ವನ್ಯಜೀವಿ ತಜ್ಞ ಡಾ. ಕೆ. ಉಲ್ಲಾಸ್ ಕಾರಂತ್ ಅವರಿಂದ ‘ನೈಜ ಹುಲಿ ವೇಷ ಮಾದರಿ’ ಅನಾವರಣ
ಮಂಗಳೂರು| ಖ್ಯಾತ ವನ್ಯಜೀವಿ ಪ್ರಾಣಿಶಾಸ್ತçಜ್ಞ ಮತ್ತು ಹುಲಿ ಸಂರಕ್ಷಣಾವಾದಿ ಡಾ. ಕೆ. ಉಲ್ಲಾಸ್ ಕಾರಂತ್ ಅವರು ಏಪ್ರಿಲ್ 20, ಸೋಮವಾರ ನಗರದ ಕೊಡಿಯಾಲ್ಗುತ್ತು ಕಲಾಕೇಂದ್ರದಲ್ಲಿ ‘ನೈಜ ಹುಲಿ ವೇಷ ಮಾದರಿ’ ಗಳನ್ನು ಅನಾವರಣಗೊಳಿಸಿದರು. ಈ ಪ್ರಯತ್ನವು ದಕ್ಷಿಣ ಕನ್ನಡದ ಸಾಂಪ್ರದಾಯಿಕ ಹುಲಿ ನೃತ್ಯವಾದ ಪಿಲಿವೇಷಕ್ಕೆ ಹೆಚ್ಚಿನ ವಾಸ್ತವಿಕತೆ ಮತ್ತು ಪ್ರಾಮಾಣಿಕತೆಯನ್ನು ತರಲು ಉದ್ದೇಶಿಸಿದೆ.

ಈ ‘ನೈಜ ಹುಲಿ ವೇಷ ಮಾದರಿಗಳು’ ಹುಲಿ ಮತ್ತು ಚಿರತೆಯನ್ನು ಪ್ರತಿನಿಧಿಸುವ ಎರಡು ಕಲಾ ಶಿಲ್ಪಗಳನ್ನು ಒಳಗೊಂಡಿದ್ದು, ನೈಜ ದೇಹಬಣ್ಣ, ಹುಲಿಗೆ ಪಟ್ಟೆಗಳು ಮತ್ತು ಚಿರತೆಗೆ ರೋಸೆಟ್ಗಳಂತಹ ವಿನ್ಯಾಸಗಳು, ತಲೆ ಅಲಂಕಾರ ಮತ್ತು ಬಾಲ ಸೇರಿದಂತೆ ವಿವರವಾದ ಅಂಶಗಳನ್ನು ಹೊಂದಿದೆ. ಈ ಶಿಲ್ಪಗಳನ್ನು ಕಲಾವಿದ ಹರೀಶ್ ಕೊಡಿಯಾಲ್ಬೈಲ್ ಅವರು ಸಿದ್ದಕಟ್ಟೆ ಭೂಷಣ್ ಶೆಟ್ಟಿ ಮತ್ತು ನಾಗರಾಜ್ ಬಜಾಲ್ ಅವರ ಸಹಕಾರದೊಂದಿಗೆ ವ್ಯಾಪಕ ಸಂಶೋಧನೆಯ ಆಧಾರದ ಮೇಲೆ ರಚಿಸಿದ್ದಾರೆ. ಯೋಜನೆಯನ್ನು ಡಾ. ಕಾರಂತ್ ಅವರು ರೂಪಿಸಿ ಸಂಯೋಜಿಸಿದ್ದು, ತಮ್ಮ ಕ್ಷೇತ್ರಾನುಭವದ ಆಧಾರದ ಮೇಲೆ ಮಾರ್ಗದರ್ಶನ ನೀಡಿದ್ದಾರೆ.
ಈ ಶಿಲ್ಪಗಳನ್ನು ಗ್ರೂಪ್ ಕ್ಯಾಪ್ಟನ್ ಕೊಡಿಯಾಲ್ಗುತ್ತು ಪ್ರದೀಪ್ ಶೆಟ್ಟಿ ಅವರು ಪಿಲಿವೇಷ ವಿದ್ವಾಂಸರಾದ ಡಾ. ಚಂದ್ರಶೇಖರ ಶೆಟ್ಟಿ ಮತ್ತು ಕೆ. ಕೆ. ಪೇಜಾವರ ಅವರ ಸಮ್ಮುಖದಲ್ಲಿ ಉದ್ಘಾಟಿಸಿದರು. ನಂತರ ಡಾ. ಕಾರಂತ್ ಅವರ ಪರಿಚಯಾತ್ಮಕ ಭಾಷಣ ಹಾಗೂ ಸಂವಾದ ಕಾರ್ಯಕ್ರಮ ನಡೆಯಿತು.
ಹುಲಿಗಳ ಮೇಲಿನ ತಮ್ಮ ಆರಂಭಿಕ ಆಕರ್ಷಣೆಯನ್ನು ನೆನಪಿಸಿಕೊಳ್ಳುತ್ತಾ, ಡಾ. ಕಾರಂತ್ ಅವರು ಬಾಲ್ಯದಲ್ಲಿ ಹುಲಿ ನೃತ್ಯವನ್ನು ವೀಕ್ಷಿಸಿದ ನಂತರ ಮತ್ತು ಸರ್ಕಸ್ನಲ್ಲಿ ನಿಜವಾದ ಹುಲಿಯನ್ನು ನೋಡಿದ ಮೂಲಕ ತಮ್ಮ ಆಸಕ್ತಿ ಹುಟ್ಟಿಕೊಂಡಿತು ಎಂದು ಹೇಳಿದರು. 1960 ರ ದಶಕದ ವೇಳೆಗೆ ಅತಿಯಾದ ಬೇಟೆಯು ಹುಲಿಗಳ ಸಂಖ್ಯೆಯನ್ನು ಅಂಚಿಗೆ ತಂದಿತು, ಆಗಿನ ಪ್ರಧಾನಿ ಇಂದಿರಾ ಗಾಂಧಿಯವರ ನೇತೃತ್ವದ ಸಂರಕ್ಷಣಾ ಕ್ರಮಗಳು ಆರಂಭವಾದವು ಎಂದು ಅವರು ಉಲ್ಲೇಖಿಸಿದರು. “ಹುಲಿಗಳ ಬಗ್ಗೆ ಅಪಾರ ಆಕರ್ಷಣೆಯಿಂದ ನಾನು ನನ್ನ ಜೀವನವನ್ನು ಅವುಗಳ ವೈಜ್ಞಾನಿಕ ಅಧ್ಯಯನ ಮತ್ತು ಸಂರಕ್ಷಣೆಗೆ ಸಮರ್ಪಿಸಿದ್ದೇನೆ,” ಎಂದು ಹಂಚಿಕೊAಡರು. ಅರಣ್ಯದಲ್ಲಿ ಮೊದಲ ಬಾರಿಗೆ ಹುಲಿಯನ್ನು ಕಾಣಲು 15 ವರ್ಷಗಳ ಕ್ಷೇತ್ರ ಕಾರ್ಯ ಬೇಕಾಯಿತು ಎಂದರು.
ಈ ಮಾದರಿ ಪ್ರಸ್ತುತಿಯ ಹಿಂದಿನ ಪರಿಕಲ್ಪನೆಯನ್ನು ವಿವರಿಸುತ್ತಾ, ಇಂದಿನ ಪಿಲಿವೇಷವು ನೈಜ ಹುಲಿ ಗುಣಲಕ್ಷಣಗಳೊಂದಿಗೆ ಸಂಪರ್ಕವನ್ನು ಹೊಂದಿರುವುದಿಲ್ಲ ಎಂದು ಅವರು ಗಮನಿಸಿದರು. “ಹಿಂದೆ ಪಿಲಿವೇಷ ಪ್ರದರ್ಶನವು ಸಾಮಾಜಿಕ ಗೌರವವನ್ನು ಹೊಂದಿದ್ದಷ್ಟೇ ಅಲ್ಲ, ಹುಲಿಯ ನೈಜ ವರ್ತನೆಯನ್ನೂ ಪ್ರತಿಬಿಂಬಿಸುತ್ತಿತ್ತು. ಇಂದು ಸಂಬAಧವಿಲ್ಲದ ಬಣ್ಣಗಳು ಮತ್ತು ವಿನ್ಯಾಸಗಳನ್ನು ಬಳಸಲಾಗುತ್ತಿದ್ದು, ಮೂಲ ಸ್ವರೂಪದಿಂದ ದೂರವಾಗಿದೆ. ಕೇವಲ ಗ್ಲಾಮರ್ ಆಕರ್ಷಣೆ ಮತ್ತು ವ್ಯಾನಿಟಿ ಪ್ರದರ್ಶನದ ಸಾಧನವಾಗುತ್ತಿರುವ ಪಿಲಿವೇಷವು ಮಕ್ಕಳನ್ನು ಆಕರ್ಷಿಸುವುದರಿಂದ ವಯಸ್ಕರನ್ನು ಮೆಚ್ಚಿಸುವತ್ತ ದಿಕ್ಕಿಗೆ ತಿರುಗಿದೆ,” ಎಂದು ಅವರು ಅಭಿಪ್ರಾಯಪಟ್ಟರು. ಈ ಕಲೆಗೆ ಹೆಚ್ಚಿನ ಅಧ್ಯಯನ ಮತ್ತು ನೈಜತೆ ಅಗತ್ಯವಿದೆ ಎಂದು ಪ್ರದರ್ಶಕರು ಮತ್ತು ಸಂಘಟಕರನ್ನು ಒತ್ತಾಯಿಸಿದರು.
ಚರ್ಚೆಯಲ್ಲಿ ಭಾಗವಹಿಸಿದ ಕಲಾವಿದ ಹರೀಶ್ ಕೊಡಿಯಾಲ್ಬೈಲ್ ಅವರು ಹುಲಿಯ ಲಕ್ಷಣಗಳನ್ನು ಮಾನವ ದೇಹದ ರೂಪಕ್ಕೆ ಅನುವಾದಿಸುವುದು ವಿಶಿಷ್ಟ ಅನುಭವವಾಗಿತ್ತು ಎಂದರು. ಡಾ. ಚಂದ್ರಶೇಖರ ಶೆಟ್ಟಿ ಅವರು ಹುಲಿ ವೇಷದ ವಿಕಾಸದ ಕುರಿತು ಲಭ್ಯ ಮಾಹಿತಿಯ ಕೊರತೆಯನ್ನು ಉಲ್ಲೇಖಿಸಿದರು. ಕೆ. ಪೇಜಾವರ ಅವರು ಪಿಲಿವೇಷವು ಭಕ್ತಿ, ದೈಹಿಕ ತರಬೇತಿ ಮತ್ತು ಸ್ಥಳೀಯ ವ್ಯಾಯಾಮ ಶಾಲಾ ಸಂಸ್ಕೃತಿಯೊAದಿಗೆ ನಿಕಟ ಸಂಬAಧ ಹೊಂದಿದೆ ಎಂದು ಹೇಳಿದರು.
ಕೊಡಿಯಾಲಗುತ್ತು ಪ್ರತಿಭಾ ಕಾರಂತ್ ಸ್ವಾಗತಿಸಿದರು. ಡಾ. ಚಂದ್ರಶೇಖರ ಶೆಟ್ಟಿ ಬರೆದ ಹುಲಿ ವೇಷ ಕುರಿತ ಪುಸ್ತಕದ ಪ್ರತಿಗಳನ್ನು ಕೊಡಿಯಾಲ್ಗುತ್ತು ಕುಟುಂಬದ ಹಿರಿಯರಾದ ಜ್ಯೋತಿ ಆಳ್ವ ವಿತರಿಸಿದರು. ನೇಮಿರಾಜ್ ಶೆಟ್ಟಿ ವಂದಿಸಿದರು. ಕಾರ್ಯಕ್ರಮಕ್ಕೆ ಭಾರತೀಯ ಸಾಂಸ್ಕೃತಿಕ ಸಂಸ್ಥೆ ಇಂಟ್ಯಾಕ್ ನ ಮಂಗಳೂರು ಅಧ್ಯಾಯವು ಮತ್ತು ಆರ್ಟ್ ಕೆನರಾ ಟ್ರಸ್ಟ್ ಸಹಕಾರ ನೀಡಿದವು. ಭರತ್ ಸ್ಕೌಟ್ಸ್ ಅಂಡ್ ಗೈಡ್ಸ್ನ ಮಾಜಿ ಜಿಲ್ಲಾ ಮುಖ್ಯ ಆಯುಕ್ತ ಎನ್. ಜಿ. ಮೋಹನ್ ಹಾಗೂ ಮುಡಾ ಮಾಜಿ ಅಧ್ಯಕ್ಷ ಕೆ. ತೇಜೋಮಯ ಅವರು ಸೇರಿದಂತೆ ಹಲವಾರು ಗಣ್ಯರು ಉಪಸ್ಥಿತರಿದ್ದರು.