Home Mangalorean News Kannada News ಮಾಧ್ಯಮ ವೃತ್ತಿಯಾಗಿ ಉಳಿದುಕೊಂಡಿಲ್ಲ, ಉದ್ಯಮವಾಗಿ ಬೆಳೆದು ನಿಂತಿದೆ – ದಿನೇಶ್ ಅಮೀನ್ ಮಟ್ಟು

ಮಾಧ್ಯಮ ವೃತ್ತಿಯಾಗಿ ಉಳಿದುಕೊಂಡಿಲ್ಲ, ಉದ್ಯಮವಾಗಿ ಬೆಳೆದು ನಿಂತಿದೆ – ದಿನೇಶ್ ಅಮೀನ್ ಮಟ್ಟು

????????????????????????????????????
Spread the love

ಮಾಧ್ಯಮ ವೃತ್ತಿಯಾಗಿ ಉಳಿದುಕೊಂಡಿಲ್ಲ, ಉದ್ಯಮವಾಗಿ ಬೆಳೆದು ನಿಂತಿದೆ – ದಿನೇಶ್ ಅಮೀನ್ ಮಟ್ಟು

ಕುಂದಾಪುರ: ಮಾಧ್ಯಮ ಇಂದು ವೃತ್ತಿಯಾಗಿ ಉಳಿದುಕೊಂಡಿಲ್ಲ. ಅದೊಂದು ಉದ್ಯಮವಾಗಿ ಬೆಳೆದು ನಿಂತಿದೆ. ಮಾಧ್ಯಮವೆಂದರೆ ಬಂಡವಾಳ ಹೂಡಿ ಲಾಭ ಪಡೆಯುವುದಲ್ಲ. ನಮ್ಮ ಇವತ್ತಿನ ಎಲ್ಲಾ ಸಮಸ್ಯೆಗಳ ಮೂಲ ಇರುವುದು ಇಲ್ಲೇ. ವೃತ್ತಿ ಉದ್ಯಮವಾಗುತ್ತಿರುವಾಗ ಅದರಿಂದಾಗುವ ದುಷ್ಪರಿಣಾಮಗಳನ್ನು ಆ ವೃತ್ತಿಯಲ್ಲಿ ಇದ್ದವನು ಎದುರಿಸಬೇಕಾಗುತ್ತದೆ. ಕವಲುದಾರಿಯಲ್ಲಿ ಪತ್ರಕರ್ತ ಅಂದಾಗ ನನಗೆ ಪತ್ರಕರ್ತ ದಿಕ್ಕೆಟ್ಟು ನಿಂತಿದ್ದಾನೆ ಅನಿಸುತ್ತಿದೆ. ನಾನು ಮೂವತ್ತು ವರ್ಷಗಳ ಹಿಂದೆ ವೃತ್ತಿಯನ್ನು ಪ್ರವೇಶಿಸುವಾಗ ಇದ್ದ ಮಾಧ್ಯಮ ಕ್ಷೇತ್ರಕ್ಕೂ ಇವತ್ತು ನಾನು ನಿಂತು ನೋಡುವ ಮಾಧ್ಯಮ ಕ್ಷೇತ್ರಕ್ಕೂ ಶತಮಾನಗಳ ಅಂತರ ಎದ್ದು ಕಾಣುತ್ತಿದೆ ಎಂದು ಪತ್ರಕರ್ತ, ಚಿಂತಕ ದಿನೇಶ್ ಅಮೀನ್ ಮಟ್ಟು ನುಡಿದರು.

 

ಅವರು ಮಂಗಳವಾರ ಸಂಜೆ ಕುಂದಾಪುರ ಜ್ಯೂನಿಯರ್ ಕಾಲೇಜಿನ ಕಲಾಮಂದಿರದಲ್ಲಿ ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ನೂತನ ಪದಾಧಿಕಾರಿಗಳ ಪದಪ್ರದಾನ ಕಾರ್ಯಕ್ರಮದಲ್ಲಿ “ಕವಲು ದಾರಿಯಲ್ಲಿ ಪತ್ರಕರ್ತ” ವಿಷಯದಲ್ಲಿ ದಿಕ್ಸೂಚಿ ಭಾಷಣ ಮಾಡಿದರು.

ಉತ್ಪಾದನಾ ವೆಚ್ಚಕ್ಕಿಂತ ಕಡಿಮೆ ಬೆಲೆಗೆ ಮಾರಾಟ ಮಾಡುವ ಏಕೈಕ ವಸ್ತು ಜಗತ್ತಲ್ಲಿದ್ದರೆ ಅದು ಪತ್ರಿಕೆ ಮಾತ್ರ. ಓದುಗನ ಋಣದಲ್ಲಿ ಮಾಧ್ಯಮಗಳು ಇರುವುದಿಲ್ಲ. ಓದುಗ ಕೊಡುವ ಹಣದಿಂದ ಪತ್ರಿಕೆಯೂ ನಡೆಯುತ್ತಿಲ್ಲ. ಪತ್ರಿಕೆ ನಡೆಸುವವರಿಗೂ ಓದುಗರಿಗೂ ಸಂಬಂಧವಿದೆ. ಆದರೆ ಚಾನೆಲ್ ನಡೆಸುವವರಿಗೂ ವೀಕ್ಷಕರಿಗೂ ಸಂಬಂಧವಿರುವುದಿಲ್ಲ. ಇಂತಹ ವ್ಯವಹಾರ ಮಾದರಿಯನ್ನು ಬದಲಾವಣೆ ಮಾಡುವವರೆಗೆ ಈ ಮಾಧ್ಯಮ ಇದೇ ರೀತಿ ಕವಲು ದಾರಿಯಲ್ಲಿರುತ್ತದೆ, ದಿಕ್ಕೆಟ್ಟು ಕೂತಿರುತ್ತದೆ ಎಂದು ಅಮೀನ್ ಮಟ್ಟು ಕಳವಳ ವ್ಯಕ್ತಪಡಿಸಿದರು.

ಓದುಗರು, ವೀಕ್ಷಕರು ಪತ್ರಿಕೆ ಹಾಗೂ ಚಾನೆಲ್ಗಳಿಗೆ ಬಯ್ಯುತ್ತಲೇ ಇರುತ್ತಾರೆ. ಮತ್ತೆ ಅದೇ ಪತ್ರಿಕೆಗಳನ್ನು ಓದುತ್ತಾರೆ. ಅದೇ ಚಾನೆಲ್ ಅನ್ನು ನೋಡುತ್ತಾರೆ. ಪತ್ರಿಕೆ ಓದುಗನ ಋಣದಲ್ಲಿರಬೇಕು. ಅದು ಓದುಗನಿಗೆ ಬದ್ದವಾಗಿರಬೇಕು. ಪ್ರಾಡಕ್ಟ್ ಎನ್ನುವುದು ಬಳಕೆದಾರನ ಋಣದಲ್ಲಿರಬೇಕು. ಅದು ಬಳಕೆದಾರನಿಗೆ ಬದ್ದವಾಗಿರಬೇಕು. ಆದರೆ ಇವತ್ತಿನ ಮಾಧ್ಯಮ ಒಂದು ವೃತ್ತಿಯಾಗಿ ತಗೆದುಕೊಂದರೆ ಅದು ಓದುಗನ ಋಣದಲ್ಲಿಯೂ ಇಲ್ಲ. ಉದ್ಯಮವಾಗಿ ತೆಗೆದುಕೊಂಡರೆ ಅದು ಬಳಕೆದಾರನ ಋಣದಲ್ಲಿಯೂ ಇಲ್ಲ. ಇದು ಕವಲು ದಾರಿಯಲ್ಲಿರುವ ಮಾಧ್ಯಮ ಎಂದು ನಾನು ಭಾವಿಸಿದ್ದೇನೆ ಎಂದು ಮಟ್ಟು ಅಭಿಪ್ರಾಯಪಟ್ಟರು.

ಇಂದು ಒಬ್ಬ ಪತ್ರಕರ್ತನ ಆತ್ಮಸಾಕ್ಷಿ ದಿಕ್ಕೆಟ್ಟು ನಿಂತ ಪರಿಸ್ಥಿತಿ ಇದೆ. ಮಾಧ್ಯಮ ಉದ್ಯಮ, ಕವಲುದಾರಿಯಲ್ಲಿದೆ ಎಂದರೆ ಇದಕ್ಕೆ ಪರಿಹಾರವನ್ನೂ ಕೂಡ ನಾವು ಯೋಚಿಸಬೇಕಿದೆ. ಜಿಲ್ಲಾ, ತಾಲೂಕು ಮಟ್ಟದ ಪತ್ರಿಕೆಯೇ ಭವಿಷ್ಯದ ಮಾಧ್ಯಮವಾಗಿದೆ. ಎಲ್ಲಾ ಬದಲಾವಣೆಗಳನ್ನು ಮೆಟ್ಟಿ ನಿಂತು ಪತ್ರಕರ್ತ ಕೆಲಸ ಮಾಡಬೇಕಿದೆ. ಪತ್ರಕರ್ತ ಮೊದಲು ಸೂಕ್ಷ್ಮತೆಯನ್ನು ಕಳೆದುಕೊಳ್ಳಬಾರದು. ಸೂಕ್ಷ್ಮತೆ ಇಲ್ಲದವ ಪತ್ರಕರ್ತನಾಗಲು ಸಾಧ್ಯವಿಲ್ಲ. ಆದರೆ ನಮ್ಮ ಕೆಲಸ ಬಹಳ ಬೇಗ ನಮ್ಮನ್ನು ಇನ್ಸೆನ್ಸಿಟಿವ್ ಆಗಿ ಮಾಡಿ ಬಿಡುತ್ತೆ. ಪತ್ರಕರ್ತರು ಆಟದಲ್ಲಿ ಅಂಪೈರ್ಗಳಾಗಿರಬೇಕು. ಆದರೆ ಕೆಲವು ಸಂದರ್ಭಗಳಲ್ಲಿ ನಾವೇ ಆಟದೊಳಗೆ ಸೇರಿ ಆಟಗಾರರಾಗಿ ಬಿಡುತ್ತೇವೆ. ಯಾವುದೇ ಸವಲತ್ತು ಇಲ್ಲದ ಕಾಲದಲ್ಲಿ ಒಬ್ಬ ಪತ್ರಕರ್ತನಿಗಿದ್ದ ಮರ್ಯಾದೆ ಇವತ್ತು ಎಲ್ಲಾ ಸವಲತ್ತುಗಳನ್ನು ಇಟ್ಟುಕೊಂಡು ಕೆಲಸ ಮಾಡುವ ಪತ್ರಕರ್ತನ ಬಗ್ಗೆ ಇದೆಯಾ ಎಂದು ನಾವು ಪ್ರಶ್ನೆ ಮಾಡಬೇಕಾಗಿದೆ. ಪತ್ರಕರ್ತ ಇಡೀ ಜಗತ್ತನ್ನು ಅವನ ಹೃದಯದಿಂದ ನೋಡಬೇಕಿದೆ. ಕಳೆದ ಎರಡು ಮೂರು ದಶಕಗಳಲ್ಲಿ ಸಾಕಷ್ಟು ಬದಲಾವಣೆಯಾಗಿದೆ. ಎಲ್ಲಾ ಬದಲಾವಣೆಗಳ ಮಧ್ಯೆ ಚಕ್ರವ್ಯೂವದಲ್ಲಿ ಪತ್ರಕರ್ತ ಬಂದು ಸಿಲುಕಿದ್ದಾನೆ ಎಂದು ದಿನೇಶ್ ಅಮೀನ್ ಮಟ್ಟು ಹೇಳಿದರು.

ಸಂವಿಧಾನದಲ್ಲಿ ನ್ಯಾಯಾಂಗ, ಕಾರ್ಯಾಂಗ, ಶಾಸಕಾಂಗ ಮಾತ್ರವೇ ಇರುವುದು. ನಾಲ್ಕನೇ ಅಂಗ ಮಾಧ್ಯಮ ಎನ್ನುವುದು ಇಲ್ಲ. ನ್ಯಾಯಾಂಗ, ಕಾರ್ಯಾಂಗ, ಶಾಸಕಾಂಗದಲ್ಲಿ ಕೆಲಸ ಮಾಡುವವರಿಗೆ ಸಂಬಳ ಕೊಡುವುದು ನಾವು. ಜನರ ತೆರಿಗೆ ಹಣದಿಂದ ಅವರೆಲ್ಲರಿಗೂ ಸಂಬಳ ಹೋಗುತ್ತದೆ. ಹೀಗಾಗಿ ಜನರಿಗೆ ಅವರನ್ನು ಪ್ರಶ್ನೆ ಮಾಡುವ ಅಧಿಕಾರ ಇರುತ್ತದೆ. ಆದರೆ ಮಾಧ್ಯಮ ರಂಗಕ್ಕೆ ಸಂಬಳ ಕೊಡುವುದು ಸರ್ಕಾರವಲ್ಲ. ಅದನ್ನು ಯಾಕೆ ನಾಲ್ಕನೆ ಅಂಗವೆಂದು ನಾವು ಹೇಳುತ್ತಿದ್ದೆವು ಗೊತ್ತಿಲ್ಲ. ಮಾಧ್ಯಮ ಪ್ರಜಾಪ್ರಭುತ್ವದ ನಾಲ್ಕನೆ ಅಂಗ ಅಲ್ಲ. ಈ ವಾಸ್ತವವನ್ನು ನಾವು ಒಪ್ಪಿಕೊಳ್ಳಬೇಕು. ನಮ್ಮೊಳಗೆ ನಾವು ಇಣುಕಿ ನೋಡಬೇಕಾಗಿದೆ ಎಂದರು.

ಕುಂದಾಪುರ ಎ ಎಸ್ಪಿ ಹರಿರಾಮ್ ಶಂಕರ್ ಮಾತನಾಡಿ ಮಾಧ್ಯಮ ಕ್ಷೇತ್ರ ಮತ್ತು ಪೊಲೀಸ್ ಇಲಾಖೆ ಒಂದೇ ನಾಣ್ಯದ ಎರಡು ಮುಖಗಳಿದ್ದಂತೆ. ಮಾಧ್ಯಮ ಮತ್ತು ಪೊಲೀಸ್ ಇಲಾಖೆ ಪರಸ್ಪರ ಸಮನ್ವಯದಿಂದ ತಮ್ಮ ಕರ್ತವ್ಯವನ್ನು ನಿರ್ವಹಿಸುವುದರಿಂದ ಸಾಮಾಜಿಕ ಸಾಮರಸ್ಯವನ್ನು ಕಾಪಾಡಲು ಸಹಾಯವಾಗುತ್ತದೆ ಎಂದರು.
ನೂತನ ಪದಾಧಿಕಾರಿಗಳಿಗೆ ಪ್ರತಿಜಾÐವಿಧಿಯನ್ನು ಉಡುಪಿ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಗಣೇಶ್ ಪ್ರಸಾದ್ ಪಾಂಡೇಲು ಬೋಧಿಸಿದರು. ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಪ್ರಶಸ್ತಿ ಪುರಸ್ಕøತ ಪತ್ರಕರ್ತ ಲಕ್ಷ್ಮೀ ಮಚ್ಚಿನ ಹಾಗೂ ಈ ಬಾರಿಯ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕøತ ಛಾಯಪತ್ರಕರ್ತ ಸಂತೋಷ್ ಕುಂದೇಶ್ವರ ಅವರನ್ನು ಸನ್ಮಾನಿಸಲಾಯಿತು.

ಕುಂದಾಪುರ ತಾಲೂಕು ಕಾರ್ಯನಿತರತ ಪತ್ರಕರ್ತರ ಸಂಘದ ಅಧ್ಯಕ್ಷ ಶಶಿಧರ ಹೆಮ್ಮಾಡಿ ಅಧ್ಯಕ್ಷತೆ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಕುಂದಾಪುರ ಎಎಸ್ಪಿ ಹರಿರಾಮ್ ಶಂಕರ್, ಉಡುಪಿ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಕಾರ್ಯದರ್ಶಿ ಸಂತೋಷ್ ಸರಳೆಬೆಟ್ಟು, ಜಿಲ್ಲಾ ಉಪಾಧ್ಯಕ್ಷ ರಾಜೇಶ್ ಕೆಸಿ, ಬೈಂದೂರು ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಜನಾರ್ದನ್ ಎಸ್ ಮರವಂತೆ, ಬ್ರಹ್ಮಾವರ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಚಿತ್ತೂರು ಪ್ರಭಾಕರ ಆಚಾರ್ಯ, ತಾಲೂಕು ಕಾರ್ಯದರ್ಶಿ ನಾಗರಾಜ ರಾಯಪ್ಪನಮಠ, ಕೋಶಾಧಿಕಾರಿ ಸತೀಶ್ ಆಚಾರ್ ಉಪಸ್ಥಿತರಿದ್ದರು.

ಹಿರಿಯ ಪತ್ರಕರ್ತ ರಾಮಕೃಷ್ಣ ಹೇರ್ಳೆ ಪ್ರಾಸ್ತಾವಿಕ ಮಾತುಗಳನ್ನಾಡಿದರು. ಪತ್ರಕರ್ತ ರಾಘವೇಂದ್ರ ಪೈ ಸ್ವಾಗತಿಸಿದರು. ಪತ್ರಕರ್ತ ಶ್ರೀಕಾಂತ ಹೆಮ್ಮಾಡಿ ಧನ್ಯವಾದವಿತ್ತರು. ಪತ್ರಕರ್ತ ಜಯಶೇಖರ್ ಮಡಪ್ಪಾಡಿ ಕಾರ್ಯಕ್ರಮ ನಿರೂಪಿಸಿದರು.


Spread the love

Exit mobile version