ಸುರತ್ಕಲ್|ಚೂರಿ ಇರಿತ ಪ್ರಕರಣ: ಪ್ರಮುಖ ಆರೋಪಿ ರೌಡಿಶೀಟರ್ ಗುರುರಾಜ್ ಆಚಾರಿ ಬಂಧನ
ಸುರತ್ಕಲ್: ಕ್ಷುಲ್ಲಕ ಕಾರಣಕ್ಕೆ ಯುವಕರಿಬ್ಬರಿಗೆ ಚೂರಿ ಇರಿದು ಕೊಲೆಗೆ ಯತ್ನಿಸಿದ ಪ್ರಕರಣದ ಪ್ರಮುಖ ಆರೋಪಿ ರೌಡಿಶೀಟರ್ ಗುರುರಾಜ್ ಆಚಾರಿ ಎಂಬಾತನನ್ನು ಸುರತ್ಕಲ್ ಪೊಲೀಸರು ಶನಿವಾರ ಬಂಧಿಸಿದ್ದಾರೆ.
ಪ್ರಕರಣಕ್ಕೆ ಸಂಬಂಧಿಸಿ ಸುರತ್ಕಲ್ ಕಟ್ಲ ನಿವಾಸಿಗಳಾದ ಸುಶಾಂತ್ ಯಾನೆ ಕಡವಿ, ಕೆ.ವಿ. ಅಲೆಕ್ಸ್, ಸುರತ್ಕಲ್ ಇಂದಿರಾ ಕಟ್ಟೆ ನಿವಾಸಿ ನಿತಿನ್ (26) ಮತ್ತು ಆರೋಪಿಗಳಿಗೆ ಆಶ್ರಯ ನೀಡಿದ ಕುಳಾಯಿ ಹೊನ್ನಕಟ್ಟೆ ನಿವಾಸಿ ಅರುಣ್ ಶೆಟ್ಟಿ ಎಂಬವರನ್ನು ಪೊಲೀಸರು ಶುಕ್ರವಾರ ಬಂಧಿಸಿದ್ದರು.
ಪ್ರಕರಣದ ಪ್ರಮುಖ ಆರೋಪಿ ಗುರುರಾಜ್ ಆಚಾರಿ ಮತ್ತು ಅಶೋಕ್ ಎಂಬವರು ತಲೆ ಮರೆಸಿಕೊಂಡಿದ್ದರು. ಸದ್ಯ ಗುರುರಾಜ್ನ್ನು ಬಂಧಿಸಿರುವ ಪೊಲೀಸರು ತಲೆ ಮರೆಸಿಕೊಂಡಿರುವ ಅಶೋಕ್ ಗಾಗಿ ಕಾರ್ಯಾಚರಣೆ ನಡೆಸುತ್ತಿದ್ದಾರೆ ಎಂದು ತಿಳಿದು ಬಂದಿದೆ.
ಗುರುವಾರ ರಾತ್ರಿ ಕ್ಷುಲ್ಲಕ ಕಾರಣಕ್ಕಾಗಿ ಹಸನ್ ಮುಕ್ಷಿತ್ ಮತ್ತು ನಿಝಾಮ್ ಎಂಬವರಿಗೆ ಈ ಹಿಂದೆ ಹಲವು ಪ್ರಕರಣಗಳಲ್ಲಿ ಭಾಗಿಯಾಗಿದ್ದ ಗುರುರಾಜ್ ಆಚಾರಿ, ಅಲೆಕ್ಸ್ ಸಂತೋಷ್, ನಿತಿನ್ ಮತ್ತು ಸುಶಾಂತ್ ಸೇರಿಕೊಂಡು ಚೂರಿಯಿಂದ ಇರಿದು ಕೊಲೆಗೆ ಯತ್ನಿಸಿದ್ದರು. ಈ ಸಂಬಂಧ ಸುರತ್ಕಲ್ ಪೊಲೀಸ್ ಠಾಣೆಯಲ್ಲಿ ಕೊಲೆ ಯತ್ನ ಪ್ರಕರಣ ದಾಖಲಾಗಿದೆ.
