ವರಾಹಿ ಯೋಜನೆ ವೈಫಲ್ಯ ಮತ್ತು ಭ್ರಷ್ಟಾಚಾರದ ತನಿಖೆಗೆ ಎಸ್ ಐ ಟಿ ರಚನೆಯಾಗಲಿ – ಕೆ ವಿಕಾಸ್ ಹೆಗ್ಡೆ
ಕುಂದಾಪುರ: ವರಾಹಿ ಯೋಜನೆ ವೈಫಲ್ಯ ಮತ್ತು ಭ್ರಷ್ಟಾಚಾರದ ತನಿಖೆಗೆ ಎಸ್ ಐ ಟಿ ರಚನೆಯಾಗಬೇಕು ಎಂದು ರೈತ ಮುಖಂಡ ಕೆ. ವಿಕಾಸ್ ಹೆಗ್ಡೆ ಆಗ್ರಹಿಸಿದ್ದಾರೆ.
ವರಾಹಿ ನೀರಾವರಿ ಯೋಜನೆಗೆ 1979ರಲ್ಲಿ ಅಂದಿನ ಮುಖ್ಯಮಂತ್ರಿ ದಿವಂಗತ ಗುಂಡೂರಾಯರು ಶಂಖುಸ್ಥಾಪನೆ ನೆರವೇರಿಸಿದರು, ಎಡದಂಡೆ, ಬಲದಂಡೆ ಹಾಗೂ ಏತ ನೀರಾವರಿ ಮೂರು ವಿಭಾಗಗಳನ್ನು ಒಳಗೊಂಡ ಬೈಂದೂರು, ಕುಂದಾಪುರ ಹಾಗೂ ಉಡುಪಿ ವಿಧಾನ ಸಭಾ ಕ್ಷೇತ್ರಗಳ ಸುಮಾರು ಹದಿನೆಂಟು ಸಾವಿರ ಹೆಕ್ಟೇರ್ ಕೃಷಿ ಭೂಮಿಗೆ ನೀರುಣಿಸುವ ಯೋಜನೆ, ಯೋಜನೆ ಪ್ರಾರಂಭವಾಗಿ ಐದು ದಶಕಗಳೇ ಕಳೆದರೂ ಎಡ ದಂಡೆ ಕಾಲುವೆ ಕಾಮಗಾರಿ ಬಹು ಭಾಗ ಮುಗಿದು ಒಂದಷ್ಟು ಹೆಕ್ಟೇರ್ ಕೃಷಿ ಭೂಮಿಗೆ ನೀರು ಹೋಗುತ್ತಿದೆ ಬಿಟ್ಟರೆ ಬಲದಂಡೆ ಕಾಮಗಾರಿ ಇಲ್ಲಿಯ ತನಕ ಪ್ರಾರಂಭ ವಾಗಲೇ ಇಲ್ಲಾ, ಇನ್ನು ಕುಂದಾಪುರ ಹಾಗೂ ಉಡುಪಿ ವಿಧಾನ ಸಭಾ ಕ್ಷೇತ್ರದ ಒಂದಷ್ಟು ಗ್ರಾಮಗಳಿಗೆ ನೀರುಣಿಸುವ ವರಾಹಿ ಏತ ನೀರಾವರಿ ಕಾಮಗಾರಿ ಪ್ರಾರಂಭವಾಗಿ ಐದು ವರ್ಷ ಕಳೆದರೂ ಇನ್ನೂ ಸಹ ಈ ಕಾಮಗಾರಿ ಪೂರ್ಣಪ್ರಮಾಣದಲ್ಲಿ ಮುಗಿದಿರುವುದಿಲ್ಲ.
ಆದರೆ ಈ ಕಾಲುವೆ ರೈತರ ಖಾಸಗಿ ಜಮೀನಿನ ಮೇಲೆ ಹಾದು ಹೋಗಿರುತ್ತದೆ ಅಲ್ಲಿ ಕಾಮಗಾರಿ ಪೂರ್ಣಗೊಂಡಿರುತ್ತದೆ ಯಾವ ರೈತರಿಗೂ ಪರಿಹಾರ ಬಾರದಿದ್ದರೂ ರೈತರು ಕಾಮಗಾರಿಗೆ ಎಲ್ಲೂ ಸಹ ತೊಡಕನ್ನು ಉಂಟುಮಾಡದೆ ಕಾಮಗಾರಿಗೆ ಜಾಗವನ್ನು ಬಿಟ್ಟು ಕೊಟ್ಟಿರುತ್ತಾರೆ. ಸರಕಾರಿ ಜಮೀನು ಮತ್ತು ಮೀಸಲು ಅರಣ್ಯ ಭಾಗದಲ್ಲಿ ಹಾದುಹೋಗುವ ಕಾಲುವೆಗೆ ಕಾಮಗಾರಿ ಮಾಡಲು ಇನ್ನೂ ಸಹ ಅವಕಾಶವನ್ನು ಕೊಡದಿರುವುದು ಜಿಲ್ಲೆಯ ಜನಪ್ರತಿನಿದಿನಗಳ ಹಾಗೂ ಅಧಿಕಾರಿಗಳ ಬೇಜವಾಬ್ದಾರಿಯಾಗಿದೆ, ಸುಮಾರು ಒಂಬತ್ತು ಕೋಟಿ ಅಂದಾಜು ಮೊತ್ತಕ್ಕೆ ಪ್ರಾರಂಭವಾದ ಯೋಜನೆ ಸಾವಿರಾರು ಕೋಟಿ ಖರ್ಚಾದರೂ ಸಹ ಕಾಮಗಾರಿ ಇನ್ನೂ ಆಮೆಗತಿಯಲ್ಲಿ ಸಾಗುತ್ತಿರುವುದು ಜಿಲ್ಲೆಯ ರೈತರಿಗೆ ಮಾಡಿದ ದ್ರೋಹವಾಗಿದೆ. ಈ ಯೋಜನೆ ಕೇವಲ ಗುತ್ತಿಗೆದಾರರ ಹಾಗೂ ಅಧಿಕಾರಿಗಳ ಜೇಬು ತುಂಬಿಸುವ ಯೋಜನೆಯಾಗಿದೆ ಹಾಗೂ ಈ ಯೋಜನೆಯ ವೈಫಲ್ಯ ಹಾಗೂ ಭ್ರಷ್ಟಾಚಾರದ ಕುರಿತು ತನಿಖೆ ನಡೆಸಿ ತಪ್ಪಿತಸ್ಥರ ಮೇಲೆ ಕ್ರಮ ಕೈಗೊಳ್ಳಲು ಸರ್ಕಾರ ಒಂದು ಎಸ್ ಐ ಟಿ ರಚನೆ ಮಾಡಬೇಕು ಎಂದು ಕುಂದಾಪುರದ ರೈತ ಮುಖಂಡ ಕೆ. ವಿಕಾಸ್ ಹೆಗ್ಡೆ ಪತ್ರಿಕಾ ಹೇಳಿಕೆ ಮೂಲಕ ಆಗ್ರಹ ಪಡಿಸಿದ್ದಾರೆ.