ಸತತ ಕಾರ್ಯಚರಣೆ: ಸಿದ್ದಾಪುರ-ಹೊಸಂಗಡಿ ಪರಿಸರದಲ್ಲಿ ಬೀಡುಬಿಟ್ಟಿದ್ದ ಒಂಟಿ ಸಲಗ ಸೆರೆ
ಕುಂದಾಪುರ: ಕಳೆದ ಮೂರು ದಿನಗಳಿಂದ ಶಿವಮೊಗ್ಗ ಹಾಗೂ ಉಡುಪಿ ಜಿಲ್ಲೆಯ ಗಡಿಭಾಗದ ಗ್ರಾಮ ಗಳಲ್ಲಿ ಬೀಡುಬಿಟ್ಟಿದ್ದ ಒಂಟಿ ಸಲಗವನ್ನು ಸೆರೆ ಹಿಡಿಯುವುದರಲ್ಲಿ ಅರಣ್ಯ ಇಲಾಖೆ ಕೊನೆಗೂ ಯಶಸ್ವಿಯಾಗಿದೆ.
ಗುರುವಾರ ಸಂಜೆ ಸುಮಾರು 6 ಗಂಟೆಯ ವೇಳೆಗೆ ಸಿದ್ದಾಪುರ ಸಮೀಪದ ಹೆನ್ನಾಬೈಲಿನ ಉರಪಾಲ್ ಎಂಬಲ್ಲಿ ಇಲಾಖೆಯ ಅರವಳಿಕೆ ತಜ್ಞರು ನೀಡಿದ್ದ ಅರವಳಿಕೆ ಮದ್ದಿಗೆ ಸ್ಪಂದಿಸಿರುವ ಗಜರಾಜ ಧರಶಾಹಿಯಾಗಿದೆ. ಬಳಿಕ ಆರು ಆನೆಗಳ ಸಹಕಾರದಲ್ಲಿ ರಕ್ಷಣಾ ಕಾರ್ಯ ನಡೆಸಲಾಗಿದೆ.
ಮಂಗಳವಾರ ಸಂಜೆಯ ಬಳಿಕ ಬಾಳೆಬರೆ-ಸಿದ್ದಾಪುರ ಮಾರ್ಗವಾಗಿ ಘಾಟಿಯಿಂದ ಕೆಳಕ್ಕೆ ಬಂದಿದ್ದ ಕಾಡಾನೆಯ ಚಲನವಲನಗಳನ್ನು ರೆಡಿಯೋ ಕಾಲರ್ ಹಾಗೂ ಜಿಪಿಎಸ್ ತಂತ್ರಜ್ಞಾನದ ಮೂಲಕ ತಿಳಿದುಕೊಳ್ಳುತ್ತಿದ್ದ ಅರಣ್ಯ ಇಲಾಖೆಯ ಸಿಬ್ಬಂದಿಗಳು, ಕಾಡಾನೆಯನ್ನು ಸೆರೆ ಹಿಡಿಯಲು ಕಾರ್ಯತಂತ್ರವನ್ನು ರೂಪಿಸಿದ್ದರು.
ಶಿವಮೊಗ್ಗದ ಸಕ್ರೆಬೈಲಿನಿಂದ ಬಂದಿದ್ದ ಕಾರ್ಯಪಡೆ ಮಾರ್ಗದರ್ಶನದಲ್ಲಿ ಸ್ಥಳೀಯ ಅರಣ್ಯ ಇಲಾಖೆ ಅಧಿಕಾರಿಗಳ ಹಾಗೂ ಸಿಬ್ಬಂದಿಗಳು ಆನೆಯನ್ನು ವಶಕ್ಕೆ ಪಡೆಯುವ ಕಾರ್ಯಾಚರಣೆಗೆ ರೂಪುರೇಷೆ ಸಿದ್ಧಪಡಿಸಿಕೊಂಡು ಗುರುವಾರ ಮಧ್ಯಾಹ್ನ ಕಾರ್ಯಪ್ರವೃತ್ತರಾದರು.
ಒಂಟಿ ಸಲಗನನ್ನು ವಶಕ್ಕೆ ಪಡೆದುಕೊಳ್ಳುವ ಕಾರ್ಯಾಚರಣೆಯ ಮೊದಲ ಭಾಗವಾಗಿ ಅರವಳಿಕೆ ತಜ್ಞರನ್ನು ಹಾಗೂ ಮೂರು ಪಳಗಿದ ಆನೆಗಳನ್ನು, ಸಕ್ರೆಬೈಲು ಆನೆ ಬಿಡಾರದಿಂದ ತರಿಸಲಾಗಿತ್ತು. ಗುರುವಾರ ಮಧ್ಯಾಹ್ನ ವೇಳೆಗೆ ಕಾರ್ಯಾಚರಣೆಗಾಗಿ ಮೂರು ವಾಹನದ ಮೂಲಕ ಗುರುವಾರ ಸಿದ್ದಾಪುರಕ್ಕೆ ಬಂದಿದ್ದ ಬಾಲಣ್ಣ, ಸೋಮಣ್ಣ ಹಾಗೂ ಬಹದ್ದೂರು ಹೆಸರಿನ ಮೂರು ಪಳಗಿಸಿದ ಆನೆಗಳನ್ನು ಕರೆತರಲಾಯಿತು.
ಸಿದ್ದಾಪುರ ಪೇಟೆ ಸುಮಾರು 1.2 ಕಿ.ಮೀ ದೂರದಲ್ಲಿ ಹೆನ್ನಾಬೈಲು ಎಂಬಲ್ಲಿ ಆನೆ ಇರುವ ಚಲನವಲನದ ಮಾಹಿತಿ ಪಡೆದುಕೊಂಡಿದ್ದ ಅರಣ್ಯ ಇಲಾಖೆಯ ಸಿಬ್ಬಂದಿಗಳು ಅಲರ್ಟ್ ಆಗಿದ್ದರು. ರಾತ್ರಿಯ ವೇಳೆ ಪರಿಸರದಲ್ಲಿ ಸಂಚಾರ ನಡೆಸಿದ್ದ ಆನೆಯ ನಡಿಗೆ ಮೊಬೈಲ್ ಹಾಗೂ ಸಿಸಿ ಕ್ಯಾಮರದಲ್ಲಿ ಸೆರೆಯಾಗಿತ್ತು. ಈ ದೃಶ್ಯಾವಳಿಗಳು ಸಾಮಾಜಿಕ ಜಾಲಾತಾಣಗಳಲ್ಲಿ ವೈರಲ್ ಕೂಡ ಆಗಿತ್ತು.
ಮಂಗಳೂರು ವೃತ್ತ ಅರಣ್ಯ ಸಂರಕ್ಷಣಾಧಿಕಾರಿ ಕರಿಕಾಲನ್ ಕಾರ್ಯಾಚರಣೆಯ ನೇತೃತ್ವದಲ್ಲಿ ಆನೆ ಸೆರೆ ಕಾರ್ಯಾಚರಣೆಗೆ ಮುಂದಾದ ತಂಡ, ಮೊದಲಿಗೆ ಸಕ್ರೆಬೈಲಿನ ಎರಡು ಪಳಗಿದ ಆನೆಗಳನ್ನು ತಿರುಗಾಟಕ್ಕೆ ಬಿಟ್ಟು, ಹೆನ್ನಾಬೈಲಿನಿಂದ ಗೆದ್ದೋಡಿಗೆ ಸಾಗುವ ಮತ್ತಿಬೇರು ಎಂಬಲ್ಲಿ ಸಂಜೆಯ ವೇಳೆ ಆನೆಯ ಇರುವಿಕೆಯನ್ನು ಪತ್ತೆ ಮಾಡಿ ಅಲ್ಲೊಂದು ಸಾಕಾನೆ ಬಿಟ್ಟು ಕಾರ್ಯಾಚರಣೆಗೆ ಇಳಿದಿದೆ.
ಸಿದ್ದಾಪುರದಿಂದ ಹೆನ್ನಾಬೈಲ್ ಮೂಲಕ ಗೆದ್ದೋಡಿಗೆ ಸಾಗುವ ದಾರಿಯನ್ನು ಸಾರ್ವಜನಿಕ ಪ್ರವೇಶ ನಿರ್ಬಂಧ ಮಾಡಿ ಕಾರ್ಯಾಚರಣೆಯನ್ನು ಆರಂಭಿಸಲಾಗಿತ್ತು. ರಾಜ್ಯ ಹೆದ್ದಾರಿಯನ್ನು ಸುಮಾರು 1.30 ಗಂಟೆಗಳ ಕಾಲ ಸಂಚಾರ ನಿರ್ಬಂಧ ಮಾಡಲಾಗಿತ್ತು. ಕಾರ್ಯಾಚರಣೆ ನಡೆಯುವ ಪರಿಸರದಲ್ಲಿ ನಿಷೇಧಾಜ್ಞೆ ವಿಧಿಸಲಾಗಿತ್ತು.
ಕಾಡಾನೆಯಿಂದ ಯಾರಿಗೂ ತೊಂದರೆಯಾಗಬಾರದು ಎನ್ನುವ ಮುನ್ನೆಚ್ಚರಿಕೆಯನ್ನು ತೆಗೆದುಕೊಂಡಿದ್ದ ಅರಣ್ಯ ಇಲಾಖೆಯ ಮನವಿ ಸ್ಪಂದಿಸಿ ಹೊಸಂಗಡಿ, ಸಿದ್ದಾಪುರ ಹಾಗೂ ಕಮಲಶಿಲೆ ಭಾಗದ ಅಂಗನ ವಾಡಿ ಕೇಂದ್ರ ಹಾಗೂ ಎಸ್ಎಸ್ಎಲ್ಸಿ ವರೆಗಿನ ಶಾಲೆಗಳಿಗೆ ಬುಧವಾರ ಹಾಗೂ ಗುರುವಾರ ರಜೆ ಸಾರಲಾಗಿತ್ತು. ಆನೆ ಇರುವಿಕೆ ಪತ್ತೆಯಾದ ಹೆನ್ನಾಬೈಲು ಹಾಗೂ ಆಸುಪಾಸಿನ ಪ್ರದೇಶದ ಜನರಿಗೆ ಎಚ್ಚರಿಕೆಯಿಂದ ಇರುವಂತೆ ಸೂಚಿಸಲಾಗಿತ್ತು. ಕಾರ್ಯಾಚರಣೆ ನಡೆಯುವ ವೇಳೆ ಈ ಪರಿಸರದಲ್ಲಿ ಅಘೋಷಿತ ಬಂದ್ನಂತಹ ವಾತಾವರಣ ಇತ್ತು.
ಸಂಜೆಯ 5 ಗಂಟೆಯ ವೇಳೆಗೆ ಮತ್ತಿಬೇರು ಸಮೀಪದ ಉರಾಪಾಲ್ ಎಂಬಲ್ಲಿ ಆನೆಯ ನಿಖರ ಇರುವಿಕೆ ಯನ್ನು ಪತ್ತೆ ಮಾಡಿದ್ದ, ಶಿವಮೊಗ್ಗದ ಡಾ.ಎಸ್.ಕಲ್ಲಪ್ಪ, ನಾಗರಹೊಳೆಯ ಡಾ.ರಮೇಶ್ ಹಾಗೂ ಮಂಗಳೂರಿನ ಡಾ.ಯಶಸ್ವಿ ಅವರುಗಳಿದ್ದ ಕಾರ್ಯಾಚರಣೆಯ ವೈದ್ಯರ ತಂಡ ನೀಡಿದ್ದ ಅರವಳಿಕೆ ಮದ್ದಿಗೆ ಗಜರಾಜ ನಿದ್ರಾವಸ್ಥೆಗೆ ಜಾರಿದ್ದಾನೆ.
ಹೆಚ್ಚುವರಿಯಾಗಿ ಸಂಜೆ 7-30 ರ ಸುಮಾರಿಗೆ ನಾಗರಹೊಳೆ ಮತ್ತಿಗೋಡು ಅರಣ್ಯ ವಲಯದಿಂದ ಭೀಮ, ಮಹೇಂದ್ರ ಹಾಗೂ ಏಕಲವ್ಯ ಎನ್ನುವ ಹೆಸರಿನ ಮೂರು ಪಳಗಿದ ಆನೆಗಳನ್ನು ಕಾರ್ಯಾಚರಣೆಗೆ ಕರೆಸಲಾಗಿತ್ತು. ಭೀಮನ ನೇತೃತ್ವದಲ್ಲಿ ನಾಲ್ಕು ಆನೆಗಳ ತಂಡ ಹಾಗೂ ಕ್ರೇನ್ ಸಹಾಯದಿಂದ ನಿದ್ರಾವಸ್ಥೆಯಲ್ಲಿ ಇರುವ ಕಾಡಾನೆಯನ್ನು ಎತ್ತಿ ವಾಹನಕ್ಕೆ ಹಾಕುವ ಕಾರ್ಯಾಚರಣೆಯನ್ನು ಮುಂದುವರೆಸುವ ಕಾರ್ಯ ನಡೆಯಿತು.
ವಾಹನಕ್ಕೆ ಆನೆಯನ್ನು ಸ್ಥಳಾಂತರಿಸಿದ ಬಳಿಕ, ಅದನ್ನು ಶಿವಮೊಗ್ಗ ಜಿಲ್ಲೆಯ ಸಕ್ರೆಬೈಲಿನ ಆನೆ ಬಿಡಾರಕ್ಕೆ ಸ್ಥಳಾಂತರಿಸುವ ಪ್ರಕ್ರಿಯೆ ನಡೆಯುತ್ತದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಕಾರ್ಯಾಚರಣೆಯಲ್ಲಿ ಚಿಕ್ಕಮಗಳೂರಿನಿಂದ ಬಂದಿದ್ದ ಎಟಿಎಫ್ ತಂಡದ ಕಾರ್ಯವೈಖರಿ ಮೆಚ್ಚುಗೆಗೆ ಪಾತ್ರವಾಗಿದೆ. ಹಾಸನದಿಂದ ಅರಣ್ಯ ವಿಭಾಗದಿಂದ ಔಷಧಿಗಳನ್ನು ತರಿಸಿಕೊಳ್ಳಲಾಗಿತ್ತು. ಕಾರ್ಯಾಚರಣೆಯಲ್ಲಿ ಸುಮಾರು 150 ಸಿಬ್ಬಂದಿಗಳು ಭಾಗಿಯಾಗಿದ್ದರು.
ಮಂಗಳೂರು ವೃತ್ತ ಅರಣ್ಯ ಸಂರಕ್ಷಣಾಧಿಕಾರಿ ಕರಿಕಾಲನ್ ಕಾರ್ಯಾಚರಣೆಯ ನೇತ್ರತ್ವ ವಹಿಸಿದ್ದರು. ಕುದುರೆಮುಖ ಅರಣ್ಯ ವನ್ಯಜೀವಿ ವಿಭಾಗದ ಉಪ ಅರಣ್ಯ ಸಂರಕ್ಷಣಾಧಿಕಾರಿ ಶಿವರಾಂ ಬಾಬು, ಕುಂದಾಪುರ ಅರಣ್ಯ ವಿಭಾಗದ ಉಪ ಅರಣ್ಯ ಸಂರಕ್ಷಣಾಧಿಕಾರಿ ಗಣಪತಿ, ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿಗಳಾದ ಪ್ರಕಾಶ್ ಪೂಜಾರಿ, ದಿನೇಶ್, ಸಕ್ರೆಬೈಲು ವನ್ಯಜೀವಿ ವಿಭಾಗದ ವಲಯಾರಣ್ಯಾಧಿಕಾರಿ ವಿನಯ್ ಜಿ.ಆರ್, ಸಿದ್ದಾಪುರ ವನ್ಯಜೀವಿ ವಿಭಾಗದ ವಲಯಾರಣ್ಯಾಧಿಕಾರಿ ಜಿ.ವಿ. ನಾಯ್ಕ್, ಶಂಕರನಾರಾಯಣ ವಲಯಾರಣ್ಯಾಧಿಕಾರಿ ಜ್ಯೋತಿ, ಶಂಕರನಾರಾಯಣ ಪೊಲೀಸ್ ಠಾಣೆಯ ಎಸ್ಐ ನಾಸೀರ್ ಹುಸೇನ್ ಇದ್ದರು.