ಬ್ರಹ್ಮಾವರದಲ್ಲಿ ಭೂಮಿಕಾ ಹಾರಾಡಿ ನಾಟಕೋತ್ಸವ ಬಣ್ಣ-12 ಸಂಪನ್ನ
- ನಾಟಕಗಳಿoದ ನೈತಿಕ ಸಮಾಜದ ಸೃಷ್ಟಿ ಸಾಧ್ಯ : ಡಾ.ತಲ್ಲೂರು
ಉಡುಪಿ: ನಾಟಕಗಳು ಕೇವಲ ಮನೋರಂಜನೆಯ ಕಾರ್ಯಕ್ರಮಗಳಲ್ಲ. ಅವುಗಳು ಸಮಾಜದ ಅಂಕುಡೊoಕುಗಳನ್ನು ಜನರ ಮುಂದಿಟ್ಟು, ಸಮಾಜವನ್ನು ಜಾಗೃತಿಗೊಳಿಸುತ್ತವೆ. ನಾಟಕಗಳು ನೀಡುವ ಉತ್ತಮ ಸಂದೇಶಗಳಿoದ ನೈತಿಕ ಸಮಾಜದ ಸೃಷ್ಟಿ ಸಾಧ್ಯ ಎಂದು ರಂಗಭೂಮಿ ಉಡುಪಿ ಅಧ್ಯಕ್ಷ ಡಾ.ತಲ್ಲೂರು ಶಿವರಾಮ ಶೆಟ್ಟಿ ಹೇಳಿದರು.
ಅವರು ಸೋಮವಾರ ಬ್ರಹ್ಮಾವರದ ಎಸ್ಎಂಎಸ್ ಕಾಲೇಜಿನ ಎಸ್.ಎಂ.ಎಸ್ ಮಕ್ಕಳ ಮಂಟಪದಲ್ಲಿ ಭೂಮಿಕಾ ಹಾರಾಡಿ ರಂಗಭೂಮಿ ಸಂಸ್ಥೆ ವತಿಯಿಂದ ಏ.3ರಿಂದ 6ರವರೆಗೆ ಹಮ್ಮಿಕೊಂಡ ನಾಟಕೋತ್ಸವ ‘ಬಣ್ಣ -12’ ದ ಸಮಾಪನ ಸಭಾ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ರಂಗಭೂಮಿಯ ನಿರಂತರ ಬೆಳವಣಿಗೆಗೆ ಪ್ರೇಕ್ಷಕರ ಪ್ರೋತ್ಸಾಹ ಅತ್ಯಗತ್ಯವಾಗಿದೆ. ಈ ನಿಟ್ಟಿನಲ್ಲಿ ಭೂಮಿಕಾ ಹಾರಾಡಿ ಸಂಸ್ಥೆಯ ಸಂಚಾಲಕ ರಾಮ್ ಶೆಟ್ಟಿ ಹಾಗೂ ಅವರ ತಂಡದ ಶ್ರಮದ ಫಲವಾಗಿ ಈ ನಾಟಕೋತ್ಸವ 12ನೇ ವರ್ಷವನ್ನು ಯಶಸ್ವಿಯಾಗಿ ಪೂರ್ಣಗೊಳಿಸಿದೆ.
ಸಾಮಾಜಿಕ ಪಿಡುಗಗಳ ಬಗ್ಗೆ ಜನರನ್ನು ಎಚ್ಚರಿಸುವ ಸಂದೇಶವನ್ನು ಹೊತ್ತ ನಾಟಕಗಳ ಪ್ರದರ್ಶನ ನಡೆಯಬೇಕು. ಇಂದಿನ ಯುವ ಪೀಳಿಗೆಗೆ ನೈತಿಕ ಮೌಲ್ಯಗಳನ್ನು ಬಿತ್ತುವ ಈ ಕಾರ್ಯ ನಿರಂತರವಾಗಿ ರಂಗಭೂಮಿಯಿoದ ನಡೆಯಲಿ ಎಂದು ಅವರು ಹಾರೈಸಿದರು.
ಕಾರ್ಯಕ್ರಮದಲ್ಲಿ ನಿಯೋಜಿತ ರೋಟರಿ ಜಿಲ್ಲಾ ಗವರ್ನರ್ ಬಿ.ಎಂ.ಭಟ್, ಭೂಮಿಕಾ ಹಾರಾಡಿ ಸಂಚಾಲಕ ಬಿ.ಎಸ್. ರಾಮ್ ಶೆಟ್ಟಿ ಹಾರಾಡಿ, ಅಧ್ಯಕ್ಷ ಆರ್.ಎಂ. ಸಾಮಗ, ಗೌರವಾಧ್ಯಕ್ಷ ರವಿ ಎಸ್. ಪೂಜಾರಿ, ಕೋಶಾಧಿಕಾರಿ ಶ್ರೀಹರಿ ಭಟ್ ಮೊದಲಾದವರು ಉಪಸ್ಥಿತರಿದ್ದರು.
ಕಾರ್ಯದರ್ಶಿ ಹರೀಶ್ ಕಿರಣ್ ತುಂಗ ಸ್ವಾಗತಿಸಿದರು. ಸಂಚಾಲಕ ಬಿ.ಎಸ್. ರಾಮ್ ಶೆಟ್ಟಿ ಹಾರಾಡಿ ವಂದಿಸಿದರು.
ಸಭಾ ಕಾರ್ಯಕ್ರಮದ ಬಳಿಕ ಭೂಮಿಕಾ ಹಾರಾಡಿ ತಂಡದಿoದ ‘ಸುಯೋಧನ ‘ ನಾಟಕ ಪ್ರದರ್ಶನಗೊಂಡಿತು.
