ಸಂಸದ ಕಾಗೇರಿ ವಿರುದ್ಧ ಕಠಿಣ ಕಾನೂನು ಕ್ರಮಕ್ಕೆ ರಮಾನಾಥ ರೈ ಆಗ್ರಹ
ಮಂಗಳೂರು: ರಾಷ್ಟ್ರಗೀತೆ ಜನಗಣಮನದ ಬಗ್ಗೆ ವಿವಾದಾತ್ಮಕ ಹೇಳಿಕೆ ನೀಡಿರುವ ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳುವಂತೆ ಮಾಜಿ ಸಚಿವ ಬಿ. ರಮಾನಾಥ ರೈ ಸರಕಾರವನ್ನು ಆಗ್ರಹಿಸಿದ್ದಾರೆ.
ನಗರದ ಕಾಂಗ್ರೆಸ್ ಭವನದಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಶಾಸಕ, ಸಚಿವ ಸ್ಥಾನ, ಸ್ವೀಕರ್ ಹುದ್ದೆ ಸೇರಿದಂತೆ ಸಾಂವಿಧಾನಿಕ ಹುದ್ದೆಯನ್ನು ಅಲಂಕರಿಸಿರುವ ವಿಶ್ವೇಶ್ವರ ಹೆಗಡೆ ಕಾಗೇರಿ ಸಂವಿಧಾನಕ್ಕೆ ಅವಮಾನ ಮಾಡಿದ್ದಾರೆ ಎಂದರು.
ನಮ್ಮದೇಶದ ರಾಷ್ಟ್ರಗೀತೆಗೆ ಅಪಾರ ಇತಿಹಾಸವಿದ್ದು, ದೇಶದ ಜನಮಾನಸದಲ್ಲಿ ಇರುವಂತಹ ಹಾಡು ಆಗಿದೆ. ರಾಷ್ಟ್ರ ಧ್ವಜ, ರಾಷ್ಟ್ರಗೀತೆಯನ್ನು ಗೌರವಿಸುವುದು ಪ್ರತಿಯೊಬ್ಬ ಭಾರತೀಯ ನಾಗರಿಕನ ಕರ್ತವ್ಯವಾಗಿದೆ ಎಂದು ಅವರು ಹೇಳಿದರು.
1911ರ ಡಿ.11ರಂದು ಜನಗಣಮನ ಹಾಡನ್ನು ರವೀಂದ್ರನಾಥ ಟ್ಯಾಗೋರ್ ಬರೆದರು. 1911, ಡಿ.28ರಂದು ಕೋಲ್ಕತ್ತಾದಲ್ಲಿ ನಡೆದ ಕಾಂಗ್ರೆಸ್ ಅಧಿವೇಶನದಲ್ಲಿ ಮೊದಲ ಬಾರಿ ಹಾಡಲಾಗಿತ್ತು. 1947ರ ಆಗಸ್ಟ್ 14ರಂದು ಮಧ್ಯರಾತ್ರಿ ದೇಶ ಸ್ವತಂತ್ರವಾದಾಗ ಮೊದಲ ಬಾರಿ ಜನಗಣಮನ ಹಾಡಲಾಯಿತು. ಭಾರತದ ಸಂವಿಧಾನ ಸಭೆಯು 1950ರ ಜ.24ರಂದು ಜನಗಣ ಮನವನ್ನು ರಾಷ್ಟ್ರಗೀತೆಯಾಗಿ ಅಂಗೀಕರಿಸಲಾಗಿತ್ತು. ಇಂತಹ ಐತಿಹಾಸಿಕ, ಅಭಿಮಾನದ ರಾಷ್ಟ್ರಗೀತೆ ವಿರುದ್ಧ ಹೇಳಿಕೆ ನೀಡಿ ಕಾಗೇರಿ ಅವರು ಅವಮಾನಿಸಿದ್ದಾರೆ. ಇದು ರಾಷ್ಟ್ರಗೀತೆಯ ಇತಿಹಾಸಕ್ಕೆ ಮಾಡಿದ ಅಪಚಾರವಾಗಿದೆ ಎಂದು ಅಭಿಪ್ರಾಯಪಟ್ಟರು.
ರಾಷ್ಟಗೀತೆ ಅವಮಾನಿಸಿದವರಿಗೆ ಮೂರ ವರ್ಷ ಜೈಲು ಶಿಕ್ಷೆ ವಿಧಿಸುವ ಅವಕಾಶವಿದೆ. ಈ ಅಪರಾಧವೆಸಗಿದ ವಿಶ್ವೇಶ್ವರ ಹೆಗಡೆ ಕಾಗೇರಿ ವಿರುದ್ಧ ಸರಕಾರ ಕಾನೂನು ರೀತಿಯ ಕ್ರಮ ಕೈಗೊಳ್ಳಬೇಕು ಎಂದು ರಮಾನಾಥ ರೈ ಆಗ್ರಹಿಸಿದರು.
ಕಾಗೇರಿ ರಾಷ್ಟ್ರಗೀತೆ ವಿರುದ್ಧ ವಿವಾದಾತ್ಮಕ ಹೇಳಿಕೆ ನೀಡಿ ವಾರ ಕಳೆದರೂ ಕಾಂಗ್ರೆಸ್ ಪಕ್ಷ ಯಾಕೆ ಮೌನ ವಹಿಸಿದೆ ಎಂದು ಸುದ್ದಿಗಾರರು ಪ್ರಶ್ನಿಸಿದಾಗ, ರಾಷ್ಟ್ರಗೀತೆಗೆ ಅವಮಾನ ಮಾಡಿದವನ ವಿರುದ್ಧ ಕಾನೂನು ಕ್ರಮಕ್ಕೆ ಆಗ್ರಹಿಸುವ ಅವಕಾಶ ಎಲ್ಲರಿಗೂ ಇದೆ. ನಾನು ಒಬ್ಬ ನಾಗರಿಕನಾಗಿ ಸಂಸದ ಕಾಗೇರಿ ವಿರುದ್ಧ ಕ್ರಮಕ್ಕೆ ಆಗ್ರಹಿಸಿದ್ದೇನೆ ಎಂದು ಹೇಳಿದರು.
