ನೀಡಿದ್ದು ಹಿಂದಿನ ಬಿಜೆಪಿ ಸರಕಾರ. ಅರ್ಜಿ ನಮೂನೆ 50/ 53/ 57 ರ ಅನರ್ಹ ಅರ್ಜಿಗಳನ್ನು ಕೂಡಲೇ ತಿರಸ್ಕರಿಸಿ ಸದ್ರಿ ಜಮೀನನ್ನು ಸರಕಾರದ ಸ್ವಾಧೀನಕ್ಕೆ ಪಡೆದುಕೊಳ್ಳಲು ಇವರೇ ಆದೇಶ ಕೊಟ್ಟವರಲ್ಲವೇ? ಹಾಗಾದರೆ ಕಾಂಗ್ರೆಸ್ ಸರಕಾರವನ್ನು ದೂರವ ಅರ್ಥ ಏನು?
ಆಶ್ರಯ ಮನೆಗಳ ಬಗ್ಗೆ ಈ ಹಿಂದೆ ಕಾಂಗ್ರೆಸ್ ಸರ್ಕಾರ ಅಧಿಕಾರದಲ್ಲಿದ್ದಾಗ, ಪ್ರತಿ ಪಂಚಾಯತಿಗೆ ಪ್ರತಿ ವರ್ಷ ಕನಿಷ್ಠ 20 ಮನೆಗಳಿಂದ 100 ಮನೆಗಳ ಗುರಿ ಕಾರ್ಯಗತಗೊಂಡಿದೆ. ಆದರೆ ಈ ಹಿಂದಿನ ಅವಧಿಯಲ್ಲಿ ಬಿಜೆಪಿ ಸರಕಾರ ಅಧಿಕಾರದಲ್ಲಿದ್ದಾಗ 3/4 ವರ್ಷ ಒಂದೇ ಒಂದು ಮನೆ ಮಂಜೂರಾತಿ ಮಾಡದೆ ಬಡವರಿಗೆ ಅನ್ಯಾಯ ಮಾಡಿದವರು ಇವರಲ್ಲವೇ? ಈಗ ಕಾಂಗ್ರೆಸ್ ಸರಕಾರವನ್ನು ಇವರು ದೂರುವುದು ಯಾಕೆ? ಹೀಗೆ ಇನ್ನೊಬ್ಬರನ್ನು ಬೆಟ್ಟು ಮಾಡಿ ತೋರಿಸುವ ಮುನ್ನ ತನ್ನ ಭುಜವನ್ನು ಮುಟ್ಟಿ ನೋಡುವುದು ಒಳಿತು .
ಅನರ್ಹ ಪಿಂಚಣಿದಾರ ರಿಗೆ ಪಾವತಿಯಾದ ಮೊತ್ತವನ್ನು ಸರಕಾರಕ್ಕೆ ಅದ್ಯಾರ್ಪಿಸಲು ಸೂಕ್ತ ಕ್ರಮಕ್ಕೆ ಬಿಜೆಪಿ ಸರಕಾರವೇ 2020 ರಲ್ಲಿ ಆದೇಶ ನೀಡಿದೆಯಲ್ಲ? ಅನರ್ಹ ಅಂದರೆ ಆದಾಯ ತೆರಿಗೆ ಪಾವತಿದಾರರು, ಎಪಿಎಲ್ ಕಾಡುದಾರರು ಹಾಗೂ ಪ್ರಾಯವನ್ನು ತಪ್ಪಾಗಿ ಬದಲಿಸಿ ಪಿಂಚಣಿ ಪಡೆಯುತ್ತಿದ್ದವರನ್ನು ಅನರ್ಹಗೊಳಿಸುವುದು ಸರಿಯಾದ ಕ್ರಮವಲ್ಲವೇ? ಇದರಿಂದ ಹೆಚ್ಚಿನ ಬಡವರಿಗೆ ಪಿಂಚಣಿ ಪಡೆಯಲು ಅವಕಾಶ ಮಾಡಿಕೊಟ್ಟಂತೆ ಆಗುತ್ತದೆಯಲ್ಲ? ಬಿಜೆಪಿಯವರೇ ಆದೇಶ ನೀಡಿ ಈಗ ಕಾಂಗ್ರೆಸ್ಸಿಗರ ಮೇಲೆ ಗೂಬೆ ಕೂರಿಸಿ ಪ್ರತಿಭಟನೆ ಮಾಡುತ್ತಿರುವುದು ನಿಜವಾಗಿಯೂ ಮುಗ್ಧ ಜನರನ್ನು ದಾರಿ ತಪ್ಪಿಸುವ ಪ್ರಯತ್ನ . ಪಿಂಚಣಿ ಬರುತ್ತಿರುವ ಫಲಾನುಭವಿಗಳಿಗೆ ಸಂಪರ್ಕಿಸಿ ನಿಮ್ಮ ಪಿಂಚಣಿ ರದ್ದಾಗುತ್ತದೆ ಪ್ರತಿಭಟನೆಗೆ ಬನ್ನಿ ಎಂದು ತಪ್ಪು ಸಂದೇಶ ನೀಡುವುದು ಎಷ್ಟು ಸರಿ?
ವಿದ್ಯುತ್ ದರ ಏರಿಕೆಯ ಬಗ್ಗೆ ಬಿಜೆಪಿ ಪ್ರತಿಭಟನೆ ಮಾಡುತ್ತಿರುವುದು ನಿಜವಾಗಿಯೂ ಹಾಸ್ಯಸ್ಪದ. ಅಂದಿನ ಇಂಧನ ಸಚಿವರಾದ ಸುನಿಲ್ ಕುಮಾರ್ ರವರ ಹೇಳಿಕೆಯಂತೆ ಧರ ನಿಗದಿಪಡಿಸುವುದು ರಾಜ್ಯ ಸರಕಾರವಲ್ಲ. ಅದು ಕೆ ಇ ಆರ್ಸಿ ಎಂಬುದಾಗಿ ಗಂಟಾಘೋಶವಾಗಿ ಇವರ ಸರಕಾರ ಅಧಿಕಾರದಲ್ಲಿದ್ದಾಗ ಮಾತನಾಡಿದ್ದಾರಲ್ಲ? ಹಾಗಾದರೆ ಇವತ್ತು ಕಾಂಗ್ರೆಸ್ ಅಧಿಕಾರಕ್ಕೆ ಬಂದ ತಕ್ಷಣ ಇದು ಬದಲಾಯಿತೇ?. ಪ್ರತಿ ಬಡವರ ಮನೆಗೆ ತಿಂಗಳಿಗೆ 200 ಯೂನಿಟ್ ಉಚಿತ ವಿದ್ಯುತ್ ನೀಡುವುದರ ಮೂಲಕ ಜನರ ಕಷ್ಟಗಳಿಗೆ ಕಾಂಗ್ರೆಸ್ ಸರಕಾರ ಸ್ಪಂದಿಸಿದೆ. ಪ್ರತಿ ಕುಟುಂಬದ ಯಜಮಾನಿ ಮಹಿಳೆಗೆ ಪ್ರತಿ ತಿಂಗಳು 2000ವನ್ನು ನೀಡುವುದರ ಮೂಲಕ ಪ್ರತಿ ಬಡ ಕುಟುಂಬದ ಆಧಾರ ಸ್ತಂಭವಾಗಿ ಕಾಂಗ್ರೆಸ್ ಸರಕಾರ ಆಡಳಿತ ನಡೆಸುತ್ತಿದೆ.
ಪ್ರತಿ ತಿಂಗಳಿಗೆ ನೀಡುವಂತ ಪಡಿತರದಲ್ಲಿ ಈ ಹಿಂದೆ ಬಿಜೆಪಿ ಸರಕಾರ ಇರುವಾಗ ನೀಡುತ್ತಿದ್ದ 5 ಕೆಜಿಗೆ ಬದಲಾಗಿ ಈಗ 10 ಕೆಜಿ ಅಕ್ಕಿಯನ್ನು ಕೊಡುತ್ತಿರುವುದು ಬಡ ಕುಟುಂಬಗಳ ಹಸಿವನ್ನು ನೀಗಿಸಿದೆ .
ಅದೆಷ್ಟೋ ಮಹಿಳೆಯರು ಉಚಿತವಾಗಿ ಸರಕಾರಿ ಬಸ್ಸಿನಲ್ಲಿ ತಮ್ಮ ಕೆಲಸಗಳಿಗೆ, ಉದ್ಯೋಗಕ್ಕೆ, ಶಿಕ್ಷಣಕ್ಕೆ, ಪ್ರತಿದಿನ ಉಚಿತವಾಗಿ ಪ್ರಯಾಣಿಸುತ್ತಿರುವುದು ಎಲ್ಲಾ ಮಹಿಳಾ ವರ್ಗಕ್ಕೆ ಇದೊಂದು ದೊಡ್ಡ ಶಕ್ತಿಯಾಗಿ ಪರಿಣಮಿಸಿದೆ.
ನಿರುದ್ಯೋಗದ ಸಮಸ್ಯೆಯಿಂದ ಬಳಲುತ್ತಿರುವ ಯುವ ಜನತೆಗೆ ಕಾಂಗ್ರೆಸ್ ಸರಕಾರ ನೀಡುವ ಯುವ ನಿಧಿ ಅವರಲ್ಲಿ ಆತ್ಮಸ್ಥೈರ್ಯ ತುಂಬಿದೆ. ಹಾಗೂ ತಾತ್ಕಾಲಿಕವಾಗಿ ಅವರಿಗೆ ಆಧಾರವಾಗಿದೆ.
ರಾಜ್ಯದ ಕಾಂಗ್ರೆಸ್ ಸರಕಾರ ಜನಪರವಾಗಿ, ಜನರಿಗೋಸ್ಕರ ಕೆಲಸ ಮಾಡುತ್ತಿದೆ. ಇದು ನಿಜವಾದ ಮಾನವ ಅಭಿವೃದ್ಧಿ. ಈ ಬಗ್ಗೆ ರಾಜ್ಯದ ಜನತೆ ಮುಂದಿನ ದಿನಗಳಲ್ಲಿ ಬಿಜೆಪಿ ಪಕ್ಷಕ್ಕೆ ಉತ್ತರವನ್ನು ನೀಡಲಿದೆ ಎಂದು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.