Home Mangalorean News Kannada News ಮಂಗಳೂರು: ರಾಷ್ಟ್ರೀಯ ಬಂಟ ಮಹಾ ಸಮ್ಮೇಳನ – 2016       

ಮಂಗಳೂರು: ರಾಷ್ಟ್ರೀಯ ಬಂಟ ಮಹಾ ಸಮ್ಮೇಳನ – 2016       

Spread the love

ಮಂಗಳೂರು: 2015 ಫೆಬ್ರವರಿ 7ರಂದು “ಬಂಟಸಿರಿ ಕಲಾವೈಭವ” ದೊಂದಿಗೆ ಅದ್ಧೂರಿಯಾಗಿ ಆರಂಭಗೊಂಡ  ಇಂಟರ್‍ನ್ಯಾಷನಲ್ ಬಂಟ್ಸ್ ವೆಲ್‍ಫೇರ್ ಟ್ರಸ್ಟ್ (ರಿ.) ಬಂಟ ಹಾಗೂ ಇತರ ಸಮಾಜದ ಉನ್ನತೀಕರಣಕ್ಕಾಗಿ ನಿರಂತರ ಅರ್ಪಣಾ ಮನೋಭಾವದಿಂದ ಸೇವಾ ನಿರತವಾಗಿದೆ. ಉನ್ನತ, ಶಿಕ್ಷಣ, ವೈದ್ಯಕೀಯ ಸೇವೆ, ಕಲೆ, ಸಾಹಿತ್ಯ, ಕ್ರೀಡೆ ಮಾತ್ರವಲ್ಲದೆ ಸಾಮಾಜಿಕ, ಧಾರ್ಮಿಕ ಹಾಗೂ ಸಾಂಸ್ಕ್ರತಿಕ ಕಾರ್ಯಕ್ರಮಗಳಿಗೆ ಒತ್ತು ನೀಡಿದೆ. ಯುವಜನಾಂಗದ ಪ್ರತಿಭೆ, ಕ್ರೀಡಾಸಾಮಥ್ರ್ಯ ಮತ್ತು ನಾಯಕತ್ವ ಗುಣಗಳ ಪ್ರದರ್ಶನಕ್ಕೆ ವಿಪುಲ ಅವಕಾಶವನ್ನು ಕಲ್ಪಿಸಿ ತನ್ನ ಧ್ಯೇಯೋದ್ಧೇಶಗಳ ಪಥದಲ್ಲಿ ಸದೃಢ ಹೆಜ್ಜೆಗಳನನಿಟ್ಟು ಸಾಗುತ್ತಿದೆ.

1-20160202-buntas-pressmeeತ

ಇಂಟರ್‍ನ್ಯಾಷನಲ್ ಬಂಟ್ಸ್ ವೆಲ್‍ಫೇರ್ಟ್ರಸ್ಟ್ (ರಿ.) ಸ್ಥಾಪನೆಗೊಂಡನಿಂದ ಸಾಮಾಜಿಕ ಸ್ಪಂದನಾ ಕಾರ್ಯಕ್ರಮಗಳಾದ ಶೈಕ್ಷಣಿಕ ತರಬೇತಿ, ಪರೀಕ್ಷಾಪೂರ್ವ ಕಾರ್ಯಾಗಾರ, ಪ್ರೊಕಬ್ಬಡಿ, ಸಾಧಕರ ಸನ್ಮಾನ, ನೂರಕ್ಕೂ ಮಿಕ್ಕಿ ಬಂಟ ಹಾಗೂ ಇತರ ಸಮಾಜದ ಸಂತ್ರಸ್ತ ಫಲಾನುಭವಿಗಳಿಗೆ ಧನ ಸಹಾಯ ವಿತರಣೆ ಇತ್ಯಾದಿ ಕಲ್ಯಾಣ ಕಾರ್ಯಕ್ರಮಗಳಲ್ಲಿ ತೊಡಗಿಸಿಕೊಂಡಿದೆ. ಈ ಸೇವಾ ಕೈಂಕರ್ಯದಲ್ಲಿ     ದೇಶ-ವಿದೇಶದ ಎಲ್ಲಾ  ಸಹೃದಯ ಸಾಧಕರನ್ನು ಸಂಪೂರ್ಣವಾಗಿ ಒಳಗೊಳ್ಳಬೇಕೆಂಬುವುದು   ನಮ್ಮ ಸದಾಶಯ.

ದೇಶದ ವಿವಿಧ ಭಾಗಗಳಲ್ಲಿ ನೆಲೆಸಿರುವ ಬಂಟ ಸಮುದಾಯದ ಬಂಧು-ಭಾಂದವರನ್ನು ಒಂದೇ ಚಪ್ಪರದಡಿ ತಂದು ವಿಚಾರವಿನಿಮಯ ಮಾಡಿ, ವೈವಿಧ್ಯಮಯ ಸಾಂಸ್ಕ್ರತಿಕ ಕಾರ್ಯಕ್ರಮಗಳನ್ನು ಹಮ್ಮಿಕೊಂಡು, ಊಟೋಪಚಾರದ ಅತಿಥ್ಯ ನೀಡಿ, ಸ್ನೇಹ ಸೌಹಾರ್ಧತೆಯ ಬೆಸುಗೆಯನ್ನು ಬಲಪಡಿಸುತ್ತಾ, ಬಂಟ ಸಮಾಜದ ಶ್ರೀಮಂತ ಸಂಸ್ಕ್ರತಿಯ ಹಿರಿಮೆಯನ್ನು ಜಗದಗಲ ಪಸರಿಸುವ ಸಲುವಾಗಿ 2016 ಫೆಬ್ರವರಿ ತಿಂಗಳ 6 ಮತ್ತು 7ರಂದು ಮಂಗಳೂರಿನ ಪುರಭವನದಲ್ಲಿ ಏರ್ಪಡಿಸಿರುವ ಸಮಾಜ ಸಾಮರಸ್ಯ ಮತ್ತು     ಜನ ಜಾಗೃತಿಯ ವಿಶಿಷ್ಟ ಕಾರ್ಯಕ್ರಮ “ರಾಷ್ಟ್ರೀಯ ಬಂಟ ಮಹಾಸಮ್ಮೇಳನ – 2016”

ಉದ್ಘಾಟನೆ :   2016 ಫೆಬ್ರವರಿ 6 ಶನಿವಾರದಂದು ಅಪರಾಹ್ನ ಘಂಟೆ 02.30ಕ್ಕೆ ಸಮ್ಮೇಳನದ ಅಧ್ಯಕ್ಷರಾದ ತುಳು ಕನ್ನಡ ಸಾಹಿತಿ   ಡಾ| ಡಿ. ಕೆ. ಚೌಟ ಇವರನ್ನು ಮಂಗಳೂರಿನ ವಿಶ್ವವಿದ್ಯಾನಿಲಯ ಕಾಲೇಜು ಆವರಣದಿಂದ ಪುರಭವನಕ್ಕೆ ಕರೆದೊಯ್ಯುವ ಕಾರ್ಯಕ್ರಮವಿದ್ದು, ಬಂಟ ಭಾಂದವರು ಸಾಂಪ್ರದಾಯಿಕ ಉಡುಗೆಯೊಂದಿಗೆ ಭಾಗವಹಿಸಲಿರುವರು. ಅದೇ ದಿನ ಸಂಜೆ ಘಂಟೆ 04.00ಕ್ಕೆ ಮಂಗಳೂರು ಪುರಭವನ ಆವರಣದಲ್ಲಿ ನಿರ್ಮಿಸಲಾದ ಮುಲ್ಕಿ ಸುಂದರ ರಾಮ ಶೆಟ್ಟಿ ನಗರದ, ಜಸ್ಟಿಸ್ ಕೆ. ಎಸ್. ಹೆಗ್ಡೆ ಸಭಾಂಗಣದಲ್ಲಿ ನಾಡೋಜ ಕೈಯಾರ ಕಿಂಜ್ಞಣ್ಣ ರೈ ವೇದಿಕೆಯಲ್ಲಿ ಉದ್ಘಾಟನಾ ಸಮಾರಂಭ ಜರುಗಲಿದೆ. ಕೆ. ಬಿ. ಜಯಪಾಲ ಶೆಟ್ಟಿ ಮತ್ತು ಕಲ್ಲಾಡಿ ವಿಠಲ ಶೆಟ್ಟಿ ಹೆಸರಿನ ಮಹಾದ್ವಾರ, ಪುರಭವನದ ಎರಡೂ ಬದಿಯಲ್ಲಿ ಅತಿಥಿಗಳನ್ನು ಹಾಗೂ ಪ್ರತಿನಿಧಿಗಳನ್ನು ಸ್ವಾಗತಿಸಲಿದೆ.

ಪದ್ಮವಿಭೂಷಣ ರಾಜರ್ಷಿ ಡಾ| ಡಿ. ವೀರೇಂದ್ರ ಹೆಗ್ಡೆ, ಧರ್ಮಾಧಿಕಾರಿಗಳು ಶ್ರೀ ಕ್ಷೇತ್ರ ಧರ್ಮಸ್ಥಳ ಇವರು ಉದ್ಘಾಟಿಸಲಿದ್ದಾರೆ. ಶ್ರೀ ಗುರುದೇವದತ್ತ ಸಂಸ್ಥಾನಂ ಒಡಿಯೂರು ಶ್ರೀ ಗುರುದೇವಾನಂದ ಸ್ವಾಮೀಜಿ, ಶ್ರೀ ವಜ್ರದೇಹಿ ಮಠ ಗುರುಪುರ   ಶ್ರೀ ರಾಜಶೇಖರಾನಂದ ಸ್ವಾಮೀಜಿ, ಶ್ರೀ ಕ್ಷೇತ್ರ ಕೇಮಾರು ಶ್ರೀ ಶ್ರೀ ಶ್ರೀ ಈಶ ವಿಠಲದಾಸ ಸ್ವಾಮೀಜಿ ಶ್ರೀ ಬಾರ್ಕೂರು ಬಂಟ ಮಹಾಸಂಸ್ಥಾನ ಶ್ರೀ ಶ್ರೀ ಶ್ರೀ ವಿದ್ಯಾವಾಚಸ್ಪತಿ ಡಾ| ವಿಶ್ವ ಸಂತೋಷ ಭಾರತಿ ಶ್ರೀ ಪಾದಂಗಳು ಸ್ವಾಮೀಜಿಯವರು ಭಾಗವಹಿಸಲಿದ್ದು, ಸಂತ ಸಂದೇಶ ಕಾರ್ಯಕ್ರಮವನ್ನು ಈ ಸಂದರ್ಭದಲ್ಲಿ ಹಮ್ಮಿಕೊಳ್ಳಲಾಗಿದೆ.

ಸದಾಶಯ ಬಿಡುಗಡೆ :    ಇಂದಿನ ಬಹುಮಾಧ್ಯಮ ಯುಗದಲ್ಲಿ ಪ್ರಚಾರದೃಷ್ಟಿಯಿಂದಲ್ಲವಾದರೂ ಟ್ರಸ್ಟ್ ನಡೆಸುತ್ತಿರುವ ಜನಯೋಪಯೋಗಿ ಕಾರ್ಯಕ್ರಮಗಳು ಬೇರೆ ಬೇರೆ ಸ್ತರಗಳಲ್ಲಿ ಜನಮಾನಸಕ್ಕೆ ತಲುಪಬೇಕೆಂಬ ಉದ್ದೇಶದಿಂದ ಅಲ್ಲದೆ ಶಿಕ್ಷಣ, ಉದ್ಯೋಗ ಹಾಗೂ ವ್ಯವಹಾರಿಕವಾಗಿ ಹೊರನಾಡು ಹಾಗೂ ಸಾಗರದಾಚೆ ನೆಲೆಸಿದವರ ಮತ್ತು ತಾಯ್ನಾಡಿಗರಾದ ನಮ್ಮ ಸಂಬಂಧ ಪರಿಚಯಗಳನ್ನು  ಗಟ್ಟಿಗೊಳಿಸುವ ಆಶಯದಿಂದ  ದಿಟ್ಟ ಹೆಜ್ಜೆಯನ್ನಿರಿಸಿ “ಸದಾಶಯ” ಎಂಬ ತ್ರೈಮಾಸಿಕ ಪತ್ರಿಕೆಯನ್ನು ಟ್ರಸ್ಟ್ ಹೊರತರುತ್ತಿದ್ದು, ಅದರ  ಚೊಚ್ಚಲ ಸಂಚಿಕೆಯನ್ನು   ಡಾ| ಎನ್. ವಿನಯ ಹೆಗ್ಡೆ ಕುಲಪತಿಗಳು, ನಿಟ್ಟೆ ವಿಶ್ವವಿದ್ಯಾನಿಲಯ ಇವರು ಬಿಡುಗಡೆಗೊಳಿಸಲಿದ್ದಾರೆ.

ವಿಧಾನ ಪರಿಷತ್ತಿನ ಸದಸ್ಯರಾದ ಶ್ರೀ ಪ್ರತಾಪ್ ಚಂದ್ರ ಶೆಟ್ಟಿ, ಡಾ| ಬಿ. ಆರ್. ಶೆಟ್ಟಿ ಎನ್.ಎಂ.ಸಿ. ಗ್ರೂಪ್, ಅಬುದಾಬಿ,    ಶ್ರೀ ಎ. ಜೆ. ಶೆಟ್ಟಿ  ಎ.ಜೆ. ಸಮೂಹ ಸಂಸ್ಥೆ ಮಂಗಳೂರು, ಶ್ರೀ ಪ್ರಕಾಶ್ ಶೆಟ್ಟಿ ಎಂ.ಆರ್.ಜಿ. ಗ್ರೂಪ್ ಬೆಂಗಳೂರು, ಡಾ| ಮೋಹನ್ ಆಳ್ವ ಆಳ್ವಾಸ್ ವಿದ್ಯಾ ಸಂಸ್ಥೆ ಮೂಡಬಿದಿರೆ,   ಶ್ರೀ ಸುಧೀರ್ ವಿ. ಶೆಟ್ಟಿ ಚೆರಿಷ್ಮಾ ಬಿಲ್ಡರ್ಸ್ ಮುಂಬೈ, ಶ್ರೀ ಏರ್ಯ ಲಕ್ಷ್ಮೀ ನಾರಾಯಣ ಆಳ್ವ  ಹಿರಿಯ ಸಾಹಿತಿ, ಶ್ರೀ ವಿಜಯನಾಥ ವಿಠ್ಠಲ ಶೆಟ್ಟಿ ಶಾಸ್ತಾವು ಭೂತನಾಥೇಶ್ವರ ದೇವಸ್ಥಾನ ಬಡಗಎಡಪದವು, ಶ್ರೀ ಸರ್ವೋತ್ತಮ ಶೆಟ್ಟಿ ಯು.ಎ.ಇ., ಖ್ಯಾತ ಚಲನಚಿತ್ರ ನಟ ಶ್ರೀ ಪ್ರಕಾಶ್ ರೈ, ಶ್ರೀ ಸುಂದರ್ ಶೆಟ್ಟಿ ಯು.ಎಸ್.ಎ. ಮುಂತಾದ ಗಣ್ಯರು ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ.

ಅದೇ ದಿನ ಸಂಜೆ ಘಂಟೆ 07.00ರಿಂದ “ತುಳುನಾಡ ವೈಭವ”ವನ್ನು ಪ್ರತಿಬಿಂಬಿಸಬಲ್ಲ ವೈವಿಧ್ಯಮಯ ಸಾಂಸ್ಕ್ರತಿಕ ಕಾರ್ಯಕ್ರಮವು ನಾಡಿನ ವಿವಿಧ ಬಂಟ ಕಲಾ  ತಂಡಗಳಿಂದ ನಡೆಯಲಿದೆ. ಇದು ನಮ್ಮ ಸಮಾಜದ ವಿರಾಟ್ ಸ್ವರೂಪವನ್ನು ಸಾಕ್ಷಾತ್ಕರಿಸುವ ಭವ್ಯ ಕಾರ್ಯಕ್ರಮವೆನಿಸಿದ ಕಟೀಲು ಮೇಳದ ಆಯ್ದ ಕಲಾವಿದರಿಂದ ಮಹಿಷಾಸುರ ಮರ್ದಿನಿ ಯಕ್ಷಗಾನ ಬಯಲಾಟ ಜರುಗಲಿದೆ.

ಮಹಿಳಾ ಸಮಾವೇಶ :  ಪೂರ್ವಾಹ್ನ ಘಂಟೆ 08.30ರಿಂದ “ಉದಯರಾಗ” ಕಾರ್ಯಕ್ರಮದಲ್ಲಿ ಭಕ್ತಿಗೀತೆ, ಭಾವಗೀತೆ ಕಾರ್ಯಕ್ರಮ ಜರುಗಲಿದೆ. ಪೂರ್ವಾಹ್ನ 09.30ರಿಂದ ಮಹಿಳಾ ಸಮಾವೇಶ ಜರುಗಲಿದ್ದು ರಾಜ್ಯದಾದ್ಯಂತದಿಂದ ವಿವಿಧ ಬಂಟ ಸಂಘಗಳ ಮಹಿಳಾ ಪ್ರತಿನಿಧಿಗಳು ಭಾಗವಹಿಸಲಿದ್ದಾರೆ. ಡಾ| ಕೃಪಾ ಅಮರ್ ಆಳ್ವ ಅಧ್ಯಕ್ಷರು, ರಾಜ್ಯ ಮಕ್ಕಳ ಹಕ್ಕುಗಳ ಸಂರಕ್ಷಣಾ ಆಯೋಗ ಇವರು ಉದ್ಘಾಟಿಸಲಿದ್ದು, ಡಾ| ಧರಣಿ ದೇವಿ ಮಾಲಗತ್ತಿ ಪೊಲೀಸ್ ಉಪ ಅಧೀಕ್ಷಕರು, ಮೈಸೂರು  ಇವರು ಅಧ್ಯಕ್ಷತೆ ವಹಿಸಲಿದ್ದಾರೆ. ಇದೇ ಸಂದರ್ಭದಲ್ಲಿ ಸಿದ್ಧಿವಿನಾಯಕ ಯಕ್ಷ ನಾಟ್ಯ ಕಲಾಕೇಂದ್ರ ಸುರತ್ಕಲ್ ಇವರು ರಕ್ಷಿತ್ ಶೆಟ್ಟಿ ಪಡ್ರೆ ಇವರ ನಿರ್ದೇಶನದಲ್ಲಿ ಮಹಿಳಾ ಯಕ್ಷ ವೈಭವ ಯಕ್ಷನಾಟ್ಯ “ರಾಧಾ ವಿಲಾಸ” ಜರುಗಲಿದ್ದು, ಸತೀಶ್ ಶೆಟ್ಟಿ ಪಟ್ಲ ಮತ್ತು ಬಳಗ ಹಿಮ್ಮೇಳನದಲ್ಲಿ ಸಹಕರಿಸಲಿದೆ. ಪರ್ವಾಹ್ನ ಘಂಟೆ 11.00ಕ್ಕೆ ಸರಿಯಾಗಿ ಸಾಮಾಜಿಕ ಸ್ಥಿತ್ಯಂತರದಲ್ಲಿ ಬಂಟರು ಎಂಬ ವಿಚಾರಗೋಷ್ಠಿ ಜರುಗಲಿದ್ದು, ಡಾ| ವೈ.ಎನ್. ಶೆಟ್ಟಿ ಜಾನಪದ ಚಿಂತಕರು ಅಧ್ಯಕ್ಷತೆ ವಹಿಸಲಿದ್ದು, ಭೂತಾರಾಧನೆ, ನಂಬಿಕೆ ಮತ್ತು ಆಚರಣೆಗಳು ಈ ಬಗ್ಗೆ ಉಪನ್ಯಾಸ ನೀಡಲಿದ್ದಾರೆ.

ವಿವಿಧ ಗೋಷ್ಠಿಗಳು :   ಡಾ| ಬಿ. ಶಿವರಾಮ ಶೆಟ್ಟಿ ಮುಖ್ಯಸ್ಥರು ಕನ್ನಡ ವಿಭಾಗ ಮಂಗಳೂರು, ವಿ.ವಿ. “ಕೃಷಿ ಬದುಕು ಮತ್ತು ವಾಣಿಜ್ಯೋದ್ಯಮ”, ಡಾ| ಗಣನಾಥ ಶೆಟ್ಟಿ ಎಕ್ಕಾರು ಕನ್ನಡ ಪ್ರಾಧ್ಯಾಪಕರು, ಉಡುಪಿ “ಕಲೆ, ಕ್ರೀಡೆ-ಪಾರಂಪರಿಕ ಹವ್ಯಾಸಗಳು”, ಡಾ| ಸಾಯಿಗೀತ ಹೆಗ್ಡೆ ಪ್ರಾಧ್ಯಾಪಕರು, ನಿಟ್ಟೆ ವಿ.ವಿ. “ಮಾತೃಮೂಲ ಸಂಸ್ಕ್ರತಿ ಮತ್ತು ಮಹಿಳೆ” ಬಗ್ಗೆ ಪ್ರಬಂಧ ಮಂಡಿಸಲಿದ್ದಾರೆ.

ಮಧ್ಯಾಹ್ನ ಘಂಟೆ 12.00ರಿಂದ 01.00ರವರಗೆ ಮುಂಬೈ ಬಂಟರಿಂದ “ತೆಲಿಕೆದ ಕುಸಲ್” ಕಾರ್ಯಕ್ರಮ ಜರುಗಲಿದೆ. ಅಪರಾಹ್ನ 01.15ರಿಂದ 02.15ವರೆಗೆ ಕಾವ್ಯ-ಗಾನ-ಕುಂಚ-ನೃತ್ಯ ಕಾವ್ಯ ಚಿತ್ತಾರ ಕಾರ್ಯಕ್ರಮ ಜರುಗಲಿದೆ. ಮಲಾರ್ ಜಯರಾಮ ರೈ ಹಿರಿಯ ಕವಿ, ಪತ್ರಕರ್ತರು ಅಧ್ಯಕ್ಷತೆ ವಹಿಸಲಿದ್ದಾರೆ. ಎನ್. ಪಿ. ಶೆಟ್ಟಿ ಮುಲ್ಕಿ, ನಾರಾಯಣ ರೈ ಕುಕ್ಕುವಳ್ಳಿ, ದಿವ್ಯಾಧರ ಶೆಟ್ಟಿ ಕೆರಾಡಿ, ವಿಜಯಾ ಶೆಟ್ಟಿ ಸಾಲೆತ್ತೂರು, ಮಾಲತಿ ಶೆಟ್ಟಿ ಮಾಣೂರು, ಆಶಾ ದಿಲೀಪ್ ರೈ ಸುಳ್ಯಮೆ, ಮಲ್ಲಿಕಾ ಜೆ. ರೈ ಗುಂಡ್ಯಡ್ಕ ಇವರು ಭಾಗವಹಿಸಲಿರುವ ಪ್ರಮುಖ ಕವಿಗಳು. ಕವನಗಳನ್ನು ಖ್ಯಾತ ಗಾಯಕರಾದ ಶ್ರೀ ಜಗದೀಶ್ ಶೆಟ್ಟಿ ಬೋಳೂರು ಹಾಗೂ ಪ್ರತಿಭಾ ರೈ     ರಾಗ ಸಂಯೋಜಿಸಿ ಹಾಡಲಿದ್ದಾರೆ. ಇದೇ ಸಂದರ್ಭದಲ್ಲಿ ಕು| ತೃಷಾ ಶೆಟ್ಟಿ ಬಳಗದಿಂದ ನೃತ್ಯ ಕಾರ್ಯಕ್ರಮ ಜರುಗಲಿದೆ. ಅಪರಾಹ್ನ 02.30ರಿಂದ 03.30ರ ವರೆಗೆ ಕಾಪಿಕಾಡ್ ಬಳಗದವರಿಂದ “ತೆಲಿಕೆ ಉರ್ಕರ್ನಗ” ನಗುವಿನ ಕಾರ್ಯಕ್ರಮ ಜರುಗಲಿದೆ. ಅಪರಾಹ್ನ 03.45ರಿಂದ 04.45ರವರೆಗೆ ಆಳ್ವಾಸ್ ಕಲಾವೈಭವದವರಿಂದ ನೃತ್ಯ ಕಾರ್ಯಕ್ರಮ ಜರುಗಲಿದೆ.

ಇಂಟರ್ ನ್ಯಾಷನಲ್ ಬಂಟ್ಸ್ ವೆಲ್‍ಫೇರ್ ಟ್ರಸ್ಟಿನ ಛೇರ್‍ಮೆನ್ ಶ್ರೀ ಎ. ಸದಾನಂದ ಶೆಟ್ಟಿ, ಗೌರವ ಅಧ್ಯಕ್ಷರಾದ ಶ್ರೀ ಬಿ. ರಮಾನಾಥ ರೈ, ಗೌರವ ಸಲಹೆಗಾರರಾದ ಶ್ರೀ ನಳಿನ್ ಕುಮಾರ್ ಕಟೀಲ್ ಹಾಗೂ ಕಾರ್ಯಾಧ್ಯಕ್ಷರಾದ ಶ್ರೀ ಕೆ. ಅಮರನಾಥ ಶೆಟ್ಟಿ ಇವರು ಈ ಎರಡೂ ದಿನದ ಕಾರ್ಯಕ್ರಮಗಳ ಮೇಲುಸ್ತುವಾರಿ ವಹಿಸಿಕೊಂಡಿರುತ್ತಾರೆ.

ಸಮಾರೋಪ  ಸಮಾರಂಭ : ಸಂಜೆ 05.00ಘಂಟೆಗೆ ಸರಿಯಾಗಿ “ರಾಷ್ಟ್ರೀಯ ಬಂಟ ಮಹಾ ಸಮ್ಮೇಳನ – 2016”ರ ಸಮಾರೋಪ ಸಮಾರಂಭ ಜರುಗಲಿದೆ. ಫ್ರೊ. ಡಾ| ಬಿ. ಎಂ. ಹೆಗ್ಡೆ ವಿಶ್ರಾಂತ ಕುಲಪತಿಗಳು, ಮಾಹೆ ವಿಶ್ವವಿದ್ಯಾನಿಲಯ ಇವರು ಸಮಾರೋಪ ಭಾಷಣ ಮಾಡಲಿದ್ದಾರೆ. ಶ್ರೀ ಎ. ಸದಾನಂದ ಶೆಟ್ಟಿ ಅಧ್ಯಕ್ಷರು,  ಇಂಟರ್‍ನ್ಯಾಷನಲ್ ಬಂಟ್ಸ್ ವೆಲ್‍ಫೇರ್ ಟ್ರಸ್ಟ್ (ರಿ.) ಅಧ್ಯಕ್ಷತೆ ವಹಿಸಲಿದ್ದಾರೆ. ಟ್ರ್ರಸ್ಟಿನ ಗೌರವ ಅಧ್ಯಕ್ಷರಾದ ಶ್ರೀ ಬಿ. ರಮಾನಾಥ ರೈ ಹಾಗೂ ಗೌರವ ಸಲಹೆಗಾರರಾದ   ಶ್ರೀ ನಳಿನ್ ಕುಮಾರ್ ಕಟೀಲ್ ಈ ಸಂದರ್ಭದಲ್ಲಿ ಸಂದೇಶ ನೀಡಲಿದ್ದಾರೆ. ಶ್ರೀ ಕೆ. ಅಮರನಾಥ ಶೆಟ್ಟಿ    ಮಾಜಿ ಸಚಿವರು, ನಿಕಟಪೂರ್ವ ಅಧ್ಯಕ್ಷರು, ಬಂಟರ ಯಾನೆ ನಾಡವರ ಮಾತೃ ಸಂಘ ಇವರು ನಿರ್ಣಯಗಳನ್ನು ಮಂಡಿಸಲಿದ್ದಾರೆ.

ಕರ್ನಾಟಕ ರಾಜ್ಯ ಸರಕಾರದ ಆರೋಗ್ಯ ಸಚಿವರಾದ ಶ್ರೀ ಯು. ಟಿ. ಖಾದರ್, ಕ್ರೀಡಾ ಸಚಿವರಾದ ಶ್ರೀ ಅಭಯಚಂದ್ರ ಜೈನ್, ಶಾಸಕರಾದ ಶ್ರೀ ಜೆ. ಆರ್. ಲೋಬೊ, ಶ್ರೀಮತಿ ಶಕುಂತಲಾ ಶೆಟ್ಟಿ,    ಶ್ರೀ ಐವನ್ ಡಿ’ಸೋಜ, ಶ್ರೀ ಬಿ. ಎ. ಮೊೈದಿನ್ ಬಾವ, ಕ್ಯಾ| ಗಣೇಶ್ ಕಾರ್ಣಿಕ್, ಮೂಡ ಅಧ್ಯಕ್ಷರಾದ ಇಬ್ರಾಹಿಂ ಕೋಡಿಚಾಲ್ ಮಂಗಳೂರು, ಮಹಾಪೌರರಾದ ಶ್ರೀಮತಿ ಜೆಸಿಂತ ವಿಜಯ ಅಲ್ಫ್ರೆಡ್, ಕಾರ್ಪೊರೇಟರ್‍ಗಳಾದ ಶ್ರೀ ಶಶಿಧರ ಹೆಗ್ಡೆ, ಶ್ರೀ ಮಹಾಬಲ ಮಾರ್ಲ, ಶ್ರೀ ಸುಧೀರ್ ಶೆಟ್ಟಿ ಕಣ್ಣೂರು ಮುಂತಾದವರು ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ.

ಸಂಜೆ ಘಂಟೆ 06.30ರಿಂದ 08.30ರವರೆಗೆ  “ಯಂಗ್ ಬಂಟ್ಸ್ ಕಪ್‍ಲ್ – 2016” ಯುವ ಬಂಟ ಜೋಡಿ ಕಾರ್ಯಕ್ರಮ ಜರುಗಲಿದ್ದು, ಆ ಬಳಿಕ ರಾತ್ರಿ ಘಂಟೆ 08.00ಕ್ಕೆ ಸರಿಯಾಗಿ ಖ್ಯಾತ ಸಂಗೀತ ನಿರ್ದೇಶಕ ಶ್ರೀ ಗುರುಕಿರಣ್ ಇವರಿಂದ ಸಂಗೀತ ರಸಸಂಜೆ ಕಾರ್ಯಕ್ರಮ ಜರುಗಲಿದೆ. ಭಾಗವಹಿಸುವ ಪ್ರತಿನಿಧಿಗಳೆಲ್ಲರಿಗೂ ಫೆಬ್ರವರಿ 6 ಮತ್ತು 7ರಂದು ಬಂಟ ಸಂಪ್ರದಾಯಿಕ ಊಟೋಪಚಾರದ  ವ್ಯವಸ್ಥೆ ಕಲ್ಪಿಸಲಾಗಿದೆ. ಅದೇ ರೀತಿ ಸಮ್ಮೇಳನಾಂಗಣದಲ್ಲಿ “ಸದಾಶಯ” ತ್ರೈಮಾಸಿಕಕ್ಕೆ ಚಂದಾದಾರರನ್ನು ನೋಂದಾಯಿಸಲಾಗುವುದು. ಅಲ್ಲದೆ ಸಮ್ಮೇಳನದಲ್ಲಿ  ವಿವಿಧ ಬಂಟ ಲೇಖಕರ ನೂತನ ಕೃತಿಗಳ ಬಿಡುಗಡೆಗೆ ಅವಕಾಶ ನೀಡಲಾಗುವುದು. ಸಂಬಂಧಿಸುವವರು “ಸದಾಶಯ” ತ್ರೈಮಾಸಿಕ      ಪ್ರಧಾನ ಸಂಪಾದಕ ಬಾಸ್ಕರ ರೈ ಕುಕ್ಕುವಳ್ಳಿಯವರನ್ನು ಸಂಪರ್ಕಿಸುವುದು.


Spread the love

Exit mobile version