ಮಂಗಳೂರು | ಭಗವಾಧ್ವಜ ಮೂಲಕ ಪರ್ಯಾಯಕ್ಕೆ ಚಾಲನೆ ನೀಡಿದ ವಿಚಾರಕ್ಕೆ ರಮಾನಾಥ್ ರೈ ಖಂಡನೆ
ಮಂಗಳೂರು: ಉಡುಪಿ ಜಿಲ್ಲಾಧಿಕಾರಿಯವರು ಭಗವಾಧ್ವಜ ಹಿಡಿದು ಪರ್ಯಾಯ ಮಹೋತ್ಸವಕ್ಕೆ ಚಾಲನೆ ನೀಡಿದ ವಿಚಾರವನ್ನು ಮಾಜಿ ಸಚಿವ ಹಾಗೂ ಕಾಂಗ್ರೆಸ್ ಹಿರಿಯ ನಾಯಕ ರಮಾನಾಥ್ ರೈ ಖಂಡಿಸಿದ್ದಾರೆ.
ದಕ್ಷಿಣ ಕನ್ನಡ ಜಿಲ್ಲಾ ಕಾಂಗ್ರೆಸ್ ಸಮಿತಿ ವತಿಯಿಂದ ಮಂಗಳೂರು ಗಾಂಧಿ ಪ್ರತಿಮೆ ಎದುರು ಆಯೋಜಿಸಿದ್ದ ಉಪವಾಸ ಸತ್ಯಾಗ್ರಹದಲ್ಲಿ ಮಾತನಾಡಿದ ಅವರು, ದೇವಸ್ಥಾನಗಳು ಹಾಗೂ ಧಾರ್ಮಿಕ ಕಾರ್ಯಕ್ರಮಗಳು ಎಲ್ಲರಿಗೂ ಸಮಾನವಾಗಿದ್ದು, ಅಲ್ಲಿ ಯಾವುದೇ ರಾಜಕೀಯ ಪ್ರೇರಿತ ಪತಾಕೆಗಳನ್ನು ಹಾರಿಸಬಾರದು ಎಂದು ಸ್ಪಷ್ಟವಾಗಿ ಹೇಳಿದರು.
“ದೇವಸ್ಥಾನದಲ್ಲಿ ಕಾಂಗ್ರೆಸ್, ಕೇಸರಿ ಅಥವಾ ಹಸಿರು ಯಾವುದೇ ಬಣ್ಣದ ಪತಾಕೆಗಳನ್ನು ಬಳಸಬಾರದು. ಧಾರ್ಮಿಕ ಕಾರ್ಯಕ್ರಮಗಳನ್ನು ರಾಜಕೀಯ ಉದ್ದೇಶಕ್ಕೆ ಬಳಸಿಕೊಳ್ಳುವುದು ತಪ್ಪು. ಯಾವುದೇ ರಾಜಕೀಯ ಪ್ರೇರಿತ ಧ್ವಜವನ್ನು ಹಾರಿಸುವುದನ್ನು ನಾವು ದಿಕ್ಕರಿಸಬೇಕು,” ಎಂದು ರಮಾನಾಥ್ ರೈ ಹೇಳಿದರು.
ಕೇಸರಿ ಧ್ವಜ ಹಿಡಿದು ಕಾರ್ಯಕ್ರಮಕ್ಕೆ ಚಾಲನೆ ನೀಡಿದ ಕ್ರಮವನ್ನು ಎಲ್ಲಾ ಕಾಂಗ್ರೆಸಿಗರು ತಪ್ಪು ಎಂದು ಪರಿಗಣಿಸಬೇಕು ಎಂದ ಅವರು, ಸಾರ್ವಜನಿಕ ಮತ್ತು ಧಾರ್ಮಿಕ ವೇದಿಕೆಗಳಲ್ಲಿ ರಾಜಕೀಯ ಚಿಹ್ನೆಗಳಿಗೆ ಅವಕಾಶ ನೀಡಬಾರದು ಎಂದು ಅಭಿಪ್ರಾಯಪಟ್ಟರು.
ಈ ಉಪವಾಸ ಸತ್ಯಾಗ್ರಹವನ್ನು ಉದ್ಯೋಗ ಖಾತರಿ ಯೋಜನೆ (MGNREGA) ಕಾಯ್ದೆಯನ್ನು ಕೇಂದ್ರ ಬಿಜೆಪಿ ಸರ್ಕಾರ ಬದಲಿಸಿರುವುದನ್ನು ಖಂಡಿಸಿ ಹಾಗೂ ಕಾಯ್ದೆಯನ್ನು ಮರುಜಾರಿಗೆ ತರಬೇಕು ಎಂಬ ಆಗ್ರಹದೊಂದಿಗೆ ಆಯೋಜಿಸಲಾಗಿತ್ತು.
ಉಪವಾಸ ಸತ್ಯಾಗ್ರಹದಲ್ಲಿ ಕಾಂಗ್ರೆಸ್ ಕಾರ್ಯಕರ್ತರು ಹಾಗೂ ಮುಖಂಡರು ಪಾಲ್ಗೊಂಡಿದ್ದು, ಕೇಂದ್ರ ಸರ್ಕಾರದ ನೀತಿಗಳ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಿದರು.
