ಬೆಳ್ತಂಗಡಿ – ತಾಯಿ ಮನೆಯಲ್ಲಿ ನೇಣು ಬಿಗಿದು ಆತ್ಮಹತ್ಯೆಗೆ ಶರಣಾದ ಶಿಕ್ಷಕಿ
ಬೆಳ್ತಂಗಡಿ: ಶಿಕ್ಷಕಿ, ವಿವಾಹಿತೆ ಮಹಿಳೆಯೋರ್ವರು ತನ್ನ ತಾಯಿ ಮನೆಯಲ್ಲಿ ನೇಣುಬಿಗಿದು ಆತ್ಮಹತ್ಯೆ ಮಾಡಿಕೊಂಡ ಘಟನೆ ಜುಲೈ 12ರಂದು ಕೊಯ್ಯೂರಿನಲ್ಲಿ ನಡೆದಿದೆ.
ಬೆಳ್ತಂಗಡಿ ತಾಲೂಕಿನ ಕೊಯ್ಯೂರು ಗ್ರಾಮದ ದರ್ಖಾಸ್ ನಿವಾಸಿ ದೇವಪ್ಪ ಬಂಗೇರ ಅವರ ಪುತ್ರಿ ರಮ್ಯಾ (33) ಎಂದು ಗುರುತಿಸಲಾಗಿದೆ.
ಎರಡು ವರ್ಷಗಳ ಹಿಂದೆ ಕೊಯ್ಯೂರು ಗ್ರಾಮದ ಪಾದಡ್ಕ ನಿವಾಸಿ ಲತೀಶ್ ಗೆ ಮದುವೆ ಮಾಡಿಕೊಡಲಾಗಿತ್ತು. ರಮ್ಯಾ ಬೆಳ್ತಂಗಡಿ ಮುಗುಳಿ ಶಾಲೆಯಲ್ಲಿ ಶಿಕ್ಷಕಿಯಾಗಿ ಕರ್ತವ್ಯ ನಿರ್ವಹಿಸುತ್ತಿದ್ದರು. ರಮ್ಯಗೆ ಅನಾರೋಗ್ಯ ಕಾಡುತ್ತಿದ್ದು, ತಾಯಿ ಮನೆಗೆ ಬಂದಿದ್ದ ರಮ್ಯಾ ನೊಂದು ಆತ್ಮಹತ್ಯೆ ಮಾಡಿಕೊಂಡಿರುವ ಸಾಧ್ಯತೆ ಇದೆ ಎನ್ನಲಾಗಿದೆ. ಬೆಳ್ತಂಗಡಿ ಠಾಣೆಯಲ್ಲಿ ಅತ್ಮಹತ್ಯೆ ಪ್ರಕರಣ ದಾಖಲಾಗಿದೆ.
ಮೃತ ರಮ್ಯಾ ಅವರ ದೊಡ್ಡಪ್ಪನ ಮಗನ ವಿವಾಹ ಕಾರ್ಯಕ್ರಮ ಕಳೆದೆರಡು ದಿನಗಳ ಹಿಂದೆ ನಡೆದಿತ್ತು. ಮನೆಯಲ್ಲಿ ಎಲ್ಲರೂ ವಿವಾಹದ ಸಂಭ್ರಮದಲ್ಲಿದ್ದರು. ಜುಲೈ 13 ರಂದು ಆರತಕ್ಷತೆ ಕಾರ್ಯಕ್ರಮ ಹಮ್ಮಿಕೊಂಡಿದ್ದರು. ಈ ನಡುವೆಯೇ ರಮ್ಯಾ ಆತ್ಯಹತ್ಯೆ ಗೈದಿರುವುದು ಮನೆಮಂದಿಗೆ ಬರಸಿಡಿಲು ಬಡಿದಂತಾಗಿದೆ.