ಸಂವಿಧಾನದ ಆಶಯಗಳ ವಿರೋಧಿ ಕುಂದಾಪುರ ಪುರಸಭೆ ಆಡಳಿತ : ಕೆ. ವಿಕಾಸ್ ಹೆಗ್ಡೆ
ಕುಂದಾಪುರ: ಅಂಬೇಡ್ಕರ್ ಭಾರತೀಯರಿಗೆ ನೀಡಿದ ನಮ್ಮ ಹೆಮ್ಮೆಯ ಸಂವಿಧಾನದ ಪರಿಚ್ಚೇದ 19(1)(ಜಿ) ಸ್ಪಷ್ಟವಾಗಿ ಉದ್ಯೋಗ, ವ್ಯಾಪಾರ, ವ್ಯವಹಾರ ನಡೆಸುವ ಅವಕಾಶಗಳ ಕುರಿತು ಹೇಳುತ್ತದೆ. ಇವತ್ತು ಶುಚಿತ್ವ, ಪಾರ್ಕಿಂಗ್ ಇತ್ಯಾದಿ ನೆವನಗಳನ್ನು ಇಟ್ಟುಕೊಂಡು ಬಿಜೆಪಿ ಆಡಳಿತದ ಕುಂದಾಪುರ ಪುರಸಭೆ ಬೀದಿ ಬದಿ ವ್ಯಾಪಾರಸ್ಥರನ್ನು ಒಕ್ಕಲೆಬ್ಬಿಸ ಹೊರಟದ್ದು ಸಂವಿಧಾನ ವಿರೋಧಿ ಕ್ರಮವಾಗಿದೆ ಎಂದು ಜಿಲ್ಲಾ ಕಾಂಗ್ರೆಸ್ ವಕ್ತಾರ ಕೆ. ವಿಕಾಸ್ ಹೆಗ್ಡೆ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಪುರಸಭೆ ಬೀದಿ ಬದಿ ವ್ಯಾಪಾರಸ್ಥರಿಗೆ ಶುಚಿತ್ವ, ಪಾರ್ಕಿಂಗ್ ಮುಂತಾದವುಗಳಿಗೆ ತೊಂದರೆಯಾಗದಂತೆ ಬೀದಿ ಬದಿ ವ್ಯಾಪಾರಸ್ಥರಿಗೆ ಅವರ ಉದ್ಯೋಗ, ವ್ಯಾಪಾರ, ವ್ಯವಹಾರ ನಡೆಸಲು ಅವಕಾಶ ಮಾಡಿಕೊಡುವುದನ್ನು ಬಿಟ್ಟು ಜೀವನೋಪಾಯಕ್ಕಾಗಿ ಇದನ್ನೇ ನಂಬಿರುವ ಬೀದಿ ಬದಿ ವ್ಯಾಪಾರಸ್ಥರಿಗೆ ಅನಗತ್ಯ ಕಿರುಕುಳ ನೀಡುತ್ತಿರುವುದು ಅತ್ಯಂತ ಖೇದಕರ ವಿಚಾರ. ಇನ್ನು ಶುಚಿತ್ವದ ಬಗ್ಗೆ ಮಾತನಾಡುವ ಪುರಸಭೆ ಆಡಳಿತ ತಮ್ಮ ವಾಣಿಜ್ಯ ಸಂಕೀರ್ಣಗಳಿಗೆ ಒಮ್ಮೆ ಭೇಟಿ ಕೊಡುವುದು ಒಳಿತು. ಪುರಸಭೆಯ ಕಚೇರಿ, ವಾಣಿಜ್ಯ ಸಂಕೀರ್ಣಗಳು ಶುಚಿತ್ವ ಎನ್ನುವ ಪದವನ್ನೇ ಮರೆತಿವೆ ಆದರೆ ಅದನ್ನು ಸರಿಪಡಿಸುವುದು ಬಿಟ್ಟು ಬೀದಿ ಬದಿ ವ್ಯಾಪಾರಸ್ಥರ ಒಂದು ಹೊತ್ತಿನ ಊಟದ ಬಟ್ಟಲನ್ನು ಕಸಿಯ ಹೊರಟಿರುವ ಪುರಸಭೆ ಆಡಳಿತ ಜನವಿರೋಧಿಯಾಗಿದೆ. ಒಂದು ಕಡೆಯಲ್ಲಿ ದೇಶದ ಪ್ರಧಾನ ಮಂತ್ರಿಗಳು ಪ್ರತಿ ವರ್ಷ ಕೋಟ್ಯoತರ ಉದ್ಯೋಗ ಸೃಷ್ಟಿಯ ಮಾತುಗಳನ್ನು ಆಡುತ್ತಿದ್ದರೆ ಇಲ್ಲಿ ಬಿಜೆಪಿ ಆಡಳಿತ ಪುರಸಭೆ ಸ್ವ ಉದ್ಯೋಗ ನಡೆಸುತ್ತಿರುವ ಬೀದಿ ಬದಿ ವ್ಯಾಪಾರಸ್ಥ ಉದ್ಯೋಗಗಳನ್ನು ಕಸಿದುಕೊಳ್ಳುತ್ತಿದೆ. ಈ ಬಗ್ಗೆ ಸಂಬಂಧಿತ ಜನಪ್ರತಿನಿದಿನಗಳು, ಜಿಲ್ಲಾಡಳಿತ ಕೂಡಲೇ ಸ್ಪಂದಿಸಿ ಈ ಸಮಸ್ಯೆಯನ್ನು ಪರಿಹಾರ ಮಾಡಬೇಕಾಗಿ ಆಗ್ರಹಿಸಿದ್ದಾರೆ.
