ಮಂಗಳೂರು: ಕಲ್ಲು–ಮರಳು ಗಣಿಗಾರಿಕೆ ಮೇಲ್ವಿಚಾರಣೆಗೆ ಕಂದಾಯ ಹಾಗೂ ಪೊಲೀಸ್ ಇಲಾಖೆಗೆ ನಿರ್ದೇಶನ
ಮಂಗಳೂರು: ಜಿಲ್ಲಾಧಿಕಾರಿಗಳ ಆದೇಶದ ಹಿನ್ನೆಲೆ, ಜಿಲ್ಲೆಯಲ್ಲಿ ಈಗಾಗಲೇ ನಡೆಯುತ್ತಿರುವ ಕಲ್ಲು ಮತ್ತು ಮರಳು ಗಣಿಗಾರಿಕೆಗೆ ಸಂಬಂಧಿಸಿದಂತೆ ನಿಗಾವಹಿಸಲು ಕಂದಾಯ ಇಲಾಖೆ ಹಾಗೂ ಪೊಲೀಸ್ ಇಲಾಖೆಗೆ ವಿಶೇಷ ಸೂಚನೆಗಳನ್ನು ನೀಡಲಾಗಿದೆ.
ಸರ್ಕಾರಕ್ಕೆ ಪಾವತಿಸಬೇಕಾದ ರಾಜಸ್ವವನ್ನು ಕಟ್ಟಿಕೊಂಡು ಪರವಾನಿಗೆ ಪಡೆದಿರುವ ಗಣಿಗಾರಿಕೆ ದಾರರು, ಸರ್ಕಾರ ನಿಗದಿಪಡಿಸಿದಕ್ಕಿಂತ ಕಡಿಮೆ ರಾಜಸ್ವ ಇದ್ದರೂ ಸಾರ್ವಜನಿಕರಿಂದ ಹಿಂದಿನಂತೆ ಹೆಚ್ಚು ಮೊತ್ತವನ್ನು ವಸೂಲಿ ಮಾಡಿ ಕಲ್ಲು–ಮರಳು ಸರಬರಾಜು ಮಾಡುತ್ತಿರುವುದು ಅಧಿಕಾರಿಗಳ ಗಮನಕ್ಕೆ ಬಂದಿದೆ. ಇದನ್ನು ತಡೆಗಟ್ಟಲು ವ್ಯಾಪಕ ಪರಿಶೀಲನಾ ಕ್ರಮ ಕೈಗೊಳ್ಳಲಾಗುತ್ತಿದೆ.
ಅಲ್ಲದೆ, ಕಲ್ಲು–ಮರಳು ಸಾಗಣೆ ಮಾಡುವ ವಾಹನಗಳಲ್ಲಿ ಓವರ್ಲೋಡಿಂಗ್ ನಡೆಯುತ್ತಿರುವ ಬಗ್ಗೆ ಬಂದಿರುವ ದೂರುಗಳನ್ನು ಪರಿಗಣಿಸಿ, ಪ್ರತಿದಿನವೂ ಮುಂಜಾನೆಯಿಂದ ತಡರಾತ್ರಿ ವರೆಗೆ ವಾಹನಗಳ ತಪಾಸಣೆ ನಡೆಸಲಾಗುತ್ತಿದೆ. ಪರವಾನಿಗೆಯಲ್ಲಿ ನಮೂದಿಸಿದಷ್ಟು ಟ್ರಿಪ್ಪುಗಳಿಗೆ ಮಾತ್ರ ವಾಹನ ಓಡಿಸುವಂತೆ ಪರವಾನಿಗೆದಾರರಿಗೆ ಸೂಚನೆ ನೀಡಲಾಗಿದೆ.
ಈ ಪರಿಶೀಲನಾ ಕಾರ್ಯದಲ್ಲಿ ಕಂದಾಯ ನಿರೀಕ್ಷಕರು, ಗ್ರಾಮ ಆಡಳಿತಾಧಿಕಾರಿಗಳು, ಉಪತಾಲೂಕ ತಹಶೀಲ್ದಾರರು, ಗ್ರಾಮ ಸಹಾಯಕರು ಮತ್ತು ಪೊಲೀಸ್ ಇಲಾಖೆಯ ಸಿಬ್ಬಂದಿಗಳು ಸಂಯುಕ್ತವಾಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ.
ದಿನಾಂಕ 14-11-2025 ರಂದು ಸಹಾಯಕ ಆಯುಕ್ತರವರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ ಎಂದು ತಿಳಿಸಲಾಗಿದೆ.
