ವಿಚಾರಣೆಗೆ ಗೈರಾದ ಕಾರಣಕ್ಕೆ ಶರಣ್ ಪಂಪ್ವೆಲ್ ಬಂಧನ – ನಗರ ಪೊಲೀಸ್ ಆಯುಕ್ತರ ಸ್ಪಷ್ಟನೆ
ಮಂಗಳೂರು: ವಿಶ್ವ ಹಿಂದೂ ಪರಿಷದ್ ಮುಖಂಡ ಶರಣ್ ಪಂಪ್ವೆಲ್ ವಿರುದ್ದ ದಾಖಲಾಗಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಎರಡು ಬಾರಿ ವಿಚಾರಣೆಗೆ ಹಾಜರಾಗಲು ನೋಟಿಸು ನೀಡಿದ್ದರೂ ಕೂಡ ಹಾಜರಾಗದೆ ಇರುವ ಕಾರಣಕ್ಕಾಗಿ ಬಂಧಿಸಲಾಗಿದೆ ಎಂದು ನಗರ ಪೊಲೀಸ್ ಆಯುಕ್ತರಾದ ಅನುಪಮ್ ಅಗರ್ವಾಲ್ ಸ್ಪಷ್ಟ ಪಡಿಸಿದ್ದಾರೆ.
ಮೇ 1 ರಂದು ಬಜ್ಪೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಸುಹಾಸ್ ಶೆಟ್ಟಿ ಹತ್ಯೆ ಸಂಭವಿಸಿದ್ದು ಮೇ 2 ರಂದು ಬೆಳಗ್ಗಿನ ಜಾವ ಮಂಗಳೂರಿನ ಎಜೆ ಆಸ್ಪತ್ರೆಯಲ್ಲಿ ಶವದ ಮರಣೋತ್ತರ ಪರೀಕ್ಷೆ ನಡೆಸಲಾಗಿತ್ತು.
ಆ ರಾತ್ರಿ ಆಸ್ಪತ್ರೆ ಆವರಣದ ಹೊರಗೆ, ಹಿಂದೂ ಸಂಘಟನೆಯ ನಾಯಕ ಶರಣ್ ಪಂಪ್ವೆಲ್ ಸುದ್ದಿಮಾಧ್ಯಮಗಳಿಗೆ ಮಾತನಾಡಿ, ಹಿಂದೂ ಸಂಘಟನೆಯ ಸದಸ್ಯ ಸುಹಾಸ್ ಶೆಟ್ಟಿಯನ್ನು “ಜಿಹಾದಿ ಇಸ್ಲಾಮಿಕ್ ಉಗ್ರವಾದಿಗಳು” ಹತ್ಯೆ ಮಾಡಿವೆ ಎಂದು ಆರೋಪಿಸಿದರು. ಅವರು ನಿಷೇಧಿತ ಸಂಘಟನೆ PFI ನೇರವಾಗಿ ಭಾಗಿಯಾಗಿರುವುದಾಗಿ ಹೇಳಿದ್ದು, . 02-05-2025 ರಂದು ಬೆಳಿಗ್ಗೆ 6:00 ರಿಂದ ಸಂಜೆ 6:00 ಗಂಟೆಯವರೆಗೆ ವಿಶ್ವ ಹಿಂದೂ ಪರಿಷತ್ ಮತ್ತು ಇತರೆ ಹಿಂದೂ ಸಂಘಟನೆಗಳು ದಕ ಜಿಲ್ಲೆಯಲ್ಲಿ ಬಂದ್ ನಡೆಸಲಿವೆ ಎಂದು ಘೋಷಿಸಿ ಸಾರ್ವಜನಿಕರಿಂದ ಅಂಗಡಿಗಳು, ಕಚೇರಿಗಳು ಮತ್ತು ಇತರೆ ಸಂಸ್ಥೆಗಳನ್ನು ಮುಚ್ಚುವಂತೆ ಕೋರಿದರು.
ಆದರೆ, ಸಾರ್ವಜನಿಕರು ಬಂದ್ಗೆ ಪ್ರತಿಕ್ರಿಯಿಸದಿದ್ದಾಗ, ಶರಣ್ ಪಂಪ್ವೆಲ್ ಅವರ ಹೇಳಿಕೆಯಿಂದ ಪ್ರೇರಿತರಾದ ಅವರ ಅನುಯಾಯಿಗಳು ಮಂಗಳೂರಿನ ವಿವಿಧ ಭಾಗಗಳಲ್ಲಿ ಗೊಂದಲ ಸೃಷ್ಟಿಸಿದರು. ಇದರಿಂದ ಸಾರ್ವಜನಿಕ ಆಸ್ತಿ ಹಾನಿ, ಸಾಂಪ್ರದಾಯಿಕ ಒತ್ತಡ ಮತ್ತು ಸಾರ್ವಜನಿಕ ಶಾಂತಿಯ ವ್ಯತ್ಯಯ ಸಂಭವಿಸಿತು.
ಅಂತೆಯೇ, ಕದ್ರಿ ಪೊಲೀಸ್ ಠಾಣೆಯಲ್ಲಿ ಸ್ವಯಂ ಪ್ರೇರಿತ ಪ್ರಕರಣ ಸಂಖೆ್ಯ 75/2025 ರಲ್ಲಿ ಬಿ ಎನ್ ಎಸ್ ಕಾಯ್ದೆಯ ಸೆಕ್ಷನ್ಗಳು 49, 196(1), 324(2), 324(4), 324(5), ಮತ್ತು 353(2) ಅಡಿ ಶರಣ್ ಪಂಪ್ವೆಲ್ ವಿರುದ್ಧ ಪ್ರಕರಣ ದಾಖಲಿಸಲಾಯಿತು. ತನಿಖೆಯ ಸಂದರ್ಭದಲ್ಲಿ ಅಗತ್ಯ ಸಾಕ್ಷ್ಯಗಳನ್ನು ಸಂಗ್ರಹಿಸಲಾಯಿತು.
ಆರೋಪಿಗೆ ವಿಚಾರಣೆಗಾಗಿ BNSS ಅಡಿ ಎರಡು ನೋಟಿಸು ನೀಡಲಾದರೂ ಅವರು ವಿಚಾರಣೆಗೆ ಹಾಜರಾಗಿರುವುದಿಲ್ಲ ಮತ್ತು ತನಿಖೆಗೆ ಸಹಕರಿಸಿರಲಿಲ್ಲ. ಆದ್ದರಿಂದ, 27-05-2025 ರಂದು ಶರಣ್ ಪಂಪ್ವೆಲ್ ಅವರನ್ನು ಬಂಧಿಸಿ ವಿಚಾರಣೆ ನಡೆಸಿ, ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ ಎಂದು ನಗರ ಪೊಲೀಸ್ ಆಯುಕ್ತರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ