ಮಂಗಳೂರು| ಎಟಿಎಂ ಕಳವಿಗೆ ಯತ್ನ ಪ್ರಕರಣ: ಆರೋಪಿ ಸೆರೆ
ಉಳ್ಳಾಲ: ಕೋಟೆಕಾರು ಬೀರಿಯ ಎಟಿಎಂನಲ್ಲಿ ಕಳವಿಗೆ ಯತ್ನಿಸುತ್ತಿದ್ದ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ.
ಕೊಪ್ಪಳ ಕುಷ್ಟಗಿ ನಿವಾಸಿ ನಾಗಪ್ಪ ಕಿರಾಲಟ್ಟಿ (41) ಬಂಧಿತ ಆರೋಪಿ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ಆರೋಪಿಯು ಗುರುವಾರ ನಸುಕಿನ 2.42ರ ಸುಮಾರಿಗೆ ಬೀರಿಯ ಎಸ್ ಬಿಐ ಗೆ ಸೇರಿದ ಎಟಿಎಂ ಒಳಗೆ ನುಗ್ಗಿ ಕ್ಯಾಶ್ ಬಾಕ್ಸ್ ಅನ್ನು ತನ್ನಲ್ಲಿದ್ದ ಆಯುಧಗಳಿಂದ ಒಡೆದು ಹಾನಿಗೊಳಿಸಿದ್ದನು. ಈ ಸಂದರ್ಭ ದೆಹಲಿಯಲ್ಲಿರುವ ಎಟಿಎಂ ಉಸ್ತುವಾರಿ ನೋಡುವ ಸಂಸ್ಥೆಯ ಸಿಸ್ಟಮ್ ಗೆ ಸಂದೇಶ ರವಾನೆಯಾಗಿತ್ತು. ತಕ್ಷಣ ಅಲ್ಲಿನ ಸಿಬ್ಬಂದಿ ರಂಜಿತ್ ಎಂಬವರು ಸಿಸಿಟಿವಿ ಪರಿಶೀಲಿಸಿದ್ದು, ಎಟಿಎಮ್ ಒಳಗಡೆ ಆಗಂತುಕನೋರ್ವ ಕಳವಿಗೆ ಕೃತ್ಯ ಎಸಗುತ್ತಿರುವುದನ್ನು ಖಚಿತಪಡಿಸಿದ್ದಾರೆ.
ಈ ಬಗ್ಗೆ ರಂಜಿತ್ ಅವರು ಕೂಡಲೇ ಬೀರಿಯ ಎಟಿಎಮ್ ಉಸ್ತುವಾರಿ ನೋಡುತ್ತಿರುವ ದೀಪಕ್ ಅಮೀನ್ ಎಂಬವಿಗೆ ಮಾಹಿತಿ ನೀಡಿದ್ದು, ದೀಪಕ್ ಅವರು ಕೂಡಲೇ 112 ಗೆ ಕರೆ ಮಾಡಿ ಮಾಹಿತಿ ನೀಡಿದ್ದಾರೆ. ಅವರು ಉಳ್ಳಾಲ ಪೊಲೀಸರಿಗೆ ಮಾಹಿತಿ ನೀಡಿದ್ದು, ಪೊಲೀಸರು ತಕ್ಷಣ ದಾಳಿ ನಡೆಸಿ ಬೀರಿ ಎಟಿಎಮ್ ಒಳಗಡೆಯಿದ್ದ ಆರೋಪಿಯನ್ನು ಬಂಧಿಸಿದ್ದಾರೆ ಎಂದು ತಿಳಿದುಬಂದಿದೆ.