ಸುರತ್ಕಲ್ ಸಾಮಾಜಿಕ ಜಾಲತಾಣದಲ್ಲಿ ಕೋಮುದ್ವೇಷ, ಸುಳ್ಳು ಆರೋಪ ಪ್ರಚಾರ: ಓರ್ವನ ಬಂಧನ
ಸುರತ್ಕಲ್: ಸಾಮಾಜಿಕ ಜಾಲತಾಣವಾದ ವಾಟ್ಸ್ ಆ್ಯಪ್ ನಲ್ಲಿ ಕೋಮು ದ್ವೇಷ ಮತ್ತು ಸುಳ್ಳು ಆರೋಪಗಳನ್ನು ಪ್ರಚಾರ ಮಾಡಿದ ಆರೋಪದಲ್ಲಿ ಸುರತ್ಕಲ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಓರ್ವನನ್ನು ಪೊಲೀಸರು ಬಂಧಿಸಿದ್ದಾರೆ.
ಕುಳಾಯಿ ಗ್ರಾಮದ ಕೆ.ಕೆ. ಶೆಟ್ಟಿ ಕಾಂಪೌಂಡ್ ನಿವಾಸಿ ರಾಮ ಪ್ರಸಾದ್ ಯಾನೆ ಪೋಚ(42) ಬಂಧಿತ ಆರೋಪಿ ಎಂದು ಪೊಲೀಸರು ತಿಳಿಸಿದ್ದಾರೆ.
ಇದೇ ಪ್ರಕರಣಕ್ಕೆ ಸಂಬಂಧಿಸಿದಂತೆ ಇನ್ನೋರ್ವ ಆರೋಪಿ, ಪಡುಬಿದ್ರೆ ಪೊಲೀಸ್ ಠಾಣಾ ವ್ಯಾಪ್ತಿಯ ಪ್ರಕರಣವೊಂದರಲ್ಲಿ ಭಾಗಿಯಾಗಿ ಪ್ರಸಕ್ತ ಉಡುಪಿ ಜಿಲ್ಲಾ ಕಾರಾಗೃಹದಲ್ಲಿರುವ ಸುರತ್ಕಲ್ ಕೋಡಿಕೆರೆ ನಿವಾಸಿ ಲೋಕೇಶ್ ಎಂಬಾತನನ್ನು ಬಾಡಿ ವಾರೆಂಟ್ ಪಡೆದು ಸುರತ್ಕಲ್ ಪೊಲೀಸರು ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ಆರೋಪಿಗಳು ದೂರುದಾರ ರಾಜೇಶ್ ಹೊನ್ನಕಟ್ಟೆ ವಿರುದ್ಧ “ ಸುಮಾರು 20ಕ್ಕೂ ಅಧಿಕ ಯುವತಿಯರನ್ನು ಮತಾಂತರ ಮಾಡಿದ್ದಾನೆ. ಬ್ಲೂ ಫಿಲಂ ಸಿಡಿ ಮಾರಾಟ ಮಾಡಿ ಸಿಕ್ಕಿ ಹಾಕಿಕೊಂಡಿದ್ದು, ಈಗ ಆತನ ಕಚೇರಿಯಲ್ಲಿರುವ ಯುವತಿಯರನ್ನು ಮತಾಂತರ ಮಾಡುತ್ತಿದ್ದಾನೆ. 24 ವರ್ಷದ ಹಿಂದೂ ಯುವತಿಯನ್ನು ತನ್ನ ತಮ್ಮನಿಗೆ ಮದುವೆ ಮಾಡಿಸಲು ಸಿದ್ಧತೆ ನಡೆಸುತ್ತಿದ್ದಾನೆ. ಯುವತಿ ಈಗ ಹಣೆಗೆ ಕುಂಕುಮ ಹಚ್ಚುವುದನ್ನು ನಿಲ್ಲಿಸಿದ್ದು, ಚರ್ಚ್ ಗೆ ಪ್ರಾರ್ಥನೆಗೆ ಹಾಜರಾಗುತ್ತಾಳೆ.” ಎಂದೆಲ್ಲ ಸುಳ್ಳು ಆರೋಪ ಮಾಡಿ ದೂರುದಾರರ ವಿರುದ್ಧ ಕೋಮು ದ್ವೇಷ ಸಂದೇಶವನ್ನು ವಾಟ್ಸ್ ಆ್ಯಪ್ ನಲ್ಲಿ ಹರಿಯಬಿಟ್ಟಿದ್ದರು. ಈ ಬಗ್ಗೆ ರಾಜೇಶ್ ಕುಳಾಯಿ ಸುರತ್ಕಲ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಪ್ರಕರಣ ದಾಖಲಿಸಿಕೊಂಡಿದ್ದ ಪೊಲೀಸರು ಕ್ರಮ ಕೈಗೊಂಡಿದ್ದಾರೆ.