ಹಳೆಯ ಪ್ರಕರಣಗಳಲ್ಲಿ ತಲೆಮರೆಸಿಕೊಂಡಿದ್ದ “ಚಿಲ್ಲಿ ಅಶ್ರಫ್” ಬಂಧನ
ವಿಟ್ಲ: ಹಲವಾರು ವರ್ಷಗಳಿಂದ ದರೋಡೆ ಮತ್ತು ಕಳ್ಳತನ ಪ್ರಕರಣಗಳಲ್ಲಿ ತಲೆಮರೆಸಿಕೊಂಡಿದ್ದ ಆರೋಪಿ ಅಶ್ರಫ್ ಅಲಿಯಾಸ್ ಚಿಲ್ಲಿ ಅಶ್ರಫ್ (32), ಕೂಳೂರು ಗ್ರಾಮ, ಮಂಜೇಶ್ವರ ತಾಲೂಕು ಎಂಬಾತನನ್ನು ಪೊಲೀಸರು ಬಂಧಿಸಿದ್ದಾರೆ.
2015ರ ಆಗಸ್ಟ್ 7ರಂದು ವಿಟ್ಲಪೇಟೆಯಲ್ಲಿ ನಡೆದ ದರೋಡೆ ಪ್ರಕರಣದಲ್ಲಿ (ವಿಟ್ಲ ಪೊಲೀಸ್ ಠಾಣಾ ಅಪರಾಧ ಸಂಖ್ಯೆ 165/2015, ಕಲಂ 397 IPC) ಆರೋಪಿ ಮೆಣಸಿನ ಪುಡಿ ಎರಚಿ ಜಗದೀಶ್ ಕಾಮತ್ ಎಂಬವರ ಮೇಲೆ ದಾಳಿ ನಡೆಸಿ ದರೋಡೆ ಮಾಡಿದ್ದಾನೆ. ಈ ಪ್ರಕರಣದಲ್ಲಿ ಹಾಜರಾಗದೆ ತಲೆಮರೆಸಿಕೊಂಡಿದ್ದ ಕಾರಣ, 2025ರ ಮಾರ್ಚ್ನಲ್ಲಿ LPC-03/2025 ರಂತೆ ವಾರೆಂಟ್ ಜಾರಿಯಾಗಿತ್ತು.
ಅದೇ ರೀತಿ, 2016ರ ಜನವರಿ 23ರಂದು ಕೊಲ್ನಾಡು ಗ್ರಾಮದ ವೈನ್ ಶಾಪ್ನ ಬಾಗಿಲು ಮುರಿದು ನಗದು ಕಳ್ಳತನ ಮಾಡಿದ ಪ್ರಕರಣದಲ್ಲಿ (ಅ.ಕ್ರ. ಸಂಖ್ಯೆ 16/2016, ಕಲಂ 457, 380 IPC) ಕೂಡ ಆರೋಪಿ ತಲೆಮರೆಸಿಕೊಂಡಿದ್ದನು. ಈ ಪ್ರಕರಣದಲ್ಲಿ ಮಾನ್ಯ ನ್ಯಾಯಾಲಯದಿಂದ ಕಲಂ 82 ಮತ್ತು 83ರಂತೆ ವಾರೆಂಟ್ ಹೊರಡಿಸಲಾಗಿತ್ತು.
ಈ ಎರಡೂ ಪ್ರಕರಣಗಳಲ್ಲಿ ತಲೆಮರೆಸಿಕೊಂಡಿದ್ದ ಆರೋಪಿ ಅಶ್ರಫ್ನ್ನು ದಿನಾಂಕ 21-09-2025ರಂದು ಕೂಳೂರು, ಮಂಜೇಶ್ವರದಲ್ಲಿ ಪೊಲೀಸರು ದಸ್ತಗಿರಿ ಮಾಡಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು, ನ್ಯಾಯಾಲಯವು ಆರೋಪಿಯನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದೆ.