Home Mangalorean News Kannada News ಮಲ್ಪೆ ಸರಕಾರಿ ಜಾಗ ವಿವಾದದ ಆದೇಶ ರದ್ದುಪಡಿಸುವಂತೆ ಕಾಂಗ್ರೆಸ್ ಮೀನುಗಾರ ಸಮಿತಿಯಿಂದ ಮನವಿ

ಮಲ್ಪೆ ಸರಕಾರಿ ಜಾಗ ವಿವಾದದ ಆದೇಶ ರದ್ದುಪಡಿಸುವಂತೆ ಕಾಂಗ್ರೆಸ್ ಮೀನುಗಾರ ಸಮಿತಿಯಿಂದ ಮನವಿ

Spread the love

ಮಲ್ಪೆ ಸರಕಾರಿ ಜಾಗ ವಿವಾದದ ಆದೇಶ ರದ್ದುಪಡಿಸುವಂತೆ ಕಾಂಗ್ರೆಸ್ ಮೀನುಗಾರ ಸಮಿತಿಯಿಂದ ಮನವಿ

ಉಡುಪಿ: ಮಲ್ಪೆ ಪ್ರದೇಶದಲ್ಲಿ ಉಂಟಾದ ಸರಕಾರಿ ಜಾಗ ವಿವಾದದಿಂದ ಸ್ಥಳೀಯ ಮೀನುಗಾರರಲ್ಲಿ ಉಂಟಾದ ಆತಂಕ ನಿವಾರಣೆ, ನೈಜ ಮೀನುಗಾರರ ರಕ್ಷಣೆ ಹಾಗೂ ಸರ್ಕಾರ ಹೊರಡಿಸಿದ ಆದೇಶವನ್ನು ರದ್ದುಗೊಳಿಸುವ ಕುರಿತು ಉಡುಪಿ ಜಿಲ್ಲಾಧಿಕಾರಿಗೂ ಹಾಗೂ ಉಡುಪಿ ಜಿಲ್ಲಾ ವರಿಷ್ಠಾಧಿಕಾರಿಗಳಿಗೆ ಉಡುಪಿ ಜಿಲ್ಲಾ ಕಾಂಗ್ರೆಸ್ ಮೀನುಗಾರರ ಸಮಿತಿ ವತಿಯಿಂದ ಮನವಿ ಸಲ್ಲಿಸಲಾಯಿತು.

ಮಲ್ಪೆ ಪರಿಸರದಲ್ಲಿ ಇತ್ತೀಚೆಗೆ ಸರಕಾರಿ ಮೀನುಗಾರಿಕಾ ಜಾಗಕ್ಕೆ ಸಂಬಂಧಿಸಿದಂತೆ ಸರ್ಕಾರದಿಂದ ಹೊರಡಿಸಿದ ಆದೇಶದಿಂದ ಸ್ಥಳೀಯ ನೈಜ ಮೀನುಗಾರರಲ್ಲಿ ತೀವ್ರ ಆತಂಕ ಮತ್ತು ಅಸಮಾಧಾನ ಉಂಟಾಗಿದೆ. ಉಡುಪಿ ಶಾಸಕರಾದ ಯಶಪಾಲ್ ಸುವರ್ಣರವರ ಅಧ್ಯಕ್ಷತೆಯ ದಕ್ಷಿಣ ಕನ್ನಡ ಮೀನುಗಾರಿಕಾ ಫೆಡರೇಶನ್ಗೆ ಸ್ಥಳೀಯ ಮೀನುಗಾರರು ದಶಕಗಳಿಂದ ಉಪಯೋಗಿಸುತ್ತಿರುವ ಸರಕಾರಿ ಜಾಗವನ್ನು ಮಂಜೂರು ಮಾಡಿದ ಪರಿಣಾಮ, ಸ್ಥಳೀಯ ಮೀನುಗಾರ ಸಮುದಾಯದಲ್ಲಿ ಭಯ, ಗೊಂದಲ ಮತ್ತು ವ್ಯಾಪಕ ಆಕ್ರೋಶ ವ್ಯಕ್ತವಾಗಿದೆ.

ಈ ವಿಚಾರವು ಮಾಧ್ಯಮ ಮತ್ತು ಸಾಮಾಜಿಕ ಜಾಲತಾಣಗಳಲ್ಲಿಯೂ ವ್ಯಾಪಕ ಚರ್ಚೆಗೆ ಕಾರಣವಾಗಿದ್ದು, ಸಾರ್ವಜನಿಕರ ನಡುವೆ ವೈಮನಸ್ಯ ಹಾಗೂ ಅನಗತ್ಯ ಉದ್ವಿಗ್ನತೆ ಸೃಷ್ಟಿಸುವ ಪರಿಸ್ಥಿತಿಯನ್ನು ಉಂಟುಮಾಡುತ್ತಿದೆ. ಪರಿಸ್ಥಿತಿ ಸೂಕ್ಷ್ಮವಾಗುತ್ತಿರುವ ಹಿನ್ನೆಲೆ­ಯಲ್ಲಿ, ಭವಿಷ್ಯದಲ್ಲಿ ಕಾನೂನು-ಸುವ್ಯವಸ್ಥೆಗೆ ಧಕ್ಕೆಯಾಗುವ ಸಾಧ್ಯತೆಗಳೂ ಕಂಡುಬರುತ್ತಿವೆ.

ಈ ಹಿನ್ನೆಲೆಯಲ್ಲಿ ಸ್ಥಳೀಯ ನೈಜ ಮೀನುಗಾರರ ಹಿತ ಮತ್ತು ಹಕ್ಕುಗಳನ್ನು ಕಾಪಾಡುವ ದೃಷ್ಟಿಯಿಂದ ಅವರ ದೀರ್ಘಕಾಲದ ಬಳಸುವ ಹಕ್ಕನ್ನು ಪರಿಗಣಿಸಿ, ಸರ್ಕಾರ ಹೊರಡಿಸಿದ ವಿವಾದಾತ್ಮಕ ಆದೇಶವನ್ನು ತಕ್ಷಣ ರದ್ದುಗೊಳಿಸಿಬೇಕಾಗಿ ವಿನಮ್ರವಾಗಿ ವಿನಂತಿಸಿದ್ದಾರೆ.

ಗಲಭೆಗೆ ಕಾರಣವಾಗುವ ಅಥವಾ ಕ್ರಿಮಿನಲ್ ಚಟುವಟಿಕೆಯಲ್ಲಿ ತೊಡಗಿರುವ ಯಾವುದೇ ಅಂಶಗಳ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಿ,ಮಲ್ಪೆ ಪ್ರದೇಶದಲ್ಲಿ ಶಾಂತಿ, ಭದ್ರತೆ ಮತ್ತು ಸುವ್ಯವಸ್ಥೆ ಕಾಪಾಡ ಬೇಕಾಗಿ ಮನವಿ ಮಾಡಿದ್ದಾರೆ.

ಸ್ಥಳೀಯ ಮೀನುಗಾರರಿಗೆ ಯಾವುದೇ ರೀತಿಯ ತೊಂದರೆಯಾಗದಂತೆ, ಅವರ ಜೀವನೋಪಾಯದ ರಕ್ಷಣೆಗೆ ಪ್ರಾಮುಖ್ಯತೆ ನೀಡಲಾಗುತ್ತದೆ ಎಂದು ನಂಬಿದ್ದೇವೆ ಎಂದು ಉಡುಪಿ ಜಿಲ್ಲಾ ಮೀನುಗಾರರ ಕಾಂಗ್ರೇಸ್ ಸಮಿತಿ ಜಿಲ್ಲಾಧ್ಯಕ್ಷರಾದ ವಿಶ್ವಾಸ್ ವಿ ಅಮೀನ್ ತಿಳಿಸಿದರು

ಯಥಾ ಪ್ರತಿ ಯನ್ನು ವಿಧಾನಪರಿಷತ್ ಸದಸ್ಯರಾದ ಮಂಜುನಾಥ ಭಂಡಾರಿ, ಮಾಜಿ ಸಂಸದರಾದ ಜಯಪ್ರಕಾಶ್ ಹೆಗ್ಡೆಯವರಿಗೂ ತಲುಪಿಸಲಾಗಿದೆ ಎಂದು ಉಡುಪಿ ಜಿಲ್ಲಾ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿಗಳಾದ ಯತೀಶ್ ಕರ್ಕೇರ ತಿಳಿಸಿದ್ದಾರೆ

ಈ ಸಂದರ್ಭದಲ್ಲಿ ಕೆಪಿಸಿಸಿ ಕಾರ್ಯದರ್ಶಿಗಳಾದ ಮುರಳಿ ಶೆಟ್ಟಿ,ಉಡುಪಿ ಜಿಲ್ಲಾ ಕಾಂಗ್ರೆಸ್ ಉಪಾಧ್ಯಕ್ಷರಾದ ಪ್ರಖ್ಯಾತ್ ಶೆಟ್ಟಿ ,ಮೀನುಗಾರ ಮುಖಂಡರಾದ ಕೇಶವ ಕೋಟ್ಯಾನ್ , ಕಾಪು ಬ್ಲಾಕ್ ಮೀನುಗಾರ ಕಾಂಗ್ರೆಸ್ ಸಮಿತಿ ಉತ್ತರ ಹಾಗೂ ದಕ್ಷಿಣ ಅಧ್ಯಕ್ಷರುಗಳಾದ ಸದಾನಂದ್ ಪೊಲಿಪು, ಗಿರೀಶ್ ಸುವರ್ಣ, ಉಡುಪಿ ಜಿಲ್ಲಾ ಕಾಂಗ್ರೆಸ್ ಸಾಮಾಜಿಕ ಜಾಲತಾಣ ಜಿಲ್ಲಾಧ್ಯಕ್ಷರಾದ ರೋಷನ್ ಶೆಟ್ಟಿ,ಉಡುಪಿ ಜಿಲ್ಲಾ ಮೀನುಗಾರರ ಕಾಂಗ್ರೆಸ್ ಸಮಿತಿ ಪ್ರಧಾನ ಕಾರ್ಯದರ್ಶಿಗಳಾದ ಸಂತೋಷ್ ಪಡುಬಿದ್ರಿ,ಉಪೇಂದ್ರ ಮೆಂಡನ್,ವಿಜಯ್ ಪುತ್ರನ್,ಸುರೇಶ್ ಹೆಬ್ರಿ, ಗಣೇಶ್ ದೊಡ್ಡನಗುಡ್ಡೆ, ಸೂರಜ್ ಕಲ್ಮಾಡಿ, ಅಬೂಬಕರ್, ನಸ್ರುಲ್ ಹೂಡೆ, ಪುಷ್ಪರಾಜ್, ರಕ್ಷಿತ್ ಸಾಲ್ಯಾನ್ ಮಲ್ಪೆ , ದಿನೇಶ್,ಸುಧಾಕರ್ ಕೆ, ದೀಪಕ್ ಪೂಜಾರಿ,ಸುಧಾಕರ್,ಆದಿತ್ಯ ಹಾಗೂ ಮೀನುಗಾರ ಮುಖಂಡರು ಉಪಸ್ಥಿತರಿದ್ದರು


Spread the love

Exit mobile version