ವಿಧಾನಸಭಾಧ್ಯಕ್ಷರನ್ನು ಬಹಿರಂಗವಾಗಿ ಟೀಕಿಸುವುದೇ ಸಂವಿಧಾನ ನಡೆ : ಕೆ.ವಿಕಾಸ್ ಹೆಗ್ಡೆ
ಕುಂದಾಪುರ: ಭಾರತದ ಪವಿತ್ರವಾದ ಸಂವಿಧಾನದ ಅಡಿಯಲ್ಲಿ ಸಾರ್ವತ್ರಿಕ ಚುನಾವಣೆಯಲ್ಲಿ ಸ್ಪರ್ಧೆ ಮಾಡಿ, ಗೆದ್ದು ಶಾಸಕರಾಗಿ ಸಂವಿಧಾನದಲ್ಲಿ ಹೇಳಿರುವ ಕರ್ತವ್ಯಗಳನ್ನು ಪಾಲಿಸುವುದಾಗಿ ಸಂವಿಧಾನದ ಹೆಸರಿನಲ್ಲಿಯೇ ಪ್ರಮಾಣವಚನ ಸ್ವೀಕರಿಸಿರುವ ಉಡುಪಿ ಶಾಸಕ ಯಶ್ಪಾಲ್ ಸುವರ್ಣ ಅವರು, ಸಂವಿಧಾನದಲ್ಲಿ ಉಲ್ಲೇಖವಾಗಿರುವ ಅತ್ಯಂತ ಪವಿತ್ರ ಹಾಗೂ ಅತ್ಯಂತ ಗೌರವಾನ್ವಿತ ಹುದ್ದೆಯಾದ ವಿಧಾನಸಭೆಯ ಸಭಾಧ್ಯಕ್ಷದ ತೀರ್ಮಾನಗಳನ್ನೆ ಸಾರ್ವಜನಿಕವಾಗಿ ಪ್ರಶ್ನಿಸುವ ಮೂಲಕ ಅಸಂವಿಧಾನಿಕ ನಡವಳಿಕೆಯನ್ನು ತೋರುತ್ತಿರುವುದು ಖಂಡನೀಯ ಎಂದು ಜಿಲ್ಲಾ ಕಾಂಗ್ರೆಸ್ ವಕ್ತಾರ ಕೆ.ವಿಕಾಸ್ ಹೆಗ್ಡೆ ತಿಳಿಸಿದ್ದಾರೆ.
ವಿಧಾನಸಭಾ ಅಧಿವೇಶನದ ಸಮಯದಲ್ಲಿ ಸಾಮಾಜಿಕ ಜವಾಬ್ದಾರಿಯನ್ನು ಅತ್ಯಂತ ಎಚ್ಚರಿಕೆಯಿಂದ ನಿರ್ವಹಿಸಬೇಕಾದ ಒಬ್ಬ ಜನಪ್ರತಿನಿಧಿಯಾಗಿದ್ದ ಅವರು, ಸಭಾಧ್ಯಕ್ಷರ ಪೀಠವನ್ನು ಏರಿ, ಅಧ್ಯಕ್ಷರ ಹಾಗೂ ಪೀಠದ ಮೇಲೆಯೇ ಕಾಗದ ಪತ್ರಗಳನ್ನು ಹರಿದು, ಸಭೆಗೆ ಅಗೌರವ ತೋರಿದ ನೆಲೆಯಲ್ಲಿ ವಿಧಾನಸಭೆಯಿಂದ ಅಮಾನತುಗೊಂಡಿದ್ದ ಅವರು, ಇದೀಗ ಅಮಾನತು ಆದೇಶ ರದ್ದಾದ ಬಳಿಕವೂ ತಮ್ಮ ಹಿಂದಿನ ನಡವಳಿಕೆಯನ್ನೆ ಮುಂದುವರೆಸಿರುವುದು ದುರದೃಷ್ಟಕರ.
ಅಧಿವೇಶನದಲ್ಲಿ ಅಮಾನತುಗೊಂಡ ಶಾಸಕರ ಅಮಾನತು ಆದೇಶವನ್ನು ಮರುಪರಿಶೀಲಿಸುವಂತೆ ದುಂಬಾಲು ಬಿದ್ದು, ಆದೇಶ ರದ್ದಾದ ಬಳಿಕ ಸಭಾಧ್ಯಕ್ಷರ ನಡೆಯನ್ನು ಟೀಕಿಸುವುದು ಒಬ್ಬ ಜವಾಬ್ದಾರಿಯುತ ಶಾಸಕನ ಬೇಜವಾಬ್ದಾರಿಯುತ ಹೇಳಿಕೆಯಾಗಿದೆ ಹಾಗೂ ಇದು ಸಂವಿಧಾನ ವಿರೋಧಿ ನಿಲುವು ಕೂಡ ಆಗಿದೆ.
ಶಾಸಕರ ಹಾಗೂ ಪ್ರತಿಪಕ್ಷ ನಾಯಕರ ಮನವಿ ಮೇರೆಗೆ ಸಭಾಧ್ಯಕ್ಷರು, ಮುಖ್ಯಮಂತ್ರಿಗಳು, ಉಪಮುಖ್ಯಮಂತ್ರಿಗಳು ಹಾಗೂ ವಿರೋಧ ಪಕ್ಷದ ನಾಯಕರ ಉಪಸ್ಥಿತಿಯಲ್ಲಿ ನಡೆದ ಸಂಧಾನ ಸಭೆಯಲ್ಲಿ ತೆಗೆದುಕೊಂಡಿರುವ ತೀರ್ಮಾನಗಳನ್ನು ಮಾಧ್ಯಮದ ಮೂಲಕ ಟೀಕಿಸುವುದರೊಂದಿಗೆ, ಉಡುಪಿ ಶಾಸಕರಿಗೆ ತಮ್ಮದೆ ಪಕ್ಷದ ಮುಖಂಡರಾದ ಆರ್.ಅಶೋಕ್ ಅವರ ಮೇಲೂ ಗೌರವ ಇಲ್ಲ ಎನ್ನುವುದನ್ನು ಹೇಳಿಕೆಯ ಮೂಲಕ ತೋರಿಸಿದ್ದಾರೆ.
ಶಾಸಕರಾದ ಮೇಲೆ, ತಮ್ಮ ವರ್ತನೆಯನ್ನು ಬದಲಾಯಿಸಿಕೊಳ್ಳಬಹುದು, ಎನ್ನುವ ಜಿಲ್ಲೆಯ ಜನರ ನಿರೀಕ್ಷೆಗಳನ್ನು ಉಡುಪಿ ಶಾಸಕರು, ಈ ರೀತಿಯ ಹೇಳಿಕೆ ಹಾಗೂ ವರ್ತನೆಗಳ ಮೂಲಕ ಆಗಾಗ ಹುಸಿಗೊಳಿಸುತ್ತಿರುವುದು ಅವರನ್ನು ಆಯ್ಕೆ ಮಾಡಿದ ಜನರಿಗೆ ಮಾಡುತ್ತಿರುವ ಅವಮಾನವಾಗಿದೆ ಎಂದು ಕೆ.ವಿಕಾಸ್ ಹೆಗ್ಡೆ ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ.