ರಾಜ್ಯ ಸರಕಾರಕ್ಕೆ 2 ವರ್ಷಗಳ ಸಂಭ್ರಮ: ದ.ಕ. ಜಿಲ್ಲೆಯಲ್ಲಿ 2,488 ಕೋಟಿ ರೂ. ಗ್ಯಾರಂಟಿ ಮೊತ್ತ ವಿತರಣೆ: ಐವನ್ ಡಿಸೋಜ
ಮಂಗಳೂರು: ಕಾಂಗ್ರೆಸ್ ನೇತೃತ್ವದ ರಾಜ್ಯ ಸರಕಾರ ಆಡಳಿತಕ್ಕೆ ಬಂದು 2 ವರ್ಷಗಳು ತುಂಬುತ್ತಿರುವ ಸಂದರ್ಭದಲ್ಲಿ ದ.ಕ. ಜಿಲ್ಲೆಯಲ್ಲಿ ಪಂಚ ಗ್ಯಾರಂಟಿ ಯೋಜನೆಗಳಿಗೆ ಸಂಬಂಧಿಸಿ ಈವರೆಗೆ ಒಟ್ಟು 2,488 ಕೋಟಿ ರೂ.ಗಳನ್ನು ಫಲಾನುಭವಿಗಳಿಗೆ ಒದಗಿಸಲಾಗಿದೆ ಎಂದು ವಿಧಾನ ಪರಿಷತ್ ಸದಸ್ಯ, ಕೆಪಿಸಿಸಿ ಉಪಾಧ್ಯಕ್ಷ ಐವನ್ ಡಿಸೋಜ ಹೇಳಿದ್ದಾರೆ.
ಸುದ್ದಿಗೋಷ್ಠಿಯಲ್ಲಿಂದು ಮಾತನಾಡಿದ ಅವರು, ಕಾಂಗ್ರೆಸ್ ಪಕ್ಷ ತನ್ನ ಚುನಾವಣಾ ಪ್ರಣಾಳಿಕೆಯಲ್ಲಿ ನೀಡಿದ ಗ್ಯಾರಂಟಿಗಳನ್ನು ಜಾರಿಗೆ ತರುವ ಮೂಲಕ ಕಾಂಗ್ರೆಸ್ ಸರಕಾರ ಮಾದರಿ ದೇಶಕ್ಕೆ ಮಾದರಿಯಾಗಿ ರೂಪುಗೊಂಡಿದೆ. ವಿಶ್ವದ ಅರ್ಥಶಾಸ್ತ್ರಜ್ಞರು ಮತ್ತು ವಿವಿಗಳ ಅಧ್ಯಯನಕ್ಕೂ ಕಾಂಗ್ರೆಸ್ನ ಗ್ಯಾರಂಟಿ ಯೋಜನೆಗಳು ಕಾರಣವಾಗಿವೆ. ಕಾಂಗ್ರೆಸ್ ಗ್ಯಾರಂಟಿಯನ್ನು ಟೀಕೆ ಮಾಡಿದ್ದ ಬಿಜೆಪಿ ಕೂಡಾ ಮಹಾರಾಷ್ಟ್ರ ಮತ್ತು ದಿಲ್ಲಿಯಲ್ಲಿ ಕಟ್ ಆಂಡ್ ಪೇಸ್ಟ್ ಮಾಡಿ ಕೇಂದ್ರ ಸರಕಾರ ಜಾರಿಗೊಳಿಸಿದೆ ಎಂದು ಹೇಳಿದರು.
ಕೇಂದ್ರ ಸರಕಾರದ ನಿರಂತರ ತೆರಿಗೆ ಹಂಚಿಕೆ ಹಾಗೂ ಅನುದಾನದ ಅನ್ಯಾಯದ ಹೊರತಾಗಿಯೂ ಕರ್ನಾಟಕವನ್ನು ಅಭಿವೃದ್ಧಿಪಡಿಸುವಲ್ಲಿ ನಮ್ಮ ರಾಜ್ಯ ಸರಕಾರ ಗೆದ್ದಿದೆ ಎಂದು ಐವನ್ ಹೇಳಿದರು.
ದೇಶದ ಒಟ್ಟಾರೆ ಜಿಡಿಪಿ ಶೇ.8.2ಷ್ಟು ಬೆಳವಣಿಗೆಯ ನಡುವೆ ಕರ್ನಾಟಕದ ಜಿಡಿಪಿ ಶೇ.10.2ರಷ್ಟು ಬೆಳವಣಿಗೆಯಾಗಿ ದೇಶದಲ್ಲಿ ಅಗ್ರಸ್ಥಾನ ಪಡೆಯುವಲ್ಲಿ ಮುಖ್ಯಮಂತ್ರಿ ಹಾಗೂ ಉಪ ಮುಖ್ಯಮಂತ್ರಿಯವರ ಶ್ರಮ ಕಾರಣವಾಗಿದೆ. ತೆರಿಗೆ ಸಂಗ್ರಹದಲ್ಲಿ ರಾಜ್ಯ 2ನೆ ಸ್ಥಾನದಲ್ಲಿದೆ. ಹಟ್ಟಿ, ಹಾಡಿ, ತಾಂಡ, ಪಾಳ್ಯ, ಮುಜುರೆ ಗ್ರಾಮಗಳನ್ನು ಕಂದಾಯ ಗ್ರಾಮಗಳಾಗಿ ಪರಿವರ್ತಿಸಿ ಅಲ್ಲಿ ವಾಸಿಸುವ ಒಂದು ಲಕ್ಷಕ್ಕೂ ಅಧಿಕ ಫಲಾನುಭವಿಗಳಿಗೆ ಹಕ್ಕುಪತ್ರವನ್ನು ರಾಜ್ಯ ಸರಕಾರ ನೀಡಿದೆ. ವಿಶ್ವಸಂಸ್ಥೆಯ ಸಾಮಾನ್ಯ ಸಭೆಯ ಅಧ್ಯಕ್ಷ ಫಿಲೆಮನ್ ಯಾಂಗ್ ಅವರು ಕೂಡಾ ಕಾಂಗ್ರೆಸ್ ಸರಕರಾದ ಪಂಚ ಗ್ಯಾರಂಟಿಗಳ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ ಎಂದು ಅವರು ತಿಳಿಸಿದರು.
ಕಾಂಗ್ರೆಸ್ ನಿಂದ ನಡೆಸಲಾದ ಜನಗಣತಿಯ ಹಿನ್ನೆಲೆಯಲ್ಲಿ ಕೇಂದ್ರ ಸರಕಾರವು ಜನಗಣತಿಗೆ ಮುಂದಾಗಿದೆ. ಕಾಂಗ್ರೆಸ್ ನ ಯೋಜನೆಗಳು ಕೇವಲ ಬೂಟಾಟಿಕೆ ಅಲ್ಲ, ಫಲಾನುಭವಿಗಳಿಗೆ ಯೋಜನೆಗಳನ್ನು ತಲುಪಿಸುವ ಬದ್ಧತೆ. ಕೇಂದ್ರ ಸರಕಾರವು ತೆರಿಗೆ ಸಂಗ್ರಹದಿಂದ ರಾಜ್ಯಕ್ಕೆ ಒದಗಿಸಬೇಕಾದ ಅನುದಾನದಲ್ಲಿ ಮಲತಾಯಿ ಧೋರಣೆ ತಳೆದರೂ, ರಾಜ್ಯ ಸರಕಾರ ಹಲವು ಯೋಜನೆಗಳ ಮೂಲಕ ಅಭಿವೃದ್ಧಿ ಕಾರ್ಯ ನಡೆಸುತ್ತಿದ್ದು, ರಾಜ್ಯದ ಹಣಕಾಸಿನ ವ್ಯವಸ್ಥೆಯನ್ನೂ ಸುವ್ಯವಸ್ಥಿತವಾಗಿ ಇರುವಂತೆ ಮಾಡಿದೆ ಎಂದು ಐವನ್ ಡಿಸೋಜ ಹೇಳಿದರು.
ಸುದ್ದಿಗೋಷ್ಠಿಯಲ್ಲಿ ಮುಖಂಡರಾದ ಶಶಿಧರ ಹೆಗ್ಡೆ, ಗಿರೀಶ್, ವಿಕಾಶ್ ಶೆಟ್ಟಿ, ಪದ್ಮಪ್ರಸಾದ್ ಜೈನ್, ಎಲಿಸ್ಟರ್ ಡಿಕುನ್ಹ, ಸತೀಶ್ ಪೆಂಗಲ್ ಮೊದಲಾದವರು ಉಪಸ್ಥಿತರಿದ್ದರು.