Home Mangalorean News Kannada News ಸುಬ್ರಹ್ಮಣ್ಯ: ಶಿರಾಡಿ ಘಾಟ್ ಹೆದ್ದಾರಿ ಕಾಮಗಾರಿ ವಿಳಂಬಕ್ಕೆ ತೀವ್ರ ಅಸಮಾಧಾನ: 15ರಂದು ಪ್ರತಿಭಟನೆ

ಸುಬ್ರಹ್ಮಣ್ಯ: ಶಿರಾಡಿ ಘಾಟ್ ಹೆದ್ದಾರಿ ಕಾಮಗಾರಿ ವಿಳಂಬಕ್ಕೆ ತೀವ್ರ ಅಸಮಾಧಾನ: 15ರಂದು ಪ್ರತಿಭಟನೆ

Spread the love

ಸುಬ್ರಹ್ಮಣ್ಯ:  ಮಲೆನಾಡು ಜನಹಿತಾ ರಕ್ಷಣಾ ವೇದಿಕೆ ಹಾಗೂ ಸಕಲೇಶಪುರದ ‘ಶಿರಾಡಿ ಘಾಟ್ ಉಳಿಸಿ’ ಸಮಿತಿ ವತಿ­ಯಿಂದ ಶಿರಾಡಿ ಘಾಟ್ ಕಾಮಗಾರಿ ವಿಳಂಬ ವಿರುದ್ಧ  ಪ್ರತಿಭಟನೆ ಇದೇ 15 ರಂದು ಹಮ್ಮಿಕೊಳ್ಳಲಾಗಿದೆ ಎಂದು ವೇದಿಕೆ ಸಂಚಾಲಕ ಕಿಶೋರ್ ಶಿರಾಡಿ ಹೇಳಿದ್ದಾರೆ.

2 ಕಡೆಗಳಲ್ಲಿ ಹೆದ್ದಾರಿಗೆ ಕಾಮಗಾರಿ ನಡೆಯುವ ಸಂದರ್ಭ ಹಾಕಲಾದ ಗೇಟನ್ನು ಬಲವಂತವಾಗಿ ತೆರವು­ಗೊಳಿಸುವ ಮೂಲಕ ಪ್ರತಿಭಟನೆ ನಡೆಯಲಿದೆ ಎಂದವರು ತಿಳಿಸಿದ್ದಾರೆ.

ಸುಬ್ರಹ್ಮಣ್ಯದಲ್ಲಿ  ಪತ್ರಿಕಾ­ಗೊಷ್ಠಿಯಲ್ಲಿ ಮಾತನಾಡಿದ ಅವರು ಕಾಮಾಗಾರಿಗೆಂದು ವರ್ಷ­ಪೂರ್ತಿ ರಾಷ್ಟ್ರೀಯ ಹೆದ್ದಾರಿ ರಸ್ತೆಯನ್ನು ಬಂದ್ ಗೊಳಿಸಿರುವ ಸರ್ಕಾರದ ಕ್ರಮ ಸರಿಯಲ್ಲ. ಶಿರಾಡಿ ಹೆದ್ದಾರಿ ಕಾಮ­ಗಾರಿಯು ಆರಂಭದಿಂದಲೂ ಆಮೆಗತಿ­ಯಲ್ಲಿ ನಡೆಯುತ್ತಾ ಬಂದಿದೆ.

ಪ್ರಥಮ ಹಂತದ ಕಾಮಗಾರಿಯ ಕೆಲಸ ಆರಂಭ­ಗೊಂಡು ಆರು ತಿಂಗಳು ಕಳೆದಿವೆ. ಇನ್ನೂ ಕಾಮಗಾರಿ ಪೂರ್ಣ­ಗೊಳಿಸಿಲ್ಲ. ಹೆದ್ದಾರಿ ರಸ್ತೆಯನ್ನು ಸುದೀರ್ಘ ಕಾಲ ಬಂದ್ ಮಾಡಿದ್ದರಿಂದ ದಕ್ಷಿಣ ಕನ್ನಡ ಮತ್ತು ಹಾಸನ ಈ ಎರಡು ಜಿಲ್ಲೆಗಳ ಜನರು ಸಂಕಷ್ಟಕ್ಕೆ ಒಳಗಾಗಿ­ದ್ದಾರೆ. ಮಕ್ಕಳ ಶಿಕ್ಷಣಕ್ಕೆ ತೊಂದರೆ­ಯಾಗಿದೆ. ಹೋಟೆಲ್‌, ಅಂಗಡಿ, ಚಿಲ್ಲರೆ ವ್ಯಾಪಾರಸ್ಥರು ಸಂಕಷ್ಟ­ಕ್ಕೀಡಾಗಿದ್ದಾರೆ ಎಂದು ತಿಳಿಸಿದರು.

ಮೇ 30 ಕ್ಕೆ ರಸ್ತೆಯನ್ನು ಸಂಚಾರಕ್ಕೆ ಮುಕ್ತಗೊಳಿಸುವುದಾಗಿ ಜಿಲ್ಲಾಧಿ­ಕಾರಿಗಳು ಹೇಳಿದ್ದರು. ಬಳಿಕ ಪತ್ರಿಕೆಗಳಲ್ಲಿ ಸುಳ್ಳು ಹೇಳಿಕೆಗಳನ್ನು ನೀಡುತ್ತಾ ಜಿಲ್ಲೆಯ ಜನತೆಯ ಜೀವನದ ಜೊತೆ ಚೆಲ್ಲಾಟ ಆಡುತಿದ್ದಾರೆ. ಮಳೆಯಿಂದ ಕಾಮಗಾರಿ ವಿಳಂಬವಾಗಿದೆ ಎಂದು ಇದೀಗ ಸಬೂಬು ಹೇಳಿ ಗೊಂದಲ ಮೂಡಿ­ಸುತ್ತಿದ್ದಾರೆ.  ರಸ್ತೆಯನ್ನು ಬಲವಂತವಾಗಿ ತೆಗೆದು ಸಂಚಾರಕ್ಕೆ ಮುಕ್ತಗೊಳಿಸುವು­ದೊಂದೆ ನಮಗಿರುವ ದಾರಿ.

ಆದ್ದರಿಂದ ಗುಂಡ್ಯದಲ್ಲಿ ರಸ್ತೆಗೆ ಹಾಕಲಾದ ಗೇಟನ್ನು ಬಲವಂತವಾಗಿ ತೆರವುಗೊಳಿಸುವ ಮೂಲಕ ಆರಂಭಿಸಿ ಬಳಿಕ ಅಲ್ಲಿಂದ ಈ ಹೆದ್ದಾರಿ ರಸ್ತೆಯಾಗಿ ಪ್ರಯಾಣ ಬೆಳೆಸಿ ಸಕಲೇಶಪುರಕ್ಕೆ ತೆರಳಿ ಅಲ್ಲಿ ಸಕಲೇಶಪುರ ತಾಲ್ಲೂಕಿನ ಜನತೆಯ ಜೊತೆ ಸೇರಿ ಜಂಟಿಯಾಗಿ ಬೃಹತ್ ಪ್ರತಿಭಟನೆ ನಡೆಸಲಿದ್ದೇವೆ ಎಂದವರು ತಿಳಿಸಿದರು.

ಪತ್ರಿಕಾಗೋಷ್ಠಿಯಲ್ಲಿ ಜಯಪ್ರಕಾಶ ಕೂಜುಗೋಡು, ಜಯರಾಮ ಕಟ್ಟೆಮನೆ, ಜಯಪ್ರಕಾಶ ಮುಳುಗಾಡು,ಸನತ್ ಕೈಕಂಬ ಉಪಸ್ಥಿತರಿದ್ದರು.


Spread the love

Exit mobile version