Home Mangalorean News Kannada News ಮಂಗಳೂರು: ಪಣಂಬೂರು ಪೊಲೀಸರ ತ್ವರಿತ ಕಾರ್ಯದಿಂದ ಜೀವ ಉಳಿಸಿಕೊಂಡ ತಂದೆ-ಮಗಳು

ಮಂಗಳೂರು: ಪಣಂಬೂರು ಪೊಲೀಸರ ತ್ವರಿತ ಕಾರ್ಯದಿಂದ ಜೀವ ಉಳಿಸಿಕೊಂಡ ತಂದೆ-ಮಗಳು

Spread the love

ಮಂಗಳೂರು: ಪಣಂಬೂರು ಪೊಲೀಸರ ತ್ವರಿತ ಕಾರ್ಯದಿಂದ ಜೀವ ಉಳಿಸಿಕೊಂಡ ತಂದೆ-ಮಗಳು

ಮಂಗಳೂರು: ಹೆಂಡತಿಯ ಜೊತೆಗೆ ಉಂಟಾದ ಕುಟುಂಬ ಕಲಹದ ಹಿನ್ನೆಲೆಯಲ್ಲಿ ನಾಲ್ಕು ವರ್ಷದ ಹೆಣ್ಣು ಮಗುವಿನ ಜೊತೆಗೆ ಸಮುದ್ರಕ್ಕೆ ಹಾರಿ ಆತ್ಮಹತ್ಯೆಗೆ ಯತ್ನಿಸಿದ ಕಾವೂರಿನ ವ್ಯಕ್ತಿಯನ್ನು ಪಣಂಬೂರು ಪೊಲೀಸರ ತಕ್ಷಣದ ಕಾರ್ಯಚಟುವಟಿಕೆಯಿಂದ ರಕ್ಷಿಸಿದ ಘಟನೆ ಸೋಮವಾರ ರಾತ್ರಿ ನಡೆದಿದೆ.

ಕಾವೂರು ಶಾಂತಿನಗರ ನಿವಾಸಿ ರಾಜೇಶ್ ಅಲಿಯಾಸ್ ಸಂತು (35) ಎಂಬಾತ ತನ್ನ ಪತ್ನಿಯೊಂದಿಗೆ ನಡೆದ ಜಗಳದ ಬಳಿಕ ಮಗುವಿನ ಜೊತೆ ಸಮುದ್ರದತ್ತ ತೆರಳಿದ ವಿಡಿಯೋವನ್ನು ವಾಟ್ಸಾಪ್ ಗ್ರೂಪ್ಗಳಿಗೆ ಕಳುಹಿಸಿದ್ದಾನೆ. ವಿಡಿಯೋದಲ್ಲಿ ಸಮುದ್ರದ ನೀರಿನತ್ತ ನಡೆಯುತ್ತಾ “ನಾವು ಸಾಯೋಣ ಮಗಳೇ, ನಿನ್ನ ತಾಯಿ ಸರಿ ಇಲ್ಲ” ಎಂದು ಮಾತನಾಡುವ ಧ್ವನಿ ಮಾತ್ರ ಕೇಳಿಸಿತ್ತೆ ಹೊರತು, ಮುಖ ಕಾಣಿಸಲಿಲ್ಲ. ವಿಡಿಯೋ ಕೆಲವು ಕ್ಷಣಗಳಲ್ಲಿ ಸಾಮಾಜಿಕ ಜಾಲತಾಣಗಳಲ್ಲಿ ಹಬ್ಬಿ ಪಣಂಬೂರು ಪೊಲೀಸ್ ಠಾಣೆಗೆ ತಲುಪಿತು.

ಇನ್ಸ್ಪೆಕ್ಟರ್ ಮಹಮ್ಮದ್ ಸಲೀಂ ಅವರ ನೇತೃತ್ವದಲ್ಲಿ ಪೊಲೀಸರು ವಿಡಿಯೋ ವಿಶ್ಲೇಷಣೆ ಮಾಡಿ, ಸ್ಥಳ ತಣ್ಣೀರುಬಾವಿ ಪ್ರದೇಶವಾಗಿರಬಹುದು ಎಂದು ಊಹಿಸಿ ಹುಡುಕಾಟ ಆರಂಭಿಸಿದರು. ನಂತರ ಸೈಬರ್ ಸೆಲ್ ಸಹಾಯದಿಂದ ಮೊಬೈಲ್ ಲೊಕೇಶನ್ ಟ್ರೇಸ್ ಮಾಡಿ ಕಾವೂರು ಶಾಂತಿನಗರ ಪ್ರದೇಶ ಪತ್ತೆ ಹಚ್ಚಿದರು.

ಪಣಂಬೂರು ಠಾಣೆಯ ಪಿಎಸ್ಐ ಫಕೀರಪ್ಪ ಶರಣಪ್ಪ ಮತ್ತು ಸಿಬ್ಬಂದಿ ರಾಕೇಶ್ ದಶ ನಿಮಿಷಗಳಲ್ಲಿ ಸ್ಥಳಕ್ಕೆ ತಲುಪಿ, ಬಾಗಿಲು ಮುಚ್ಚಿದ್ದ ಮನೆಯನ್ನು ಒಡೆದು ಒಳಗೆ ಹೋಗಿ ಆತ್ಮಹತ್ಯೆಗೆ ಯತ್ನಿಸುತ್ತಿದ್ದ ರಾಜೇಶ್ ಮತ್ತು ಮಗುವನ್ನು ಪಶ್ಚಾತ್ತಪದ ಕ್ಷಣದಲ್ಲಿ ರಕ್ಷಿಸಿದರು. ಕೆಲವು ಕ್ಷಣಗಳ ತಡವಾದರೂ ಪ್ರಾಣ ಉಳಿಯುತ್ತಿರಲಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ.

“ವಿಡಿಯೋದಲ್ಲಿ ಕೇವಲ ಸಮುದ್ರದ ದೃಶ್ಯ ಮತ್ತು ಮಗುವಿನ ‘ಸಾಯೋದು ಬೇಡಪ್ಪಾ’ ಎಂಬ ಕಿರುಚಾಟ ಮಾತ್ರ ಇತ್ತು. ಆ ಧ್ವನಿ ಕೇಳಿ ಎಲ್ಲರೂ ಬೆಚ್ಚಿಬಿದ್ದೆವು. ನಾವು ಮೂರೂ ಗಂಟೆ ಶ್ರಮಿಸಿ ಜೀವ ಉಳಿಸಿದ್ದೇವೆ — ಅದೇ ನಮ್ಮ ಅತ್ಯಂತ ಸಂತೋಷದ ಕ್ಷಣ. ಎಂದು ಪಣಂಬೂರು ಇನ್ಸ್ಪೆಕ್ಟರ್ ಮಹಮ್ಮದ್ ಸಲೀಂ ಅವರು ಹೇಳಿದರು

ನಂತರ ಕಾವೂರು ಠಾಣೆಯಲ್ಲಿ ದಂಪತಿಯನ್ನು ಕರೆಸಿ ಮಾತುಕತೆ ನಡೆಸಿದಾಗ, ಪತ್ನಿ ರಾಜೇಶ್ ಜೊತೆ ಇರಲು ನಿರಾಕರಿಸಿದ್ದಾಳೆ. “ನನಗೆ ಸಾಕಾಗಿದೆ, ಡೈವೋರ್ಸ್ ಕೊಡುತ್ತೇನೆ, ಮಗುವನ್ನು ನಾನು ಸಾಕುತ್ತೇನೆ” ಎಂದು ಹೇಳಿದ್ದಾಳೆ. ಪೊಲೀಸರು ಬುದ್ಧಿವಾದ ನೀಡಿ, ಇಬ್ಬರನ್ನೂ ಶಾಂತಿಯುತವಾಗಿ ಕಳಿಸಿದ್ದಾರೆ.

ಆತ್ಮಹತ್ಯೆ ಯತ್ನದ ಕುರಿತಾಗಿ ಹಳೆಯ ಕಾನೂನಿನ ಪ್ರಕಾರ ಪ್ರಕರಣ ದಾಖಲಿಸಬಹುದಾಗಿದ್ದರೂ, ಹೊಸ ಬಿಎನ್ಎಸ್ ಕಾನೂನಿನಡಿ ಸೆಕ್ಷನ್ 309 ತೆಗೆದುಹಾಕಿರುವುದರಿಂದ ಪ್ರಕರಣ ದಾಖಲಿಸದೆ ಬಿಟ್ಟಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ಪಣಂಬೂರು ಪೊಲೀಸರು ತೋರಿದ ಸಮಯಪ್ರಜ್ಞೆ ಹಾಗೂ ಮಾನವೀಯತೆಗಾಗಿ ಪೊಲೀಸ್ ಆಯುಕ್ತ ಸುಧೀರ್ ರೆಡ್ಡಿ ಹಾಗೂ ಸಾರ್ವಜನಿಕರಿಂದ ಪ್ರಶಂಸೆ ವ್ಯಕ್ತವಾಗಿದೆ.


Spread the love

Exit mobile version